ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರದೀಪ್ ಅಂಚೆ ನಿರ್ದೇಶನದಲ್ಲಿ ಸಹ್ಯಾದ್ರಿ ರಂಗ ತರಂಗ ಅರ್ಪಿಸುವ ಮುಖವಾಡ ನಾಟಕ ಕವಿತಾಶ್ರೀ ಪಾತ್ರದಿಂದ ಆರಂಭವಾಗುತ್ತದೆ. ಕವನ ಸಂಕಲನಕ್ಕೆ ಮುನ್ನುಡಿ ಬರೆಸಲು ಖ್ಯಾತ ಸಾಹಿತಿ ಆನಂದ್ ಅವರ ಮನೆಗೆ ಬಂದ ಕವಿತಾಶ್ರೀ ಅವರ ಕವನಗಳನ್ನು ಓದಿದ ಸಾಹಿತಿ ಆನಂದ್ ಸಾಹಿತ್ಯ ಪ್ರಕಾರಗಳ ಮಾರ್ಗದರ್ಶನ ನೀಡುತ್ತಾರೆ. ಇಬ್ಬರಲ್ಲೂ ಪರಿಚಯ ಸ್ನೇಹಕ್ಕೆ ತಿರುಗುತ್ತದೆ.
ಕವಿತಾಶ್ರೀಯ ಪತಿ ಶ್ರೀರ್ಧ ಬ್ಯಾಂಕ್ ಉದ್ಯೋಗಿ. ಬ್ಯಾಂಕ್ ಚಟುವಟಿಕೆಗಳನ್ನು ಬಿಟ್ಟರೆ ಉಳಿದ ವಿಚಾರಗಳಲ್ಲಿ ಆಸಕ್ತಿ ಅಷ್ಟೇನು ಇರುವುದಿಲ್ಲ. ಆನಂದ್ ಮತ್ತು ಕವಿತಾಶ್ರೀ ಇಬ್ಬರ ಸಾಹಿತ್ಯ ಸಂವಾದಗಳಿಂದ ಅತ್ಮೀಯತೆ ಗಾಡವಾದ ಬಂಧ ಬೆಳೆಯುವಂತೆ ಮಾಡುತ್ತದೆ.
ಆನಂದ್, ಅತೀವ ಪ್ರೇಮ ಭಾವನೆಗಳಿಂದ ಒದ್ದಾಡುತ್ತಿರುವಾಗ ವ್ಯಕ್ತಪಡಿಸಲು ಅನೇಕ ಬಾರಿ ಪ್ರಯತ್ನಿಸುತ್ತಾನೆ ಆದರೆ ಇದ್ಯಾವುದನ್ನು ಒಪ್ಪದ ಕವಿತಾಶ್ರೀ ತನ್ನ ಗಂಡ ಶ್ರೀಧರ್’ಗೆ ಪ್ರಮೋಷನ್ ಸಿಕ್ಕು ಗೌಹಾಟಿಗೆ ವರ್ಗವಾದದ್ದನ್ನು ಹೇಳುತ್ತಾಳೆ. ಇದನ್ನು ಕೇಳಿದ ಆನಂದ್ ತನ್ನ ಗಾಡ ಪ್ರೀತಿಯಯನ್ನು ವ್ಯಕ್ತಪಡಿಸಲೇಬೇಕು ಎಂದು ಕವಿತಾಶ್ರೀ ಬಳಿ ಪ್ರೇಮ ನಿವೇದನೆ ಮಾಡಿಕೊಂಡಾಗ ಶ್ರೀಧರನನ್ನು ಮದುವೆ ಆಗುವ ಮೊದಲು ನಿಮ್ಮ ಪರಿಚಯವಾಗಿದ್ದರೆ ನೀವೇ ನನ್ನ ಆಯ್ಕೆ ಆಗುತ್ತಿದ್ದೀರಿ ಎಂದು ಹೇಳುತ್ತಾಳೆ. ಕವಿತಾ ಇದನ್ನು ಕೇಳಿದ ಆನಂದ್’ಗೆ ಈ ಮಾತು ಮನಸ್ಸಿನಾಳದಲ್ಲಿ ಕೂರುತ್ತದೆ. ಶ್ರೀಧರ್ ಮೇಲೆ ಇರುವುದು ಅನುಕಂಪ ಮಾತ್ರ. ಅವನಿರುವವರೆಗೂ ನಿಮ್ಮೊಟ್ಟಿಗೆ ಪ್ರೀತಿ ಅಸಾಧ್ಯವಿಲ್ಲ. ಇದು ನನ್ನ ಕೊನೆ ನಿರ್ಧಾರ ಎಂದು ಹೇಳಿ ಹೊರಡುತ್ತಾಳೆ ಕವಿತಾಶ್ರೀ.
ಕವಿತಾ ಹಾಗೂ ಶ್ರೀಧರ್ ಗೌಹಾಟಿಗೆ ಹೋದ ನಂತರ ಆನಂದ್ ಮಾನಸಿಕವಾಗಿ ತೀರ ಜರ್ಝರಿತನಾಗಿ ಎಲ್ಲಾ ಸಭೆ ಸಮಾರಂಭಗಳಿಗೆ ಹೋಗುವುದನ್ನೇ ನಿಲ್ಲಿಸಿಬಿಡುತ್ತಾನೆ. ಮನೆಗೆ ಬರುವ ಎಲ್ಲಾ ಪೋನ್ ಕರೆಗಳನ್ನು ಮನೆ ಕೆಲಸದ ಮಾಧು ಬಳಿ ಎತ್ತಿಸಿ ಮನೇಲಿ ಇಲ್ಲ ಎಂದು ಹೇಳಿಸುತ್ತಾನೆ.
ಕವಿತಾಶ್ರೀ ಇಲ್ಲದ ಬದುಕು ಬದುಕೇ ಅಲ್ಲ ಎಂಬಂತಾಗಿ ಗೋಲಾಡುತ್ತಿದ್ದ ಆನಂದ್’ಗೆ ಕೆಲಸದ ಮಾಣಿ ಮಾಧು ಶ್ರೀಧರ್’ನನ್ನು ಕೊಲೆ ಮಾಡುವ ಸಲಹೆ ಕೊಟ್ಟಾಗ ತಕ್ಷಣಕ್ಕೆ ಒಪ್ಪದಿದ್ದರೂ ಕೊನೆಗೆ ಸುಪಾರಿ ಕೊಡುತ್ತಾನೆ. ಸುಪಾರಿ ಕೊಟ್ಟಾಗಿನ ಮನುಷ್ಯ ಸಹಜ ಪಾಪಪ್ರಜ್ಞೆ ಹಾಗೂ ಅತಂಕದ ಜಾಗೃತಿಗಳೆಲ್ಲವೂ ಆನಂದ್’ಗೆ ಆಗುತ್ತವೆ. ಸ್ತ್ರೀ ವ್ಯಾಮೋಹಕ್ಕೆ ಅದೆಷ್ಟು ಯುದ್ಧಗಳು ನಡೆದು ಹೋಗಿವೆ ಎಂಬ ಸಮರ್ಥನೆಯಿಂದ ತನ್ನ ನಿರ್ಧಾರ ಸರಿ ಇದೆ ಎಂಬ ನಿರ್ಣಯಕ್ಕೆ ಬರುತ್ತಾನೆ. ಸೂಪಾರಿ ಕಿಲ್ಲರ್ ಶ್ರೀಧರ್’ನನ್ನು ಕೊಲೆ ಮಾಡಿ ಬಂದು ಹಣ ವಸೂಲಿಗೆ ಆನಂದ್ ಬಳಿ ಬಂದಾಗ ಕೊಲೆಯ ಕುರಿತು ವಿವರಿಸುತ್ತಾ ಕೊಲೆ ಮಾಡುವಾಗ ಕವಿತಾಶ್ರೀ ಕೂಡ ಇದ್ದ ಕಾರಣ ಅವಳನ್ನು ಕೊಲೆಗೈದೆ ಎಂದ ಕೂಡಲೇ ನಿತ್ರಾಣನಾಗುತ್ತಾನೆ ಆನಂದ್. ಇಡೀ ರಂಗಮಂದಿರ ಮೌನಕ್ಕೆ ಶರಣಾಗಿರುತ್ತದೆ ನಾಟಕ ಮುಗಿಯತ್ತದೆ.

ಪ್ರತಿ ಪಾತ್ರವೂ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದು, ಮುಖ್ಯಭೂಮಿಕೆಯಲ್ಲಿ ಕವಿತಾಶ್ರೀ ಪಾತ್ರ ನಿರ್ವಹಿಸಿದ ಡಾ. ವಿನಯ ಶ್ರೀನಿವಾಸ್ ಅವರ ಅಭಿನಯ ಮನಸೆಳೆಯುವಂತಿತ್ತು. ವೈದ್ಯರಾಗಿ, ವೈದ್ಯಕೀಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸಮಯದ ಅಭಾವವಿರುವವರು ಪೂರ್ಣ ಪ್ರಮಾಣದ ಕಲಾವಿದರಂತೆ ಪಾತ್ರಕ್ಕೆ ಅವಶ್ಯವಿರುವ ಎಲ್ಲಾ ಭಾವಗಳನ್ನು ತುಂಬಿಕೊಂಡು ನಟಿಸಿರುವುದು ಪ್ರೇಕ್ಷಕರಿಗೆ ಕಲೆಯ ಬಗ್ಗೆ ಇನ್ನಷ್ಟು ಅಸಕ್ತಿ ಕೂತೂಹಲಗಳು ಹೆಚ್ಚಿಸುವಂತೆ ಮಾಡುತ್ತದೆ.
(ಲೇಖನ: ಯು.ಜೆ. ನಿರಂಜನಮೂರ್ತಿ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















