ಮಕ್ಕಳಿಗೆ ಶಾಲೆಗೆ ರಜೆ ಬಂತೆಂದರೆ ಅಪ್ಪ-ಅಮ್ಮ ಹೆದರಲಾರಂಭಿಸುತ್ತಾರೆ. ಹೊರಗೆ ಇಬ್ಬರೂ ಕೆಲಸ ಮಾಡುವ ಅಪ್ಪ-ಅಮ್ಮಂದಿರಿಗಂತೂ ವಿವಿಧ ಪ್ರಾಯೋಗಿಕ ಸಮಸ್ಯೆಗಳು ಎದುರಾಗುತ್ತವೆ. ಅಜ್ಜ-ಅಜ್ಜಿಯರಿಗೆ ‘‘ಮಕ್ಕಳು ಆರಾಮವಾಗಿ, ‘ಏನೂ’ ಮಾಡದೆ ಮನೆಯಲ್ಲಿದ್ದುಕೊಳ್ಳಲಿ’’ ಎನಿಸುತ್ತದೆ. ಆದರೆ ಮಕ್ಕಳು ‘ಏನೂ’ ಮಾಡದಿರುವುದು ಎಂದರೆ ಮನೆಯನ್ನು ಪೂರ್ತಿ ಅಸ್ತವ್ಯಸ್ತ ಮಾಡಿ, ಜಗಳವಾಡಿಕೊಳ್ಳುವುದು ಎಂಬುದು ಬಹಳ ಜನರ ಮನೆಯಲ್ಲಿ ಕಂಡು ಬರುವಂತಹದ್ದು. ತಮಗೆ ಮಕ್ಕಳು ಅಂದರೆ ತುಂಬಾ ಇಷ್ಟ, ಎಷ್ಟು ಮಕ್ಕಳನ್ನು ಬೇಕಾದರೆ ತಾವು ನಿಭಾಯಿಸುತ್ತೇವೆ ಎಂದುಕೊಳ್ಳುವವರಿಗೂ ಕೂಡ, ಮಕ್ಕಳ ಜಗಳ-ಅವರು ಇಡೀ ಮನೆಯನ್ನು ಹರಡುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದು ಹೆಚ್ಚೆಂದರೆ ನಾಲ್ಕಾರು ದಿನಗಳು ಮಾತ್ರ. ಇಂದಿನ ದಿನಗಳಲ್ಲಂತೂ ಅಜ್ಜ-ಅಜ್ಜಿಯ ಮನೆ, ಅಪ್ಪ-ಅಮ್ಮನ ಮನೆ ಒಂದೇ ಆಗಿರುವ ಸಾಧ್ಯತೆಯೇ ಹೆಚ್ಚು. ಹೀಗಿರುವಾಗ ಅಪ್ಪ – ಅಮ್ಮ ಶಿಬಿರಗಳನ್ನು ಹುಡುಕಿ ಹೇಗೋ ಒಂದು ಶಿಬಿರಕ್ಕೆ ಸೇರಿಸಿ ‘ಅಬ್ಬಾ’ ಎಂದು ಸಮಾಧಾನದ ನಿಟ್ಟುಸಿರು ಬಿಡಬೇಕಾಗುತ್ತದೆ.
ಈ ಬಾರಿ ನನ್ನ ಅನುಭವವೂ ಇದೇ! ‘‘ಯಾವ ಕ್ಲಾಸೂ ಇಲ್ಲದೆ ಮಕ್ಕಳು ಮನೆಯಲ್ಲಿ, ಅವರಿಗೆ ಬೇಕಾದ ಹಾಗೆ ಇರಲಿ’’ ಎಂಬ ‘ಒಳ್ಳೆಯ’ ಬುದ್ಧಿಯಿಂದ ನಾನು ಮಕ್ಕಳನ್ನು ಮನೆಯಲ್ಲಿರಲು ಬಿಟ್ಟಿದ್ದೇ ಮನೆಯ ಒಪ್ಪ-ಓರಣದ ಜೊತೆಗೆ ನನ್ನ ತಲೆಯೂ ಕೆಡುವ ಪರಿಸ್ಥಿತಿ ಬಂದು ಬಿಟ್ಟಿತು! ಆಗಲೇ ನಾನು ನೋಡಿದ ರಂಗಾಯಣದ ಜಾಹೀರಾತಿಗೆ ತತ್ಕ್ಷಣ ಸ್ಪಂದಿಸಿ, ಅರ್ಜಿಗಳನ್ನು ತುಂಬಿಬಿಟ್ಟೆ. ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ, ಒಂದೇ ಸಮನೆ 20 ದಿನಗಳ ಕಾಲ, ಭಾನುವಾರದ ರಜೆಯೂ ಇಲ್ಲ! ಮೊದಲೆರಡು ರಂಗಾಯಣದ ಶಿಬಿರಗಳಿಗೆ ಸೇರಿದ್ದ ಮಗಳು ಭೂಮಿ ರಂಗ ಶಿಬಿರಕ್ಕೆ ಹೋಗಲು ಉತ್ಸುಕಗಳೇ ಆಗಿದ್ದಳು. ಜೊತೆಗೆ ಅಕ್ಕ ಚೈತ್ರಾಳ ಮಗಳು ಮಧುಮಿತಾ ಬೇರೆ. 7 ವರ್ಷದ ಮಗ ಭರತವರ್ಷ ಮಾತ್ರ ನಾನು ಅಲ್ಲಿ ಎಲ್ಲರೆದುರು ಏನೇನು ಮಾಡಬೇಕು ಎಂದು ವಿಚಾರಿಸಿದ. ಕಿರಿಯವನಾದ, ಸಂಕೋಚ ಸ್ವಭಾವದ, ಬೇರೆಯವರೆದುರಿಗೆ ಮಾತನಾಡದ/ಹಾಡದ, ಊಟ ಮಾಡಲು ಹಠ ಮಾಡುವ ಈ ಮಗರಾಯನನ್ನು ಶಿಬಿರಕ್ಕೆ ಕಳಿಸುವ ಬಗ್ಗೆ ನನಗೂ ಗೊಂದಲೇ ಆಗಿತ್ತು. ಆದರೂ ಕಳಿಸಿಯೇ ಬಿಟ್ಟೆ!
ನಾಟಕಗಳನ್ನು ನೋಡುವುದು, ಮಾಡುವುದು ನನಗೆ ಬಾಲ್ಯದಿಂದಲೂ ಆಕರ್ಷಕವೆನಿಸುವ ಚಟುವಟಿಕೆ. ನನ್ನ ಬಾಲ್ಯದಲ್ಲಿ ನಾಟಕಗಳನ್ನು ನೋಡಿದ-ಮಾಡಿದ ಅನುಭವಗಳು, ಈಗ ನನ್ನ ಮಕ್ಕಳು ನಾಟಕಗಳನ್ನು ನೋಡುವಾಗ-ಸಿದ್ಧತೆ ಮಾಡುವಾಗ ಅವರು ವ್ಯಕ್ತಪಡಿಸುವ ಭಾವನೆಗಳು-ನಡವಳಿಕೆಗಳು ಸಂಶೋಧನೆ-ಶಾಸ್ತ್ರಗಳಿಗೆ ಲಭಿಸಿದ ನನ್ನ ಜ್ಞಾನವನ್ನು ಪ್ರಾಯೋಗಿಕವಾಗಿ ನಿರೂಪಿಸಿವೆ.
ಹಾಗೇ ನಿಮ್ಮ ಸುತ್ತಮುತ್ತಲಲ್ಲಿರುವ ರಂಗ ಕಲಾವಿದರನ್ನು ಒಮ್ಮೆ ಗಮನಿಸಿ/ನೆನಪಿಸಿಕೊಂಡು ನೋಡಿ. ಅವರಲ್ಲಿ ಬಹುಜನ ನಟ-ನಟಿಯರಾಗಿ ಅಭಿನಯ ಮಾಡುವುದರೊಂದಿಗೆ, ಹಲವು ಕೌಶಲಗಳನ್ನು ಬಲ್ಲವರಾಗಿರುತ್ತಾರೆ. ಭಾಷೆಯನ್ನು ಬೇಕಾದಂತೆ ದುಡಿಸಿಕೊಳ್ಳುವ, ಸಂಭಾಷಣೆ ಬರೆಯುವ ಕೌಶಲ, ಚಿತ್ರ ಕಲೆಯ ತಂತ್ರಗಳು, ಇರುವ ವೇಷಭೂಷಣದಲ್ಲಿಯೇ ಕಿಂಚಿತ್ ಬದಲಾವಣೆಯಿಂದ ರಂಜನೀಯವಾಗಿ ಮಾಡುವ ಪ್ರತಿಭೆ, ಗಟ್ಟಿಯಾಗಿ/ಮಧುರವಾಗಿ/ನಾಟಕಗಳಿಗೆ ಹೊಂದುವಂತೆ ಹಾಡುವ ಕುಶಲತೆ, ಹಾಸ್ಯಮಯವಾಗಿ ಮಾತನಾಡುವುದು ಇವೆಲ್ಲವನ್ನೂ ಅವರಲ್ಲಿ ನಾವು ನೋಡುತ್ತೇವೆ. ಕೆಲವರಿಗೆ ಅದು ಅವರ ವ್ಯಕ್ತಿತ್ವದಲ್ಲಿ ಅಡಕವಾಗಿ ಅದು ಅವರ ಸ್ವಭಾವವೇ ಆಗಿದ್ದಿರಬಹುದಾದರೂ, ಬಹು ಜನರಲ್ಲಿ ಇವು ಕಾಲಕ್ರಮೇಣ ರೂಢಿಯಾಗಿ ಅವರನ್ನು ರಂಗ ಕಲಾವಿದರನ್ನಾಗಿಸಿರುತ್ತದೆ.
ರಂಗ ಚಟುವಟಿಕೆಗಳು ಯಾವಾಗಲೂ ಸಾಮೂಹಿಕ ಚಟುವಟಿಕೆಗಳು. 4ರಿಂದ 7 ವರ್ಷ ವಯಸ್ಸಿನ ಗುಂಪಿನ ಮಕ್ಕಳಲ್ಲೇ, ಒಂದು ಮಗು ‘‘ನಾನು ಮರ’’ ಎಂದರೆ, ಅದಕ್ಕೆ ಇನ್ನೊಂದು ವಾಕ್ಯ ಜೋಡಿಸಬೇಕಾದ ಮತ್ತೊಂದು ಮಗು ‘‘ನಾನು ಬೇರುಗಳ ಕೆಳಗೆ ಹರಿಯುವ ನೀರು’’ ಎನ್ನಬಹುದು. ಹೀಗೆ ‘ಮರ’ ಎಂಬ ಒಂದು ಪದ ಮಕ್ಕಳ ಕಲ್ಪನೆಯಲ್ಲಿ ಹಲವು ಹೊಸ ಕೊಂಬೆಗಳನ್ನು ಹರಡಿಕೊಂಡು ಬೃಹದಾಕಾರವಾಗಿ ನಿಂತುಬಿಡುತ್ತದೆ. ಇಂಥ ಸಂದರ್ಭಗಳಲ್ಲಿಯೇ ನನಗೆ ಐನ್ಸ್ಟೀನ್ ಹೇಳಿದ Imagination is important than knowledge- ‘ಕಲ್ಪನೆ ಜ್ಞಾನಕ್ಕಿಂತ ಮುಖ್ಯ’ ಎಂಬ ಮಾತು ನೆನಪಾಗುವುದು. ನಾಟಕ ಮಾಡುವಾಗ-ಕಲಿಯುವಾಗ ಸರಿ/ತಪ್ಪು ಎಂಬುವುದಿಲ್ಲ, ಆದರೆ ಶಿಸ್ತಿದೆ. ಇಲ್ಲಿ ನಮ್ಮ ಗಮನವೆಲ್ಲ ಕಲ್ಪಿಸಿಕೊಳ್ಳುವುದರ ಬಗ್ಗೆ, ಹೊಸತನ್ನು ಸೃಷ್ಟಿಸುವುದರ ಕುರಿತು, ಹೆಚ್ಚು ಆಸಕ್ತಿಪೂರ್ಣವಾಗಿಸುವುದರ ಕಡೆ.
ರಂಗ ಶಿಬಿರಗಳಲ್ಲಿ ಈ ಸಾಮೂಹಿಕತೆ ಎರಡು ಮುಖ್ಯ ಉಪಯೋಗಗಳನ್ನು ನಮ್ಮ ಮಕ್ಕಳಿಗೆ ನೀಡುತ್ತದೆ. ‘ಮೈಛಳಿ’ ಬಿಡಿಸಿ, ಮಾತನಾಡುವುದನ್ನು ಉತ್ತೇಜಿಸುತ್ತದೆ. ಮುಂದಾಳುವಾಗುವುದರ ಜವಾಬ್ದಾರಿ-ಅವಕಾಶ-ಲಾಭಗಳನ್ನು ಕಲಿಸುತ್ತದೆ. ಮುಂದಾಳುವಿನ ಮಾತಿನಂತೆ ನಡೆಯುವುದನ್ನೂ ಕಲಿಸುತ್ತದೆ. ನಾಟಕಗಳಲ್ಲಿ ನಿಜ ಜೀವನದ ಅನುಭವಗಳಿಗೆ ಸ್ಪಂದಿಸುವ ಬಗೆಯನ್ನು ಮಕ್ಕಳು ಕಲಿಯುತ್ತಾರೆ. ಬೇರೆಯವರ ಭಾವನೆಗಳನ್ನು ಗ್ರಹಿಸುವುದು, ಅವರನ್ನು ‘ಸಹಿಸಿ’ಕೊಳ್ಳುವುದು, ಸ್ನೇಹ ಮಾಡಿಕೊಳ್ಳುವುದು ಇವು ನಾಟಕದಿಂದ ಉಂಟಾಗುವ ಇತರ ಲಾಭಗಳು.
ಇಪ್ಪತ್ತು ದಿನಗಳ ರಂಗಾಯಣದ ಶಿಬಿರ ಮಕ್ಕಳು ಪ್ರದರ್ಶಿಸಿದ್ದು 8 ನಾಟಕಗಳು. ಅವು ಸೋಮವಾರ ಮತ್ತು ಮಂಗಳವಾರ ಬೆಳಗ್ಗಿನಿಂದ ಸಂಜೆಯವರೆಗೆ ಎಂಬುದು ವಿಶೇಷ! ಆದರೂ ನನ್ನ ಮಕ್ಕಳಿಗಾಗಿ, ನನ್ನ ಅಕ್ಕನ ಮಗಳು ಮಧುಮಿತಾಳಿಗಾಗಿ, ರೋಗಿಗಳನ್ನು ಬೆಳಿಗ್ಗೆ ಬೇಗ ನೋಡಲಾರಂಭಿಸಿ, ಮಧ್ಯೆ ಮಧ್ಯೆ ಅವರನ್ನು ಬೇಡಿ ಬೇಗ ಹೋಗಿ ಮೊದಲ ದಿನದ ನಾಲ್ಕೂ ನಾಟಕಗಳು, ಎರಡನೇ ದಿನದ ನಾಲ್ಕು ನಾಟಕಗಳಲ್ಲಿ ಎರಡು ನಾಟಕಗಳನ್ನು ನೋಡಿಯೇ ಬಿಟ್ಟೆ! ಮಕ್ಕಳೊಂದಿಗೆ ಮಗುವಾಗುವ ಸಂತೋಷ! ನನ್ನ ಮಕ್ಕಳು ಇದ್ದದ್ದು ಮೂರು ನಾಟಕಗಳಲ್ಲಿ ಆದರೂ, ಉಳಿದ ನಾಟಕಗಳನ್ನೂ ನಾನು ಎಂಜಾಯ್ ಮಾಡಲು ಸಾಧ್ಯವಾಯಿತು ಎನ್ನುವುದು ಆ ನಾಟಕಗಳ ಶಕ್ತಿಯನ್ನು ತೋರಿಸುತ್ತದೆ. ನಾನು ವಿಜ್ಞಾನಿಯಾಗುವೆ ಎಂಬ ಪ್ರಥಮ ನಾಟಕ ನನಗೆ ಬಲು ಇಷ್ಟವಾದದ್ದು. ನಾಟಕಗಳನ್ನು ಮಾಡಿದ್ದ ಮಕ್ಕಳಲ್ಲೆರಲ್ಲೂ ವೃತ್ತಿಪರತೆ ಎದ್ದು ಕಾಣುತ್ತಿದ್ದು ವಿಶೇಷ. ಚಿಕ್ಕ ಪಾತ್ರಗಳಾದರೂ, ಡೈಲಾಗ್ ಇಲ್ಲ ಎಂದಾದರೂ ಮಕ್ಕಳು ತಲೆಕೆಡಿಸಿಕೊಳ್ಳದೆ, ಅದನ್ನು ಗಂಭೀರವಾಗಿಯೇ ಪರಿಗಣಿಸಿ ಮಾಡುತ್ತಿದ್ದದ್ದು ಅಚ್ಚರಿ! ಶಿಬಿರದ ನಿರ್ದೇಶಕ ಚಂದ್ರು ಮತ್ತು ರಂಗಾಯಣದ ನಿರ್ದೇಶಕ ಎಂ. ಗಣೇಶ್ ಅವರ ಇಡೀ ತಂಡ ಮಕ್ಕಳಲ್ಲಿನ ಈ ವೃತ್ತಿಪರತೆಗೆ ಅಭಿನಂದನಾರ್ಹರು.
ರಂಗಾಯಣದ ಶಿಬಿರದಿಂದ ಎಲ್ಲಕ್ಕಿಂತ ನನ್ನ ಮಕ್ಕಳಿಗೆ, ನನಗೆ ಲಭಿಸಿದ ಮುಖ್ಯ ಲಾಭ ‘ಸಂತೋಷ’! ಮಕ್ಕಳು ಈ ‘ಸಂತೋಷ’ವನ್ನು ‘ಲಾಭ’ ಎಂದು ಕರೆಯಲಾರರು! ಆದರೆ ಎಲ್ಲವನ್ನೂ ಲಾಭ-ನಷ್ಟದ ಲೆಕ್ಕಾಚಾರದ ವ್ಯವಹಾರದ ದೃಷ್ಟಿಯಿಂದಲೇ ನೋಡುವ ಹಿರಿಯರಿಗೆ ಮಕ್ಕಳಿಗೆ ನಾಟಕದಿಂದ ಸಿಕ್ಕುವ ‘ಸಂತೋಷ’ ಬಹಳ ಮಹತ್ವದ್ದು ಎಂಬ ಅರಿವು ಇರಬೇಕು. ಸಂತೋಷದಿಂದ ನೆಡೆಯುವ ಯಾವುದೇ ಚಟುವಟಿಕೆ ಒತ್ತಾಯಕ್ಕಿಂತ ಹೆಚ್ಚು ಲಾಭಗಳನ್ನು ತರಬಲ್ಲದು. ಮಕ್ಕಳ ಭಾವನಾತ್ಮಕ ಮಿದುಳು ಅಂದರೆ ಬಲ ಮಿದುಳನ್ನು ಸಬಲಗೊಳಿಸುವ ನಾಟಕ ಕಲೆ ಆಟ-ನಗು-ಹಾಸ್ಯ-ಸಂಗೀತ-ಕಥೆ- ನೃತ್ಯಗಳ ಮೂಲಕ ಬೌದ್ಧಿಕ ಮಿದುಳಿನ (ಅಂದರೆ ಅಂಕಗಳಿಕೆಗೆ) ಸಾಮರ್ಥ್ಯಕ್ಕೆ ಒಳ್ಳೆಯ ಸಾಧನವೂ ಹೌದು. ‘‘ನಮ್ಮ ಮಕ್ಕಳು ಮುಂದೆ ಸುಖವಾಗಿರಬೇಕು’’ ಎಂದೇ ಹೆಚ್ಚಿನವನ್ನು ಮಾಡುವ ತಂದೆ-ತಾಯಿಗಳು, ಹಾಗೆ ಮಕ್ಕಳು ‘ಸುಖ’ವಾಗಿರಲು ಭಾವನಾತ್ಮಕ ನೆಮ್ಮದಿ ಅಗತ್ಯ ಎಂಬುದನ್ನು ಗಮನಿಸಬೇಕು.ರಂಗಾಯಣ ಮುಂಬರುವ ದಿನಗಳಲ್ಲಿ ದೊಡ್ಡವರಿಗೂ- ಅಂದರೆ ಕಲಾವಿದರಲ್ಲದ ಜನಸಾಮಾನ್ಯರಿಗೆ ರಂಗಶಿಬಿರಗಳನ್ನು ಮಾಡುವ ಸಾಹಸಕ್ಕೆ ಕೈಹಾಕಬಹುದೆ? ಆ ಮೂಲಕ ಜನರಿಗೆ ಈ ಸತ್ಯ ಅರಿವಾಗುವಂತೆ ಮಾಡಬಹುದೆ?!
ರಂಗಾಯಣದ ರಂಗ ಶಿಬಿರ ಮುಗಿಯುತ್ತಾ ಬರುತ್ತಿರುವಂತೆ ಬದಲಾಗುತ್ತಿರುವ ನನ್ನ ಮಕ್ಕಳನ್ನೇ ನೋಡುತ್ತಿದ್ದೇನೆ. ಕಿರಿಯ-ಸಂಕೋಚ ಸ್ವಭಾವದವನು ಎಂದು ನಾನು ಭಾವಿಸಿದ ಭರತವರ್ಷ ತನಗಿಂತ ಹಿರಿ-ಕಿರಿಯರನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ತನ್ನದೇ ಗುಂಪು ಮಾಡಿಕೊಂಡಿದ್ದಾನೆ. ಹೋಂ ವರ್ಕ್ ಮಾಡು ಎಂದು ಹೇಳಿಸಿಕೊಳ್ಳುವ ಮಗಳು ಭೂಮಿ ನನ್ನೊಡನೆ ಮಾತನಾಡಲು ಪುರುಸೊತ್ತೇ ಇರದೆ, ಟಿ.ವಿ ಬಿಟ್ಟು ತಾನು ನಾಟಕದ ಸಂಭಾಷಣೆ ಬರೆಯುವುದರಲ್ಲಿ ತೊಡಗಿದ್ದಾಳೆ. ಮಕ್ಕಳ ಊಟದ ಡಬ್ಬಿಗಳು ಖಾಲಿಯಾಗಿ ಬರುತ್ತಿವೆ! ಶಿಸ್ತಿನಿಂದ – ಶಾಲೆಯಲ್ಲಿ – ಮನೆಯಲ್ಲಿ ಕಲಿಸಲಾಗದ್ದನ್ನು ರಂಗಾಯಣ ಶಿಬಿರದಲ್ಲಿ ಮಕ್ಕಳು ಕಲಿತಿದ್ದಾರೆ!
Discussion about this post