ಮರೆಯಾಯಿತು
ಶಿವನ ಬೆಳಕು
ಸಿದ್ಧಗಂಗೆಯಲ್ಲಿ…
ನಾನೆಂದೂ
ನೋಡಿಲ್ಲ ದೇವರನ್ನು…
ಕಂಡೆ
ಆ ಬೆಳಕನ್ನು
ನಿಮ್ಮ
ತ್ರೀವಿಧ ದಾಸೋಹದ
ಕಣ್ಣುಗಳಲ್ಲಿ…
ದಣಿವರಿಯದ
ನಿಮ್ಮ ಕೈಗಳಿಗೆ
ಆ ಶಿವನೇ
ಹಸ್ತ ಚಾಚಿದ್ದಾನೆ..
ಬನ್ನಿ ಸ್ವಲ್ಪ
ದಣಿವರಿಸಿಕೊಳ್ಳಿ ಎಂದು…
ಹೋಗಿ ಬಾ ಅಜ್ಜ..
ಮತ್ತೆ ಕಾಣುತ್ತೇನೆ
ನಿಮ್ಮನ್ನು..
ಹಸಿದವರಿಗೆ
ಅನ್ನ ನೀಡುವ
ಮನಸ್ಸುಗಳಲ್ಲಿ..
ನಿರಾಶ್ರಿತರಿಗೆ
ಆಶ್ರಯ ನೀಡುವ
ತೋಳುಗಳಲ್ಲಿ…
ಶಿಕ್ಷಣದ ಮೂಲಕ
ಜ್ಞಾನದ ಬೆಳಕನ್ನು
ಹರಿಸುವ ಕಣ್ಣುಗಳಲ್ಲಿ…
-ಪುಟ್ಟು ಕಳ್ಳಿಹಾಳ, ಹಾವೇರಿ

ಶಿವಶಿವಾ ಶಂಕರಾ..
ಶ್ರೀ ಶಿವಕುಮಾರ ಸ್ವಾಮಿಗಳ ಐಹಿಕ ಬದುಕಿನ
ಕಟ್ಟುನಿಟ್ಟಿನ ಅಷ್ಠಾನದ ಅದೆಷ್ಟು ಬಗೆಯ ನಿಷ್ಠೆಗಳಿಗೆ ನೀ ಒಂದಿಷ್ಟೂ ಕರಗದೆ ನಿನ್ನ ಪಂಚಭೂತಗಳಲ್ಲಿ ಒಂದಾಗಿಸಿಕೊಂಡು ಈ ಭುವಿಯ ಬೆಡಗಿಗೆ ಕಳಸದಂತಿದ್ದ ಸಿದ್ದಗಂಗಾ ಶ್ರೀಗಳ, ನಿನ್ನಲ್ಲೊಂದಾಗಿಸಿಕೊಂಡೇ ಬಿಟ್ಟೆಯಲ್ಲ..
ಶಿವಶಿವಾ ಶಂಕರಾ..
ಲೋಕ ಕಂಡ ಜಂಗಮರಾಗಿ
ನಡೆದಾಡುವ ದೇವರಾಗಿ
ನೂರಾರು ವಸಂತಗಳಿಗೆ ಸಾಕ್ಷಿಪ್ರಜ್ಞೆಯಾಗಿದ್ದ ಅಪರೂಪದ ಮಹನೀಯರ
ಈ ದೇಶ ಕಂಡ ಸಾಕ್ಷತ್ ದೇವರ
ಮತ್ತೆ ಕಾಣದ ಲೋಕಕ್ಕೆ ಕರೆಸಿಕೊಂಡೇಬಿಟ್ಟೆಯಲ್ಲ
ಶಿವಶಿವಾ ಶಂಕರಾ..
ಆ ಧರ್ಮ ಈ ಧರ್ಮ ಎನ್ನದಿರಿ
ಆ ಮತ ಈ ಮತವೆಂದು ಬಡಿದಾಡದಿರಿ
ಮನವತೆಯೇ ಮಹಾ ಧರ್ಮ ವೆಂಬುದ ಮರೆಯದಿರೆಂದು ನುಡಿದ..
ನುಡಿದಂತೆ ನಡೆದು ಅಂತೆಯೇ ಈ ಜಗದಗಲ ಹೆಸರಾದ ಮಹಾತ್ಮನ ನೀ ಕರೆದೊಯ್ದೆಯಲ್ಲೋ
ಶಿವ ಶಿವಾ ಶಂಕರಾ…
ಒಂದು ಕಾಳು ಅಕ್ಕಿಯ ಹಿಂದೆ
ಸಾವಿರಾರು ರೈತರ ಪರಿಶ್ರಮವಿದೆಯೆಂದ
ದೇಹದ ಹಸಿವಿಗೆ ಪ್ರಸಾದವೇ ಶ್ರೇಷ್ಠ..
ಮನದ ಹಸಿವೆಗೆ ಪ್ರಾರ್ಥನೆಯೇ ಶ್ರೇಷ್ಠ..
ಮುಕ್ತಿ ಪಥಕೆ ಮಾನವಥೆಯೇ ಶ್ರೇಷ್ಠ.. ವೆಂದು ಸಾರಿ..
ಅನ್ನವಿಲ್ಲದವಗೆ ಅನ್ನವಿಕ್ಕಿ
ಬಾಯಾರಿದವಗೆ ನೀರಿಕ್ಕಿ
ಜ್ಞಾನವಿಲ್ಲದವಗೆ ಜ್ಞಾನದಂಗಳವಿಕ್ಕಿ
ಕಷ್ಟದಲ್ಲಿರುವವಗೆ ನೆರವಿನ ಅರುಹುಕ್ಕಿ
ಇದೇ ನಿಜ ಧರ್ಮ ತಿಳಿಯೋ ಮನುಜನೆಂದ ಮಹಾ ಯೋಗಿಯ..
ಲೋಕಕಂಡ ಜಂಗಮರ….
ಜ್ವಲಂತ ಸಾಕ್ಷಿ “ನೀನೇ ನನ ಲೋಕಕೂ ಆಗಿರು ಬಾ” ಎಂದು ಕರೆದೊಯ್ದೆಯಲ್ಲೋ
ಶಿವಶಿವಾ ಶಂಕರಾ..
ನೀಡಿದ ಗೌರವ ಡಿಲಿಟ್ ಪದವಿಯ
ಪುರಸ್ಕರಿಸಿದ ಕರ್ನಾಟಕ ರತ್ನ ಪ್ರಶಸ್ತಿಯ
ಸನ್ಮಾನಿಸಿದ ಪದ್ಮಭೂಷಣ ಪ್ರಶಸ್ತಿಯ
ಜಗತ್ತು ನೀಡಿದ ಗುರುದೇವ ಎಂಬ ಆಂತರ್ಯದ ಕರೆಯ
ಎಲ್ಲರಂತರಾಳದ ಬಗೆಬಗೆಯ ಮನವಿಯ ಬಿಸುಟು
ಶತಮಾನ ಕಂಡ ಯುಗಪುರುಷ ಶ್ರೇಷ್ಠ ನಿನಾಗು ಎಂದು ಜ್ಯೋರ್ತಿಮಯ ಧಾರಿಯಾಗಿಸಿದೆಯಲ್ಲ ಸಿದ್ದಗಂಗಾ ಮಠದ ಈ ಶ್ರೇಷ್ಠ ಮಠಾಧಿಪತಿ ಡಾ: ಶ್ರೀ ಶಿವಕುಮಾರ ಮಹಾಸ್ವಾಮಿಗಳವರ
ಶಿವಶಿವಾ ಶಂಕರಾ..
ಶ್ರೇಷ್ಠ ತೆಗೆ ಇಲ್ಲಿ ತಾವುಂಟು
ಕಾಯಕಕೆ ಇಲ್ಲಿ ಹರಿವುಂಟು
ಬೇಡಿಬಂದವಗೆ ಇಲ್ಲಿ ಆಶ್ರವುಂಟೆಂದು ನಂಬಿದ್ದ
ಜಗದ ಇಂಗಿತಕ್ಕೆ ಪೂರ್ಣ ವಿರಾಮವನಿಕ್ಕಿ ಈ ಎಲ್ಲ ಶ್ರೇಷ್ಠತೆಗಳ ಒಟ್ಟು ಫಲಿತತೆಯ
ನಿನ್ನೊಳಗೆಳೆದು ನಡೆದು ಬಿಟ್ಟೆಯಾ
ಶಿವಶಿವಾ ಶ್ರೀಶಂಕರಾ..
ಭಕ್ತಿಯಿಂದ ಈ ನುಡಿ ನಮನ ನಿಮಗರ್ಪಿಸಿ..
ಬರಿದಾದ ಈ ಜಗದೆಡೆಗೆ ಮತ್ತೆ ನಾ ನಡೆಯುತಿರುವೆ..
ಓ ಶ್ರೇಷ್ಠ ಜಂಗಮ
-ಶ್ರೀರಂಜಿನಿ ದತ್ತಾತ್ರಿ















