ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಕೊರೋನಾ ವೈರಸ್ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಜಾರಿ ಮಾಡಲಾಗಿರುವ 21 ದಿನಗಳ ಲಾಕ್ ಡೌನ್ ಅನ್ನು ವಿಸ್ತರಣೆ ಮಾಡುವ ಯಾವುದೇ ಪ್ರಸ್ತಾವನೆಯಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಕುರಿತಂತೆ ಇಂದು ಸ್ಪಷ್ಟನೆ ನೀಡಿರುವ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ನನಗೆ ಇಂತಹ ವರದಿಗಳನ್ನು ನೋಡಿ ಆಶ್ಚರ್ಯವಾಯಿತು. ಲಾಕ್ ಡೌನ್ ವಿಸ್ತರಣೆ ಮಾಡುವ ಯಾವುದೇ ಪ್ರಸ್ತಾವನೆ ಸದ್ಯ ಕೇಂದ್ರದ ಮುಂದೆ ಇಲ್ಲ ಎಂದಿದ್ದಾರೆ.
ಇನ್ನು, ನಿನ್ನೆ ದೇಶವನ್ನುದ್ದೇಶಿಸಿ ಮನ್ ಕಿ ಬಾತ್’ನಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಲಾಕ್ ಡೌನ್ ಘೋಷಣೆ ಮಾಡಿದ ನಂತರ ಮೊದಲ ಬಾರಿಗೆ ಈ ವಿಚಾರವನ್ನು ಪ್ರಸ್ತಾಪ ಮಾಡಿದರು. ಅಲ್ಲದೇ, ಲಾಕ್ ಡೌನ್ ಜಾರಿ ಮಾಡಿದ್ದಕ್ಕಾಗಿ ದೇಶದ ಜನತೆಯನ್ನು ಅವರು ಕ್ಷಮೆ ಯಾಚಿಸಿದ್ದಾರೆ. ಈ ಕ್ರಮದಿಂದಾಗಿ ಜನರಿಗೆ ತೊಂದರೆಯಾಗಿದ್ದು, ನನ್ನ ವಿರುದ್ಧ ಕೋಪಗೊಂಡಿದ್ದಾರೆ ಎಂದು ತಿಳಿದಿದೆ. ಆದರೆ, ಜನರ ಜೀವ ಉಳಿಸುವ ಸಲುವಾಗಿ ನಮ್ಮ ಮುಂದೆ ಬೇರೆ ಆಯ್ಕೆಯಿಲ್ಲ ಎಂದಿದ್ದಾರೆ.
ಕೊರೋನಾ ವೈರಸ್ ವಿರುದ್ಧ ಹೋರಾಡಲು ಈ ನಿರ್ಧಾರ ತೆಗೆದುಕೊಳ್ಳುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆ ಇರಲಿಲ್ಲ. ಯಾರೂ ಈ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಆದರೆ, ನೀವು ಜಗತ್ತನ್ನು ನೋಡಿದರೆ, ನೀವು ಈ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post