ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಶಾಸಕ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವುದನ್ನು ವಿರೋಧಿಸಿರುವ ಶಾಸಕ ಆರಗ ಜ್ಞಾನೇಂದ್ರ, ಅವರನ್ನು ತಕ್ಷಣವೇ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಆರಗ ಜ್ಞಾನೇಂದ್ರ ಅವರು, ಕಾಂಗ್ರೆಸ್ ಪಕ್ಷವು ದೇಶಕ್ಕೆ ನೈತಿಕತೆಯ ಪಾಠ ಹೇಳುತ್ತದೆ. ಆದರೆ ವಾಲ್ಮೀಕಿ ನಿಗಮದ ಹಗರಣದ ವಿಚಾರದಲ್ಲಿ ಆ ಪಕ್ಷದ ನಿಲುವೇನು ಎಂದು ಪ್ರಶ್ನಿಸಿದರು.
“ಬಡವರು, ದಲಿತರ ಹಣ ದುರ್ಬಳಕೆ”
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಉಲ್ಲೇಖಿಸಿದ ಅವರು, ಬಡವರು ಹಾಗೂ ದಲಿತ ಸಮುದಾಯಕ್ಕೆ ಮೀಸಲಿದ್ದ 187 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು.
“ಇಂತಹ ಪ್ರಕರಣದ ಹಿನ್ನೆಲೆಯಲ್ಲಿ ಇರುವ ವ್ಯಕ್ತಿಯನ್ನು ಯಾವುದೇ ವಿಚಾರಣೆ ಮುಗಿಯುವ ಮುನ್ನವೇ ಮತ್ತೆ ಕರ್ನಾಟಕ ಸಚಿವ ಸಂಪುಟಕ್ಕೆ ಸೇರಿಸಿರುವುದು ಸರಿಯಾದ ಕ್ರಮವಲ್ಲ. ಇದು ರಾಜ್ಯದ ಜನರ ನಂಬಿಕೆಗೆ ಧಕ್ಕೆ ತರುವಂತಹ ನಿರ್ಧಾರ” ಎಂದು ಹೇಳಿದರು.
Also read>> ಮಲೆನಾಡಿನಲ್ಲಿ ವರುಣನ ಅಬ್ಬರ: ಮೈದುಂಬಿ ಹರಿಯುತ್ತಿದೆ ಬಾಳೆಬರೆ ಫಾಲ್ಸ್
“ಕರ್ನಾಟಕದ ಮೌಲ್ಯಗಳಿಗೆ ವಿರುದ್ಧವಾದ ಆಯ್ಕೆ”
ಕರ್ನಾಟಕ ರಾಜ್ಯಕ್ಕೆ ತನ್ನದೇ ಆದ ಸಾಂಸ್ಕೃತಿಕ ಪರಂಪರೆ ಹಾಗೂ ಮೌಲ್ಯಗಳಿವೆ. ಅನೇಕ ಗಣ್ಯರು ತಮ್ಮ ವ್ಯಕ್ತಿತ್ವದ ಮೂಲಕ ರಾಜ್ಯದ ಗೌರವವನ್ನು ಹೆಚ್ಚಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಆರೋಪಗಳ ಹಿನ್ನೆಲೆ ಇರುವ ವ್ಯಕ್ತಿಯನ್ನು ಸಚಿವ ಸಂಪುಟಕ್ಕೆ ಆಯ್ಕೆ ಮಾಡಿರುವುದು ಅನೈತಿಕ ನಿರ್ಧಾರ ಎಂದು ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
“ಹಗರಣ ನಡೆದಿಲ್ಲ ಎಂದು ಸಿದ್ದರಾಮಯ್ಯ ಹೇಳಿಲ್ಲ”
ವಾಲ್ಮೀಕಿ ಹಗರಣದ ಕುರಿತು ಮಾತನಾಡಿದ ಅವರು, “ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹಗರಣ ನಡೆದಿದೆ ಎಂದು ಒಪ್ಪಿಕೊಂಡಿದ್ದರು. ಮೊತ್ತದ ವಿಚಾರದಲ್ಲಿ ವ್ಯತ್ಯಾಸ ಇರಬಹುದು ಎಂದು ಹೇಳಿದ್ದಾರೆಯೇ ಹೊರತು, ಹಗರಣ ನಡೆದಿಲ್ಲ ಎಂದು ಅವರು ಹೇಳಿಲ್ಲ” ಎಂದರು.
“ಹಗರಣದ ಹಿನ್ನೆಲೆಯಲ್ಲಿರುವ ವ್ಯಕ್ತಿಯ ವಿರುದ್ಧ ಪ್ರಕರಣ ನಡೆಯುತ್ತಿರುವ ಸಂದರ್ಭದಲ್ಲೇ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿರುವುದರ ಹಿಂದಿನ ಉದ್ದೇಶವೇನು?” ಎಂದು ಪ್ರಶ್ನಿಸಿದರು.
“ಚಂದ್ರಶೇಖರ್ ಕುಟುಂಬ ಇನ್ನೂ ಕಣ್ಣೀರಲ್ಲಿದೆ”
ಈ ಪ್ರಕರಣದಲ್ಲಿ ತಮ್ಮ ಜಿಲ್ಲೆಯ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬ ಇನ್ನೂ ದುಃಖದಲ್ಲಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
“ಇಂತಹ ಸಂದರ್ಭದಲ್ಲಿ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೈತಿಕತೆಯನ್ನು ಪ್ರದರ್ಶಿಸಿ, ಅವರನ್ನು ತಕ್ಷಣವೇ ಸಂಪುಟದಿಂದ ಕೈ ಬಿಡಬೇಕು” ಎಂದು ಆಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








