ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಬ್ಬರನ್ನು ಹೊಡೆದು ಹಿಂದಿಕ್ಕಿ ತಾನು ಶ್ರೇಷ್ಠನಾಗುವವನನ್ನು ಸನ್ಮಾನಿಸುವುದು ಅಂತಹ ವ್ಯಕ್ತಿಗಳು ಮಾತ್ರ. ಒಬ್ಬನ ಪರಿಶ್ರಮದ ಅನುಭವವನ್ನು ತಿಳಿಯಬೇಕಾದರೆ ಅಂತಹ ಪರಿಶ್ರಮದ ವ್ಯಕ್ತಿಯೋ ಅಥವಾ ಸೌಹಾರ್ದತೆಯನ್ನು ಬಯಸುವವನೋ ಮಾತ್ರ ಆಗಬೇಕಷ್ಟೆ. ಯಾಕೆ ಈ ಪೀಠಿಕೆ ಹಾಕಿದೆ ಎಂದು ಕಾಣಬಹುದು ನಿಮಗೆ.
ಇಂದಿನ ಪದ್ಮಶ್ರೀ ಪ್ರಶಸ್ತಿ ಪಡೆದವರಲ್ಲಿ ಒಬ್ಬರಾದ ಹರೇಳ ಹಾಜಪ್ಪ ಅವರ ವ್ಯಕ್ತಿತ್ವವನ್ನೊಮ್ಮೆ ನೋಡಿ. ಬಹಳ ಹಿಂದೆಯೇ ಇವರ ಬಗ್ಗೆ ನನಗೆ ಅಪಾರ ಗೌರವವಿತ್ತು. ಕಿತ್ತಳೆ ವ್ಯಾಪಾರ ಮಾಡಿ ಇವರು ಧನ ಸಂಪಾದನೆ ಮಾಡುತ್ತಿದ್ದರು ಎನ್ನುವುದಕ್ಕಿಂತ, ಜ್ಞಾನ ಸಂಪಾದನೆ ಮಾಡಿಕೊಂಡರು ಎಂದು ಹೇಳಿದರೆ ಅದು ಉತ್ತಮ ಶ್ಲಾಘನೆಯಾಗುತ್ತದೆ. ಹತ್ತು ಕಿತ್ತಳೆ ಒಬ್ಬ ಕೊಂಡುಕೊಂಡರೆ ಹತ್ತು ನಿಮಿಷ ಕೈಕಾಲು ಬೆರಳುಗಳನ್ನು ಅಲ್ಲಾಡಿಸುತ್ತಾ ಲೆಕ್ಕ ಹಾಕುವ ತನ್ನ ಮನೋಸ್ಥಿತಿಯು ಮುಂದಿನ ಪೀಳಿಗೆಗೆ ಬರಬಾರದು ಎಂದು ತಿಳಿದುಕೊಂಡ ಜ್ಞಾನದಿಂದಲೇ ಇವರು ಜ್ಞಾನ ದೇಗುಲ ಕಟ್ಟಿದವರು. ಇದು ಇಂದು ನಿನ್ನೆ ಕಟ್ಟಿದ್ದೇನಲ್ಲ. ಹಲವಾರು ವರ್ಷಗಳ ಪರಿಶ್ರಮ ಇದರೊಳಗಿದೆ. ಆದರೆ ಸಮಾಜ ಗುರುತಿಸಿದ್ದರೂ, ಇದರಿಂದ ಜ್ಞಾನ ಪಡೆದಿದ್ದರೂ ಮನದೊಳಗೆ ಮಾತ್ರ, ಸೀಮಿತ ಕ್ಷೇತ್ರದೊಳಗೆ ಮಾತ್ರವೇ ಇವರು ಅನುಗ್ರಹಕ್ಕೆ ಪಾತ್ರರಾಗಿದ್ದರೇ ವಿನಃ ಇಡೀ ಪ್ರಪಂಚಕ್ಕೆ ಕಾಣಲಿಲ್ಲ. ಅವರು ಕಾಯಕವೇ ಕೈಲಾಸ ಎನ್ನುವ ತಪಸ್ಸಿನಲ್ಲಿದ್ದರೇ ಹೊರತು ಪ್ರಶಸ್ತಿ ಪ್ರಶಂಸೆಗಳನ್ನು ಬಯಸಿರಲಿಲ್ಲ. ಆದರೆ ನಾವು ಯಾವಾಗ ಅವರ ಈ ಸತ್ಕರ್ಮವನ್ನು ನೋಡಿದೆವೋ ಆಗ ಅವರನ್ನು ಜಗತ್ತಿಗೇ ಪರಿಚಯಿಸಿ ಗುರುತಿಸಲು ಹೊರಟಾಗ ನಾವು ಕೃತಾರ್ಥರಾಗುತ್ತೇವೆ.
ಸರ್ವಧರ್ಮವನ್ನೂ ಅಂದಿನಿಂದ ಇಂದಿನವರೆಗೆ ಗೌರವಿಸುತ್ತಾ ಬಂದಿದೆ ನಮ್ಮ ಭಾರತೀಯ ಪರಂಪರೆ. ಎಲ್ಲೋ ಒಂದು ಕಡೆ ಇದ್ದ ಬಡ ವ್ಯಕ್ತಿಯ ಜ್ಞಾನ ಭಂಡಾರವನ್ನು ನೋಡಿ ಅವರನ್ನು ಈ ದೇಶದ ರಾಷ್ಟ್ರಪತಿಯನ್ನಾಗಿಸಿತು. ಅವರೇ ಡಾ ಅಬ್ದುಲ್ ಕಲಾಂಜಿ. ಜೋಗಿಯಾಗಿ ಅಲೆಯುತ್ತಿದ್ದ ಪಾರಮಾರ್ಥಿಕ ಚಿಂತನೆಯಲ್ಲಿದ್ದ ಶಿಶುನಾಳ ಶರೀಫರು ನಮಗೆಲ್ಲರಿಗೂ ಅಜ್ಜನಾದರು. ಹೀಗೇ ನೋಡುತ್ತಾ ಹೋದರೆ ಇನ್ನೂ ಅನೇಕರಿದ್ದಾರೆ. ಸತ್ಕಾರ್ಯಕ್ಕೆ ಎಂದೂ ಜಾತಿ, ಸಂಪ್ರದಾಯ, ಮತ, ಧರ್ಮಗಳು ಅಡ್ಡಿಯಾಗುವುದಿಲ್ಲ ಎಂದು ತೋರಿಸುವಂತದ್ದೇ ನಮ್ಮ ಭಾರತೀಯ ಪರಂಪರೆ. ಆದರೆ ದುರಂತವೆಂದರೆ ನಮ್ಮ ಸಮಾಜದೊಳಗೆ ಒಡೆದು ಆಳುವ ವಿಷದ ಬೀಜಗಳೂ ಇರುವುದರಿಂದ ಸಮಾಜವನ್ನು ಒಡೆಯುತ್ತಾ ಹೋಯ್ತು. ಒಂದಾಗಿಸಲಿಲ್ಲ. ಆದರೆ ಸಂಭವಾಮಿ ಯುಗೇ ಯುಗೇ ಎಂಬಂತೆ ಈಗಿನ ಪ್ರಧಾನಮಂತ್ರಿಯವರು ಮೂಲೆಯಲ್ಲಿದ್ದ ಅಮೂಲ್ಯರತ್ನಗಳನ್ನು ಹುಡುಕಿ ಜಗತ್ತಿಗೆ ತೋರಿಸಿದರು. ಅಂತಹ ರತ್ನಗಳಲ್ಲೊಂದು ಇವತ್ತು ಪದ್ಮಶ್ರೀ ಪ್ರಶಸ್ತಿ ಪಡೆದ ಹರೇಳ ಹಾಜಪ್ಪನವರು.
ಇದು ಯಾವುದೇ ಸಮಾಜ, ಸಮುದಾಯದಲ್ಲಿದ್ದ ವಿಷದ ಬೀಜಗಳನ್ನು ನಾಶ ಮಾಡುವುದು ಮಾತ್ರವಲ್ಲ, ನಮ್ಮನ್ನು ಕೃತಾರ್ಥರನ್ನಾಗಿಯೂ ಮಾಡುತ್ತದೆ. ಯಾವುದೋ ಮನೆಯಲ್ಲಿ ದೇವರ ಪೂಜೆ ನಡೆಯುತ್ತಿರಬೇಕಾದರೆ, ಹೇಳಿಕೆ ಗೀಳಿಕೆ ಇಲ್ಲದೆ ನಾವಲ್ಲಿಗೆ ಹೋಗಿ ಪ್ರಸಾದ ಸ್ವೀಕರಿಸಿದಾಗ ಯಾವ ಆನಂದ ಸಿಗುವುದೋ ಅದೇ ಆನಂದವವು ಹರೇಳ ಹಾಜಪ್ಪನವರನ್ನು ಗುರುತಿಸಿ ಸನ್ಮಾನಿಸುವ ಮೂಲಕ ನಾವಿಂದು ಪಡೆದೆವು. ಇದರ ಪರಿಣಾಮವಾಗಿ ಇನ್ನಷ್ಟು ಹಾಜಪ್ಪನವರು ಹುಟ್ಟಿಕೊಳ್ಳುತ್ತಾರೆ. ಯಾವುದೋ ಮತಾಂಧರ ಬಗ್ಗೆ ಕಣ್ಣೀರು ಸುರಿಸಿದರೆ ಮತ್ತೊಂದಷ್ಟು ಮತಾಂಧರು ಹುಟ್ಟಿಕೊಳ್ಳಬಹುದು. ಆ ಮತಾಂಧರ ನಾಶ ಮಾಡಿದರೆ ಅನೇಕ ಮತಾಂಧರು ಕಣ್ಮರೆಯಾಗುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಸಮಾಜದಲ್ಲಿ ಇಂತಹ ಸಜ್ಜನರನ್ನು ಗುರುತಿಸಿ ಸನ್ಮಾನಿಸಿದಾಗ ದುಷ್ಟರ ಮನಃಪರಿವರ್ತನೆಯೂ, ಮತ್ತೊಂದಷ್ಟು ಸಜ್ಜನರ ಸೃಷ್ಟಿಯೂ, ನಮಗೊಂದಷ್ಟು ಕೃತಾರ್ಥತೆಯೂ ಬಂದೇ ಬರುತ್ತದೆ.
ದುಷ್ಕರ್ಮಿಗಳನ್ನು ನಾಶ ಮಾಡುವುದಕ್ಕಿಂತ ಸತ್ಕರ್ಮಿಗಳನ್ನು ಗೌರವಿಸುತ್ತಾ, ಮತ್ತೊಂದಷ್ಟು ಸತ್ಕರ್ಮಿಗಳ ಸೃಷ್ಠಿ, ಪ್ರಚೋದನೆಯ ಕಾರ್ಯ ಮಾಡಿದಾಗ ದುಷ್ಕರ್ಮಿಗಳು ನಿಷ್ಕ್ರಿಯರಾಗಿ ಸತ್ಕರ್ಮಿಗಳೂ ಆಗಬಹುದು ಅಥವಾ ದುಷ್ಕರ್ಮಗಳಿಂದ ದೂರವಾಗಬಹುದು. ಇಂದಿನ ಈ ಹಾಜಪ್ಪ ಮುಂತಾದವರ ಸನ್ಮಾನವು ಭಾರತಾಂಬೆಯ ಕಿರೀಟಕ್ಕೆ ಪೋಣಿಸುವ ಅಮೂಲ್ಯ ರತ್ನವಾಗುತ್ತದೆ.
Get in Touch With Us info@kalpa.news Whatsapp: 9481252093
Discussion about this post