ಶಿವಮೊಗ್ಗದಿಂದ ಸಾಗಿದರೆ ತೀರ್ಥಹಳ್ಳಿ-ಆಗುಂಬೆ ಘಾಟಿಯಿಳಿದು ಕುಂದಾಪುರ ರಸ್ತೆಯಲ್ಲಿ ನಿಮಗೆ ಸಿದ್ಧಾಪುರ ಎಂಬ ಊರು ಸಿಗುತ್ತದೆ. ಅಲ್ಲಿಂದ ಆರು ಕಿಮೀ ದೂರದಲ್ಲಿದೆ ಉಡುಪಿ ಜಿಲ್ಲೆಯ ಕಮಲಶಿಲೆ.
ಪುಟ್ಟ ಗುಡ್ಡಬೆಟ್ಟಗಳ ನಡುವೆ ನಿಸರ್ಗದ ಕೂಸಿನಂತಿದೆ ಕಮಲಶಿಲೆ. ಅಲ್ಲಿ ನಾಗತೀರ್ಥ ಮತ್ತು ಕುಬ್ಜಾನದಿಗಳ ಸಂಗಮವಿದೆ. ಪುಣ್ಯಕ್ಷೇತ್ರಗಳ ಅಸ್ತಿತ್ವಗಳೆಲ್ಲ ನಮ್ಮಲ್ಲಿ ನದಿ ತೀರ ಅಥವಾ ಸಂಗಮಿಸುವ ಸ್ಥಳಗಳಾಗಿರುವುದು ಭಾರತದಲ್ಲಿನ ವಿಶೇಷವಾಗಿದ್ದು, ಅದಕ್ಕೊಂದು ಐತಿಹ್ಯವೂ ಸಹ ಇರುತ್ತದೆ.
ಕೈಲಾಸದಲ್ಲಿ ಆಸ್ಥಾನ ನರ್ತಕಿಯಾಗಿದ್ದ ಪಿಂಗಲಾ ನಾಟ್ಯಮಾಡದ ಕಾರಣಕ್ಕಾಗಿ ಪಾರ್ವತಿ ಶಾಪಕ್ಕೆ ತುತ್ತಾಗುತ್ತಾಳೆ. ಅತಿ ಸುಂದರಿಯಾಗಿದ್ದ ಆಕೆ ಕುರೂಪಿ, ಕುಬ್ಜೆಯಾಗಿ ಭೂಮಿಯಲ್ಲಿ ಜನಿಸುತ್ತಾಳೆ. ಪಾಪ ಪರಿಹಾರ ಕೇಳಲಾಗಿ ತಾನು ಭೂಲೋಕದಲ್ಲಿ ಖರ ರಟ್ಟಾಸುರರ ಸಂಹಾರಕ್ಕಾಗಿ ಅವತರಿಸಿ ಬರುತ್ತೇನೆ. ರೈಕ್ವಾಮನಿಗಳ ಆಶ್ರಮದ ಬಳಿ ನಾಗತೀರ್ಥದ ಸನಿಹವಿರುವ ನದಿದಡದಲ್ಲಿ ನೀನು ತಪಸ್ಸನ್ನಾಚರಿಸು. ಅಲ್ಲಿಯೇ ಲಿಂಗರೂಪಿಯಾಗಿ ಉದ್ಭವಿಸುವೆ. ಬ್ರಾಹ್ಮೀ ದುರ್ಗಾ ಪರಮೇಶ್ವರಿಯಾಗಿ ಭಕ್ತರ ಅಭೀಷ್ಟ ನೆರವೇರಿಸುತ್ತೇನೆ. ಆಗ ನಿನಗೆ ವಿಮೋಚನೆಯ ಮಾರ್ಗ ಸೂಚಿಸುವೆ ಎಂದು ಪಾರ್ವತಿ ಅನುಗ್ರಹವಾಗುತ್ತದೆ.
ಅದರಂತೆ ಪಿಂಗಲಾ ಅಲ್ಲಿ ತಪಸ್ಸನ್ನಾಚರಿಸಿ ದೇವಿಯ ಅನುಗ್ರಹಕ್ಕೆ ಪಾತ್ರಳಾಗುತ್ತಾಳೆ. ಪಿಂಗಲಾ ನೆನಪಿಗೆ ಆಕೆಯ ಆಶ್ರಮದ ಸಮೀಪದ ನದಿಗೆ ಕುಬ್ಜಾವತಿ ಎಂದು ಹೆಸರಿಡುತ್ತಾಳೆ.
ಪ್ರತೀ ವರ್ಷ ಲಿಂಗರೂಪಿ ದೇವತೆಗೆ ನೀರಿನ ಅಭಿಷೇಕ ಸಿಂಚಿಸಲು ಕುಬ್ಜಾನದಿಯು ಉಕ್ಕಿ ಬಂದು ದೇವಳದ ಒಳಗೆ ಪ್ರವಹಿಸುತ್ತದೆ. ಲಿಂಗ ಮುಳುಗುವಂತೆ ಮಾಡುವುದನ್ನು ಯಾತ್ರಾರ್ಥಿಗಳು ನೋಡಿದ್ದಾರೆ. ಇತ್ತೀಚೆಗೆ ಮಾದ್ಯಮಗಳೂ ಈ ದೃಶ್ಯವನ್ನು ಪ್ರಸಾರ ಮಾಡಿವೆ.
ಸದ್ಯ ಈಗ ಗರ್ಭಗೃಹವು ಶಿಲಾಮಯವಾಗುತ್ತಿದೆ. ಸುವರ್ಣಗೋಪುರ ನಿರ್ಮಿಸುವ ಯೋಜನೆ ನಡೆಯುತ್ತಿದೆ. ಗರ್ಭಗೃಹದ ಮೊದಲಿಗಿದ್ದ ಬೆಳ್ಳಿ ಹೊದಿಕೆಯ ಪ್ರವೇಶದ್ವಾರದ ಚೌಕಟ್ಟನ್ನು ತೆಗೆಯಲಾಗಿದೆ.
ದೇವಳದ ಒಳಗಡೆ ಪ್ರಾಕಾರದಲ್ಲಿ ಪರಿವಾರ ದೇವರುಗಳಿವೆ. ಶ್ರೀ ವೀರಭದ್ರ ಸ್ವಾಮಿ, ಶ್ರೀ ಹೊಸಮ್ಮ, ಶ್ರೀ ಮುಂಡಂತ್ತಾಯ, ಶ್ರೀ ಸುಬ್ರಹ್ಮಣ್ಯ, ಶ್ರೀ ಈಶ್ವರ, ಶ್ರೀ ವಿಷ್ಣು, ಶ್ರೀ ಆಂಜನೇಯ, ನವಗ್ರಹ ದೇವತೆಗಳು ಹಾಗೂ ಶ್ರೀ ಗಣಪತಿ ಇಷ್ಟೂ ದೈವಗಳು ಪ್ರಾಕಾರದಲ್ಲಿ ಪೂಜೆಗೊಳ್ಳುತ್ತವೆ.
ಪೌರಾಣಿಕ ಹಿನ್ನೆಲೆ
ಕೃತಯುಗದಲ್ಲಿ ಸುಪಾರ್ಶ್ವ ಮುನಿ ಇಲ್ಲಿನ ಅರಣ್ಯ ಪ್ರದೇಶದಲ್ಲಿನ ಗುಹೆಯಲ್ಲಿ ತಪಗೈದರಂತೆ. ಹೀಗಾಗಿ ಗುಹೆಗೆ ಸುಪಾರ್ಶ್ವ ಗುಹೆ ಎಂಬ ಹೆಸರು ಬಂದಿದೆ. ಮುನಿಯ ರಕ್ಷಣೆಗೆ ಶಿವಗಣದ ಭೈರವ ಶಿವನ ಆಣತಿಯಂತೆ ಅಲ್ಲಿ ಕಾವಲಿರುತ್ತಾನೆ.
ಗುಹೆಯಲ್ಲಿ ಲಿಂಗರೂಪಿಯಾಗಿರುವ ಕಾಳಿ, ಲಕ್ಷ್ಮೀ, ಸರಸ್ವತಿಯರಿದ್ದಾರೆ. ಇದನ್ನು ಶಕ್ತಿತ್ರಯ ಸ್ವರೂಪವೆಂದು ಹೇಳಲಾಗುತ್ತದೆ. ಗಂಗೆಗೌರಿಯೆಂಬ ಜೋಡಿ ಕೆರೆಗಳಿದ್ದು, ಸನಿಹವೇ ನಾಗತೀರ್ಥವಿದೆ. ಅದು ಕಿರು ನದಿಯಾಗಿದ್ದು ಮುಂದೆ ಕುಬ್ಜಾನದಿಯಲ್ಲಿ ಸಂಗಮಗೊಳ್ಳತ್ತದೆ. ಪ್ರಸ್ತುತ ದೇವಿ ಸ್ಥಾಪನೆಯಾಗಿರುವ ಸ್ಥಳವು ಹಿಂದೆ ರೈಕ್ವಾ ಮುನಿಗಳ ಆಶ್ರಮವಾಗಿತ್ತು. ಅಲ್ಲಿಯೇ ಪಾರ್ವತಿಯು ಬ್ರಾಹ್ಮೀ ದುರ್ಗಾ ಪರಮೇಶ್ವರಿಯಾಗಿ ಲಿಂಗರೂಪದಲ್ಲಿ ಉದ್ಭವಿಸಿದ್ದಾಳೆ.
ಈಗ ದೇವಳವು ಅಭಿವೃದ್ಧಿ ಹೊಂದುತ್ತಿದೆ. ಆನುವಂಶಿಕ ಧರ್ಮದರ್ಶಿಗಳಾಗಿ ಶ್ರೀ ಸಚ್ಚಿದಾನಂದ ಚಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಸೇವೆಗಳು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ನೆರವೇರಿಸಲ್ಪಡುತ್ತವೆ. ಚೈತ್ರ ಬಹುಳದ ಮೂಲಾ ನಕ್ಷತ್ರದಂದು ದೇವಿಯ ಮಹಾರಥೋತ್ಸವ ನಡೆಯುತ್ತದೆ.
ಮತ್ತೊಂದು ವಿಶೇಷ!
ಕ್ರಿಶ 1953ರಲ್ಲಿ ಸಂತ ಶ್ರೀ ಶ್ರೀಧರ ಸ್ವಾಮಿಗಳು ಕಮಲಶಿಲೆಗೆ ಆಗಮಿಸಿದ್ದರು. ಅಂದಿನಿಂದ ಪುರುಷ ಭಕ್ತರು ಮೇಲಂಗಿ, ಒಳಂಗಿ ತೆಗೆದು ದೇವಿ ದರ್ಶನಕ್ಕೆ ಪ್ರವೇಶಿಸುವ ಸಂಪ್ರದಾಯ ಬಂದಿತಂತೆ. ಎರಡು ವರ್ಷಕ್ಕೊಮ್ಮೆ ಅಲ್ಲಿ ಮಾರಿಜಾತ್ರೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಕುರಿ, ಕೋಳಿ ಬಲಿ ನೀಡಲಾಗುತ್ತಿತ್ತು. ಶ್ರೀಧರ ಸ್ವಾಮಿಗಳ ಪ್ರಯತ್ನದಿಂದ ಪ್ರಾಣಿ ಬಲಿಗೆ ಬದಲು ಕುಂಬಳ ಮತ್ತು ತೆಂಗಿನ ಕಾಯಿಗಳನ್ನು ಅರ್ಪಿಸುವ ಸಂಪ್ರದಾಯ ರೂಢಿಗೆ ಬಂದಿತು.
ಇನ್ನು, ದೇವಳದಿಂದ ಗೋಶಾಲೆ, ಯಕ್ಷಗಾನ ಮೇಳ, ವಿದ್ಯಾಸಂಸ್ಥೆಗಳು ನಿರ್ವಹಿಸಲ್ಪಡುತ್ತಿವೆ. ಇಂತಹ ಹಲವು ವಿಶೇಷತೆಗಳನ್ನೊಳಗೊಂಡ ಕಮಲಶಿಲೆ, ಸುಂದರ ಪ್ರಕೃತಿಯ ನಡುವೆ ರಾರಾಜಿಸುತ್ತಿದೆ. ಮುಂದೆ ಕೊಲ್ಲೂರು ಸಮೀಪದ ಮತ್ತೊಂದು ಕ್ಷೇತ್ರ. ಹೀಗೆ ತನ್ನದೇ ಸೊಬಗಿನಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಇಲ್ಲಿ ತಂಗಲು ವಸತಿ ವ್ಯವಸ್ಥೆಯಿದ್ದು, ಮುಂಚೆಯೇ ತಿಳಿಸಿದರೆ ಕ್ಷೇತ್ರ ದರ್ಶನ ಹಾಗೂ ಪ್ರವಾಸ ಸಂಸತವಾಗಿರುತ್ತದೆ. ಅಲ್ಲದೇ, ಬಂದಂತಹ ಎಲ್ಲ ಭಕ್ತಾದಿಗಳಿಗೆ ಮಧ್ಯಾಹ್ನ ದೇವಿ ಪ್ರಸಾದ ರೂಪದ ಭೋಜನ ವ್ಯವಸ್ಥೆಯಿದೆ.
ಹೆಚ್ಚಿನ ಮಾಹಿತಿಗೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರ ಮೊ. 95915 60809, 63644 80126ಗೆ ಸಂಪರ್ಕಿಸಬಹುದು.
Get in Touch With Us info@kalpa.news Whatsapp: 9481252093
Discussion about this post