ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಬನಶಂಕರಿ ಮೂರನೆಯ ಹಂತದಲ್ಲಿರುವ ಜನತಾ ಬಜಾರ್’ನಲ್ಲಿ ನಿತ್ಯವೂ ಸಾವಿರಾರು ಜನರು ಓಡಾಡುತ್ತಾರೆ. ಯಾವಾಗಲೂ ದಟ್ಟಣೆಯಿಂದ ಕೂಡಿರುವ ಪ್ರದೇಶ ಇದಾಗಿದೆ. ಆದರೂ ಇಲ್ಲಿರುವ ಶೌಚಾಲಯ ಬಳಕೆಗೆ ಯೋಗ್ಯವಾಗಿಲ್ಲದಿರುವುದು ಶೋಚನೀಯ.
ಎಸ್.ಜಿ. ಆಸ್ಪತ್ರೆಯ ಮುಂಭಾಗದ ಉದ್ಯಾನವನಕ್ಕೆ ಹೊಂದಿಕೊಂಡಿರುವ ಏಕೈಕ ಶೌಚಾಲಯಕ್ಕೆ ಬೀಗ ಬಿದ್ದಿದೆ. ಒಂದು ವರ್ಷ ಆಗಿದ್ದರೂ ಈ ಕಡೆಗೆ ಯಾರೂ ಗಮನ ವಹಿಸಿಲ್ಲ. ಪ್ರತಿ ದಿನ ಸಾವಿರಾರು ಜನ ಮೂತ್ರ ವಿಸರ್ಜನೆ ಮಾಡಿ ಇಡಿಯ ಪ್ರದೇಶದ ಮಲಿನ ಮಾಡುತ್ತಿದ್ದಾರೆ.
ಸಾರ್ವಜನಿಕರ ಬಳಕೆಗಾಗಿಯೇ ಸಾವಿರಾರು ರೂಪಾಯಿ ಖರ್ಚು ಮಾಡಿ ಶೌಚಾಲಯಗಳನ್ನು ಕಟ್ಟಿಸಲಾಗುತ್ತದೆ. ಆದರೆ ಬಳಕೆಗೆ ಅನುಕೂಲ ಮಾಡಿಕೊಡುವ ಬದಲು ಬೀಗ ಹಾಕಿದರೆ ಜನರು ಎಲ್ಲಿಗೆ ಹೋಗಬೇಕು?
ಪದ್ಮನಾಭನಗರ ವಾಡ್’ನ ಬಿಬಿಎಂಪಿ ಕಚೇರಿ ಕೂಡ ಹತ್ತಿರದಲ್ಲೇ ಇದೆ. ಬಸ್ ನಿಲ್ದಾಣ ಕೂಡ ಹತ್ತಿರದಲ್ಲೇ ಇದೆ. ಬನಶಂಕರಿ, ಜಯದೇವ, ಸಿಲ್ಕ್ ಬೋರ್ಡ್, ಮಾರತ್’ಹಳ್ಳಿ, ಇಂದಿರಾನಗರ, ಕೋರಮಂಗಲ ಕಡೆ ಹೋಗುವ ಹತ್ತಾರು ಬಸ್’ಗಳನ್ನು ಏರಲು ಜನರು ಇಲ್ಲಿಗೆ ಬರುತ್ತಾರೆ. ಅವರೆಲ್ಲಾ ಶೌಚಾಲಯದ ಹಿಂದಿರುವ ಉದ್ಯಾನವನದ ಪಕ್ಕದ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಸುತ್ತಮುತ್ತಲ ಜನರು ಓಡಾಡದ ವಾತಾವರಣ ನಿರ್ಮಾಣವಾಗಿದೆ. ಬಸ್ ನಿಲ್ದಾಣವೆಲ್ಲಾ ಮೂತ್ರದ ವಾಸನೆಯಿಂದ ತುಂಬಿಕೊಂಡಿದ್ದು ಜನರು ಬಸ್’ಗಾಗಿ ಕಾಯಲು ಕಷ್ಟ ಪಡುತ್ತಿದ್ದಾರೆ.
ಬಸ್ ನಿಲ್ದಾಣದ ಹತ್ತಿರ ಇರುವ ಅಪಾರ್ಟ್ಮೆಂಟ್ ಕಾಂಪೌಂಡ್ ಬದಿಯನ್ನೇ ಜನರು ಶೌಚಾಲಯ ಮಾಡಿಕೊಂಡಿದ್ದಾರೆ. ಉದ್ಯಾನವನ್ನೂ ಕೂಡ ಅಷ್ಟು ಸ್ವಚ್ಛವಾಗಿ ಇಟ್ಟಿಲ್ಲ. ಸುತ್ತಮುತ್ತ ಕಸದ ರಾಶಿ ಹೆಚ್ಚಾಗಿದೆ. ಮದ್ಯದ ಬಾಟಲಿಗಳು ಎಲ್ಲಿ ಬೇಕಲ್ಲಿ ಬಿದ್ದಿರುತ್ತವೆ.
ಬನಶಂಕರಿ ಮೂರನೆಯ ಹಂತದ ಜನಾತ ಬಜಾರ್’ನಲ್ಲಿರುವ ಶೌಚಾಲಯ ಕಳೆದ ಒಂದು ವರುಷಗಳಿಂದ ಬಾಗಿಲು ತೆಗೆದೆ ಇಲ್ಲ. ಅದರಿಂದ ಅಲ್ಲಿ ಇರುವ ನಾಗರಿಕರು ಬೇಸತ್ತು ಹೋಗಿದ್ದಾರೆ. ಅದಕ್ಕೆ ಪ್ರಮುಖ ಕಾರಣ ಶೌಚಾಲಯದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕೊಳಕು, ಹೆಂಡದ ಬಾಟಲು, ಅದಕ್ಕೆ ಸರಿಯಾಗಿ ಬೆಸ್ಕಾಂ ಇಲಾಖೆಯ ದೊಡ್ಡ ವಿದ್ಯುತ್ ಕಂಬ ಒಂದು ಶೌಚಾಲಯದ ಹಿಂಬದಿ ಇರುವ ಉದ್ಯಾನವನದ ಬಾಗಿಲಲ್ಲೇ ಸತ್ತು ಬಿದ್ದಿದೆ ಎನ್ನುತ್ತಾರೆ ಅಲ್ಲಿಯೇ ಇದ್ದ ಆಟೋ ಚಾಲಕರು, ಇಲ್ಲಿನ ಸ್ಥಳೀಯರು.
ಆಟೋ ಚಾಲಕರು ಹಾಗೂ ನಾಗರಿಕರು ಇಲ್ಲಿ ಇರುವ ಉದ್ಯಾನವನ್ನು ಮಹಾನಗರ ಪಾಲಿಕೆಯ ವತಿಯಿಂದ ಸ್ವಚ್ಛತೆ ಮಾಡಿ ಅದರ ಮುಂಭಾಗದಲ್ಲಿ ಇದ್ದೂ ಇಲ್ಲದಾಗಿರುವ ಶೌಚಾಲಯದ ಕಟ್ಟಡವನ್ನು ಗ್ರಂಥಾಲಯ ಮಾಡಿ ಇಲ್ಲಿನ ಹಿರಿಯ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ಓದುವ ಕೇಂದ್ರ ಮಾಡಿ ಉದ್ಯಾನವನದಲ್ಲಿ ಬೀಳುವ ಹೆಂಡದ ಬಾಟಲಿಗಳ ಹಾವಳಿಯಿಂದ ಮುಕ್ತಗೊಳಿಸಿ ಉದ್ಯಾನವನಕ್ಕೆ ಔಷಧಿ ಸಿಂಪಡಿಸಿ ಇಲ್ಲಿನ ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿ ಎಂದು ಮನವಿ ಮಾಡಿದ್ದಾರೆ.
ಇಲ್ಲಿರುವ ಸಮಸ್ಯೆಗಳಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಲಿ ಎಂದು ಆಶಿಸೋಣ ಅಲ್ಲವೇ?
ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
Get In Touch With Us info@kalpa.news Whatsapp: 9481252093
Discussion about this post