ಬೆಳ್ತಂಗಡಿಯ ಬಾಲ ಪ್ರತಿಭೆ ರಿತ್ವಿಕ್ ಕೆ ಪಿ ಎನ್ನುವ ಪುಟ್ಟ ಬಾಲಕನ ಕಲಾ ಸಾಧನೆಯ ಕುರಿತು ನನ್ನ ಈ ಲೇಖನದಲ್ಲಿ ತಿಳಿಸಲು ಬಯಸುತ್ತೇನೆ.
ಪ್ರಸ್ತುತ 6ನೆಯ ತರಗತಿಯಲ್ಲಿ ಕಲಿಯುತ್ತಿರುವ ರಿತ್ವಿಕ್, ತನ್ನ ಮೂರನೆಯ ವಯಸ್ಸಿನಲ್ಲಿರುವಾಗಲೇ ತಾಯಿಯ ಪೋತ್ಸಾಹದಿಂದ ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರಾರಂಭಿಸುತ್ತಾನೆ. ಕೃಷ್ಣವರ್ಣ ಸಾಧಾರಣ ಮೈಕಟ್ಟು ಹೊಂದಿರುವ ರಿತ್ವಿಕ್ ಕೃಷ್ಣನ ಪಾತ್ರ ಮಾಡಿದರೆ ಪ್ರತಿಯೊಬ್ಬರು ನೋಡಿ ಆನಂದಿಸುತ್ತಾರೆ. ಹಲವಾರು ಕಡೆ ನಡೆದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕೀರ್ತಿ ರಿತ್ವಿಕ್ ಅವರದ್ದು.
ಚಿಕ್ಕಂದಿನಿಂದಲೂ ನೃತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ ಮಗನನ್ನು ಅವರ ತಾಯಿ ಪುತ್ತೂರಿನ ನಿತಿನ್ ಪೂಜಾರಿ ಅವರ ಬಳಿಗೆ ನೃತ್ಯ ತರಬೇತಿಗೆ ಕಳುಹಿಸುತ್ತಾರೆ. ರಿತ್ವಿಕ್ ಪ್ರಸ್ತುತ ಹಿಪಾಪ್ ಕಾಂಟೆಂಪರರಿ, ಬಾಲಿವುಡ್ ಕ್ರಂಪ್ ಅರ್ಬನ್ ಕಥಕಳಿ ಹೀಗೆ ಅನೇಕ ತರನಾದ ನೃತ್ಯಭ್ಯಾಸವನ್ನು ಮಾಡುತ್ತಿದ್ದಾರೆ.
ಕನ್ನಡದ ಖ್ಯಾತ ರಿಯಾಲಿಟಿ ಶೋಗಳಲ್ಲಿ ಒಂದಾದ ಜೂನಿಯರ್ ಮಸ್ತಿ-1 ಹಾಗೂ ಜೂನಿಯರ್ ಮಸ್ತಿ-2 ರಲ್ಲಿ ಭಾಗವಹಿಸಿ ಜನ ಮನ್ನಣೆ ಗಳಿಸಿದ್ದಾನೆ. ನಮ್ಮ ಟಿವಿಯಲ್ಲಿ ನಡೆದ ಡಾನ್ಸ್ ಇದರಲ್ಲಿ ಫೈನಲ್ ತನಕ ಹೋಗಿರುವುದು ರಿತ್ವಿಕ್ ಇವರ ಹೆಮ್ಮೆ. ಇತ್ತೀಚಿಗೆ ನಡೆದ ವಿ ಜೆ ಸ್ಕೂಲ್ ಇಂಟರ್’ನ್ಯಾಷನಲ್ ಡಾನ್ಸ್ ಕಾಂಪಿಟೇಷನ್’ನಲ್ಲಿ ಭಾಗವಹಿಸಿ ತೀರ್ಪುಗಾರರಿಂದ ಶಹಬ್ಬಾಸ್ ಎನಿಸಿಕೊಂಡಿದ್ದಾನೆ. ಕನ್ನಡ ಚಲನಚಿತ್ರದಲ್ಲಿ ಕೂಡ ರಿತ್ವಿಕ್ ಬಾಲ ನಟನಾಗಿ ಅಭಿನಯಿಸಿದ್ದಾನೆ.
ಇದರ ಜೊತೆಗೆ ಹರಿ ವೆಂಕಟೇಶ್ ಶರ್ಮ ಅವರ ಬಳಿ ಕರಾಟೆ ತರಬೇತಿಗೂ ಕೂಡ ರಿತ್ವಿಕ್ ಹೋಗುತ್ತಿದ್ದಾನೆ. ಕರಾಟೆಯಲ್ಲಿ ಕೂಡ ಈ ಪುಟ್ಟ ಪೋರನ ಸಾಧನೆ ನೋಡಿದರೆ ನಿಮಗೆ ಆಶ್ಚರ್ಯವಾಗಬಹುದು. ರಾಜ್ಯ ಮಟ್ಟದ ಬಾಲಕರ ಕರಾಟೆ ಸ್ಪರ್ಧೆಯಲ್ಲಿ ರಿತ್ವಿಕ್ 2 ಭಾರಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾನೆ.
ಧರ್ಮಸ್ಥಳದ ಅರುಣ್ ಕುಮಾರ್ ಅವರ ಹತ್ತಿರ ಯಕ್ಷಗಾನದ ನಾಟ್ಯಾಭ್ಯಾಸವನ್ನು ಕಲಿತಿರುವ ರಿತ್ವಿಕ್ ಒಬ್ಬ ಅಪ್ಪಟ ಯಕ್ಷಗಾನ ನೃತ್ಯಗಾರ. ಹಲವಾರು ಸಭಾ ಕಾರ್ಯಕ್ರಮದಲ್ಲಿ ಇವರ ಯಕ್ಷಗಾನ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಪುಟ್ಟ ಮಕ್ಕಳ ಪ್ರತಿಭೆಗೆ ಹಣ ನೀಡಿ ಅವರಿಗೆ ಬೆಂಬಲ ನೀಡುವುದಕ್ಕಿಂತ ಪ್ರೀತಿಯಿಂದ ತುಂಬಿದ ಸಭೆಯಲ್ಲಿ ಒಂದು ಚಿಕ್ಕ ವಸ್ತುವನ್ನು ನೀಡಿದರೂ ಅವರಿಗೆ ಅದು ಕೋಟಿ ರೂಪಾಯಿಗೆ ಸಮ. ಅದು ಅವರ ಜೀವನದ ಅವಿಸ್ಮರಣಿಯ ಗಳಿಗೆಯಾಗಿರುತ್ತದೆ. ಬೆಳ್ತಂಗಡಿಯ ಪುಟ್ಟ ಬಾಲಕ ರಿತ್ವಿಕ್ ಮಾಡಿರುವ ಸಾಧನೆಗೆ ಆಮಂತ್ರಣ ಹಬ್ಬ, ತುಳು ಕೂಟ, ಐಸಿರಿ, ನೃತ್ಯ ವೈಭವ, ಹೀಗೆ ಹಲವಾರು ಕಡೆ ಸನ್ಮಾನಿಸಿ ಗೌರವಿಸಲಾಗಿದೆ.
ಪ್ರತಿಯೊಬ್ಬ ತಂದೆ ತಾಯಂದಿರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಕಲೆಯ ಮೇಲೆ ಆಸಕ್ತಿ ಬರುವ ಹಾಗೆ ಬೆಳೆಸಬೇಕು. ಮಕ್ಕಳಿಗೆ ವಿದ್ಯೆ ಎಷ್ಟು ಮುಖ್ಯವೋ ಅವರ ವ್ಯಕ್ತಿತ್ವ ವಿಕಸನಕ್ಕೆ ಕಲೆಯು ಅಷ್ಟೇ ಮುಖ್ಯ. ಮಕ್ಕಳ ಜೀವನ ಒಂದು ಶಿಲೆಯ ರೂಪದಲ್ಲಿ ಇರುತ್ತದೆ. ಅವರನ್ನು ಶಿಲ್ಪವಾಗಿ ಬದಲಾಯಿಸುವ ಜವಾಬ್ದಾರಿ ತಂದೆ ತಾಯಂದಿರ ಮೇಲೆ ಇರುತ್ತದೆ. ರಿತ್ವಿಕ್ ನಿಮ್ಮ ಸಾಧನೆಗೆ ಹೆಗಲು ಕೊಡುತ್ತಿರುವ ನಿಮ್ಮ ತಂದೆ ತಾಯಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು. ಅಪ್ಪನ ಆಶ್ರಯ, ಅಮ್ಮನ ಅಕ್ಕರೆ, ನಿಮ್ಮ ಪರಿಶ್ರಮ ಎಲ್ಲಾ ಒಂದಾಗಿ ನಿಮ್ಮ ಬಾಳು ಬಂಗಾರವಾಗಲಿ. ಇನ್ನು ಹೆಚ್ಚಿನ ಸಾಧನೆ ಮಾಡುವ ಶಕ್ತಿ ಆ ಭಗವಂತ ನಿಮಗೆ ನೀಡಲಿ ಎಂದು ಹಾರೈಸುತ್ತೇನೆ.
ಲೇಖನ: ಗೌರೀಶ್ ಆವರ್ಸೆ
ಮಾಹಿತಿ, ಚಿತ್ರಕೃಪೆ, ವೀಡಿಯೋ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post