ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊನ್ನಾವರ: ತಾಲೂಕಿನ ಗುಣವಂತೆಯಲ್ಲಿ ನಡೆಯುತ್ತಿರುವ ಕೆರೆಮನೆ ಶಂಭುಹೆಗಡೆ ರಾಷ್ಟ್ರೀಯ ನಾಟ್ಯೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಲಾ ಕ್ಷೇತ್ರದ ವೈಭವ ಅನಾವರಣಗೊಂಡಿದೆ.
ಫೆ.20ರಿಂದ ಆರಂಭವಾಗಿರುವ ನಾಟ್ಯೋತ್ಸವ ಫೆ.24ರಂದು ಸಂಪನ್ನಗೊಳ್ಳಲಿದ್ದು, ಮೊದಲೆರಡು ದಿನ ಪ್ರತಿಕ್ರಿಯೆ ಉತ್ತಮವಾಗಿದ್ದು, ಈ ವೇಳೆ ಹಿರಿಯ ಚೇತನಗಳನ್ನು ಗೌರವಿಸಲಾಗಿದೆ.
ಮೊದಲ ದಿನ ಅರ್ಥದಾರಿ ಡಾ. ಪ್ರಭಾಕರ ಜೋಷಿ ಅವರ ಅಗಲಿದ ಚೇತನಗಳನ್ನು ಸ್ಮರಿಸಿದರು.
ಮಾವಿನಕೆರೆ ಕೃಷ್ಣಯಾಜಿ ಅವರಿಗೆ ಕೆರೆಮನೆ ಶಂಭು ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಮೈಸೂರು ಜಿ.ಎಸ್.ಭಟ್ ಅವರ ಇಡಗುಂಜಿ ಮೇಳ 85’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಆನಂತರ ಸೈಯದ್ ಸಲ್ಲಾವುದ್ದೀನ್ ಪಾಷಾ ಅವರಿಂದ ನೃತ್ಯ ಹಾಗೂ ಬೆಂಗಳೂರಿನ ಕಲಾದರ್ಶಿನಿಯಿಂದ ಯಕ್ಷಗಾನ ಬ್ಯಾಲೆ ಪ್ರದರ್ಶನಗೊಂಡಿತು.
ನಿನ್ನೆ ಯಕ್ಷಗಾನ ವಿದ್ವಾಂಸ ಡಾ. ರಮಾನಂದ ಬನಾರಿ, ಅರ್ಥಧಾರಿ ಎಂ.ಎನ್. ಹೆಗಡೆ, ಯಕ್ಷಗಾನ ಕಲಾವಿದ ಡಾ. ಶ್ರೀಧರ ಭಂಡಾರಿ, ಕಲಾ ಸಂಘಟಕ ಮನ್ಮಥಕುಮಾರ ಸತ್ಪತಿ ಅವರನ್ನು ಸನ್ಮಾನಿಸಲಾಯಿತು. ಆನಂತರ ನಡೆದ ಓಡಿಸ್ಸಿ ನೃತ್ಯ, ಗೊಂಬೆಯಾಟ ಕಲಾರಸಿಕರ ಮನಸೂರೆಗೊಂಡಿತು.
ಇಂದು 22ರಂದು ಯಕ್ಷಗಾನ ಕಲಾವಿದರಾದ ಕೃಷ್ಣ ಗಾಣಿಗ ಜಲವಳ್ಳಕರ್, ಎಂ.ಕೆ. ರಮೇಶ ಆಚಾರ್ಯ, ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ಛಾಯಾಗ್ರಾಹಕ ಕೆ.ಎಸ್. ರಾಜಾರಾಮ ಅವರನ್ನು ಸನ್ಮಾನಿಸಲಾಗುತ್ತಿದೆ.
ಪ್ರಕಾಶ ಹೆಗಡೆ ಕಲ್ಲಾರೆ ಮನೆ ಕೊಳಲು, ಶಂಕರ ಕಬಾಡಿ ವಯೋಲಿನ್, ಅಸ್ಸಾಂ ತಂಡದ ಜಾನಪದ ನೃತ್ಯ, ಕೇರಳದ ತೊಗಲು ಗೊಂಬೆಯಾಟ ಪ್ರದರ್ಶನಗೊಳ್ಳಲಿದೆ.
ಫೆ.23ರಂದು ಯಕ್ಷಗಾನ ಕಲಾವಿದ ಎ.ಸ್. ನಂಜಪ್ಪ, ಕಲಾ ಸಂಘಟಕ ಪ್ರಭಾಕರ ಹೆಗಡೆ ಚಿಟ್ಟಾಣಿ, ಮದ್ದಲೆ ವಾದಕ ನಾಗೇಶ ಭಂಡಾರಿ ಅವರನ್ನು ಸನ್ಮಾನಿಸಲಾಗುವುದು. ಸಂಜೆ 6 ಗಂಟೆಗೆ ದೀಪ್ತಿ ನವರತ್ನ ಅವರಿಂದ ಕರ್ನಾಟಕ ಸಂಗೀತ, ವಿದ್ಯಾ ಅಂಗಾರ ಅವರಿಂದ ಕುಚುಪುಡಿ ಮತ್ತು ಶ್ರೀಹರಿ ಮತ್ತು ಚೇತನ ಅವರಿಂದ ಕಥಕ್ ನೃತ್ಯ ನಡೆಯಲಿದೆ.
ಫೆ.24ರಂದು ನಾಟ್ಯೋತ್ಸವ ಸಂಪನ್ನಗೊಳ್ಳಲಿದ್ದು, ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಚಿವ ಸಿ.ಟಿ. ರವಿ ಪಾಲ್ಗೊಳ್ಳಲಿದ್ದಾರೆ.
ಈ ಬಾರಿಯ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿರುವ ಪದ್ಮಶ್ರೀ ಡಾ. ಪದ್ಮ ಸುಬ್ರಹ್ಮಣ್ಯಂ ಅವರನ್ನು ಗೌರವಿಸಿ, ಪ್ರಶಸ್ತ ಪ್ರದಾನ ಮಾಡಲಾಗುತ್ತದೆ.
ರಾಜ್ಯ ಪ್ರವಾಸೋದ್ಯಮ ಕಾರ್ಯಪಡೆ ಸದಸ್ಯ ಲಕ್ಷ್ಮೀನಾರಾಯಣ ಕಾಶಿ ಅವರು ಕೆರೆಮನೆ ಶಂಭುಹೆಗಡೆ ಸ್ಮಾರಕ ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷರಾಗಿದ್ದಾರೆ.
(ವರದಿ: ಡಾ. ಎನ್. ಸುಧೀಂದ್ರ)
Get in Touch With Us info@kalpa.news Whatsapp: 9481252093
Discussion about this post