ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭಾರತೀಯ ಸಂಸ್ಕೃತಿಯ ಭಾಗವೇ ಆಗಿರುವ ಹಿಂದೂಸ್ತಾನಿ ಸಂಗೀತ ದೇಶದ ಒಂದು ಹೆಮ್ಮೆಯೂ ಹೌದು. ಇಂತಹ ಭಾವಾನುಭೂತಿ ಕ್ಷೇತ್ರದ ಓರ್ವ ಅನರ್ಘ್ಯ ರತ್ನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಿ ಹಾಗೂ ಆಕಾಶವಾಣಿ ಕಲಾವಿದೆ ವಿದೂಷಿ ಶ್ರೀಮತಿ ಪ್ರತಿಮಾ ಆತ್ರೇಯ ಅವರೊಂದಿಗೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಲೋಕಾಭಿರಾಮವಾಗಿ ಮಾತುಕತೆ ನಡೆಸಿದ್ದು, ಈ ಅಭಿಜಾತ ಕಲಾವಿದೆಯ ಪರಿಚಯಿಸುವ ಲೇಖನ ಇಲ್ಲಿದೆ.
ಬೆಂಗಳೂರು ನಿವಾಸಿಗಳಾದ ರಮಾನಾಥ್ ಹಾಗೂ ಅನ್ನಪೂರ್ಣ ದಂಪತಿಗಳ ಪುತ್ರಿ 1983ರಲ್ಲಿ ಜನಿಸಿದ ಪ್ರತಿಮಾ ಆತ್ರೇಯ ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿವುಳ್ಳವರು.
ಚಿಕ್ಕ ವಯಸ್ಸಿನಲ್ಲಿ ಇವರ ತಾಯಿ ಹೇಳುತ್ತಿದ್ದ ಹಾಡುಗಳನ್ನು ಕೇಳುತ್ತಲೇ ಬೆಳೆದ ಇವರ ಮೊದಲ ಗುರು ಸಹ ತಾಯಿಯವರೇ ಆಗಿದ್ದು, ಏಳನೆಯ ವಯಸ್ಸಿನಿಂದಲೇ ಇವರ ಸಂಗೀತ ಅಭ್ಯಾಸ ಆರಂಭವಾಗುತ್ತದೆ.
ಆನಂತರ ಶಾಂತ ಜಯತೀರ್ಥ ಎಂಬ ಗುರುಗಳಲ್ಲಿ ಸಂಗೀತ ಕಲಿಕೆ ಆರಂಭಿಸಿದ ಇವರಿಗೆ ಇವರ ತಂದೆಯವರಲ್ಲಿದ್ದ ಉತ್ತರಾದಿಯೇ ಮನಸ್ಸಿನಲ್ಲಿ ಬೇರೂರಿತ್ತು. ಹೀಗಾಗಿ, ಹಿಂದೂಸ್ತಾನಿ ಸಂಗೀತವನ್ನೇ ಇವರು ಆಯ್ಕೆ ಮಾಡಿಕೊಳ್ಳುತ್ತಾರೆ.
ತದನಂತರ, ಸುಮಾರು 17 ವರ್ಷಗಳ ಕಾಲ ಸಂಗೀತ ತಜ್ಞ ಪಂಡಿತ್ ಡಿ.ಬಿ. ಹರೀಂದ್ರ ಅವರ ಬಳಿ ಅಭ್ಯಾಸ ಮಾಡುವ ಇವರು 2005ರಿಂದ ಈವರೆಗೂ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದರೊಂದಿಗೆ ರಂಗಭೂಮಿ ಹವ್ಯಾಸವೂ ಸಹ ಇವರಲ್ಲಿದೆ.
ವೃತ್ತಿಪರತೆ ಜೀವನದಲ್ಲಿ ಸಂಗೀತ ಕ್ಷೇತ್ರ ನಿಮಗೆ ನೀಡಿದ್ದು ಏನು ಎಂದರೆ ಮನಸ್ಸಿನಗೆ ನೆಮ್ಮದಿ ಹಾಗೂ ಜೇಬಿಗೆ ಹಣ ಕೂಡಾ ಎನ್ನುತ್ತಾರೆ ಈ ಕಲಾವಿದೆ.
ಇನ್ನು, ಅರ್ಜಿ ಸಲ್ಲಿಸಿ ಪಡೆಯುವ ಪ್ರಶಸ್ತಿಗಳ ಕುರಿತಾಗಿ ನನಗೆ ಆಸಕ್ತಿಯಿಲ್ಲ ಎನ್ನುವ ಇವರ ಕಲೆಯನ್ನೇ ಅರಸಿ ಇವರ ಶಾಲಾ ಕಾಲೇಜು ದಿನಗಳಲ್ಲೇ ಸುಮಾರು 150ರಿಂದ 200ರಷ್ಟು ಪುರಸ್ಕಾರಗಳ ಬಂದಿವೆ.
ಪ್ರಶಸ್ತಿಗಳ ಹಿಂದೆ ನಾನು ಎಂದು ಬಿದ್ದಿಲ್ಲ. ಅದು ತಾನಾಗಿಯೇ ಒಲಿದು ಬರಬೇಕು ನನಗೆ ಭಗವಂತನ ನಾಮಸ್ಮರಣೆಯೇ ಪ್ರಶಸ್ತಿ!! ಭಗವಂತನ ಸಾನ್ನಿಧ್ಯದಲ್ಲಿ ತ್ಯಾಗರಾಜರ, ಪುರಂದರ ದಾಸರ ಹಾಗೂ ಕನಕ ದಾಸರ ಕೀರ್ತನೆ ಗಳನ್ನು ಹಾಡುವುದೇ ನನಗೆ ದೊಡ್ಡ ಪ್ರಶಸ್ತಿ ಎನ್ನುತ್ತಾರೆ.
ಇನ್ನು, ಶ್ರೀ ತ್ಯಾಗರಾಜರ ಕೊಡುಗೆಯನ್ನು ನೆನಯುವ ಇವರು, ಕರ್ನಾಟಕ ಸಂಗೀತ ಪದ್ಧತಿಯ ಮುಖ್ಯ ರಚನಕಾರರಲ್ಲಿ ಒಬ್ಬರು. ಮುತ್ತುಸ್ವಾಮಿ ದೀಕ್ಷಿತ ಮತ್ತು ಶ್ಯಾಮಾ ಶಾಸ್ತ್ರಿ ಇವರ ಜೊತೆಯಲ್ಲಿ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು. ಅವರು ಶ್ರೀರಾಮನ ಪರಮ ಭಕ್ತರಾಗಿದ್ದರು. ದಕ್ಷಿಣ ಭಾರತದ ಎಲ್ಲ ಮುಖ್ಯ ದೇವಸ್ಥಾನಗಳಿಗೆ ಭೇಟಿಯಿತ್ತ ತ್ಯಾಗರಾಜರು ಅಲ್ಲಿನ ದೇವ-ದೇವತೆಗಳ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ಸುಮಾರು ಏಳುನೂರು ಕೃತಿಗಳನ್ನು ರಚಿಸಿರುವ ತ್ಯಾಗರಾಜರು ಕರ್ನಾಟಕ ಸಂಗೀತದ ಮೂಲಪುರುಷರಲ್ಲಿ ಒಬ್ಬರೆಂದು ಪರಿಗಣಿತರಾಗಿದ್ದಾರೆ ಎಂದು ಗೌರವ ಅರ್ಪಿಸುತ್ತಾರೆ.
ಇನ್ನು, ಕರ್ನಾಟಕ ಸಂಗೀತದ ಪಿತಾಮಹ ಶ್ರೀ ಪುರಂದರ ದಾಸರು ಭಕ್ತಿಯ ಮೂಲಕ ಮನುಕುಲಕ್ಕೆ ಸುಲಭವಾದ ಮಾರ್ಗದಲ್ಲಿ ದೇವರನ್ನು ತೋರಿಸಿದವರು ಎನ್ನುತ್ತಾರೆ.
ಭಕ್ತಿಗೆ ಮೆಚ್ಚಿ ಭಗವಂತ ಕೃಷ್ಣ ಒಲಿದ ರೀತಿಯೆ ಅನನ್ಯ. ಕನಕದಾಸರು ಅಂದು ಉಡುಪಿಯಲ್ಲಿ ಕೃಷ್ಣನಿಗೆ ಅರ್ಪಿಸಿದ ನೈವೇದ್ಯ ರೊಟ್ಟಿ, ಗಂಜಿಯನ್ನು ಇಂದು ಸಹ ಕೃಷ್ಣನಿಗೆ ನೈವೇದ್ಯದ ರೂಪದಲ್ಲಿ ಸಮರ್ಪಿತವಾಗುತ್ತಿರುವುದು ಕನಕದಾಸರು ಉಡುಪಿಯಲ್ಲಿ ಹೊಂದಿರುವ ಪ್ರಭಾವ ತೋರಿಸುತ್ತಿದೆ ಎಂದು ಕನಕದಾಸರಿಗೆ ನಮಿಸುತ್ತಾರೆ.
ಛಾಯಾಚಿತ್ರ: ಮಹೇಶ್, ಬೆಂಗಳೂರು
Get in Touch With Us info@kalpa.news Whatsapp: 9481252093
Discussion about this post