ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ನವೆಂಬರ್ 24 ರಂದು ವಿಜಯದಾಸರ ಆರಾಧನೆ ನಿಮಿತ್ತ ನಗರದ ಬಸವನಗುಡಿಯಲ್ಲಿ ಶ್ರೀದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಮಂಗಳವಾರ ಸಂಜೆ 5 ಗಂಟೆಗೆ ವಿಜಯದಾಸರ 265 ನೆಯ ಆರಾಧನಾ ಮಹೋತ್ಸವದಲ್ಲಿ ಗೌರವ ಡಾಕ್ಟರೇಟ್ ಪುರಸ್ಕೃತ ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದರು ದಿವ್ಯ ಸಾನ್ನಿಧ್ಯ ವಹಿಸಿ ಮುಸ್ಸಂಜೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಭಿನಂದನಾ ಸಮಾರಂಭ ಪ್ರಣವ ಮೀಡಿಯಾ ಹೌಸ್ ಮತ್ತು ದಾಸ ಸೌರಭ, ಕಲಬುರ್ಗಿ ಇವರ ಸಹಯೋಗದಲ್ಲಿ ಜರುಗಲಿದೆ.
ನಗರದ ಬಸವನಗುಡಿಯಲ್ಲಿ ಶ್ರೀದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ಸ್ಥಾಪಿಸಿರುವ ದಾಸಸಾಹಿತ್ಯ ಪಿತಾಮಹ ಶ್ರೀ ಪುರಂದರದಾಸರ ಬೃಹತ್ ಏಕಶಿಲಾ ಪ್ರತಿಮೆಯ ಸನ್ನಿಧಾನದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀಮದ್ ಉತ್ತರಾದಿಮಠ ಮತ್ತು ಬೆಂಗಳೂರು ಶ್ರೀನಿವಾಸ ಉತ್ಸವ ಬಳಗ (ದಾಸಸಾಹಿತ್ಯ ಪ್ರಚಾರ ಮಾಧ್ಯಮ) ಸಂಯುಕ್ತಾಶ್ರಯದಲ್ಲಿ ಶ್ರೀಮದುತ್ತರಾದಿ ಮಠದ ಪರಮಪೂಜ್ಯ ಸತ್ಯಾತ್ಮತೀರ್ಥ ಶ್ರೀಪಾದರ ಪರಮಾನುಗ್ರಹದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಿಜಯದಾಸರ ಮಹಿಮೆ
ಮ.ಶಾ.ಸಂ. ಭೀಮಸೇನಾಚಾರ್ಯ ಅತನೂರು ಅವರು ವಿಜಯದಾಸರ ಮಹಿಮೆ ಕುರಿತು ಸಂಜೆ 5 ರಿಂದ 5.45ರವರೆಗೆ ಉಪನ್ಯಾಸ ನೀಡಲಿದ್ದಾರೆ.
ದಾಸರ ಪದಗಳ ಗಾಯನ
ವಿದುಷಿ ಶ್ರೀಮತಿ ಶುಭಾ ಸಂತೋಷ್ ಮತ್ತು ತಂಡದಿಂದ ಸಂಜೆ 5.45 ರಿಂದ 6.30 ರವರೆಗೆ ದಾಸರ ಪದಗಳ ಗಾಯನವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಗಾಯನ ಸಮಾಜ ಅಧ್ಯಕ್ಷ ಡಾ. ಎಂ.ಆರ್.ವಿ ಪ್ರಸಾದ್ ಹಾಗೂ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಮತ್ತು ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಡಾ. ಸತ್ಯಧ್ಯಾನಾಚಾರ್ಯ ಕಟ್ಟಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ಸಾಧಕರಿಗೆ ಅಭಿನಂದನೆ
ಗೌರವ ಡಾಕ್ಟರೇಟ್ಗೆ ಭಾಜನರಾದ ಸಾಧಕರಾದ ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಟಿ. ವಾದಿರಾಜ್, ಆಧ್ಯಾತ್ಮ ಚಿಂತಕ ಶ್ರೀ ಕಡೂರು ಶ್ರೀಧರಾಚಾರ್ಯ ಮತ್ತು ಖ್ಯಾತ ಜ್ಯೋತಿಷಿ ಕೆ. ಮುರಳೀಧರ ಭಟ್ ರವರನ್ನು ನ.24ರಂದು ಅಭಿನಂದಿಸಲಾಗುವುದು. ಶ್ರೀ ಪುರಂದರ ದಾಸರ ಅನುಗ್ರಹದಿಂದ ವಿಜಯದಾಸರಾದ ದಾಸಪ್ಪ ಅವರ 265 ನೆಯ ಆರಾಧನೆ.
ವಿಜಯದಾಸರ ಕುರಿತು
(ಇವರ ಕಾಲ ಕ್ರಿಶ ಸುಮಾರು 1682 – 1755) 1682 ರಿಂದ 1755 ವಿಜಯದಾಸರು ಹರಿದಾಸ ಕೂಟದಲ್ಲಿ 18ನೆಯ ಶತಮಾನದ ಪ್ರಮುಖ ವಾಗ್ಗೇಯಕಾರರಲ್ಲಿ ಒಬ್ಬರು.
ಇವರು ಕರ್ನಾಟಕದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚೇಕಲಪರಿ ಎಂಬ ಗ್ರಾಮದವರು. ಶ್ರೀನಿವಾಸಪ್ಪ ಮತ್ತು ಕೂಸಮ್ಮ ಎಂಬ ಬಡ ಬ್ರಾಹ್ಮಣ ದಂಪತಿಗಳ ಹಿರಿಯ ಮಗನಾಗಿ 1683ರಲ್ಲಿ ಜನಿಸಿದರು.
ಒಮ್ಮೆ ಇವರಿಗೆ ಸ್ವಪ್ನದಲ್ಲಿ ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು ದರ್ಶನ ನೀಡಿ, ಶ್ರೀವೇದವ್ಯಾಸರ ದರ್ಶನ ಮಾಡಿಸಿ ವಿಜಯ ಎಂಬ ಬೀಜಾಕ್ಷರವನ್ನು ಬರೆದು ಅನುಗ್ರಹಿಸಿದಂತಾಯಿತು.
ಸ್ವಪ್ನಾವಸ್ಥೆಯಿಂದ ಜಾಗೃತಾವಸ್ಥೆಗೆ ಬಂದ ಆಕ್ಷಣವೇ ಇವರಲ್ಲಿ ಜ್ಞಾನ ಪ್ರಕಾಶವಾಯಿತು. ಗುರುಗಳ ಅನುಗ್ರಹದಿಂದ ವಿಜಯದಾಸರಾದ ಅವರು ಆಡಿದ ಪ್ರತಿ ಮಾತು ಹಾಡಾಗಿ ಹರಿಯಿತು.
ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಚಿಪ್ಪಗಿರಿಯಲ್ಲಿ ಇರುವ ವಿಜಯದಾಸರ ಕಟ್ಟೆ ಅತ್ಯಂತ ಜಾಗೃತ ಸ್ಥಳವಾಗಿದೆ.
ಇವರು ಭೃಗು ಅಂಶ ಸಂಭೂತ ರೆಂದೇ ಪ್ರತೀತಿ. ಕೀರ್ತನೆ, ಸುಳಾದಿ, ಉಗಾಭೋಗ ರಚಿಸಿದ ಇವರ ಅಂಕಿತ ನಾಮ ವಿಜಯವಿಠ್ಠಲ.
ಮಾಸ್ಕ್ ಧಾರಣೆ ಕಡ್ಡಾಯ
ಕೊರೋನಾ ವೈರಸ್ ಇರುವ ಕಾರಣ ಭಕ್ತರ ಆರೋಗ್ಯ ಮತ್ತು ದೇವಾಲಯದ ಹಿತ ದೃಷ್ಟಿಯಿಂದ ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಯಾವುದೇ ಆತಂಕವಿಲ್ಲದೆ ಶ್ರೀ ಸ್ವಾಮಿಯ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾಗಿ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಪ್ರಣವ ಮೀಡಿಯಾ ಹೌಸ್ ಮತ್ತು ದಾಸ ಸೌರಭ, ಕಲಬುರ್ಗಿ ಮತ್ತು ದೇವಾಲಯದ ಆಡಳಿತ ಮಂಡಳಿ ಹಾಗೂ ಉತ್ತರಾಧಿ ಮಠದ ವ್ಯವಸ್ಥಾಪಕರು ವಿನಂತಿಸಿಕೊಂಡಿದ್ದಾರೆ.
(ವಿಜಯದಾಸರ ಕುರಿತು ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರು ನೀಡಿದ ಮಾಹಿತಿ ಆಧರಿಸಿ ಲೇಖನ ಬರೆಯಲಾಗಿದೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post