ಈಗ ನಮ್ಮ ಪ್ರಜಾಪ್ರಭುತ್ವದ ಬುನಾದಿಯನ್ನು ಮತ್ತೆ ಬಿಗಿಗೊಳಿಸುವ ಹಾಗೂ ನಮ್ಮ ಆಶಯಗಳಿಗೆ ಸ್ಪಂದಿಸುವ ನೂತನ ಸರ್ಕಾರವನ್ನು ಚುನಾಯಿಸುವ ಪ್ರಕ್ರಿಯೆಗೆ ನಾವು ಸಿದ್ಧರಾಗಬೇಕಿದೆ. 17 ನೆಯ ಲೋಕಸಭಾ ಚುನಾವಣೆ ಈಗ ಘೋಷಣೆಯಾಗಿ ನಮಗೆ ಇಲ್ಲಿಯವರೆಗೂ ರಾಜಕೀಯ ಪಕ್ಷಗಳು ಎಷ್ಟರ ಮಟ್ಟಿಗೆ ದೇಶದ ಪ್ರಗತಿಗೆ ಸ್ಪಂದಿಸಿವೆ? ಎಂಬುದೇ ಪ್ರಜ್ಞಾವಂತರಾದ ನಮ್ಮ ಜನಸಮುದಾಯ ಅವಲೋಕಿಸಬೇಕಿದೆ.
ದೀರ್ಘಕಾಲ ಆಳಿದ ಪಕ್ಷ ಸೂಕ್ತ ನಾಯಕತ್ವದ ದೌರ್ಬಲ್ಯವಿದ್ದು ಸಾಮಾಜಿಕ ಧ್ಯೇಯಗಳಿಗೆ ಸ್ಪಂದಿಸುವಲ್ಲಿ ವಿಫಲವಾಯಿತು. ಬಸವಳಿದ ಜನತೆ ನೈತಿಕ ನೆಲೆಗಟ್ಟಿನ ನಾಯಕತ್ವ ಸಿಕ್ಕ ಮತ್ತೊಂದು ಪಕ್ಷಕ್ಕೆ ಬಹುಮತ ನೀಡಿತು.
ಇಲ್ಲಿಯೂ ಸೂಕ್ಷ್ಮವಾಗಿ ಗಮನಿಸಿದಾಗ ಕೇಂದ್ರ ನಾಯಕತ್ವದ ಅಲೆಯಲ್ಲಿಯೇ ತೇಲಿಬಂದ ರಾಜ್ಯ ನಾಯಕತ್ವವು ತನ್ನ ಸ್ವಂತ ಅಪರಾಧಗಳಿಂದ ಕಂದಕ ತೋಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿತು.
ಇದು ಬೇರೆ ರಾಜ್ಯಗಳಲ್ಲಿಯೂ ನಾನಾ ಕಾರಣಗಳಿಂದ ಅಧಿಕಾರ ಕಳೆದುಕೊಳ್ಳುವಲ್ಲಿ ಕೊನೆಗೊಂಡಿತು. ಕೇಂದ್ರ ಆಡಳಿತ ಮತ್ತು ವಿರೋಧಪಕ್ಷಗಳ ವೈಖರಿಯಲ್ಲಿ ನಾವು ಗಮನಿಸಬೇಕಾದ ಸಂಗತಿಗಳು ಹಲವಿವೆ.
1. ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿದ್ದು ಸಮರ್ಥವಾಗಿ ಕಾರ್ಯ ನಿರ್ವಹಿಸುವಲ್ಲಿ ಸಂಪೂರ್ಣ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ವಿಫಲತೆ ಕಂಡಿತು.
2. ಆಡಳಿತ ಭಾಜಪ ಆರಂಭದಲ್ಲಿ ಜನತೆಯಲ್ಲಿ ಹುಟ್ಟಿಸಿದ್ದ ಮಿಂಚಿನ ಆಶಯಗಳನ್ನು ಅಷ್ಟೇ ವ್ಯಾಪಕವಾಗಿ ಜಾರಿ ಮಾಡುವಲ್ಲಿ ವಿಫಲವಾಯಿತು. ಆದರೆ ಭ್ರಷ್ಟಾಚಾರದ ವಿಷಯದಲ್ಲಿ ಪ್ರಧಾನಿ ವಿವಾದದ ಹೊರಗೇ ಉಳಿದರು. ವಿರೋಧ ಪಕ್ಷವಾದ ಕಾಂಗ್ರೆಸ್ ಕೇವಲ ಮಾತಿನ ಬಂಡವಾಳದಲ್ಲೇ ಟೀಕಿಸಿ, ಸಮರ್ಥ ದಾಖಲೆಗಳಿಲ್ಲದೇ ಸರ್ಕಾರದ ವಿರುದ್ಧ ಜನತೆಯಲ್ಲಿ ಯಾವುದೇ ಅಭಿಪ್ರಾಯ ಮೂಡಿಸುವಲ್ಲಿ ಸಫಲವಾಗಲಿಲ್ಲ. ಕುಂಟುನಡಿಗೆಯಲ್ಲಿಯೇ ಕಂಡಿತು. ಹಿಂದೆ ಬೋಫೋರ್ಸ್ ಹಗರಣದಂತೆ ರಫೇಲ್ ಹಗರಣಕ್ಕೆ ಬಣ್ಣ ಕಟ್ಟಲು ವ್ಯರ್ಥಸಾಹಸ ಮಾಡಿತಷ್ಟೆ. ಸುಪ್ರೀಂ ಈ ಬಗ್ಗೆ ಸ್ವಚ್ಛ ಪತ್ರ ನೀಡಿದರೂ ಪೊದೆಗುದ್ದುವ ಕೆಲಸ ಮಾಡಿತು.
ಭಾಜಪವೂ ಅಷ್ಟೇ ಮೋದಿಯಂತಹ ನಾಯಕರನ್ನು ಅಟಲ್ ಅವರಂತೆ ನಡೆಸಿಕೊಳ್ಳದೇ ರಾಜ್ಯಮಟ್ಟದಲ್ಲಿ ತಮ್ಮದೇ ಸ್ವಜನ ಪಕ್ಷಪಾತ, ಆಪರೇಷನ್ ಕಮಲ, ಸಣ್ಣಪುಟ್ಟ ಹಗರಣಗಳ ಮೂಲಕ ಪಕ್ಷದ ಚರಿಷ್ಮಾ ಕಂದುವಂತೆ ಮಾಡಿತು.
ಮೋದಿ ಒಬ್ಬ ಏಕಾಂಗಿ ನಕ್ಷತ್ರವಾದರೇ ವಿನಾ ಅವರ ಹೆಸರಿನ ಅಲೆಯ ಅಬ್ಬರ ಕಡಿಮೆಗೊಳಿಸುವಂತಾಯಿತು. ಅದಕ್ಕೆ ಈಚಿನ ವಿವಿಧ ರಾಜ್ಯಗಳ ಚುನಾವಣೆಯೇ ಸಾಕ್ಷಿ.
ಇಂತಹ ಸನ್ನಿವೇಷವನ್ನು ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಹೇಗೆ ತನ್ನ ಹತಾರಗಳನ್ನು ಬಳಸುತ್ತದೆ ನೋಡಬೇಕಿದೆ. ಈ ನಡುವೆ ರಾಜ್ಯದ ಸಂದರ್ಭದಲ್ಲಿ ಜೆಡಿಎಸ್ ಮೈತ್ರಿ ತುಸು ಇರಿಸುಮುರಿಸಾಗಿರುವಂತೆ ಕಂಡುಬರುತ್ತಿದೆ.
ಕುಟುಂಬ ರಾಜಕಾರಣದ ಸನ್ನಿ ಎಲ್ಲ ಪಕ್ಷದ ಧುರೀಣರಲ್ಲೂ ಇದೆ. ಒಬ್ಬ ಸಾಮಾನ್ಯ ಮತದಾರ ಈಗ ಈ ಬಗ್ಗೆ ಮಾತಾಡುತ್ತಿದ್ದರೂ ಅವನ ಸ್ಪಂದನಕ್ಕೆ ಗಣನೆಯೇ ಇಲ್ಲ. ಗೆಲ್ಲುವವರೆಗೂ ಮತದಾರನ ಹಂಗು.ಗೆದ್ದ ನಂತರ ತಮ್ಮ ಇಷ್ಟಕ್ಕೆ ತಕ್ಕಂತೆ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ದೌರ್ಬಲ್ಯ ಎಲ್ಲ ರಾಜಕಾರಣಿಗಳಲ್ಲೂ ಇದೆ. ರಾಜ್ಯದ ಕಾಂಗ್ರೆಸ್ ವಲಯದಲ್ಲಿ ಸೀಟು ಹಂಚಿಕೆ ,ಬೇರುಮಟ್ಟದಲ್ಕಿ ತೃಪ್ತಿ ತೋರುತ್ತಿಲ್ಲ. ಪಂಚಾಯತಿ ಮಟ್ಟದಲ್ಲಿ ಹೊಗೆಯಾಡುತ್ತಿರುವ ಪರಸ್ಪರ ಪಾರ್ಟಿ ವೈಷಮ್ಯ ಎಲ್ಲೂ ನಂದಿಲ್ಲ. ಇದರ ಯಾವ ಪಾರ್ಟಿಯವರೂ ತಲೆಕೆಡಿಸಿಕೊಳ್ಳುವುದಿಲ್ಕ.ಅದು ನಮ್ಮ ರಾಜಕೀಯ ದುರಂತ.
ಈಗ ಅನ್ನಿಸಿದ್ದಿಷ್ಟು. ಅಭಿಪ್ರಾಯಗಳನ್ನ ಒಪ್ಪದೇ ಇರಬಹುದು. ಇಲ್ಲಿ ಈ ಬರಹ ಯಾರ ಪರವೂ ಅಲ್ಲ, ವಿರೋಧವೂ ಅಲ್ಲ. ಒಂದು ತೌಲನಿಕ ವಿಶ್ಲೇಷಣೆ ಮಾಡುವ ಪ್ರಯತ್ನ.
ಎಲ್ಲ ವಿಚಾರಗಳಿಗೂ ಉತ್ತರ ದೊರೆಯಬೇಕು ಎಂದರೆ ಎಪ್ರಿಲ್ 23ರವರೆಗೂ ಕಾಯಲೇಬೇಕು.
ಲೇಖನ: ಡಾ.ಸುಧೀಂದ್ರ
















