ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಒಂದೆಡೆ ಸರ್ಕಾರದ ಜನಸ್ಪಂದನ ಕಾರ್ಯಕ್ರಮ ನಡೆದಿದ್ದರೆ, ಇನ್ನೊಂದೆಡೆ ನಿನ್ನೆಯಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಿದೆ. ಸದನದಲ್ಲಿ ಪ್ರತಿಬಾರಿಯೂ ಸಿದ್ದರಾಮಯ್ಯ ಸೇರಿದಂತೆ ಪ್ರತಿಪಕ್ಷ ನಾಯಕರಿಗೆ ಅಬ್ಬರದಿಂದ ಘರ್ಜಿಸಿ ಟಕ್ಕರ್ ನೀಡುವ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಮಾತ್ರ ಅಧಿವೇಶನದಿಂದ ದೂರವುಳಿದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಒಂದೆಡೆ ಸದನದಲ್ಲಿ ಸಿದ್ದರಾಮಯ್ಯ ಸೇರಿದಂತೆ ಪ್ರತಿಪಕ್ಷಗಳ ಹಿರಿಯ ಮುಖಂಡರು ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸುತ್ತಿದ್ದರೆ, ಅದಕ್ಕೆ ಸಮರ್ಥವಾಗಿ ಪ್ರತ್ಯುತ್ತರವನ್ನು ಯಾವಾಗಲೂ ನೀಡುವುದು ಈಶ್ವರಪ್ಪ ಮಾತ್ರ. ಈಶ್ವರಪ್ಪನವರ ಮಾತಿನ ಬಗ್ಗೆ ಯಾರು ಏನಾದರೂ ಹೇಳಲಿ. ಒಮ್ಮೆ ಈ ಹಿರಿಯ ನಾಯಕ ಅಧಿವೇಶನದಲ್ಲಿ ನಿಂತು ಅಬ್ಬರಿಸಲು ಆರಂಭಿಸಿದರೆ ಸಿದ್ದರಾಮಯ್ಯ ಸೇರಿ ಪ್ರತಿಯೊಬ್ಬರೂ ತಣ್ಣಗಾಗುತ್ತಾರೆ. ಇವರ ಪ್ರಖರ ಮಾತಿನ ಬಾಣಗಳು ಹಾಗಿರುತ್ತವೆ. ಆದರೆ, ಅಧಿವೇಶನ ಆರಂಭವಾಗಿ ಇಂದು ಮೂರನೆಯ ದಿನ. ಈಶ್ವರಪ್ಪ ಮಾತ್ರ ಗೈರಾಗಿದ್ದು, ಶಿವಮೊಗ್ಗದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಪಾಡಿಗೆ ತಾವು ಮೌನಕ್ಕೆ ಶರಣಾಗಿದ್ದಾರೆ. ಈ ಹಿರಿಯ ನಾಯಕನ ಮೌನವೇ ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈಶ್ವರಪ್ಪ ಏಕೆ ಅಧಿವೇಶನದಲ್ಲಿ ಪಾಲ್ಗೊಂಡಿಲ್ಲ ಎಂಬ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನಗಳನ್ನು ಕಲ್ಪ ಮೀಡಿಯಾ ಹೌಸ್ ಮಾಡಿದ್ದು, ಕಲೆ ಹಾಕಿರುವ ಒಂದಷ್ಟು ಮಾಹಿತಿ ಹೀಗಿದೆ.
ಪಕ್ಷದ ನಿರ್ಲಕ್ಷಕ್ಕೆ ಪ್ರಮುಖ ಕಾರಣ
ಸದಾ ವಿರೋಧಿಗಳ ಬಗ್ಗೆ ಅಬ್ಬರಿಸುವ ಈಶ್ವರಪ್ಪ ಈಗ ಮೌನವಾಗಿ ಅಧಿವೇಶನದಿಂದ ದೂರವುಳಿದಿರುವುದಕ್ಕೆ ಪಕ್ಷದ ನಿರ್ಲಕ್ಷವೇ ಕಾರಣ ಎಂದು ಹೇಳಲಾಗಿದೆ.
ಮೊಟ್ಟ ಮೊದಲನೆಯದಾಗಿ ಈಶ್ವರಪ್ಪ ವಿರುದ್ಧ ಸಂತೋಷ್ ಆತ್ಮಹತ್ಯೆ ಹಾಗೂ 40 ಪರ್ಸೆಂಟ್ ಕಮಿಷನ್ ಆರೋಪ ಕೇಳಿಬಂದಿತ್ತು. ಆಗ, ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಲು ಮುಂದಾಗಿದ್ದ ಇವರನ್ನು ಪಕ್ಷದ ಹೈಕಮಾಂಡ್ ತಡೆದಿತ್ತು. ಆದರೆ, ಆನಂತರದ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಿ, ತನಿಖೆಗೆ ಸಹಕಾರ ನೀಡಿದ್ದರು.
ಪ್ರಮುಖವಾಗಿ, ರಾಜೀನಾಮೆ ನೀಡಿದ ಈಶ್ವರಪ್ಪನವರಿಗೆ, ನೀವು ಆರೋಪ ಮುಕ್ತರಾದ ಮುಂದಿನ ಗಳಿಗೆಯಲ್ಲಿ ಸಚಿವರನ್ನಾಗಿ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಮಾತು ನೀಡಿದ್ದರು ಎಂದು ಉನ್ನತ ಮೂಲಗಳಿಂದ ಮಾಹಿತಿಯಿದೆ. ಆದರೆ, ಈಶ್ವರಪ್ಪನವರು ಆರೋಪ ಮುಕ್ತರಾಗಿ ಸುಮಾರು 2 ತಿಂಗಳವರೆಗೂ ಕಳೆದರೂ ಮುಖ್ಯಮಂತ್ರಿಗಳಾಗಲೀ, ಪಕ್ಷದ ವರಿಷ್ಠರಾಗಲೀ ಈ ಬಗ್ಗೆ ಚಕಾರವೆತ್ತದೇ ನಿರ್ಲಕ್ಷದ ಧೋರಣೆ ತಾಳಿದ್ದಾರೆ.
ಪ್ರಮುಖವಾಗಿ, ಕೇಂದ್ರ ವರಿಷ್ಠರ ವಲಯದಲ್ಲಿ ಆಪ್ತರಾಗಿರುವ ಈಶ್ವರಪ್ಪನವರನ್ನು ದೆಹಲಿಯಿಂದಲೇ ತಾತ್ಸಾರದ ಭಾವನೆಯಿಂದ ನೋಡಲಾಗುತ್ತಿದೆ ಎನ್ನಲಾಗಿದೆ. ಇವರ ಪರವಾಗಿ ಯಾರೂ ಸಹ ಬ್ಯಾಟಿಂಗ್ ಮಾಡುತ್ತಿಲ್ಲ ಎನ್ನುವುದು ಒಂದು ಮೂಲದ ಮಾಹಿತಿ. ಪಕ್ಷ ಹಾಗೂ ಮುಖ್ಯಮಂತ್ರಿಗಳ ಈ ನಿರ್ಲಕ್ಷದ ವರ್ತನೆ ಈಶ್ವರಪ್ಪನವರ ಈ ನಡೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಶಾಸಕಾಂಗ ಸಭೆಗೂ ಆಹ್ವಾನವಿಲ್ಲ?
ಇನ್ನು, ಈಶ್ವರಪ್ಪನವರು ರಾಜ್ಯ ಬಿಜೆಪಿಯಲ್ಲಿ ಅತ್ಯಂತ ಹಿರಿಯ ನಾಯಕರು. ಪ್ರತಿಬಾರಿ ಅಧಿವೇಶನಕ್ಕೂ ಮುನ್ನ ಸದನದ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಮಹತ್ವದ ಪಾತ್ರ ವಹಿಸುತ್ತಿದ್ದ ಮುತ್ಸದ್ದಿ. ಆದರೆ, ಈ ಬಾರಿ ಸಿಎಂ ನೇತೃತ್ವದಲ್ಲಿ ನಡೆದ ಸದನದ ವಿಶೇಷ ಶಾಸಕಾಂಗ ಸಭೆಗೂ ಸಹ ಈಶ್ವರಪ್ಪ ಅವರನ್ನು ಆಹ್ವಾನಿಸದೇ ಕಡೆಗಣಿಸಲಾಗಿದೆ ಎನ್ನಲಾಗಿದೆ. ಈ ವಿಚಾರವೂ ಸಹ ಕೆಎಸ್’ಈ ಅವರಿಗೆ ಬಹಳವಾಗಿ ನೋವುಂಟು ಮಾಡಿದ್ದು ಇನ್ನೊಂದು ಕಾರಣ ಎನ್ನಲಾಗಿದೆ.
ಈ ವಿಚಾರಗಳೇ ಈಶ್ವರಪ್ಪ ಅವರು ಜನಸ್ಪಂದನ ಕಾರ್ಯಕ್ರಮ ಹಾಗೂ ಅಧಿವೇಶನದಿಂದ ದೂರವುಳಿಯಲು ಕಾರಣ ಎಂದು ಹೇಳಲಾಗಿದ್ದು, ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರು ಹಾಗೂ ಈಶ್ವರಪ್ಪನವರ ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸಿ.ಪಿ. ಯೋಗೇಶ್ವರ್ ಅವರುಗಳೂ ಸಹ ಜನಸ್ಪಂದನ, ಶಾಸಕಾಂಗ ಪಕ್ಷದ ಸಭೆ ಹಾಗೂ ಅಧಿವೇಶನದಿಂದ ದೂರವುಳಿದಿದ್ದು, ಇವರುಗಳ ಬೇಸರಕ್ಕೂ ಪಕ್ಷದ ವರಿಷ್ಠರ ನಿರ್ಲಕ್ಷ ಹಾಗೂ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದೇ ಇರುವುದೇ ಕಾರಣ ಎನ್ನಲಾಗಿದೆ.
ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿ ಬೆಳೆಸುವಲ್ಲಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಕೆಲವು ಹಿರಿಯರು ಎಷ್ಟು ಶ್ರಮವಹಿಸಿದ್ದಾರೋ, ಕೆ.ಎಸ್. ಈಶ್ವರಪ್ಪನವರ ಕೊಡುಗೆಯೂ ಸಹ ಅಷ್ಟೇ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಇದರೊಂದಿಗೆ ಸಚಿವರಾಗಿ ಅದರಲ್ಲೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಉಸ್ತುವಾರಿಯಾಗಿ ಈಶ್ವರಪ್ಪನವರು ಮಾಡಿರುವ ಉತ್ತಮ ಕಾರ್ಯ ಹಾಗೂ ಸಾಧನೆಗಳು ಕೇಂದ್ರದವರೆಗೂ ತಲುಪಿರುವುದೂ ಸಹ ಇವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಇಂತಹ ಹಿರಿಯ ನಾಯಕ ಕಳಂಕ ಹೊತ್ತಾಗ ತಾವಾಗಿಯೇ ರಾಜೀನಾಮೆ ನೀಡಿ, ಸರ್ಕಾರಕ್ಕೆ ಆಗಬಹುದಾದ ಮುಜುಗರವನ್ನು ತಪ್ಪಿಸಿದ್ದರು. ಅಲ್ಲದೇ ತನಿಖೆಗೆ ಸಂಪೂರ್ಣ ಸಹಕಾರ ನೀಡಿ ಈಗ ಆರೋಪ ಮುಕ್ತರಾಗಿ ಹೊರಬಂದಿದ್ದಾರೆ. ಆದರೆ, ರಾಜ್ಯ ಸರ್ಕಾರ ಹಾಗೂ ಪಕ್ಷದ ಸಂಘಟನೆ ಜವಾಬ್ದಾರಿ ಹೊತ್ತವರು ಈಶ್ವರಪ್ಪನವರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಿದೆಯೇ? ಆರೋಪ ಮುಕ್ತರಾದ ನಂತರ ಇವರ ಹಿರಿತನಕ್ಕೆ ಬೆಲೆ ನೀಡಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕಾದ್ದು ಸಿಎಂ ಬೊಮ್ಮಾಯಿ ಅವರ ಕರ್ತವ್ಯವಲ್ಲವೇ?
ಇನ್ನೇನು, ರಾಜ್ಯ ಚುನಾವಣೆಯ ಹೊಸ್ತಿಲಿನಲ್ಲಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್ ಒಂದೆಡೆ ರಣಕಹಳೆ ಮೊಳಗಿಸಿದ್ದರೆ, ಜೆಡಿಎಸ್ ತನ್ನದೇ ರೀತಿಯಲ್ಲಿ ಅಖಾಡಕ್ಕೆ ಸಜ್ಜಾಗುತ್ತಿದೆ. ಇದೇ ವೇಳೆ ಸಾಲುಸಾಲು ಆರೋಪಗಳು, ಸಮಸ್ಯೆಗಳು ಬಿಜೆಪಿ ಸರ್ಕಾರದ ಮುಂದಿದ್ದು, ಆಡಳಿತಾರೂಢ ಸರ್ಕಾರದ ಪ್ರತಿ ಹೆಜ್ಜೆಯೂ ಅತ್ಯಂತ ಸೂಕ್ಷ್ಮವಾಗಿಬೇಕಾಗುತ್ತದೆ. ಆಡಳಿತದಲ್ಲಿರುವ ಪಕ್ಷದ ನಡೆಯೂ ಸಹ ಹೇಗಿರಬೇಕು ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಹಿರಿಯ ನಾಯಕರನ್ನು ಕಡೆಗಣಿಸುವ ಸರ್ಕಾರ ಹಾಗೂ ಪಕ್ಷದ ನಡೆ ಅವರಿಗೇ ಮುಳುವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಎಂತಹುದ್ದೇ ವಿರೋಧಾಭಾಸಗಳನ್ನು ಬದಿಗಿಟ್ಟು ಎಲ್ಲರನ್ನೂ ಅವರ ಹಿರಿತನ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಗೌವರದಿಂದ ನಡೆಸಿಕೊಂಡು ಸಂಘಟನಾತ್ಮಕವಾಗಿ ಸಾಗಿದಲ್ಲಿ ಮಾತ್ರ ಮುಂದಿನ ಚುನಾವಣೆಯಲ್ಲಿ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸಬಹುದು ಎಂಬುದನ್ನು ಕಮಲ ಪಕ್ಷದ ವರಿಷ್ಠರು ಅರಿಯಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post