ಶಿವಮೊಗ್ಗ: ನಿರಂತರ ಬರವಣಿಗೆ ಸಾಹಿತ್ಯದ ಗಟ್ಟಿತನವನ್ನು ಮೈಗೂಡಿಸುತ್ತದೆ ಎಂದು ಸಾಹಿತಿ ವಿಜಯಾ ಶ್ರೀಧರ್ ಅಭಿಮತ ವ್ಯಕ್ತಪಡಿಸಿದರು.
ಧ್ವನಿ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಡಾ.ಸಿ.ಜಿ. ರಾಘವೇಂದ್ರ ವೈಲಾಯ ಅವರ ಭಾವಯಾನ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಹಿತಿಗಳಾದವರು ತಮ್ಮನ್ನು ತಾವು ಸದಾ ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು. ಹೊಸ ಸಾಹಿತ್ಯ ರಚನೆಗೆ ಮುನ್ನ ಸಾಹಿತ್ಯದ ಅಧ್ಯಯನ ಮಾಡಬೇಕು. ನಮ್ಮನ್ನು ನಾವು ಪರೀಕ್ಷೆಗೆ ಒಳಪಡಿಸಿಕೊಳ್ಳುತ್ತಾ ಇರಬೇಕು. ಬರೆದ ಸಾಹಿತ್ಯವನ್ನು ಪತ್ರಿಕೆಗಳಿಗೆ ಕಳುಹಿಸುತ್ತಿರಬೇಕು. ಅಲ್ಲದೇ, ಪತ್ರಿಕೆಗಳನ್ನು ಪ್ರಕಟವಾಗುವ ಸಾಹಿತ್ಯದ ಪುಟಗಳನ್ನು ಓದುತ್ತಿರಬೇಕು ಎಂದು ಸಲಹೆ ನೀಡಿದರು.
ಯಾವುದೇ ಕೃತಿಯ ಬಿಡುಗಡೆ ಎಂಬುದು ಇಲ್ಲ. ಕೃತಿ ಜ್ಞಾನವನ್ನು ಹೆಚ್ಚಿಸಿ ಅಂಧಕಾರವನ್ನು ಹೋಗಲಾಡಿಸುತ್ತದೆ. ಅಜ್ಞಾನದಿಂದ ಬಿಡುಗಡೆ ಮಾಡುತ್ತದೆ. ಮನಸ್ಸು ಮತ್ತು ಭಾವಕ್ಕೆ ಒಂದಕ್ಕೊಂದು ಸಂಬಂಧವಿದೆ. ವಿಶ್ವದಲ್ಲೇ ಅತಿ ವೇಗದಲ್ಲಿ ಚಲಿಸುವ ಸಾಧನವಿದ್ದರೆ ಅದು ಮನಸ್ಸು ಮಾತ್ರ ಎಂದರು.
ವೈದ್ಯರು ಸಾವು-ನೋವು-ನಲಿವನ್ನು ಅತ್ಯಂತ ಹತ್ತಿರದಿಂದ ನೋಡುತ್ತಾರೆ. ಅವರಲ್ಲ ಅತಿ ಹೆಚ್ಚು ಮಾನವೀಯತೆ ತುಂಬಿರುತ್ತದೆ. ಅಂತಹವರ ಮೇಲೆ ತಪ್ಪು ಭಾವನೆಗಳಿಂದ ಹಲ್ಲೆಗಳು ನಡೆಯುತ್ತಿವೆ. ಇನ್ನು ವೈದ್ಯರಾದವರು ಕಥೆ, ಕಾದಂಬರಿ ಬರೆದಿದ್ದಾರೆ. ಆದರೆ ಕನ್ನಡ ಸಾಹಿತ್ಯ ಲೋಕದಲ್ಲಿ ವೈದ್ಯರು ಬರೆದಿರುವ ಕವನ ಸಂಕಲನ ಇದೇ ಮೊದಲನೆಯದ್ದು ಇರಬಹುದು ಎಂದರು.
ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಸಹ ನಿರ್ದೇಶಕಿ ಡಾ.ವಿನಯಾ ಶ್ರೀನಿವಾಸ್ ಮಾತನಾಡಿ, ಈ ಕವನ ಸಂಕಲನದಲ್ಲಿ ವೈವಿಧ್ಯಮಯ ವಸ್ತುಗಳಿವೆ. ಭಾರತ ಮಾತೆ, ಪ್ರಕೃತಿ, ಕಡಲು, ದುಂಬಿಯ ಝೇಂಕಾರ ಸೇರಿ ಎಲ್ಲ ಸಂಗತಿಗಳಿವೆ. ಸೃಜನಶೀಲತೆ ಮತ್ತು ಭಾಷಾ ಪ್ರೌಢಿಮೆಯನ್ನು ಇಲ್ಲಿ ಕಾಣಬಹುದು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ. ಶಂಕರಪ್ಪ ಮಾತನಾಡಿದರು. ಡಾ. ಶುಭಾ ವೈಲಾಯ ಪ್ರಾಸ್ತಾವಿಕವಾಗಿ ಮಾತನಾಡಿ, ವಿನಯ್ ಸ್ವಾಗತಿಸಿದರು. ನಿವೃತ್ತ ಪ್ರಾಧ್ಯಾಪಕಿ ಡಾ.ಕಿರಣ್ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಘವೇಂದ್ರ ವೈಲಾಯ ಉಪಸ್ಥಿತರಿದ್ದರು.
Discussion about this post