ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಂದು ಚಿತ್ರ ಎಷ್ಟು ಚೆನ್ನಾಗಿ ಮೌಢ್ಯತೆಯ ಬಣ್ಣಿಸಬಹುದೋ ಅದನೆಲ್ಲಾ ಮಾಡಿದ ಚಿತ್ರ ಟ್ರಾನ್ಸ್. ಅಲ್ಲಿ ವೈಲೆಂಟ್ ಆಗುವ ರಾವಣರಿಲ್ಲ, ವಿದೇಶದಲ್ಲಿ ಕುಣಿದ ಹಾಡುಗಳಿಲ್ಲ, ಹೇಳುವಂತಹ ಸ್ಟಾರ್ ನಟರೂ ಇಲ್ಲ. ಕೇವಲ ಕಥೆಯಲ್ಲಿ ಕುತೂಹಲ ಕೆರಳಿಸುವ ಚಿತ್ರಗಳಿಗೆ ಇದೊಂದು ಸೇರ್ಪಡೆ. ಮಲಯಾಳಂ ಭಾಷೆಯ ಈ ಚಿತ್ರ ಅಮೇಜಾನ್ ಪ್ರೈಮ್ನಲ್ಲಿ ಲಭ್ಯ.
ಎಷ್ಟೋ ವಿಡಿಯೋಗಳನ್ನು, ಫೋಟೋಗಳನ್ನು ನೋಡಿದ್ದೇವೆ ಮತ್ತು ಎಷ್ಟೋ ಸುದ್ಧಿಗಳು ನೋಡಿದ್ದೇವು. ಸ್ಟೇಜ್ ಮೇಲೆ ಇರುವ ಉದ್ದನೆಯ ಅಂಗಿಯ ಮಾಂತ್ರಿಕ ತನ್ನ ಕೈಗಳಿಂದ, ಮಾತುಗಳಿಂದ ಅಸಂಖ್ಯಾತ ನೆರೆದ ಜನರ ಕಾಯಿಲೆ ವಾಸಿ ಮಾಡುವುದು, ಹಾಡುತ್ತಾ ಕುಣಿಯುತ್ತಿರುವುದು, ಮತ್ತೆ ಯಾರಿಗೋ ಛಡಿಯೇಟು ಕೊಡುವುದು ಹೀಗೆ ಕ್ರೈಸ್ತ ಧರ್ಮದ ಗುರುವಿನ ಕರುಣಾಜನಕ ಮಾಯಜಾಲ. ಇದರ ಹಿಂದಿನ ಸತ್ಯವನ್ನು, ಕಾಣದ ಕೈಗಳನ್ನು ಮತ್ತು ಪರಿಣಾಮಗಳನ್ನು ಬಿಚ್ಚಿಡುವ ಚಿತ್ರ ಟ್ರಾನ್ಸ್. ಚಿತ್ರ ಆರಂಭವಾಗುವುದೇ ಹಾಗೆ. ಆತನೊಬ್ಬ ಮಧ್ಯಮ ವರ್ಗದ ಯುವಕ. ದೈಹಿಕವಾಗಿ ತೀರಾ ಆಕರ್ಷಕನಲ್ಲದ, ಅಂತಹ ಹೇಳಿಕೊಳ್ಳುವ ಉದ್ಯೋಗ ಇಲ್ಲದ, ವಿದ್ಯುತ್ ಬಿಲ್ ಕಟ್ಟಲೂ ಯೋಚಿಸಬೇಕಾದ ಹಿನ್ನೆಲೆಯ ವ್ಯಕ್ತಿ. ಆತನ ಕನಸು ತಾನೊಬ್ಬ ವ್ಯಕ್ತಿತ್ವ ವಿಕಸನ ಮಾಡುವ ಗುರು ಆಗಬೇಕೆಂದು. ಅದಕ್ಕಾಗಿ ಸದಾ ಕಾಲ ಹಂಬಲಿಸುವ, ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಬದುಕಿನ ಮತ್ತೊಂದು ಮಹತ್ವದ ಅಧ್ಯಾಯ ತೆರೆದುಕೊಳ್ಳುತ್ತದೆ. ಹಳೆಯ ಮನೆಯಲ್ಲಿದ್ದ ಮಾನಸಿಕ ಅಸ್ವಸ್ಥ ತಮ್ಮ. ಹಣಕಾಸಿನ ಅಡಚಣೆ, ಅನಾರೋಗ್ಯದ ಚಿಂತೆ, ಹಳೆಯ ನೋವಿನ ನೆನಪುಗಳು ಅದರೊಂದಿಗೆ ಆತನ ಬದುಕು ಕಟ್ಟಿಕೊಳ್ಳುವ ಪ್ರಯತ್ನ. ಹೀಗಿರುವಾಗ ಆತನಿಗೆ ಒಮ್ಮೆ ಚಲನಚಿತ್ರ ಇನ್ನಿತರ ಕಾರ್ಯಕ್ರಮಗಳಿಗೆ ಕಲಾವಿದರ ಪೂರೈಸುವ ಮಹಿಳೆಯ ಪರಿಚಯವಾಗುತ್ತದೆ. ಅವಳು ಈ ಚಿತ್ರದಲ್ಲಿ ಮಹತ್ತರ ಬದಲಾವಣೆಯನ್ನು ತರುತ್ತಾಳೆ. ಈ ಮಧ್ಯೆ ಅಸ್ವಸ್ಥ ತಮ್ಮ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದ್ದೊಬ್ಬ ಬಂಧುವನ್ನೂ ಕಳೆದುಕೊಂಡ ಮೇಲೆ ನಾಯಕ ಇನ್ನಷ್ಟು ನೊಂದು ಮಾತ್ರೆಗಳ ಜಾಲದಲ್ಲಿ ಸಿಲುಕುತ್ತಾನೆ. ಮತ್ತು ಆ ಮನೆಯನ್ನೂ ಬಿಟ್ಟು ಹೊರಡುತ್ತಾನೆ.
ಮತ್ತೆ ಆ ಮಹಿಳೆಯ ಭೇಟಿ ಆಗಿ ತನ್ನ ವಿಡಿಯೋಗಳನ್ನು ನೀಡುತ್ತಾನೆ. ಅವಳು ತನಗೆ ಪರಿಚಿತರಾದ ಉದ್ಯಮಿಗಳಿಗೆ ಕಳಿಸುತ್ತಾಳೆ ಮತ್ತು ಅವರು ಈತನನ್ನು ಆಯ್ಕೆ ಮಾಡಿ ಬರಲು ಹೇಳುತ್ತಾರೆ. ಅವರನ್ನು ಭೇಟಿ ಆಗಲು ತೆರಳುವ ನಾಯಕನಿಗೆ ಅಲ್ಲಿ ಒಂದು ಆಘಾತ ಕಾದಿರುತ್ತದೆ. ಅಲ್ಲಿ ಆತನ ಆಯ್ಕೆ ಮ್ಯಾನೇಜ್ಮೆಂಟ್ ಗುರು ಸ್ಥಾನದ ಬದಲು ದೈವ ದೂತನ ಪದವಿಯ ಆಯ್ಕೆ ನೀಡುತ್ತಾರೆ. ಮತ್ತು ಈತನ ಅಷ್ಟೂ ಪೂರ್ವಾಪರ ಅವರು ಅರಿತಿರುತ್ತಾರೆ. ಆ ಪರಿಸ್ಥಿತಿಯಲ್ಲಿ ಅವರ ಆಯ್ಕೆ ಒಪ್ಪದೇ ಬೇರೆ ದಾರಿಯೂ ಇರುವುದಿಲ್ಲ. ಕೆಲಸಕ್ಕೆ ಸೇರಿದ ಮೇಲೆ ಆತನಿಗೆ ಅನೇಕ ಬಗೆಯ ತರಬೇತಿ ನೀಡಲಾಗುತ್ತದೆ. ಹೆಚ್ಚು ವೈಭವೋಪೆತವಾಗಿ ನೋಡಿಕೊಳ್ಳಲಾಗುತ್ತದೆ. ಮಾತ್ರೆಗಳಿಗೆ ಆತ ಅದಾಗಲೇ ಅಡಿಕ್ಟ್ ಆಗಿರುತ್ತಾನೆ. ತರಬೇತಿ ಪೂರ್ಣಗೊಳ್ಳುವ ಹೊತ್ತಿಗೆ ಜೀವನವೊಂದೇ ಅಲ್ಲ, ಆತನ ಹೆಸರು ಬದಲಾಗುತ್ತದೆ.
ಕೋಟ್ಯಾಂತರ ರೂಪಾಯಿಗಳ ದುಡಿಮೆ, ಬಯಸಿದ್ದೆ ದೊರಕುವ ಜೀವನ, ನಿಲ್ಲದೆ ಓಡುವ ಕಾಲ ಹೀಗೆ ಆತನ ಪ್ರತಿಭೆ ಮತ್ತೊಂದು ಬಗೆಯಲ್ಲಿ ಬಳಕೆಯಾಗುತ್ತದೆ. ತಾನು ಮಾಡುತ್ತಿರುವುದು ಸರಿಯೋ ತಪ್ಪೋ ಅಂತಲೂ ಯೋಚಿಸದೆ ಇನ್ನಿಲ್ಲದಂತೆ ಬದುಕುತ್ತಾನೆ. ಈ ಸಂದರ್ಭದಲ್ಲಿ ನಡೆಯುವ ಟಿವಿ ಸಂದರ್ಶನ, ತಾನು ಎಚ್ಚೆತ್ತುಕೊಳ್ಳುವ ಪ್ರಯತ್ನ, ಆಘಾತ, ಮುಂದೆ ಎದುರಾಗುವ ತಿರುವುಗಳನ್ನು ನೋಡಿಯೇ ಅರಿಯಬೇಕು. ಚಿತ್ರದ ಕ್ಲೈಮ್ಯಾಕ್ಸ್ ಕೂಡ ಅದ್ಭುತ.
ಪಿಕ್ಕೆ ಹಾಕಿದ ಆಮೀರು, ಹುಲಿಕಲ್ಲಿನ ಹುಲಿಯನನ್ನು ಸೇರಿ ಅನೇಕ ‘ವಿದ್ವಾಂಸರು’ ಕೇವಲ ಒಂದು ದಿವ್ಯ ಪರಂಪರೆಯನ್ನು ಅಷ್ಟೇ ಪ್ರಶ್ನೆ ಮಾಡಿ ಜಾಣ ಕುರುಡು ತೋರಿಸಿದರು. ದೇವರ ಹೆಸರಿನಲ್ಲಿ ಸುಲಭವಾಗಿ ದೊರೆಯುವ ಜನರ ಮೌಢ್ಯತೆಯನ್ನು ಸುಲಭವಾಗಿ ಕೋಟಿ ರೂಪಾಯಿಗಳ ಉದ್ದಿಮೆಯಾಗಿ ಹೇಗೆ ಮಾಡಿಕೊಳ್ಳುತ್ತಾರೆ, ಅದಕ್ಕಾಗಿ ನಡೆಯುವ ತಯಾರಿ, ನಾಯಿಕೊಡೆಗಳಂತೆ ಹುಟ್ಟುವ ದೇವದೂತರು, ಅವರ ಹೆಸರಿನಲ್ಲಿ ನಡೆಯುವ ಔಷಧ, ತೈಲ ಇನ್ನಿತರ ವಸ್ತುಗಳ ಮಾರಾಟ, ಅಂತಹ ಗುರುಗಳನ್ನು ನಂಬಿ ತನ್ನ ಕಂದನ ಬಲಿ ಮಾಡಿ ಆಮೇಲೆ ಬದುಕಿಸಲು ಬೇಡುವ ಅಪ್ಪ ಹೀಗೆ ಚಿತ್ರ ಸತ್ಯದ ಬೆನ್ನಟ್ಟಿ ಬೆಳಕು ಚೆಲ್ಲುತ್ತದೆ.
ಮೌಢ್ಯತೆಯ ಸೋಗು ಪ್ರತಿ ವ್ಯಕ್ತಿಯಲ್ಲೂ, ಪ್ರತಿ ಧರ್ಮದಲ್ಲೂ ಇದೆ. ಆದರೆ ಪ್ರಶ್ನಿಸುವವರು ಮಾತ್ರ ಆಯ್ಕೆ ಮಾಡಿಕೊಂಡು ತೋರುತ್ತಿದ್ದರು. ಧರ್ಮ ನಂಬಿ ಕಾಯಿಲೆ ಹಂಚೋಣ ಎನ್ನುವವರ , ದೈವಾಂಶಸಭೂತರ ದೆಸೆ ಕಾಯುವ ಈ ಹೊತ್ತಿನಲ್ಲಿ ಇಂತಹ ಚಿತ್ರಗಳನ್ನು ನೋಡುವುದು ಅವಶ್ಯಕ. ಫಹಾದ್ ಫಾಸಿಲ್, ಗೌತಮ್ ವಾಸುದೇವ್ ಮೆನನ್, ಚೆಂಬನ್ ವಿನೋದ್ ಜೋಸ್, ನಜ್ರಿಯಾ ನಜೀಂ, ದಿಲೀಶ್ ಪೋಥನ್, ವಿನಾಯಕನ್ ಮತ್ತು ಸೌಭಿನ್ ಶಾಹಿರ್ ಇವರ ಅತ್ತ್ಯುತ್ತಮ ನಟನೆ, ಗಟ್ಟಿ ಕಥೆ ಮತ್ತು ಗಂಭೀರ ನಿರೂಪಣೆಯಿಂದ ಚಿತ್ರ ಮನಸ್ಸಿಗೆ ಹತ್ತಿರವಾಗುವುದು ಖಂಡಿತ. ಹಿಂದೂ ಸಂಸ್ಕೃತಿಯ ಆಚರಣೆಗಳು, ಯಜ್ಞ ಯಾಗಾದಿಗಳು, ವಿಚಾರಗಳನ್ನು ಹೀಗಳೆದು ಮುದ್ರಿಸುವ, ಚಿತ್ರಿಸುವ ಮತ್ತು ದೇವರುಗಳ ಮೇಲೆ ಮೂತ್ರಿಸುವ ಮಾತನಾಡುವ ಚೆರ್ರಿ ಪಿಕ್ಕಿಂಗ್ (Cherry Picking) ಅವಿಚಾರವಂತರೂ ಈ ಚಿತ್ರ ನೋಡುವುದು ಒಳಿತು.
Get in Touch With Us info@kalpa.news Whatsapp: 9481252093
Discussion about this post