ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಹೊಸಮಾದರಿಯ ಮೌಲ್ಯಮಾಪನವನ್ನು ಅಳವಡಿಸಿಕೊಂಡಿರುವ ಕುವೆಂಪು ವಿಶ್ವವಿದ್ಯಾಲಯವು, Kuvempu University ವಿವಿಯ ಮೇಲಿದ್ದ ಆರ್ಥಿಕ ಹೊರೆಯನ್ನು ತಗ್ಗಿಸಿಕೊಂಡು ಅನುದಾನ ಉಳಿತಾಯ ಮಾಡಿರುವುದನ್ನು ಸದನದಲ್ಲಿ ಉಲ್ಲೇಖಿಸಿದ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್ ಅಶ್ವತ್ಥನಾರಾಯಣ ವಿವಿಯನ್ನು ಶ್ಲಾಘಿಸಿದ್ದಾರೆ.
ಬುಧವಾರ ಬೆಂಗಳೂರಿನ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ವಿಶ್ವವಿದ್ಯಾಲಯಗಳಲ್ಲಿನ ವ್ಯವಸ್ಥೆಯ ಸುಧಾರಣೆ ಕುರಿತು ಮಾತನಾಡಿದ ಅವರು, ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಈವರೆಗೂ ಮೌಲ್ಯಮಾಪನದ ಅಂಕಗಳ ನಮೂದು, ಫಲಿತಾಂಶಗಳ ಪ್ರಕಟಣೆಯನ್ನು ಬಾಹ್ಯಮೂಲಗಳ (ಔಟ್ಸೋರ್ಸಿಂಗ್) ಮೂಲಕ ನಡೆಸುವ ಪ್ರಕ್ರಿಯೆ ರೂಢಿಯಲ್ಲಿತ್ತು. ನೂತನ ಶಿಕ್ಷಣ ನೀತಿ ಜಾರಿಯ ಭಾಗವಾಗಿ ಶಿಕ್ಷಣ ಇಲಾಖೆಯ ವತಿಯಿಂದ ಅಭಿವೃದ್ಧಿಪಡಿಸಲಾದ ಯು.ಯು.ಸಿ.ಎಂ.ಎಸ್. ಸಾಫ್ಟ್ವೇರ್ ಅನ್ನು ಕುವೆಂಪು ವಿಶ್ವವಿದ್ಯಾಲಯವು ಶೀಘ್ರವಾಗಿ ಅಳವಡಿಸಿಕೊಂಡು ಮೌಲ್ಯಮಾಪನ ಪ್ರಕ್ರಿಯೆ ನಡೆಸಿದೆ. ಈ ಹೊಸ ವ್ಯವಸ್ಥೆ ಅನುಸರಿಸಿ ಕೈಗೊಂಡ ಒಂದು ಸೆಮಿಸ್ಟರ್ನ ಮೌಲ್ಯಮಾಪನದಿಂದ ವಿವಿ ಹಾಗೂ ಸರ್ಕಾರಕ್ಕೆ ಈವರೆಗೂ ಆಗುತ್ತಿದ್ದ ಆರ್ಥಿಕ ಹೊರೆ ಕಡಿಮೆಯಾಗಿದೆ. ಇದು ಅನುಕರಣೀಯ ನಡೆ ಎಂದು ಕುವೆಂಪು ವಿಶ್ವವಿದ್ಯಾಲಯವನ್ನು ಶಿಕ್ಷಣ ಸಚಿವರು ಅಧಿವೇಶನದಲ್ಲಿ ಪ್ರಶಂಸಿದ್ದಾರೆ.
ಮುಂದುವರಿದು, ಉನ್ನತ ಶಿಕ್ಷಣದ ಶೈಕ್ಷಣಿಕ, ಆಡಳಿತ, ನೇಮಕಾತಿ, ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಮಹತ್ತರ ಬದಲಾವಣೆಗಳನ್ನು ತರಲಾಗುತ್ತಿದ್ದು, ಸಂಪನ್ಮೂಲಗಳ ದಕ್ಷ ಬಳಕೆಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post