ಕಲ್ಪ ಮೀಡಿಯಾ ಹೌಸ್ | ಮೈಸೂರು | ಶಿವಮೊಗ್ಗ ರಘುರಾಮ |
ದುಷ್ಟ ಸಂಹಾರಕ್ಕಾಗಿ ಅವತಾರ ಎತ್ತಿದ ಮಾತೆ ನಿತ್ಯವೂ ಭಕ್ತ ಜನರ ಸಂಕಷ್ಟಗಳನ್ನು ಪರಿಹಾರ ಮಾಡಲು ಅನುಗ್ರಹಿಸುತ್ತಾಳೆ. ಭಕ್ತಿಯಿಂದ ಬೇಡಿ ಬಂದವರಿಗೆ ಅಭಯ ನೀಡುವ ಅಮ್ಮನವರು ಬದುಕಿಗೆ ಬೆಳಕಾಗಿದ್ದಾರೆ. ಇತಿಹಾಸ ಮತ್ತು ಪರಂಪರೆ ಪ್ರತೀಕವಾಗಿರುವ ನಗರದ ಶಕ್ತಿ ಪೀಠವೊಂದು ದೇವಿಯ ಪೂಜೆ, ಆರಾಧನೆಯೊಂದಿಗೆ ಲೌಕಿಕ ಸಮಸ್ಯೆಗಳಿಗೂ ಸ್ಪಂದಿಸಿ ಆಶ್ರಯವಾಗಿ ನಿಂತಿರುವುದು ಮಾದರಿಯಾಗಿದೆ. ಇದುವೇ ಶ್ರೀ ಸಪ್ತಮಾತೃಕಾ ಚೌಡೇಶ್ವರಿ ದೇವಾಲಯ. ಜನ ಮಾನಸದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮೈಸೂರಿನ ವಿಜಯನಗರ ಮೂರನೇ ಹಂತ, 6ನೇ ಮುಖ್ಯರಸ್ತೆಯಲ್ಲಿರುವ ಸನ್ನಿಧಿಯು ಈಗ 20ನೇ ಪ್ರತಿಷ್ಠಾ ವರ್ಧಂತಿ ಉತ್ಸವದ ಸಂಭ್ರಮದಲ್ಲಿದೆ.
ಚಾಮರಾಜನಗರ ತಾಲೂಕು ಕಮರವಾಡಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಸಪ್ತಮಾತೃಕೆ ಸನ್ನಿಧಿ (ಅಗಸ್ತ್ಯ ಮುನಿ ಪ್ರತಿಷ್ಠಾಪಿತ)ಯಿಂದ ಅನುಗ್ರಹೀತರಾದ ಭಕ್ತರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಒಂದು ಗುಡಿ ನಿರ್ಮಿಸಲು ಸಂಕಲ್ಪಿಸಿದರು. ವಿಜಯನಗರದಲ್ಲಿ ಇದಕ್ಕಾಗಿ ಜಾಗ ನಿಗದಿಮಾಡಿಕೊಂಡು ಭವ್ಯ ಆಲಯ ನಿರ್ಮಿಸಿದರು. ಕಮರವಾಡಿಯಂತೆಯೇ ಇಲ್ಲೂ ಸಪ್ತ ಮಾತೃಕೆಯರಿಗೆ ವೈಭವೋಪೇತ ಉತ್ಸವಾದಿಗಳು ನಡೆಯಲು ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥರು ಚಾಲನೆ ನೀಡಿದರು. ಶ್ರದ್ಧಾಂವಂತ ಹಿರಿಯರು ದೇಗುಲದ ಟ್ರಸ್ಟಿನಲ್ಲಿದ್ದು ಶಕ್ತಿ ಪೀಠದ ಸಾಧನಾ ಪಥಕ್ಕೆ ಮಾರ್ಗದರ್ಶಿಯಾಗಿರುವುದು ವಿಶೇಷವಾಗಿದೆ.ವಿಶೇಷ ಪೂಜೆಗಳು
ಅಮ್ಮನವರ ಸನ್ನಿಧಾನದಲ್ಲಿ ನಿತ್ಯವೂ ದ್ವಿಕಾಲ ಪೂಜೆ, ಶುಕ್ರವಾರ ದುರ್ಗಾಹೋಮ, ಗುರುವಾರ ದಕ್ಷಿಣಾಮೂರ್ತಿ ಪೂಜೆ, ಹುಣ್ಣಿಮೆ ಪುರುಷಸೂಕ್ತ ಹೋಮ ಮತ್ತು ಸತ್ಯನಾರಾಯಣ ಪೂಜೆ, ಅಮಾವಾಸ್ಯೆ ಶ್ರೀಸೂಕ್ತ ಹೋಮ ಮತ್ತು ಕಾಲಭೈರವ ಪೂಜೆ, ಸಂಕಷ್ಟಿಯಂದು ಬೆಳಗ್ಗೆ ಗಣಹೋಮ, ಸಂಜೆ ಸಂಕಷ್ಟಹರ ಗಣಪತಿ ಪೂಜೆ ನೆರವೇರುತ್ತದೆ.
ನವರಾತ್ರಿ ಸಂದರ್ಭ 9 ದಿನವೂ ವಿಶೇಷ , ಅಲಂಕಾರ, 10 ದಿನ ಹೋಮ ನೆರವೇರುತ್ತದೆ. ಕಾರ್ತಿಕ ಹುಣ್ಣಿಮೆ ಉತ್ಸವ ಮೂರ್ತಿಗೆ ಅಭಿಷೇಕ, ಅಮಾವಾಸ್ಯೆ ಲಕ್ಷ ದೀಪೋತ್ಸವ, ವೈಶಾಖ ಬಹುಳ ಸಪ್ತಮಿ ಪ್ರತಿಷ್ಠಾ ವಾರ್ಷಿಕೋತ್ಸವ ನೆರವೇರುತ್ತದೆ. ಉಳಿದಂತೆ ಭಾರತೀಯ ಸಂಪ್ರದಾಯದ ಎಲ್ಲ ಹಬ್ಬ-ಹರಿದಿನ ಪೂಜಾದಿಗಳು ವಿಜೃಂಭಿಸುತ್ತವೆ. ವಿವರಗಳಿಗೆ 94490 12113 ಸಂಪರ್ಕಿಸಬಹುದು.
ಸಾಮಾಜಿಕ ಸೇವಾ ಚಟುವಟಿಕೆ
ಈಗಾಗಲೇ 20 ವಸಂತ ಕಂಡ ದೇವಾಲಯದಲ್ಲಿ ಪ್ರತಿ ವರ್ಷವೂ ಹಲವು ಸಾಮಾಜಿಕ ಸೇವಾಕಾರ್ಯಗಳನ್ನು ನಡೆಸಲಾಗುತ್ತಿದೆ. ವೈಶಾಖ ಮಾಸ ವಾರ್ಷಿಕೋತ್ಸವದಲ್ಲಿ ಮಕ್ಕಳಿಗೆ ಸಾಮೂಹಿಕ ಅಕ್ಷರಾಭ್ಯಾಸ, 1ಸಾವಿರ ಗ್ರಾಮೀಣ, ಬಡ ಮಕ್ಕಳಿಗೆ ನೋಟ್ ಪುಸ್ತಕ, ಬ್ಯಾಗ್ ಸೇರಿದಂತೆ ಲೇಖನ ಸಾಮಗ್ರಿ ವಿತರಿಸಲಾಗುತ್ತದೆ. ಸ್ಕಾಲರ್ಶಿಪ್ನೊಂದಿಗೆ ಶಾಲಾ ಮತ್ತು ಪರೀಕ್ಷಾ ಶುಲ್ಕವನ್ನೂ ಅನೇಕ ಬಡ ವಿದ್ಯಾರ್ಥಿಗಳಿಗೆ ಭರಿಸಲಾಗಿದೆ. ಜ್ಞಾನ ಶಾರದಾ ಆ್ಯಪ್ ಅಡಿ ಸಿಇಟಿ/ಜೆಇಇ/ ನೀಟ್ ಪರೀಕ್ಷಾರ್ಥಿಗಳಿಗೆ ತರಬೇತಿ, ನಗರ, ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ತಪಾಸಣೆ ಶಿಬಿರಗಳು, ಬಡವರಿಗೆ ಉಚಿತ ಡಯಾಲಿಸಿಸ್ ವಾತ್ಸಲ್ಯ ಯೋಜನೆಯಡಿ ಹಿರಿಯರಿಗೆ ದೇಗುಲದ ಆವರಣದಲ್ಲಿ ಆಟೋಟ, ಸಾಮೂಹಿಕ ಶಾರದಾಪೂಜೆ ಇತ್ಯಾದಿ ಸಾಂಗವಾಗಿ ಸಾಗುತ್ತಿದೆ.ವಿವಿಧ ದೇವರ ನೆಲೆ
ದೇವಸ್ಥಾನದಲ್ಲಿ ಶ್ರೀಚಕ್ರದ ಮೇಲೆ ಸಪ್ತ ಮಾತೃಕೆಯರು ನೆಲೆಸಿದ್ದಾರೆ. ಅಲ್ಲಿಯೇ ದೇವಿಯ ಉತ್ಸವ ಮೂರ್ತಿ, ಶಕ್ತಿ ಗಣಪತಿ, ದಕ್ಷಿಣಾಮೂರ್ತಿ, ಶ್ರೀ ಸತ್ಯನಾರಾಯಣ, ಕಾಲಭೈರವರ ಮೂರ್ತಿಗಳಿವೆ. ಮೇ 19ರಿಂದ ಪ್ರತೀ ಸಪ್ತಮಿಯಂದು ಅನ್ನದಾನ ಸೇವೆ ಆರಂಭ ಮಾಡಲಾಗಿದೆ. ಭಕ್ತರು, ದಾನಿಗಳು ಸಹಕರಿಸಿದರೆ ನಿತ್ಯವೂ ಅನ್ನದಾನ ಮಾಡುವ ಯೋಜನೆ ಟ್ರಸ್ಟ್ಗೆ ಇದೆ.
ವಿವಿಧ ರೋಗಗಳ ನಿವಾರಣೆ, ವಿದ್ಯೆ, ವಿವಾಹ, ಸಂತಾನ ಪ್ರಾಪ್ತಿಗಾಗಿ ಭಕ್ತರು ದೇವಿಯಲ್ಲಿ ಹರಕೆ ಮಾಡಿಕೊಳ್ಳುತ್ತಾರೆ.
ಇಷ್ಟಾರ್ಥ ಸಿದ್ಧಿಸಿದ ನಂತರ ಸನ್ನಿಧಿಗೆ ಬಂದು ಮಡಿಲಕ್ಕಿ ಸಮರ್ಪಣೆ, ನಿಂಬೆಹಣ್ಣು ದೀಪೋಜ್ವಲನ, ಪ್ರಾಕಾರೋತ್ಸವ ಮತ್ತು ಮಂಡಲ ಹೆಜ್ಜೆ ನಮಸ್ಕಾರ ಸಮರ್ಪಣೆ ಮಾಡುತ್ತಾರೆ. ದೇವಾಲಯದಲ್ಲಿ ಯಾವುದೇ ಹರಕೆಗಳ ಪಟ್ಟಿ ಇಲ್ಲ. ಭಕ್ತರು ಅವರ ಮನೋಭೀಷ್ಠಕ್ಕೆಅನುಗುಣವಾಗಿ ದೇವಿಗೆ ಭಕ್ತಿ ಸಮರ್ಪಣೆ ಮಾಡುತ್ತಾರೆ. ಫಲ ಕಂಡವರು ಹೊರ ಜಿಲ್ಲೆ, ರಾಜ್ಯಗಳಿಂದಲೂ ಆಗಮಿಸಿ ಪೂಜೆ ಸಲ್ಲಿಸುತ್ತಾರೆ.
ಶೃಂಗೇರಿ ಶ್ರೀ ಶಾರದಾ ಪೀಠದ ಪದ್ಧತಿಗಳ ಅನ್ವಯ ದೇವಾಲಯದಲ್ಲಿ ಸಕಲ ಪೂಜಾವಿಧಿಗಳು, ಆಚರಣೆಗಳು ಸಂಪನ್ನಗೊಳ್ಳುತ್ತಿವೆ.ದೇವಿ ಕೃಪೆ ಮತ್ತು ಜಗದ್ಗುರುಗಳ ಅನವರತ ಅನುಗ್ರಹವೇ ಇಲ್ಲಿನ ಎಲ್ಲ ಚಟುವಟಿಕೆಗಳಿಗೆ ಪ್ರೇರಣೆ. ಅನುಷ್ಠಾನ, ಅರ್ಚನೆ, ಆರಾಧನೆ, ಅನ್ನದಾನ ನಮ್ಮ ಪರಮ ಧ್ಯೇಯ. ಸಕಲ ಭಕ್ತರೂ ಸಂತಸ ಮತ್ತು ಸಂಭ್ರಮದಿಂದ ಜೀವಿಸಬೇಕು ಎಂಬುದು ನಮ್ಮ ಆಶಯ. ಕಳೆದ 20 ವರ್ಷಗಳಿಂದ ಇವೆಲ್ಲವೂ ನೆರವೇರಿದೆ. ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರವಾಗಿರುವ ದೇಗುಲವು ಗರಿಷ್ಠ ಸಾಮಾಜಿಕ ಸೇವೆ ಮಾಡುವ ನಿಟ್ಟಿನಲ್ಲೂ ಮುಂದಾಗಿದೆ.
-ಭಾಸ್ಕರ್, ದೇವಾಲಯದ ಟ್ರಸ್ಟಿ
ಎಂದೆಂದು- ಏನೇನು ಕಾರ್ಯಕ್ರಮ
ಮೈಸೂರಿನ ವಿಜಯನಗರ ಮೂರನೇ ಹಂತ, 6ನೇ ಮುಖ್ಯರಸ್ತೆಯ ಶ್ರೀ ಸಪ್ತಮಾತೃಕಾ ಚೌಡೇಶ್ವರಿ ದೇವಸ್ಥಾನದ 20ನೇ ವಾರ್ಷಿಕೋತ್ಸವದ ಅಂಗವಾಗಿ ಮೇ 28ರಿಂದ 31ರವರೆಗೆ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೇ 28 ರಂದು ಬೆಳಗ್ಗೆ ದೇವಸ್ಥಾನದ ಆವರಣದಲ್ಲಿ ಸಹಸ್ರ ಮೋದಕ ಹೋಮ ನೆರವೇರಲಿದೆ. ಮೇ 29ರಂದು ಬೆಳಗ್ಗೆ 8ಕ್ಕೆ ಶ್ರೀ ರುದ್ರಏಕಾದಶನಿ ಹೋಮ ಮತ್ತು ಮೇ 30ರಂದು ಬೆಳಗ್ಗೆ 8ಗಂಟೆಗೆ ಶ್ರೀ ನವ ಚಂಡಿಕಾ ಹೋಮ ಹಮ್ಮಿಕೊಳ್ಳಲಾಗಿದೆ. ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಧಾರ್ಮಿಕ ಸಮಾರಂಭದಲ್ಲಿ ಶೃಂಗೇರಿ ಶಂಕರ ಮಠದ ವೇದ ವಿದ್ವಾಂಸರು ಮತ್ತು ಋತ್ವಿಜರು ನೇತೃತ್ವ ವಹಿಸಲಿದ್ದಾರೆ. ಶೃಂಗೇರಿ ಪೀಠದ ಶ್ರೀ ಜಗದ್ಗುರುಗಳ ಆದೇಶ ಮತ್ತು ಅನುಗ್ರಹದಿಂದ ಎಲ್ಲ ವಿಧಿ, ವಿಧಾನಗಳು ನೆರವೇರಲಿವೆ ಎಂದು ದೇವಾಲಯದ ಟ್ರಸ್ಟಿ ಎಸ್.ಕೆ. ಭಾಸ್ಕರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೇ 31 ರಂದು ಬೆಳಗ್ಗೆ 9:30ಕ್ಕೆ ದೇವಿ ಸನ್ನಿಧಿಯಲ್ಲಿ ಮಕ್ಕಳಿಗೆ ಸಾಮೂಹಿಕ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಲಿದೆ ಇದೇ ಸಂದರ್ಭ ಒಂದು ಸಾವಿರ ಬಡ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ನೆರವಾಗಲು ನೋಟ್ ಪುಸ್ತಕ ಸೇರಿದಂತೆ ಹಲವಾರು ಬರವಣಿಗೆಯ ಸಾಮಗ್ರಿಗಳನ್ನು ವಿತರಣೆ ಮಾಡಲಾಗುವುದು. 20ನೇ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯದಲ್ಲಿ ಪ್ರತಿ ಸಪ್ತಮಿಯಂದು ಉಚಿತ ಅನ್ನದಾನ ಸೇವೆಯನ್ನು ಆರಂಭಿಸಲಾಗಿದೆ. 4 ದಿನಗಳ ಕಾರ್ಯಕ್ರಮಕ್ಕೆ ಎಲ್ಲ ಸಮುದಾಯದ ದೇವಿ ಭಕ್ತರು, ಸಾರ್ವಜನಿಕರು ಆಗಮಿಸಬೇಕು ಎಂದು ದೇವಾಲಯದ ಟ್ರಸ್ಟಿ ಎಸ್.ಕೆ. ಭಾಸ್ಕರ ವಿನಂತಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post