ಮೈಸೂರಿನ ಎ.ಎನ್. ರಮೇಶ್ ಅವರು ಭಾರತ ಸಂಚಾರ ನಿಗಮ ನಿಯಮಿತದ ನಿವೃತ್ತ ಅಧಿಕಾರಿಗಳು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿದವರು. ದಾನಿಗಳು ಮತ್ತು ಗುರುಗಳ ಅನನ್ಯ ಸೇವಕರಾದ ರಮೇಶ ಅವರು ಬರವಣಿಗೆಯಲ್ಲೂ ಅನನ್ಯವಾದ ಕಳಕಳಿ ಹೊಂದಿದವರು. ಅಧಿಕ ಜೇಷ್ಠ ಮಾಸದ ಅಂಗವಾಗಿ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ 33 ದಿನಗಳ ಕಾಲ ದಿಗ್ವಿಜಯವನ್ನು ಮಾಡಿದ ಪರಮ ಪಾವನ ಸಂದರ್ಭವನ್ನು ರಮೇಶ್ ಅವರು ಸಂಗ್ರಹ ರೂಪದಲ್ಲಿ ಕಲ್ಪ ಡಿಜಿಟಲ್ ನ್ಯೂಸ್ ಗೆ ಮುತ್ತಿನ ಹಾರದಂತೆ ಪೋಣಿಸಿ ಕೊಟ್ಟಿದ್ದಾರೆ.

ಕಲ್ಪ ಮೀಡಿಯಾ ಹೌಸ್ | ಮೈಸೂರು |
ಹರಯೇ ನಮಃ
|| ಶ್ರೀ ದಿಗ್ವಿಜಯ ರಾಮೋ ವಿಜಯತೇ ||
ಶ್ರೀ ಹರಿ-ವಾಯು-ಗುರುಗಳ ಮತ್ತು ಪರಮಪೂಜ್ಯ ಮಹಾ ಸ್ವಾಮಿಗಳ ದಿವ್ಯಾನುಗ್ರಹದಿಂದ, ಅಧಿಕ ಮಾಸದ ಮಹೋತ್ಸವವು ಕಳೆದ 33 ದಿವಸಗಳ ಕಾಲ ಅತ್ಯಂತ ವೈಭವೋಪೇತವಾಗಿ, ಭಕ್ತಿ-ಭಾವಗಳ ಸಂಗಮವಾಗಿ, ಅಪಾರ ಭಕ್ತಸಮೂಹದ ಅಚಲ ಸಹಕಾರದೊಂದಿಗೆ ಲೋಕಮಂಗಲಕರವಾಗಿ ಸಂಪನ್ನಗೊಂಡಿತು.
ದಿವ್ಯ ಕಾರ್ಯಕ್ರಮಗಳ ಪುಣ್ಯಸ್ಮರಣೆ:
1. ಜ್ಞಾನಯಜ್ಞ: ಪೂಜ್ಯ ಮಹಾಸ್ವಾಮಿಗಳಿಂದ ಪವಿತ್ರ ಶ್ರೀಮದ್ ಭಗವದ್ಗೀತ ಪಾಠ, ಹಾಗೂ ಶ್ರೀಮದ್ ಭಾಗವತ ಪ್ರವಚನ ಮೂಲಕ ಆತ್ಮಶುದ್ಧಿಯ ಪಾಠ.
2. ಲೋಕಕಲ್ಯಾಣ ಯಜ್ಞ: ಸರ್ವಜನ ಸುಖಾಯ ಸರ್ವಜನ ಹಿತಾಯಕ್ಕಾಗಿ ಪ್ರತಿನಿತ್ಯ ಹೋಮಗಳು, ದಾನಗಳು, ಗೋಸೇವಾ ಇತ್ಯಾದಿ ಕಾರ್ಯಕ್ರಮಗಳು ವರ್ಣಿಸಲು ಅಸಾಧ್ಯ.
3. ದಿವ್ಯಮಂಗಳೋತ್ಸವ: ವೈಭವೋಪೇತ ಕಲಿಯುಗದೈವ ಶ್ರೀ ಶ್ರೀನಿವಾಸ ದೇವರ ದಿವ್ಯ ಕಲ್ಯಾಣ ಮಹೋತ್ಸವ, ಕಣ್ಮನ ತಣಿಸಿದ ಅಪೂರ್ವ ದೃಶ್ಯ.
4. ಭಕ್ತಿ ಸುಧೆ: ಪಂಡಿತರಿಂದ ಪ್ರವಚನ ಮತ್ತು ನಾಡಿನ ಸುಪ್ರಸಿದ್ಧ ಹಾಗೂ ಉದಯೋನ್ಮುಖ ಯುವ ಪ್ರತಿಭೆಗಳ ಕಂಠಸಿರಿಯಲ್ಲಿ ಮಿಂಚಿದ *ಹರಿಕೀರ್ತನ ಸುಧಾ ಸಿಂಚನ ಹರಿದಿನದಂದು ಅಖಂಡ ಭಜನಾ ಸೇವಾ ಕರ್ಣಾಮೃತ.
5. ಆರೋಗ್ಯ ಯಜ್ಞ: ಲೋಕದ ಆರೋಗ್ಯ ರಕ್ಷಣೆಗಾಗಿ ಪ್ರತಿದಿನವೂ 33 ಹೋಮ ಕುಂಡಗಳಲ್ಲಿ “ಧನ್ವಂತರಿ ಹೋಮ” ಹಾಗೂ ಪಂಡಿತರಿಂದ ಧನ್ವಂತರಿ ಮಹಿಮಾ ಉಪದೇಶ.

6. ಅವತಾರ ವೈಭವ: ಪ್ರತಿದಿನವೂ ಶ್ರೀ ಧನ್ವಂತರಿ ದೇವರಿಗೆ ಅವತಾರ ವೈಶಿಷ್ಟ್ಯ, ಪುಷ್ಪ ಹಾಗೂ ವಸ್ತ್ರಾಲಂಕಾರದ ವೈಭವ.
7. ವೈದಿಕ ಘೋಷ: ಪೂಜಾ ಕಾಲದಲ್ಲಿ ಸರ್ವಸಮೃದ್ಧಿದಾಯಕ ಪುರುಷ ಸೂಕ್ತ ಮತ್ತು ವೇದಮಂತ್ರಗಳ ಪಾವನ ನಿನಾದ.
8. ಭಕ್ತಿಯ ವಿಜಯಯಾತ್ರೆ: ಶ್ರೀ ಮಠದಿಂದ ರಾಜಬೀದಿಯಲ್ಲಿ ಮಂಗಳವಾದ್ಯ, ದಿವ್ಯನಿನಾದದೊಂದಿಗೆ ಜರುಗಿದ ವೇದವ್ಯಾಸರ ಭಾಗವತ ಭವ್ಯ ಪಲ್ಲಕ್ಕಿ ಉತ್ಸವ, ಕಂಡ ಕಣ್ಣಿಗೆ ಹಬ್ಬ.
9. ಅನುಗ್ರಹದ ಪರಮಘಳಿಗೆ: ಪ್ರತಿ ನಿತ್ಯವೂ ಪೂಜ್ಯ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ, ಮುದ್ರಾಧಾರಣೆ, ಪಾದಪೂಜಾ, ಅನುಗ್ರಹ ಮಂತ್ರಾಕ್ಷತೆ ಭಾಗ್ಯ.

10. ತೀರ್ಥ ಪ್ರಸಾದ: ಪ್ರತಿದಿನದಲ್ಲಿ ಸಹಸ್ರಾರು ಭಕ್ತರಿಗೆ ಶ್ರೀ ರಾಮದೇವರ ಪ್ರಸಾದ ಭೂರಿ ಭೋಜನ.
11. ಸಮರ್ಪಣೆ: ಅಧಿಕಮಾಸದ ಪ್ರಯುಕ್ತ ನಡೆದ ಪಾರಾಯಣ, ಭಾಗವತ ಸಪ್ತಾಹ, ಹರಿಕಥಾಮೃತ ಸಾರ, ಲಕ್ಷ್ಮೀ ಶೋಭಾನ, ಗುರುಗಳ ಮೂಲಕ ಪರಮಾತ್ಮನಿಗೆ ಸಮರ್ಪಣೆ
12. ಶ್ರೀಗಳವರ ಅಮೂಲ್ಯ ಸಂದೇಶ: ಶ್ರೀಪಾದರ ಜ್ಞಾನ ಉಪದೇಶದ ದಿವ್ಯ ಔಷಧಿಯಿಂದ ಅಜ್ಞಾನ ಎಂಬ ಕತ್ತಲೆ ಪೊರೆ ಹರಿದು “ಬದುಕನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ, ಪ್ರಾರ್ಥನೆಯೇ ಪರಮ ಸಾಧನ. ನಿಷ್ಕಾಮ ಭಕ್ತಿಯಿಂದ ಕೂಡಿದ ಪ್ರಾರ್ಥನೆಯೇ ನಮ್ಮೆಲ್ಲರ ಜೀವನದ ಗುರಿಯಾಗಲಿ.” ಎಂಬ ಸಂದೇಶ. ಶ್ರೀಮದ್ಭಾಗವತ ಪ್ರವಚನದ ಜ್ಞಾನ ಗಂಗೆಯಲ್ಲಿ ಅಬಾಲ ವೃದ್ಧರೂ, ಉತ್ಸಾಹ ಹುರುಪಿನಿಂದ ಮುಳುಗಿ ಆಧ್ಯಾತ್ಮಿಕ
ಚೈತನ್ಯರಾಗುತ್ತಿದ್ದರು.
13. ಬಾಲ ಭಾಗವತ: ಮಕ್ಕಳಿಗೆ ಅರ್ಥವಾಗುವಂತೆ ಸರಳವಾಗಿ ಭಕ್ತಿಯ ಮಹತ್ವ ತಿಳಿಸುತ್ತಿದ್ದ ಮಹಾ ಸ್ವಾಮಿಗಳು ಮಕ್ಕಳ ಮತ್ತು ಯುವ ಪೇಟೆಗೆ ಹೃದಯದಲ್ಲಿ ಪರಮಾತ್ಮನ ಮೇಲಿನ ಭಕ್ತಿಯ ಬೀಜವನ್ನು ಬಿತ್ತುತ್ತಿದ್ದರು.

14. ಕಣ್ಣಿಗೆ ಹಬ್ಬ, ಮನಸ್ಸಿಗೆ ಉಲ್ಲಾಸ: ಸಹಸ್ರಾರು ವರ್ಣರಂಜಿತ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದ್ದ ಶ್ರೀ ಸತ್ಯಪ್ರಮೋದ ಸಭಾ ಭವನವು ಸ್ವರ್ಗವನ್ನೇ ಧರೆಗಿಳಿಸಿದಂತೆ ಶೋಭಿಸಿ, ಅಧಿಕ ಮಾಸದ ಮಹೋತ್ಸವಕ್ಕೆ ದಿವ್ಯ ಮೆರಗು ನೀಡಿತು. ಮಂಗಳೋತ್ಸವದ ದಿನ ಶಿಷ್ಯವರ್ಗದ ಬಣ್ಣದ ಓಕಳಿ ಆಕರ್ಷವಾಗಿ ಅಧಿಕ ಮೆರಗನ್ನು ನೀಡಿತು.
14. ಅನುಗ್ರಹ ಪ್ರಶಸ್ತಿ: ವಿವಿಧ ಕ್ಷೇತ್ರಗಳಲ್ಲಿ ಸುಪ್ರಸಿದ್ಧರಾದ ಗಣ್ಯರಿಗೆ ಪೂಜ್ಯ ಸ್ವಾಮಿಗಳಿಂದ ಅನುಗ್ರಹ ಪ್ರಶಸ್ತಿ ನೀಡಿ ಸನ್ಮಾನ.
ಕೃತಜ್ಞತಾ ಸಮರ್ಪಣೆ:
ಈ ಮಹೋತ್ಸವದ ಯಶಸ್ಸಿನ ದೃಢಸಂಕಲ್ಪಿಗಳು, ಪಂಡಿತ ಅನಿರುದ್ಧ ಆಚಾರ್ಯ ಪಾಂಡುರಂಗಿ. ಅವರ ಜೊತೆಗೆ ನೂರಾರು ಸ್ವಯಂಸೇವಕರ ತಂಡವು 33 ದಿನಗಳ ಕಾಲದ ಮಹೋತ್ಸವ ಯಶವಾಗಲು ಅವಿರತ ಸಹಕಾರ ನೀಡಿದೆ.
ನೂರಾರು ಮಾತೆಯರ ಮತ್ತು ಮಕ್ಕಳ ಸೇವೆಯು ಈ ಸಂದರ್ಭದಲ್ಲಿ ಗುರುಪಾದ ಗಳಿಗೆ ಸಮರ್ಪಣೆಯಾಗಿದೆ. ಮೈಸೂರು ನಗರ, ಕರ್ನಾಟಕದ ವಿವಿಧ ಜಿಲ್ಲೆಗಳು ಮಾತ್ರ ಅಲ್ಲ ಪರ ರಾಜ್ಯಗಳಿಂದಲೂ ಬಂದಂತಹ ಅನೇಕ ಭಕ್ತರು ಮೈಸೂರಿನ ಈ ಮಹೋತ್ಸವದ ಬಗ್ಗೆ ಹೃದಯಪೂರ್ವಕವಾಗಿ ಶ್ಲಾಘನೆಗಳನ್ನು ಸ್ಥಾಪನೆಗಳನ್ನ ವ್ಯಕ್ತಪಡಿಸಿ ಗುರುಗಳ ದಿವ್ಯ ದರ್ಶನವನ್ನು ಪಡೆದು ಹೋಗಿದ್ದಾರೆ. ಅಧಿಕಮಾಸದಲ್ಲಿ ಅಧಿಕ ಪುಣ್ಯವನ್ನು ನೀಡುವ ದಾನ ಧರ್ಮ ಕಾರ್ಯಗಳನ್ನು ಈ ಕ್ಷೇತ್ರದಲ್ಲಿ ಮಾಡಿ ಧನ್ಯತೆ ಮೆರೆದಿದ್ದಾರೆ.
ಶ್ರೀ ಸತ್ಯಾತ್ಮತೀರ್ಥರು ಅತ್ಯಂತ ಪ್ರಸನ್ನಗೊಂಡು ನಿಮಗೆ ಏನು ಬೇಕು ಎಂದು ಸ್ವಯಂಸೇವಕರಲ್ಲಿ ಕೇಳಿದಾಗ ಮತ್ತೆ ಮತ್ತೆ ನಿಮ್ಮ ದರ್ಶನ ಭಾಗ್ಯ ಬೇಕು… ಮೈಸೂರಿನಲ್ಲಿ ತಾವು ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಬೇಕು.ಇದರ ಹೊರತಾಗಿ ಮತ್ತೇನು ಬೇಡ ಎಂದು ಒಂದೇ ಕಂಡದಿಂದ ಒಂದೇ ದನಿಯಿಂದ ಎಲ್ಲರೂ ಅಪೇಕ್ಷೆ ಪಟ್ಟಿದ್ದು ಮಹೋನ್ನತ ಮತ್ತು ಭಕ್ತಿ ಭಾವದ ಬೇಡಿಕೆಯಾಗಿದೆ. 33 ದಿನಗಳ ಕಾಲ ಉಲ್ಲೇಖ ಮಾಡುವ ವಿಶೇಷ ಸಂಗತಿ ಎಂದರೆ ಶ್ರೀ ಹರಿ-ವಾಯು-ಗುರುಗಳ ಅನುಗ್ರಹ ನೇರವಾಗಿ ಸಾವಿರಾರು ಜನರಿಗೆ ದೊರಕಿದ್ದು.
ಶ್ರೀ ಸತ್ಯಾತ್ಮತೀರ್ಥರು ಪ್ರತಿನಿತ್ಯವೂ ನೀಡುತ್ತಿದ್ದ ಭಾಗವತ ಸಂದೇಶದಲ್ಲಿ ನಮ್ಮ ಬದುಕಿನ ರೀತಿ ನೀತಿಗಳ ಬಗ್ಗೆ, ಕುಟುಂಬ ಮತ್ತು ಸಮಾಜದ ಬಗ್ಗೆ, ಮಕ್ಕಳು ಮತ್ತು ಯುವಜನರ ಸಾಧನೆಗಳ ಬಗ್ಗೆ ಒಂದು ಸ್ಪಷ್ಟವಾದ ಮುನ್ನೋಟ, ಅಂತರಂಗ ಸಾಧನೆ, ಮೋಕ್ಷದ ಮಾರ್ಗಗಳು ಸರಳ ಮತ್ತು ಸುಲಲಿತವಾಗಿ ಅಮೃತೋಪದೇಶ ಮಾದರಿಯಲ್ಲಿ ದೊರಕಿದ್ದು ನಮ್ಮೆಲ್ಲರ ಜೀವನದ ಸುಕೃತವಾಗಿದೆ.
ಕೇವಲ ಮಾಧವ ಸಮೂಹ ಮಾತ್ರವಲ್ಲ, ಆಟೋ ಚಾಲಕರು, ಕೂಲಿ ಕಾರ್ಮಿಕರು, ಓದು ಬರಹ ತಿಳಿಯದ ಮಾತೇಯರು, ಇನ್ನೂ ಅಕ್ಷರವನ್ನೇ ಕಲಿಯದ ಪುಟ್ಟ ಪುಟ್ಟ ಮಕ್ಕಳು…. ಹೀಗೆ ಬೇರೆ ಬೇರೆ ತರದ ಜನಗಳು ಪರಮಪೂಜ್ಯ ಶ್ರೀ ಸತ್ಯಾತ್ಮತೀರ್ಥರ ವಾಣಿಯನ್ನು ಕೇಳಿ, ಅವರ ಬರುವಿಕೆಯ ಧೀರ ನಡೆ ಮತ್ತು ಸರಳತೆಯನ್ನು ಕಂಡು ಭಕ್ತಿ ಭಾವ ಪ್ರೇರಿತರಾಗಿ, ಬದುಕಿನ ಮಾರ್ಗವನ್ನೇ ಬದಲಿಸಿಕೊಂಡಿದ್ದು ಒಂದು ಐತಿಹಾಸಿಕ ಸಂಗತಿಯಾಗಿ ಎಲ್ಲರ ಗಮನ ಸೆಳೆದಿದೆ.

ಅಧಿಕಮಾಸದ ಕಾರ್ಯಕ್ರಮವನ್ನು ಮಾಡಿದರೆ ಮೈಸೂರಿನ ರೀತಿಯಲ್ಲಿ ಮಾಡಬೇಕು ಎಂದು ಜನಜನಿತವಾಗಿದೆ.
ಒಂದು ಸಾಧಾರಣ ತುಳಸಿ ದಳವನ್ನು ಬಿಡಿಸುವುದರಿಂದ ಹಿಡಿದು, ಪರಿಮಳ ಭರಿತ ಪುಷ್ಪಗಳ ಸಂಗ್ರಹ, ಪೂಜಾ ಕಾರ್ಯಕ್ಕೆ ಸಿದ್ಧತೆ, ಭಕ್ತರನ್ನು ಸಾಲು ಸಾಲಾಗಿ ಮತ್ತು ವ್ಯವಸ್ಥಿತವಾಗಿ ಗುರುಗಳ ದರ್ಶನಕ್ಕೆ ಮತ್ತು ರಾಮದೇವರ ದರ್ಶನಕ್ಕೆ ಸಾಲು ಮಾಡಿಸುವುದು, ಪರ ಊರಿನಿಂದ ಬಂದವರಿಗೂ ಅತ್ಯಂತ ಪ್ರೀತಿಯಿಂದ ತಿಂಡಿ ಮತ್ತು ಊಟಗಳನ್ನು ವಿತರಣೆ ಮಾಡಿದ್ದು, ಎಲ್ಲರೂ ನಮ್ಮ ಮನೆಯ ಬಂಧುಗಳು ಎಂದು ಭಾವಿಸಿದ್ದು, ಅಧಿಕ ಮಾಸದ ತುಂಬಾ ಮಹತ್ವದ ಮಾತುಗಳನ್ನೇ ಪರಸ್ಪರ ಆಡಿದ್ದು, ಯಾವುದೇ ಚಿಕ್ಕ ಮತ್ತು ದೊಡ್ಡ ಕೆಲಸಗಳನ್ನು ಮಾಡಿದರು ಅಲ್ಲಿ ಸ್ವಾರ್ಥವನ್ನು ಬಿಟ್ಟು ಕೇವಲ ಗುರು ಸೇವೆಯಂತೆ ಕಾರ್ಯಕರ್ತರು ಭಾವಿಸಿದ್ದು, ಇದನ್ನು ಪ್ರತ್ಯಕ್ಷ ಕಾಣುವ ಸೌಭಾಗ್ಯ ನಮ್ಮೆಲ್ಲರಿಗೂ ದೊರಕಿದ್ದು 33 ದಿನಗಳ ಮೈಲಿ ಗಲ್ಲುಗಳನ್ನು ಪರಮ ಪಾವನ ಮಾಡಿದೆ.
ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಸಬಾರದು ಎಂಬ ಗುರುಗಳ ಪರಿಸರ ಕಳಕಳಿಯನ್ನು ನೂರಕ್ಕೆ ನೂರರಷ್ಟು ಜಾರಿಗೆ ತರುವಲ್ಲಿ ಇಡೀ ಅಧಿಕ ಮಾಸದ ಸಮಿತಿಯ ಪ್ರತಿಯೊಬ್ಬ ಸದಸ್ಯರು ಶ್ರಮಿಸಿದ್ದಾರೆ. ಊಟ ಮತ್ತು ಉಪಹಾರದ ಸಂದರ್ಭದಲ್ಲಿ ಎರಡು ಸಾವಿರಕ್ಕೂ ಅಧಿಕ ಸ್ಟೀಲ್ ಕಪ್ಪುಗಳನ್ನೇ ಬಳಸಿದ್ದು ಮತ್ತೊಂದು ವಿಶೇಷ ಅಧಿಕ ಮಾಸದ ಪರ್ಯಂತ ಎಲ್ಲ ದಿನಗಳಲ್ಲಿ ಪರಮ ಪೂಜ್ಯ ಶ್ರೀ ಸತ್ಯಾತ್ಮತೀರ್ಥರು ಪುಟ್ಟ ಪುಟ್ಟ ಮಕ್ಕಳನ್ನು ಅತ್ಯಂತ ವಿಶೇಷವಾಗಿ ತಮ್ಮ ಪ್ರೀತಿಯ ತೆಕ್ಕೆಯಲ್ಲಿ ತೆಗೆದುಕೊಂಡಿದ್ದು ಒಂದು ಹೊಸ ದಾಖಲೆ.
ಪ್ರತಿದಿನವೂ ಮಕ್ಕಳಿಗೆ ಭಾಗವತ ಮತ್ತು ರಾಮಾಯಣಕ್ಕೆ ಸಂಬಂಧಪಟ್ಟಂತೆ ಕೆಲವು ಪುಟ್ಟ ಪ್ರಶ್ನೆಗಳನ್ನು ಕೇಳಿ, ಅವರಿಗೆ ಪ್ರತಿನಿತ್ಯವೂ ಒಂದು ವಿಶೇಷ ವಸ್ತು ಮತ್ತು ತಿಂಡಿಗಳನ್ನು ತಾವೇ ಸ್ವತಹ ಕೈಯಿಂದ ಹಂಚಿದ್ದು, ಮಕ್ಕಳಿಂದ ರಾಮ ರಾಮ ಎಂಬ ಭಜನೆಯನ್ನು ಮಾಡಿಸಿದ್ದು, ಅವರಲ್ಲಿ ವಿಶೇಷವಾಗಿ ನಮ್ಮ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಆಸಕ್ತಿಯನ್ನು ಮೂಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಯುವ ಜನರಿಗಾಗಿ ಕಳೆದ ಐದು ವರ್ಷಗಳ ಹಿಂದೆ ಯುವಾತ್ಮಾ ತಂಡವನ್ನು ಕಟ್ಟಿ, ರಾಜ್ಯ ಮತ್ತು ಹೊರ ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲೂ ಅದರ ಘಟಕಗಳನ್ನು ಮಾಡಿ ಸಾವಿರಾರು ಯುವಕರಿಗೆ ಧರ್ಮ ಜಾಗೃತಿ ದೀಕ್ಷೆಯನ್ನು ನೀಡಿದ್ದ ಶ್ರೀ ಸತ್ಯಾತ್ಮತೀರ್ಥರು, ಮೈಸೂರಿನಲ್ಲಿ ಪುಟ್ಟ ಪುಟ್ಟ ಮಕ್ಕಳ ತಂಡವನ್ನು ಪ್ರತಿನಿತ್ಯ ಹುರಿದುಂಬಿಸುವ ಮಹತ್ತರವಾದ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.
ಪರಮಪೂಜ್ಯ ಗುರುಗಳಿಂದ ನೇರವಾದ ಪ್ರೀತಿ ಮತ್ತು ಅನುಗ್ರಹವನ್ನು ಪಡೆದಈ ಮಕ್ಕಳು ತಮ್ಮ ಭವಿಷ್ಯದಲ್ಲಿ ಅದ್ವಿತೀಯ ಸಾಧನೆಗಳನ್ನು ಮಾಡುವುದರಲ್ಲಿ ಸಂಶಯವೇ ಇಲ್ಲ.
ಪ್ರತಿದಿನವೂ ಸಂಜೆ ನಡೆಯುತ್ತಿದ್ದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯಲ್ಲಿ ಪಂಡಿತರಿಂದ ಉಪನ್ಯಾಸ, ವಿವಿಧ ರಂಗದ ಸಾಧಕರಿಗೆ ಸನ್ಮಾನ, ಸಂಗೀತ ಕಾರ್ಯಕ್ರಮಗಳು, ದಾಸವಾಣಿಗಳು, ನೃತ್ಯ ಮತ್ತು ಭಜನೆಗಳು, ಏಕಾದಶಿಯ ದಿನ ಅಖಂಡ ಭಜನೆ, ಪ್ರತ್ಯೇಕ ವೇದಿಕೆಗಳಲ್ಲಿ ಶಾಸ್ತ್ರ ಪಾರಾಯಣ, ವಿವಿಧ ಹೋಮ ಹವನಗಳು, ಪ್ರತಿ ಭಾನುವಾರ ಆರೋಗ್ಯ ತಪಾಸಣಾ ಶಿಬಿರಗಳು… ಹೀಗೆ 33 ದಿನಗಳ ಅಧಿಕಮಾಸದ ಕಾರ್ಯಕ್ರಮ ಕೇವಲ ಒಂದು ಸಮುದಾಯದ ಕಾರ್ಯಕ್ರಮವಾಗದೆ ಸಮಸ್ತ ಸಮಾಜಕ್ಕೆ ಒಂದು ವಿಶಿಷ್ಟ ಅನುಭೂತಿಯನ್ನು ಕೊಡುಗೆಯಾಗಿ ನೀಡಿದ್ದು ಹೊಸ ಇತಿಹಾಸವನ್ನು ಬರೆದಂತಾಗಿದೆ.

ಹೀಗೆ ಮೈಸೂರಿನ 33 ದಿನಗಳ ಅಧಿಕ ಮಾಸ ಮಹೋತ್ಸವದ ಜನಮಾನಸದಲ್ಲಿ ಅಚ್ಚಳಿಯದ ಸವಿ ನೆನಪುಗಳನ್ನು ಬಿತ್ತಿದೆ.
ಭಕ್ತಿಗಳನ್ನು ಉದ್ವಿಪನ ಮಾಡಿದೆ. ಇವೆಲ್ಲವೂ ಗುರುಗಳ ಪರಮ ಕಾರುಣ್ಯದಿಂದ ಮತ್ತು ಹರಿವಾಯು ಗುರುಗಳ ಅನುಗ್ರಹದಿಂದ ನೆರವೇರಿದೆ ಎಂದು ಭಾವಿಸುತ್ತೇನೆ. ಧರ್ಮದ ಕಾರ್ಯಗಳೇ ನಶಿಸಿಹೋಗಿವೆ. ಭಾರತೀಯ ಸಂಸ್ಕೃತಿ ವಿನಾಶವಾಗಿದೆ ಎಂದು ದೂರುವ ಅನೇಕ ಜನರಿಗೆ ಇಂತಹ ಕಾರ್ಯಕ್ರಮಗಳು ನಮ್ಮ ಸನಾತನ ಪರಂಪರೆಯನ್ನು ಮರ ಹುಟ್ಟುಗೊಳಿಸಲಿವೆ ಎಂಬುದನ್ನು ಸಾಬೀತುಪಡಿಸಿದೆ.
ಹೃದಯ ಪೂರ್ಣ ಬೀಳ್ಕೊಡುಗೆ….
ಶ್ರೀ ಸತ್ಯಾತ್ಮತೀರ್ಥರು 33 ದಿನಗಳ ಕಾಲ ಅಧಿಕ ಮಾಸದ ಸಮಾರಂಭವನ್ನು ಪೂರ್ಣಗೊಳಿಸಿ ಮತ್ತೆ ದಿಗ್ವಿಜಯಕೆ ಹೊರಡುವ ಸಂದರ್ಭದಲ್ಲಿ ಎಲ್ಲ ಭಕ್ತರ ಕಣ್ಣಲ್ಲಿ ನೀರಾಗಿದ್ದವು. ಇಷ್ಟು ದಿನಗಳ ಕಾಲ ಭಕ್ತಿಯ ಪ್ರವಾಹವನ್ನು ಹರಿಸಿದ ಶ್ರೀಗಳು ನಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ ಎಂಬ ಬೇಸರವು ಎಲ್ಲರಲ್ಲಿ.
ಹಗಲಿರುಳು ಸೇವೆ ಮಾಡಿದ ಭಕ್ತರಿಗೆ ಫಲಮಂತ್ರಾಕ್ಷತೆಯನ್ನು ನೀಡಿ ಶಿರದ ಮೇಲೆ ಕೈ ಇಟ್ಟು ಸದಾ ರಾಮದೇವರ ಅನುಗ್ರಹ ನಿಮ್ಮೆಲ್ಲರ ಮೇಲಿದೆ ಎಂದು ಅವರು ಹಾರೈಸಿದಾಗ ರೋಮಾಂಚನವಾಯಿತು. ಗುರು ಕರುಣವಾಗುವುದು ಬಹಳ ದುರ್ಲಭವಯ್ಯಾ… ಇಂದು ದಾಸರು ಹಾಡಿದ್ದಾರೆ. ಆದರೆ ಈ ಪರಮ ಗುರುಗಳು ನಮ್ಮ ಮೇಲೆ ಬೀರಿದ ಕಾರುಣ್ಯ ಜನ್ಮ ಜನ್ಮಾಂತರಕ್ಕೂ ಪುಣ್ಯವನ್ನು ತಂದು ಕೊಡುವಂತದ್ದು. ಮೈಸೂರಿನ ಅಧಿಕ ಮಾಸ ಮುಗಿದರು ಅದರ ನೆನಪು ನಮ್ಮೆಲ್ಲರ ಮನದಲ್ಲಿ ಸದಾ ಹಸಿರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















