ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳಿಗೆ ಬೆರಳ ತುದಿಯಲ್ಲಿ ಸಿಗುವ ಜ್ಞಾನವನ್ನು ಬಳಸುವಾಗ ಪ್ರತಿಯೊಬ್ಬರಿಗೂ ಫ್ಯಾಕ್ಟ್ಚೆಕ್ ಅಥವಾ ನಿಜ ವಿಷಯದ ಪರಿಶೀಲನೆಯ ತಿಳುವಳಿಕೆ ಮುಖ್ಯ ಎಂದು ಕನ್ನಡ ಮೀಡಿಯಂ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಹೊನ್ನಾಳಿ ಚಂದ್ರಶೇಖರ್ ಹೇಳಿದರು.
ಶಿವಮೊಗ್ಗ ಮಾನಸ ಟ್ರಸ್ಟ್(ರಿ) ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಒಂದು ವಾರಗಳ ವಿಶೇಷ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ಸಾಹ ಹಾಗೂ ಉಲ್ಲಾಸದಿಂದ ಕಲಿಯಬಲ್ಲ ಹಲವಾರು ವಿಷಯಗಳು ಇಂದು ಇರುತ್ತವೆ. ಆದರೆ ಯಾವುದು ಅಗತ್ಯ ಹಾಗೂ ಸತ್ಯ ಎಂಬ ತಿಳುವಳಿಕೆ ಮುಖ್ಯ ಎಂದರು. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಒಂದು ಮಾದರಿ ಶಿಕ್ಷಣ ಸಂಸ್ಥೆ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಓದುತ್ತಿರುವ ಬಿ.ಎ., ಬಿಎಸ್ಡಬ್ಲ್ಯೂ, ಬಿ.ಎಸ್ಸಿ., ಬಿ.ಸಿ.ಎ., ಹಾಗೂ ಬಿ. ಕಾಂ ವಿದ್ಯಾರ್ಥಿಗಳಿಗೆ ಒಂದು ವಾರಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿಯ ವಿಶೇಷ ಉಚಿತ ಕಾರ್ಯಾಗಾರ ಹಾಗು ಇಂಗ್ಲಿಷ್ ಸಂವಹನ ಮತ್ತು ಜೀವನ ಕೌಶಲ್ಯ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಅಚೀವರ್ಸ್ ಕೋಚಿಂಗ್ ಸೆಂಟರ್ನ ತರಬೇತುದಾರರು ಪ್ರತಿದಿನ ಎರಡು ಗಂಟೆಗಳ ಕಾಲ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ತರಬೇತಿಯನ್ನು ನೀಡಿದರು. ಕಾಲೇಜಿನ ಇಂಗ್ಲಿಷ್ ವಿಭಾಗದಿಂದ ಇಂಗ್ಲಿಷ್ ಸಂವಹನ ತರಬೇತಿಯನ್ನೂ, ಮನಃಶಾಸ್ತ್ರ ವಿಭಾಗದಿಂದ ಜೀವನಕೌಶಲ್ಯ ತರಬೇತಿಯನ್ನೂ ನೀಡಲಾಯಿತು.
Also read: ಕಾಂಗ್ರೆಸ್ ಪಕ್ಷದಿಂದ ತೀರ್ಥಹಳ್ಳಿಗೆ ಕಿಮ್ಮನೆ ರತ್ನಾಕರ್ಗೆ ಟಿಕೆಟ್ ಘೋಷಣೆ | ಇನ್ನೂ ಶಿವಮೊಗ್ಗದ 3 ಕ್ಷೇತ್ರ ಬಾಕಿ
ಕಾಲೇಜಿನ ದಿಶಾ ಕೆರಿಯರ್ ಗೈಡನ್ಸ್ ಸೆಂಟರ್ನ ವತಿಯಿಂದ ನಡೆಸಲಾದ ಈ ತರಬೇತಿಯು ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಮುಂದಿನ ತಮ್ಮ ವೃತ್ತಿಗಳಿಗೆ ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಲು ಮಾರ್ಗದರ್ಶನ ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿತು.
ಅಚೀವರ್ಸ್ ಕೋಚಿಂಗ್ ಸೆಂಟರ್ನ ನಿರ್ದೇಶಕ ಎ. ಎಸ್. ಶಿವಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಮ್ಮ ಪ್ರಥಮ ವರ್ಷದ ಪದವಿಯಿಂದಲೇ ತಯಾರಿಯನ್ನು ಮಾಡಿಕೊಳ್ಳುವುದು ಅತ್ಯಂತ ವೈಜ್ಞಾನಿಕ ಕ್ರಮ. ಆದುದರಿಂದ ಈ ತರಬೇತಿ ಒಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ರಾಜೇಂದ್ರ ಚೆನ್ನಿ ಮಾತನಾಡಿ, ಏಳು ದಿನಗಳ ತರಬೇತಿಯ ನಂತರ ಈ ಎಲ್ಲಾ ವಿದ್ಯಾರ್ಥಿಗಳು ಈ ಅಧ್ಯಯನವನ್ನು ಮುಂದುವರೆಸಬೇಕು. ಪದವಿ ಶಿಕ್ಷಣದೊಂದಿಗೆ ವಿವಿಧ ಸರ್ಟಿಫಿಕೇಟ್ ಕೋಸ್ಗಳನ್ನು ಮಾಡಿಕೊಳ್ಳುವುದು ವಿದ್ಯಾರ್ಥಿಯ ಔದ್ಯೋಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಚೀವರ್ಸ್ನ ವರುಣ್, ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ. ಮಂಜುನಾಥ್, ದಿಶಾದ ಸಂಚಾಲಕ ಗಣೇಶ್, ಪ್ರಾಂಶುಪಾಲರಾದ ಡಾ. ಸಂಧ್ಯಾಕಾವೇರಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















