ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಾಂತವೇರಿ ಗೋಪಾಲಗೌಡರು ಶುದ್ಧ ರಾಜಕಾರಣದ ಪ್ರತೀಕ ಮತ್ತು ಎಲ್ಲಾ ರಾಜಕಾರಣಿಗಳಿಗೂ ಮಾದರಿ ಎಂದು ಪತ್ರಕರ್ತ ಎನ್.ರವಿಕುಮಾರ್ ( ಟೆಲೆಕ್ಸ್) ಹೇಳಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜನಲ್ಲಿ ಇತಿಹಾಸ ವಿಭಾಗ ಮತ್ತು ಕನ್ನಡ ವಿಭಾಗದ ವತಿಯಿಂದ ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಉದ್ಘಾಟಿಸಿ ಹಾಗೂ ಗೋಪಾಲಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ವಿಶೇಷ ಉಪನ್ಯಾಸ ನೀಡಿ ಗೋಪಾಲಗೌಡರು ನೈಜ ಜನಪರ ಚಳವಳಿ ಮತ್ತು ಪ್ರಾಮಾಣಿಕ ರಾಜಕಾರಣದ ಪ್ರಖರ ಆದರ್ಶ ಮಾದರಿಯಾಗಿದ್ದಾರೆ ಎಂದರು.
ಗೋಪಾಲಗೌಡರು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಸಾಮಾಜಿಕ, ರಾಜಕೀಯ ಚಳವಳಿಯನ್ನು ಮುನ್ನಡೆಸಿದವರು, ತಬ್ಬಲಿ ಜಾತಿಗಳ ಬಂಧುವಾಗಿ, ಬಡವರ ಪಾಲಿನ ಭರವಸೆಯಾಗಿ ವಿಧಾನಸೌಧದ ಹೊರಗೂ ಒಳಗೂ ಹೋರಾಡಿದ ನಿಜ ಜನನಾಯಕ ಎಂದರು.
ಬಡತನದಲ್ಲೂ ವಿದ್ಯಾಭ್ಯಾಸ ಬಿಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಗೌಡರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಜೈಲು ವಾಸ ಅನುಭವಿಸಿದ ಶಾಂತವೇರಿ ಗೋಪಾಲಗೌಡರು ಸ್ವಾತಂತ್ರ್ಯಾ ನಂತರದಲ್ಲಿ ಭೂ ರಹಿತ ಬಡವರ ,ಗೇಣಿದಾರರಾ ಭೂ ಹಕ್ಕಿಗಾಗಿ ಕಾಂಗ್ರೆಸ್ ಸಮಾಜವಾದಿ ಪಕ್ಷದೊಂದಿಗೆ ರಾಜಕೀಯ ಹೋರಾಟ ಆರಂಭಿಸಿದರು. ಕಾಂಗ್ರೇಸ್ ಸಮಾಜವಾದಿ ಪಕ್ಷದ ಧೋರಣೆಯನ್ನು ಖಂಡಿಸಿ ಅಂದಿನ ಮೈಸೂರು ರಾಜ್ಯದಲ್ಲಿ ಅಣ್ಣಾ ದೇಶಪಾಂಡೆಜೊತೆ ಸಮಾಜವಾದಿ ಪಕ್ಷ ಕಟ್ಟುವ ಮೂಲಕ 1952 ರ ಮೊದಲ ಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆಯಾಗಿ ಬಡವರ , ಕನ್ನಡ ನಾಡಿನ ಧ್ವನಿಯಾಗಿದ್ದವರು ಎಂದರು.
ಸಮಾಜವಾದಿ ರಾಷ್ಟ್ರ ನಾಯಕ ರಾಮಮನೋಹರ ಲೋಹಿಯಾ , ಡಾ ಟಿ ವಿಶ್ವನಾಥ್ ಅವರ ಒಡನಾಟ, ಕಾರ್ಲ್ ಮಾಕ್ರ್ಸ್ ದಾಸ್ ಕ್ಯಾಪಿಟಲ್, ಸಾಕ್ರೆಟಿಸ್, ಹೆನ್ರಿ ದೇವಿಡ್, ಗಾಂಧಿ ಚಿಂತನೆಗಳಿಂದ ಸಮಾಜವಾದಿ ಚಳುವಳಿ ಗೆ ತಾತ್ವಿಕ ಗಟ್ಟಿತನವನ್ನು ಹಾಕಿದ ಶಾಂತವೇರಿ ಗೋಪಾಲಗೌಡರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಸಖನಾಗಿಯೂ ಕಂಗೊಳಿಸಿದರು. ಕನ್ನಡ ಸಾಹಿತ್ಯ ಲೋಕ ಗೌಡರನ್ನು ಒಳಗೊಂಡಸ್ಟು ಮತ್ತೊಬ್ಬರನ್ನು ಒಳಗೊಳ್ಳಲಿಲ್ಲ . ಅಡಿಗರು, ಲಂಕೇಶ್, ಪುತಿನ , ಸಿಪಿಕೆ ಅವರುಗಳು ಗೌಡರ ವ್ಯಕ್ತಿತ್ವವನ್ನು ಕಾವ್ಯದ ಮೂಲಕ ಕಾಣಿಸಿದರು ಎಂದರು.
Also read: ವೇ.ಬ್ರ. ವಿನಾಯಕ ಬಾಯರಿ ಅವರನ್ನು ತನ್ನ ಕುಟುಂಬದ ಸದಸ್ಯನಂತೆ ಕಂಡಿದ್ದೆ | ಕೆ.ಎಸ್. ಈಶ್ವರಪ್ಪ
ಕರ್ನಾಟಕ ಘೋಷಣೆ, ಕನ್ನಡ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿಸುವಂತೆ, ಕಾಗೋಡು ಚಳುವಳಿ ಗುರಿ ಈಡೇರಿಸುವಂತೆ ಕನ್ನಡದ ಡಿಂಡಿಮ ಭಾರಿಸಿದ ಶಾಂತವೇರಿ ಗೋಪಾಲಗೌಡರು ಬಡತನದಿಂದ ನೋವುಂಡರೂ ಸಾತ್ವಿಕ ಸಿಟ್ಟು, ಆದರ್ಶ, ಪ್ರಾಮಾಣಿಕತೆ, ನ್ಯಾಯ ಪ್ರಜ್ಞೆ, ಸ್ವಾಭಿಮಾನ ವನ್ನೂ ಬಿಟ್ಟುಕೊಡಲಿಲ್ಲ. ಕೇವಲ 49 ವರ್ಷಗಳ ಸಾರ್ಥಕ ಬದುಕನ್ನು ಬದುಕಿದರು. ಗೋಪಾಲಗೌಡರ ಬದುಕೇ ಎಲ್ಲ ಕಾಲಕ್ಕೂ ಸಾಮಾಜಿಕ,ರಾಜಕೀಯ ಹೋರಾಟಕ್ಕೆ ಶುದ್ಧ ಆದರ್ಶ ಮಾದರಿ ಎಂದರು.
ಚರಿತ್ರೆ ವರ್ತಮಾನದ ಮೂಲಕ ಭವಿಷ್ಯತನ್ನು ರೂಪಿಸುತ್ತದೆ. ಇಂತಹ ಸಂದಿಗ್ಧ ಕಾಲದಲ್ಲಿ ಚಳುವಳಿಗಳು ಸೋತಿರುವಾಗ ರಾಜಕೀಯ ಕ್ಷೇತ್ರ ಹದಗೆಟ್ಟಿರುವಾಗ ಪ್ರಾಮಾಣಿಕತೆ ಉಸಿರುಗಟ್ಟಿರುವಾಗ ಭಾರತದ ಎಲ್ಲಾ ಕ್ಷೇತ್ರಗಳು ತಲ್ಲಣಗೊಂಡಿರುವಾಗ ಮರ್ಯಾದೆ ಹತ್ಯೆಗಳು ಎಗ್ಗಿಲ್ಲದೆ ನಡೆಯುತ್ತಿರುವಾಗ ಕೋಮುವಾದವು ಸಕ್ರಮವಾಗಿರುತ್ತಿರುವಾಗ ಸಾಮಾಜಿಕ ನ್ಯಾಯವೇ ಮರೆಯಾಗಿರುವಾಗ ಇಂತಹ ಸಂದಿಗ್ದತೆಯಲ್ಲಿ ಗೋಪಾಲಗೌಡರ ಆದರ್ಶಗಳು ನಮ್ಮ ಕಣ್ಣಮುಂದೆ ನಿಲ್ಲುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೈ.ಹೆಚ್.ನಾಗರಾಜ್ಗೋಪಾಲ್ಗೌಡರು ಅಪ್ಪಟ ರಾಜಕಾರಣಿಯಾಗಿದ್ದು, ಅತ್ಯಂತ ಪ್ರಾಮಾಣಿಕರಾಗಿದ್ದರು. ಬಡವರ ಆಶಾಕಿರಣವಾಗಿದ್ದರು. ಮೌಲ್ಯ ರಾಜಕಾರಣಕ್ಕೆ ಹೆಸರಾಗಿದ್ದು, ಸರಳತೆ ಸಜ್ಜನಿಕೆಯ ಸಮಾಜವಾದಿಯಾಗಿದ್ದರು. ಅವರು ತಮ್ಮ ಮೊದಲ ಚುನಾವಣೆಯಲ್ಲಿ ಕೇವಲ 6 ಸಾವಿರ ರೂ.ಗಳನ್ನು ಮಾತ್ರ ಖರ್ಚು ಮಾಡಿದ್ದರು. ಅದನ್ನು ಕೂಡ ಸಾಲ ಮಾಡಿಯೇ ತೀರಿಸಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಡಾ. ಸೈಯ್ಯದ್ಸನಾವುಲ್ಲಾ ವಹಿಸಿ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಹಾಗೂ ಕಾರ್ಯಕ್ರಮ ಸಂಚಾಲಕ ಕೆ.ಎನ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರುಗಳಾದ ಡಾ.ಹಾಲಮ್ಮ, ಡಾ.ಜಿ.ಕೆ.ಪ್ರೇಮಾ, ಡಾ.ಮೋಹನ್ ಚಂದ್ರಗುತ್ತಿ , ಮಹಾದೇವ ಸ್ವಾಮಿ, ಶಂಭುಲಿಂಗಮೂರ್ತಿ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post