ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಅಶ್ವತ್ಥನಾರಾಯಣ ಶೆಟ್ಟರ ಕುರಿತಾಗಿ ಬರೆಯಲೇ ಬೇಕೆಂದು ಅಂದುಕೊಂಡಾಗ ಮೊದಲು ನೆನಪಾಗಿದ್ದು, ಅವರ ಸರಳತೆ. ಮತ್ತು ಎಲ್ಲರೊಂದಿಗೂ ಅವರು ಇರುವ ರೀತಿ. ಅವರು ಎಷ್ಟೇ ಹಿರಿಯರಾದರೂ ಎಲ್ಲರಿಗೂ ಪ್ರೀತಿಯ ಅಶ್ವತ್ಥಣ್ಣನೇ ಆಗಿದ್ದಾರೆ.
ಉದ್ಯಮೇನ ಹಿ ಸಿಧ್ಯಂತಿ ಕಾರ್ಯಾಣಿ ನ ಮನೋರಥೈಃ |
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ || ಎಂಬ ಸಂಸ್ಕೃತ ಸುಭಾಷಿತವು ಉದ್ಯಮ ಮತ್ತು ಪರಿಶ್ರಮದಿಂದಲೇ ಕಾರ್ಯಗಳು ಸಿದ್ಧಿಸುತ್ತವೆ; ನಿದ್ರಿಸುತ್ತಿರುವ ಸಿಂಹದ ಬಾಯಿಗೆ ಜಿಂಕೆಗಳು ತಾವಾಗಿಯೇ ಬರುವುದಿಲ್ಲ ಎಂದು ಹೇಳುತ್ತದೆ.
Also Read>> ದುರ್ವಾಸನೆ ಬಯಲಿಗೆ ತಂದ ದುರಂತ | ವೃದ್ಧೆ–ಸಾಕು ನಾಯಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಈ ಶ್ಲೋಕದ ಅರ್ಥವನ್ನು ತಮ್ಮ ಜೀವನದ ಮೂಲಕ ಸಾರ್ಥಕಗೊಳಿಸಿದ ವ್ಯಕ್ತಿಗಳಲ್ಲಿ ಟಿ. ಆರ್. ಅಶ್ವತ್ಥನಾರಾಯಣ ಶೆಟ್ರವರು ಪ್ರಮುಖರು. ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಮಾಜದ ಬಗ್ಗೆ ಕಾಳಜಿಯನ್ನು ತಮ್ಮ ಬದುಕಿನ ಮೌಲ್ಯಗಳನ್ನಾಗಿ ಮಾಡಿಕೊಂಡಿರುವ ಅವರು ಕುಟುಂಬ ಹಾಗೂ ಸಮಾಜದ ವಲಯದಲ್ಲಿ ಅಪಾರ ಗೌರವವನ್ನು ಗಳಿಸಿದ್ದಾರೆ.
ಸರಳ ವ್ಯಕ್ತಿತ್ವದೊಂದಿಗೆ ಉನ್ನತ ಚಿಂತನೆಗಳನ್ನು ಹೊಂದಿರುವ ಶೆಟ್ರವರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಗಳಿಸುವುದರ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಅವರ ಗುಣ ಹಾಗೂ ಸಹಾಯಹಸ್ತ ಚಾಚುವ ಮನೋಭಾವ ಅನೇಕರಿಗೆ ಪ್ರೇರಣೆಯಾಗಿದೆ.
ಪರೋಪಕಾರಾಯ ಫಲಂತಿ ವೃಕ್ಷಾಃ
ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವಃ
ಪರೋಪಕಾರಾರ್ಥಮಿದಂ ಶರೀರಮ್ ll ಎಂಬ ಶ್ಲೋಕವಂತೂ ಅಶ್ವತ್ಥಣ್ಣನಿಗೆ ಸರಿಯಾಗಿ ಹೊಂದುತ್ತದೆ. ಮರಗಳು, ನದಿಗಳು, ಗೋವುಗಳು ಇತರರ ಹಿತಕ್ಕಾಗಿ ಇರುವಂತೆ ಮಾನವ ದೇಹವೂ ಪರೋಪಕಾರಕ್ಕಾಗಿಯೇ ಇದೆ ಎಂಬ ಶ್ಲೋಕದ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಶೆಟ್ರವರು ಅನೇಕ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳಿಗೆ ಪ್ರೋತ್ಸಾಹ ನೀಡಿ ಸಮಾಜದ ಪ್ರಗತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೋತ್ಸಾಹ ಹಾಗೂ ಸಮಾನ ಮನಸ್ಕರೊಂದಿಗೆ ಸೌಹಾರ್ದಯುತ ಬಾಂಧವ್ಯವನ್ನು ಬೆಳೆಸಿಕೊಂಡಿರುವುದು ಅವರ ವ್ಯಕ್ತಿತ್ವದ ವಿಶೇಷತೆ.
Also Read>> 1ನೇ ಏಕದಿನ ಪಂದ್ಯ | ಅಫ್ಗಾನಿಸ್ತಾನ ವಿರುದ್ಧ ಭಾರತಕ್ಕೆ ಮಹತ್ವದ ಪರೀಕ್ಷೆ
ಅಲ್ಲದೇ ಸಾಮಾಜಿಕ ಕಳಕಳಿಯ ಒಂದು ಭಾಗವಾಗಿ ಅವರ ಶ್ರೀನಿಧಿ ಟೆಕ್ಸ್ಟ್ ಟೈಲ್ಸ್ ನಲ್ಲಿ ಅದೊಂದು ಪ್ರಖ್ಯಾತ ಬಟ್ಟೆಯ ಮಳಿಗೆಯಾಗಿದ್ದರೂ ಸಹ ಸಮಾಜದಲ್ಲಿ ಸಾಧನೆಗೈದವರನ್ನು ಗುರುತಿಸಿ ಗೌರವಿಸುವ ಒಂದು ವಿಶಿಷ್ಟ ಕಾರ್ಯ ಮಾಡುವುದು ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ ಎಂಬ ದಾಸರ ಪದ ನೆನಪಿಸುವಂತಿದೆ. ಇದೆಲ್ಲದರ ಹಿಂದೆ ಆಧಾರ ಸ್ಥಂಭವಾಗಿ ಅಶ್ವತ್ಥಣ್ಣನೇ ಇದ್ದಾರೆ.
ಅಶ್ವತ್ಥಣ್ಣನವರು ಕುಟುಂಬದ ಹಿರಿಯರಾಗಿ ಮಾರ್ಗದರ್ಶನ ನೀಡುವ ಹಿರಿಯರು. ಅವರ ಅನುಭವ ಹಾಗೂ ಜೀವನ ಮೌಲ್ಯಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿವೆ. ಅವರ ಜೀವನ ಪಯಣವು ಕೇವಲ ವೈಯಕ್ತಿಕ ಸಾಧನೆಯ ಕಥೆಯಲ್ಲ; ಅದು ಮಾನವೀಯತೆ, ಸಂಸ್ಕಾರ ಮತ್ತು ಸಾಮಾಜಿಕ ಬದ್ಧತೆಯ ಪಾಠವಾಗಿದೆ.
ಅಶ್ವತ್ಥನಾರಾಯಣ ಶೆಟ್ರವರ ಬದುಕಿನ ಯಶಸ್ಸಿನ ಹಿಂದಿರುವುದು ಅವರ ಶ್ರಮ ಮಾತ್ರವಲ್ಲ; ಮಾನವ ಸಂಬಂಧಗಳಿಗೆ ಅವರು ನೀಡಿರುವ ಮಹತ್ವವೂ ಆಗಿದೆ. ಆತ್ಮೀಯತೆ, ವಿಶ್ವಾಸ ಮತ್ತು ಸಹೃದಯತೆಯಿಂದ ಅವರು ಕಟ್ಟಿಕೊಂಡಿರುವ ಸಂಬಂಧಗಳು ಅವರ ವ್ಯಕ್ತಿತ್ವದ ನಿಜವಾದ ಸಂಪತ್ತಾಗಿವೆ. ಅವರ 84ನೇ ವಯಸ್ಸಿನಲ್ಲಿಯೂ ಉತ್ಸಾಹ, ಆತ್ಮವಿಶ್ವಾಸ ಮತ್ತು ಸಮಾಜದ ಬಗ್ಗೆ ಕಾಳಜಿಯನ್ನು ಉಳಿಸಿಕೊಂಡಿರುವ ಟಿ. ಆರ್. ಅಶ್ವತ್ಥನಾರಾಯಣ ಶೆಟ್ರವರು ಯುವಜನತೆಗೆ ಆದರ್ಶಪ್ರಾಯರು. ಅವರ ಜೀವನ ಇನ್ನೂ ಅನೇಕ ವರ್ಷಗಳ ಕಾಲ ಆರೋಗ್ಯ, ಸಂತೋಷ ಹಾಗೂ ಸಾರ್ಥಕತೆಯಿಂದ ಕೂಡಿರಲೆಂದು ಹಾರೈಸೋಣ.
ಶತಂ ಜೀವ ಶರದೋ ವರ್ಧಮಾನಃ
ಶತಂ ಪಶ್ಯ ಶರದೋ ಜೀವಮಾನಃ ll
ಅಶ್ವತ್ಥನಾರಾಯಣ ಶೆಟ್ರವರಂತಹ ವ್ಯಕ್ತಿತ್ವಗಳು ಸಮಾಜದ ನಿಜವಾದ ಸಂಪತ್ತು; ಅವರ ಬದುಕು ಅನೇಕರಿಗೆ ಸ್ಫೂರ್ತಿಯ ಬೆಳಕಾಗಿದೆ. ವ್ಯಕ್ತಿಯ ಮಹತ್ವವು ಅವನು ಹೊಂದಿರುವ ಸಂಪತ್ತಿನಿಂದಲ್ಲ, ಅವನು ಸಂಪಾದಿಸಿರುವ ಗೌರವ ಮತ್ತು ಮಾನವೀಯ ಮೌಲ್ಯಗಳಿಂದ ಅಳೆಯಲ್ಪಡುತ್ತದೆ. ಈ ಮಾತಿಗೆ ಜೀವಂತ ಉದಾಹರಣೆಯಾಗಿರುವವರು ಟಿ.ಆರ್. ಅಶ್ವತ್ಥನಾರಾಯಣ ಶೆಟ್ರವರು. ತಮ್ಮ ಸರಳತೆ, ಸೌಜನ್ಯ ಮತ್ತು ಸಮಾಜಮುಖಿ ಚಿಂತನೆಗಳಿಂದ ಅವರು ಅಸಂಖ್ಯಾತ ಜನರ ಪ್ರೀತಿ ಹಾಗೂ ಗೌರವವನ್ನು ಗಳಿಸಿದ್ದಾರೆ. ಇಂತಹ ಮಹನೀಯರು ನಮ್ಮ ಶಿವಮೊಗ್ಗದಲ್ಲಿ ಇರುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯ.
ಇವರ ಈ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಆದರ್ಶ ಹಾಗೂ ಅನುಕರಣೀಯ. ಹಾಗಾಗಿಯೇ ಇಂದು ಶಿವಮೊಗ್ಗ ಸಿಟಿಜನ್ ಫೋರಂ ನಾಗರೀಕ ಅಭಿನಂದನೆಯನ್ನು ಸಂಜೆ ಕುವೆಂಪು ರಂಗಮಂದಿರದಲ್ಲಿ ಸಲ್ಲಿಸುತ್ತಿದೆ. ನಾವೆಲ್ಲರೂ ಭಾಗವಹಿಸಿ ಕಾರ್ಯಕ್ರಮ ಚಂದಗಾಣಿಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








