ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ವತಿಯಿಂದ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲ್ವೆ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯಲ್ಲಿ “ಸಮುದಾಯ ವೇದಿಕೆ” ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಹುಬ್ಬಳ್ಳಿ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿರುವ ಹಾಗೂ ಹೆಚ್ಚುವರಿ ಮುಖ್ಯ ರಾಜಭಾಷಾ ಅಧಿಕಾರಿಯಾದ ಪ್ರೇಮ್ ಚಂದ್ರ ಅವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು ಬಹುಭಾಷಾ ಜ್ಞಾನವು ವ್ಯಕ್ತಿಯ ಸಾಮಾಜಿಕ ಹಾಗೂ ವೃತ್ತಿಪರ ಜೀವನದಲ್ಲಿ ಯಶಸ್ಸು ಸಾಧಿಸಲು ಅತ್ಯಂತ ಮುಖ್ಯವೆಂದು ತಿಳಿಸಿದರು.
ಪ್ರಾದೇಶಿಕ ಭಾಷೆಗಳು ಹಾಗೂ ರಾಜಭಾಷೆ ಹಿಂದಿ ಎರಡರ ಮಹತ್ವವನ್ನು ವಿವರಿಸಿದ ಅವರು, ಹಿಂದಿ ಭಾಷೆ ದೇಶದ ಕ್ರೀಡೆ, ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಜ್ಞಾನ ವಿನಿಮಯದ ವಿವಿಧ ಕ್ಷೇತ್ರಗಳನ್ನು ಅರಿಯಲು ಸಹಕಾರಿ ಎಂದು ಹೇಳಿದರು.
Also read>> ಮಲಪ್ಪುರಂ | ಮಳೆಯಿಂದ ಜಾರಿ, ಮಗುಚಿ ಬಿದ್ದು ತುಂಡಾದ ಬಸ್ | ಓರ್ವ ಸಾವು
ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಕನ್ನಡ ಸಾಹಿತಿ ಹಾಗೂ ವಿಭಾಗೀಯ ಸಿಬ್ಬಂದಿ ಅಧಿಕಾರಿ (DPO) ಸಿ.ಎಂ. ಮುನಿಸ್ವಾಮಿ ಅವರು ತಮ್ಮ ಸಾಹಿತ್ಯ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಉತ್ತಮ ಸಾಹಿತ್ಯ ರಚನೆಗೆ ಹಲವಾರು ಭಾಷೆಗಳ ಜ್ಞಾನ ಅಗತ್ಯವೆಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಖ್ಯಾತ ಅಂತಾರಾಷ್ಟ್ರೀಯ ಕ್ರಿಕೆಟಿಗ ಅನಂತ ಭಾಗವತ್ ಹಾಗೂ ರಾಷ್ಟ್ರೀಯ ಮಟ್ಟದ ಅಥ್ಲೀಟ್ ಬಸವರಾಜ್ ಎಂ.ಕೆ. ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಕ್ರೀಡಾ ಕ್ಷೇತ್ರದ ತಮ್ಮ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ರೈಲ್ವೆ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ಪ್ರಾಂಶುಪಾಲರಾದ ಇ. ನಾಗಪ್ಪ ಅವರು ಗಣ್ಯರು ಹಾಗೂ ಕ್ರೀಡಾಪಟುಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ತಮ್ಮ ಮಾತಿನಲ್ಲಿ ಭಾಷೆ, ಕ್ರೀಡೆ ಮತ್ತು ಕರ್ನಾಟಕದ ಶ್ರೀಮಂತ ಸಂಸ್ಕೃತಿಯ ವಿವಿಧ ಆಯಾಮಗಳ ಬಗ್ಗೆ ಬೆಳಕು ಚೆಲ್ಲಿದರು.
ಕಾರ್ಯಕ್ರಮವನ್ನು ಮಹಬೂಬಸಾಬ್ ನಾಯ್ಕರ್ ಅವರು ನಿರ್ವಹಿಸಿದರು. ಶ್ರೀಮತಿ ಅಂಜುಂ ಹೊರೇಕೇರಿ ಅವರು ವಂದಿಸಿದರು.
ಈ ಸಂದರ್ಭದಲ್ಲಿ ರಾಜಭಾಷಾ ಶಾಖೆಯ ಮಹಾರುದ್ರಪ್ಪ ಬಳ್ಳಾರಿ (ದೈಹಿಕ ಶಿಕ್ಷಣ ಶಿಕ್ಷಕರು), ರಾಜಸಾಹೇಬ್ ನದಾಫ್ (ಹಿರಿಯ ಅನುವಾದಕರು), ಜಿ.ಆರ್. ನಾರಾಯಣಾದ್ರಿ (ಹಿರಿಯ ಅನುವಾದಕರು) ಹಾಗೂ ಮೊಹಮ್ಮದ್ ಸಲೀಂ (ಕಿರಿಯ ಅನುವಾದಕರು) ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಮುದಾಯ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಹನವನ್ನು ಉತ್ತೇಜಿಸುವ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಬಹುಮುಖ ಜ್ಞಾನವನ್ನು ನೀಡಿದಂತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








