ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಮೂರು ತಿಂಗಳ ಹೆಣ್ಣು ಮಗುವನ್ನು ತುರ್ತು ಚಿಕಿತ್ಸೆಗಾಗಿ ದಾವಣಗೆರೆಯಿಂದ ಮಣಿಪಾಲಿಗೆ ಜೀರೋ ಟ್ರಾಫಿಕ್ (Zero Traffic) ವ್ಯವಸ್ಥೆಯ ಮೂಲಕ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯೆಯೇ ಮಗು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ.
ಮೃತ ಮಗುವನ್ನು ಅನ್ವಿತಾ (3 ತಿಂಗಳು) ಎಂದು ಗುರುತಿಸಲಾಗಿದೆ. (Koppala) ಕೊಪ್ಪಳ ಜಿಲ್ಲೆಯ ಕುಷ್ಟಗಿ (Kustagi) ತಾಲೂಕಿನ ಬಂಡಿ ಗ್ರಾಮದ ನಿವಾಸಿಗಳಾದ ಹನುಮತೇಶ್ ಹಾಗೂ ಪವಿತ್ರ ದಂಪತಿಯ ಪುತ್ರಿಯಾಗಿದ್ದ ಅನ್ವಿತಾ ಕೆಲ ದಿನಗಳಿಂದ ಶ್ವಾಸಕೋಶ ಸೋಂಕಿನ ಸಮಸ್ಯೆಯಿಂದ ಬಳಲುತ್ತಿತ್ತು.
Also Read>> ಮೈಸೂರು | ಆ.2 ರಂದು ಟಿ.ಕೆ. ಬಡಾವಣೆ ರಾಯರ ಮಠದ ರಜತ ಮಹೋತ್ಸವ ಸಂಭ್ರಮ
Shivamogga to Davanagere
ಮಗುವಿನ ಆರೋಗ್ಯದಲ್ಲಿ ತೀವ್ರ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೋಷಕರು ದಾವಣಗೆರೆಯ (Davanagere) ಬಾಪೂಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ವೈದ್ಯಕೀಯ ಪರೀಕ್ಷೆಗಳ ಬಳಿಕ ಮಗುವಿನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿರುವುದು ಕಂಡುಬಂದ ಕಾರಣ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಿನ ಆಸ್ಪತ್ರೆಗೆ ತಕ್ಷಣ ಸ್ಥಳಾಂತರಿಸುವಂತೆ ವೈದ್ಯರು ಸಲಹೆ ನೀಡಿದರು.
ಜೀರೋ ಟ್ರಾಫಿಕ್ ವ್ಯವಸ್ಥೆ
ವೈದ್ಯರ ಸೂಚನೆಯಂತೆ ಮಗುವನ್ನು ಆಂಬುಲೆನ್ಸ್ ಮೂಲಕ ಮಣಿಪಾಲಿಗೆ ಸಾಗಿಸಲು ದಾವಣಗೆರೆ ಹಾಗೂ ಶಿವಮೊಗ್ಗ ಸಂಚಾರ ಪೊಲೀಸ್ ಇಲಾಖೆಗಳು ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದವು. ಯಾವುದೇ ವಿಳಂಬವಾಗದಂತೆ ಮಾರ್ಗದಲ್ಲಿನ ವಾಹನ ಸಂಚಾರವನ್ನು ನಿಯಂತ್ರಿಸಿ, ಆಂಬುಲೆನ್ಸ್ ವೇಗವಾಗಿ ಸಾಗಲು ಅಗತ್ಯ ಸಿದ್ಧತೆಗಳನ್ನು ಮಾಡಲಾಗಿತ್ತು.
ಮಾರ್ಗಮಧ್ಯೆ ಟೈರ್ ಪಂಚರ್
ಆದರೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಸಮೀಪ ಆಂಬುಲೆನ್ಸ್ನ ಟೈರ್ ಪಂಚರ್ ಆಗಿದ್ದು, ಅದನ್ನು ಬದಲಿಸಲು ಕೆಲಕಾಲ ಸಮಯ ಹಿಡಿಯಿತು. ಈ ಅವಧಿಯಲ್ಲಿ ಮಗುವಿನ ಆರೋಗ್ಯ ಮತ್ತಷ್ಟು ಹದಗೆಟ್ಟಿತು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಿಬ್ಬಂದಿ ಮತ್ತು ವೈದ್ಯರು, ಮಣಿಪಾಲಿಗೆ ಸಾಗಿಸುವ ಬದಲು ಮೊದಲು ಶಿವಮೊಗ್ಗದಲ್ಲಿರುವ ಸರ್ಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ನಿರ್ಧರಿಸಿದರು. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅನ್ವಿತಾ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.
ವ್ಯರ್ಥವಾದ ಜೀರೋ ಟ್ರಾಫಿಕ್ ಪ್ರಯತ್ನ
ಮಗುವಿನ ಜೀವ ಉಳಿಸಲು ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಿದ್ದರು. ವೈದ್ಯಕೀಯ ಸಿಬ್ಬಂದಿಯೂ ನಿರಂತರವಾಗಿ ಶ್ರಮಪಟ್ಟಿದ್ದರು. ಆದರೆ ವಿಧಿಯಾಟದ ಮುಂದೆ ಎಲ್ಲ ಪ್ರಯತ್ನಗಳು ವಿಫಲವಾಗಿದ್ದು, ಮಗು ಮಾರ್ಗಮಧ್ಯೆಯೇ ಮೃತಪಟ್ಟಿದೆ.
ಕುಟುಂಬದ ಆಕ್ರಂದನ
ಮೂರು ತಿಂಗಳ ಕಂದಮ್ಮನನ್ನು ಕಳೆದುಕೊಂಡ ಹನುಮತೇಶ್ ಹಾಗೂ ಪವಿತ್ರ ದಂಪತಿಯ ಆಕ್ರಂದನ ಮುಗಿಲುಮುಟ್ಟಿದ್ದು, ಈ ಘಟನೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ, ವೈದ್ಯರು ಹಾಗೂ ಸಾರ್ವಜನಿಕರ ಮನಸ್ಸನ್ನೂ ಮರುಗಿಸಿದೆ. ಜೀವ ಉಳಿಸಲು ನಡೆದ ಎಲ್ಲ ಪ್ರಯತ್ನಗಳ ನಡುವೆಯೂ ಮಗು ಬದುಕುಳಿಯದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










