ಭದ್ರಾವತಿ: ಭಾರತ ದೇಶ ಪೋಲಿಯೊ ಮುಕ್ತವಾಗಿದೆ, ನೆರೆ ದೇಶಗಳಲ್ಲಿ ಪೋಲಿಯೊ ಖಾಯಿಲೆ ಕಂಡು ಬರುತ್ತಿರುವು ಹಿನ್ನಲೆಯಲ್ಲಿ ಖಾಯಿಲೆ ಹರಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಈ ಹಿಂದೆ ಎಷ್ಟೇ ಬಾರಿ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಿದ್ದರೂ ತಪ್ಪದೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ನಗರ ಸಭಾಧ್ಯಕ್ಷೆ ಹಾಲಮ್ಮ ತಿಳಿಸಿದರು.
ಅವರು ಭಾನುವಾರ ಸಾರ್ವಜನಿಕ ಆಸ್ಪತ್ರೆ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಲಸಿಕೆ ಹಾಕಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಎದ್ದು ಕಾಣುತ್ತಿದೆ, ಆದ್ದರಿಂದ ಬಾಲ್ಯದಲ್ಲೆ ನಾವು ಮಕ್ಕಳಿಗೆ ಸಕಾಲದಲ್ಲಿ ಅಗತ್ಯತೆ ಲಸಿಕೆಗಳನ್ನು ಹಾಕಿಸುವುದರ ಮೂಲಕ ಉತ್ತಮ ಆಹಾರ ಹಾಗೂ ಜೀವನಶೈಲಿ ರೂಪಿಸಬೇಕು. ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಲಸಿಕೆಯನ್ನು ಹಾಕುವ ವ್ಯವಸ್ಥೆಮಾಡಲಾಗಿದೆ. ಕಲ್ಯಾಣ ಮಂದಿರ ಹಾಗೂ ಎಲ್ಲಾ ಆಲೆಮನೆಗಳಲ್ಲಿ ಇರುವ ಮಕ್ಕಳಿಗೆ ಪಲ್ಸ್ ಪೋಲಿಯೋ ಬೂತ್ಗೆ ಕರೆತರಲು ಮಾಹಿತಿ ತಿಳಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಇದರ ಉಪಯೊಗವನ್ನು ಪಡೆದುಕೊಳ್ಳುವ ಜೊತೆಗೆ ಯಾವ ಒಂದು ಮಗುವು ಸಹಿತ ಪೋಲಿಯೊ ಲಸಿಕೆಯಿಂದ ವಂಚಿತವಾಗಬಾರದು ಎಂದು ಕರೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್. ಗಾಯತ್ರಿ ಮಾತನಾಡಿ ತಾಲ್ಲೂಕಿನ ಎಲ್ಲಾ 5 ವರ್ಷದೊಳಗಿನ 28653 ಮಕ್ಕಳಿಗೂ ಪಲ್ಸ್ ಪೋಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ. ತಾಲ್ಲೂಕಿನಲ್ಲಿ ಒಟ್ಟು 167 ಬೂತ್ಗಳನ್ನು ತೆರೆಯಲಾಗಿದ್ದು 668 ವ್ಯಾಕ್ಸಿನೆಟರ್ಗಳು ಕಾರ್ಯನಿರ್ವಹಿಸುವರು ಹಾಗೂ 5 ಟ್ರಾನ್ಸಿಸ್ಟ್ ತಂಡಗಳನ್ನು ರಚಿಸಲಾಗಿದ್ದು 37 ಜನ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಆರೋಗ್ಯ ಇಲಾಖೆಯ ಕಾರ್ಯಕರ್ತರು, ಆಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಡಾ. ಅಂಬೇಡ್ಕರ್ ಹಾಗೂ ನಿರ್ಮಲ ನರ್ಸಿಂಗ್ ಶಾಲೆಯ ವಿದ್ಯಾರ್ಥಿಗಳ, ಇಲಾಖಾ ಸಿಬ್ಬಂದಿಯವರ ಸೇವೆ ಶ್ಲಾಘನೀಯವಾಗಿದೆ ಎಂದರು.
ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸುಂದರ್ ಬಾಬು, ನಾಗೇಶ್, ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ನೀಲೇಶ್ ರಾಜ್, ಗ್ರೇಡ್-2 ತಹಸೀಲ್ದಾರ್ ಮಂಜಾನಾಯ್ಕ, ಪೌರಾಯುಕ್ತ ಮನೋಹರ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿ ಕೆ.ಜಿ. ತಮ್ಮಣ್ಣ ಗೌಡ, ಜಿಲ್ಲಾ ನೋಡಲ್ ಅಧಿಕಾರಿ ಡಾ.ಹನುಮಂತಪ್ಪ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ಹಿರಿಯ ಪತ್ರಕರ್ತ ರವಿಂದ್ರನಾಥ (ಬ್ರದರ್), ರೋಟರಿಯ ವಲಯದ ಅಮಿತ್ ಕುಮಾರ್ ಜೈನ್, ಮಹಿಳಾ ಆರೋಗ್ಯ ಸಹಾಯಕಿಯರಾದ ಮಧುಮತಿ, ರೇವತಿ, ವಸಂತ, ಆಶಾ ಮೆಂಟರ್, ನೇತ್ರ, ಗ್ರೇಶಿಯ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
















