ಶಿವಮೊಗ್ಗ: ಕರ್ನಾಟಕ ಸಂಘದ ವತಿಯಿಂದ ಆಯೋಜಿಸಲಾಗುತ್ತಿರುವ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ, ಎಪ್ರಿಲ್ 15ರ ಸೋಮವಾರ ಸಂಜೆ 5.30ಕ್ಕೆ ಬಹುಭಾಷಾ ಚಲನಚಿತ್ರ ಕಲಾವಿದ ಹಾಗೂ ಹಿರಿಯ ರಂಗಕರ್ಮಿ ಸುಂದರ್ ರಾಜ್ ಪಾಲ್ಗೊಂಡು, ನಾನು ಮತ್ತು ಕಲೆ ಕುರಿತು ಮಾತನಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಉಪಾಧ್ಯಕ್ಷರಾದ ಡಾ. ಕೆ.ಎನ್. ಗುರುದತ್ತ ವಹಿಸಲಿದ್ದಾರೆ.
ಕನ್ನಡದ ಮೇರು ಪ್ರತಿಭೆಗಳಲ್ಲಿ ಒಂದಾಗಿರುವ ಸುಂದರ ರಾಜ್ರವರು, ರಂಗಭೂಮಿ ಹಾಗೂ ಚಲನಚಿತ್ರಗಳಲ್ಲಿ ಕಲಾವಿದರಾಗಿ ತಮ್ಮದೇ ಆದ ಛಾಪು ಮೂಡಿಸಿದವರು. ರಂಗಭೂಮಿಯ ಪ್ರಸಿದ್ಧ ನಿರ್ದೇಶಕ ಬಿ.ವಿ. ಕಾರಂತರ ಗರಡಿಯಲ್ಲಿ ಪಳಗಿದ ಇವರು ಹಲವಾರು ನಾಟಕಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ತಬ್ಬಲಿಯು ನೀನಾದೆ ಮಗನೆ, ಅನ್ವೇಷಣೆ, ಒಂದಾನೊಂದು ಕಾಲದಲ್ಲಿ, ಚಂದನದ ಗೊಂಬೆ, ಕುರಿಗಳು ಸಾರ್ ಕುರಿಗಳು, ಮತದಾನ, ಆಕಸ್ಮಿಕ, ಇತ್ತೀಚೆಗೆ ತೆರೆಗೆ ಬಂದ ಲಿಫ್ಟ್ ಮ್ಯಾನ್ ಸೇರಿದಂತೆ ಹಲವು ಚಿತ್ರಗಳಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿದ್ದಾರೆ. ಸರಿ ಸುಮಾರು 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿರುವ ಇವರು 15 ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.
ಇವರ ಸುದೀರ್ಘ ಚಲನಚಿತ್ರ ಹಾಗೂ ರಂಗಭೂಮಿ ಸೇವೆಗಾಗಿ ಕೊಲಂಬೋ ಮುಕ್ತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ಗೆ ಪುರಸ್ಕಾರ ಸಂದಿದೆ. ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಶ್ರೇಷ್ಟ ನಟ ಪ್ರಶಸ್ತಿ ಸೇರಿದಂತೆ ಹತ್ತುಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಸುಂದರ ರಾಜ್ ಭಾಜನರಾಗಿದ್ದಾರೆ. ಈ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಡಾ. ಎಚ್. ಎಸ್. ನಾಗಭೂಷಣ ಕೋರಿದ್ದಾರೆ.
Discussion about this post