ಭಾರತೀಯ ಸಮಾಜ, ಸಂಪ್ರದಾಯ ಹಾಗೂ ಆಚರಣೆಗಳು ಪ್ರಪಂಚದಲ್ಲೇ ಅತ್ಯಂತ ವೈಜ್ಞಾನಿಕ ಹಿನ್ನೆಲೆಯಲ್ಲಿವುಗಳಾಗಿದ್ದು, ಇವು ಕಾಲದಿಂದ ಕಾಲಕ್ಕೆ ಬದಲಾಗುತ್ತಾ, ಇಂದು ಆಧುನಿಕ ಯುಗದ ಭರಾಟೆಗೆ ಸಿಲುಕಿ ನಲುಗುತ್ತಿದೆ. ನಮ್ಮ ನೆಲದ ಪ್ರತಿ ಆಚರಣೆಗೂ ಒಂದೊಂದು ಅರ್ಥವಿದ್ದು, ಇವುಗಳನ್ನು ಸರಿಯಾಗಿ ತಿಳಿದುಕೊಳ್ಳದೇ, ಗೊಡ್ಡು ಸಂಪ್ರದಾಯಗಳೆಂಬ ಹಣೆಪಟ್ಟಿ ಹಚ್ಚಿ, ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗುತ್ತಿರುವುದು ದುರಂತ. ಇವುಗಳ ಸಾಲಿನಲ್ಲಿ ನಮ್ಮ ಹಬ್ಬಹರಿದಿನಗಳೂ ಸಹ ಸೇರಿ ಇಂದು ಅವುಗಳ ಮೂಲ ಆಯಾಮವೇ ಬದಲಾಗಿರುವುದು ದುರಂತ.
ಕಾಲದಿಂದ ಕಾಲಕ್ಕೆ ಜನರ ಜೀವನ ಶೈಲಿ ಸಂಪ್ರದಾಯ ಸಂಸ್ಕಾರಗಳ ನಡೆ-ನುಡಿ ಬದಲಾಗುತ್ತಲೇ ಇರುತ್ತದೆ. ಕಳೆದ ಎರಡು ದಶಕಗಳಲ್ಲಿ ಆಚರಿಸುತ್ತಿದ್ದ ಹಬ್ಬ-ಹರಿದಿನಗಳ ಸಂಭ್ರಮಾಚರಣೆಯ ಆಯಾಮಗಳ ದಿಕ್ಕು ಬೇರೆಡೆ ಸಾಗುತ್ತಿದೆ. ಹಿಂದೆಲ್ಲಾ ಹಬ್ಬಗಳು ಬರುವುದನ್ನು ತಿಂಗಳು ಮೊದಲೇ ನೆನೆದು ಖುಷಿ ಪಡುವ ಮಕ್ಕಳು, ಹಬ್ಬಕ್ಕೆ ಬೇಕಾದ ತಯಾರಿಗೆ ಗೃಹಿಣಿಯರು, ಮನೆ ಮುಂದೆ-ಹಿಂದೆ ಸ್ವಚ್ಛ ಮಾಡಿ ಗುಂಡಿ-ಗುದಕಲುಗಳಿಗೆ ಮಣ್ಣು ತುಂಬಿ ಸಮತಟ್ಟಾಗಿಸಿ ಸಗಣಿಯಲ್ಲಿ ಬಳಿದು ಹಬ್ಬದ ದಿನ ರಂಗೋಲಿ ಹಾಕಲು ಬೇಕಾದ ವ್ಯವಸ್ಥೆ ಮಾಡಿ ಕೊಡುತ್ತಿದ್ದರು.
ಮಕ್ಕಳಿಗೆ ಹಬ್ಬಗಳಲ್ಲಿ ಅತಿ ಪ್ರಿಯವಾದ ಹಬ್ಬ ದೀಪಾವಳಿ. ದಸರಾ ರಜೆ ಮುಗಿದು ಆಗಿನ್ನೂ ಶಾಲೆ ಆರಂಭವಾಗುವ ಸಮಯ. ನಿಯಮಿತವಾಗಿ ಶಾಲೆಗೆ ಹೋಗುವುದಕ್ಕೆ ಪಾಠ-ಪ್ರವಚಗಳನ್ನು ಗಮನಿಸಲು ಶುರುವಾಗುವಷ್ಟರಲ್ಲಿ ಬರುವ ಹಬ್ಬ.
ರೈತಾಪಿ ಕುಟುಂಬಗಳಲ್ಲಿ ಬಟ್ಟೆ-ಬರೆ ಸೌಲಭ್ಯಗಳೆಲ್ಲ ದೀಪಾವಳಿ ಬಿಟ್ಟರೇ ಯುಗಾದಿ. ಮನೆಯ ಯಾಜಮಾನ ಮನೆಯಲ್ಲಿದ್ದ ಎಲ್ಲರಿಗೂ ಬಟ್ಟೆ ತರುವ ರೂಢಿ ಇಟ್ಟುಕೊಂಡಿದ್ದರು. ತುಂಬ ಮಕ್ಕಳಿದ್ದರೇ ಒಂದು ಟಾನ್ ಬಟ್ಟೆಯಲ್ಲೇ ಎಲ್ಲರಿಗೂ ಹೋಲಿಸುತ್ತಿದ್ದರು. ಇದರಿಂದ ಮಕ್ಕಳು ನಂಗೆ ಅ ಬಣ್ಣದ ಡ್ರೆಸ್ ಬೇಕು ಈ ಬಣ್ಣದ ಡ್ರೆಸ್ ಬೇಕು ಎನ್ನುವ ತಕರಾರುಗಳಿಗೆ ಅವಕಾಶ ಇರುತ್ತಿರಲ್ಲಿಲ್ಲ. ಜೊತೆಗೆ ಬಲ್ಕ್ ಆಗಿ ಕೊಳ್ಳುವುದರಿಂದ ಬೆಲೆಯು ಸಹ ಕಡಿಮೆಯಾಗಿರುತ್ತಿತ್ತು. ಅ ಕಾಲದಲ್ಲಿ ದಂದು ವೆಚ್ಚಗಳಿಗೆ ಬಹುತೇಕ ಹಿರಿಯರು ಮುಂದಾಗುತ್ತಿರಲಿಲ್ಲ. ಮಕ್ಕಳಿಗೆ ದುಡ್ಡು ಕಾಸಿನ ಪರಿವೇ ಇಲ್ಲದೇ ಹಠ ಮಾಡಿ ಹಬ್ಬ ಇನ್ನು ವಾರವಿದೆ ಎನ್ನುವಾಗಲೇ ಪಟಾಕಿ, ಪಿಸ್ತೂಲ್ ತರಿಸಿಕೊಂಡು ಉಳಿದ ಸಹಪಾಠಿಗಳಿಗೆ ಪ್ರದರ್ಶಿಸುವುದರಲ್ಲಿ ಯುದ್ಧ ಗೆದ್ದವರ ಭಾವ ಆವರಿಸಿರುತ್ತಿತ್ತು. ಹಣಕಾಸಿನಲ್ಲಿ ಸ್ಥಿತಿವಂತರಲ್ಲದ ಮಕ್ಕಳು ಪಟಾಕಿ ತಂದವರೊಟ್ಟಿಗೆ ಸೇರಿ ಅಥವಾ ಅವರುಗಳ ಮನೆ ಮುಂದೆ ನಿಂತು ನೋಡಿ ಖುಷಿ ಪಡುತ್ತಿದ್ದರು. ದೀಪಾವಳಿ ಅಮಾವಾಸ್ಯೆಯ ದಿನ ಬಹುತೇಕ ಕಿರಾಣಿ ಅಂಗಡಿಯವರು, ಬೇರೆ ಬೇರೆ ಚಿಲ್ಲರೆ ವ್ಯಾಪಾರಸ್ಥರು ಲಕ್ಷ್ಮೀ ಪೂಜೆ ಮಾಡುತ್ತಾರೆ. ಅಂಗಡಿ-ಹೋಟೆಲ್ಗಳ ಪೂಜೆ ಸಮಯದಲ್ಲಿ ಪಟಾಕಿ ಹಚ್ಚುವಾಗ ನಿಂತು ನೋಡುವ ಸಂಭ್ರಮಕ್ಕೆ ಪಾರವೇ ಇರುತ್ತಿರಲಿಲ್ಲ. ಪೂಜೆಯಾದ ಮೇಲೆ ವಿತರಿಸುತ್ತಿದ್ದ ಪ್ರಸಾದ ಹೆಸರಿನ ಸಿಹಿ ಖಾದ್ಯಗಳ ರುಚಿ ಇವತ್ತು ಮಾರೆಯಾಗಿದೆ.
ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿ ಬೆಳಗ್ಗೆ ಎದ್ದ ಕೂಡಲೇ ಸೋದರ ಮಾವ ಅತ್ತೆಯಂದಿರು ಅಳಿಯ ಸೊಸೆಯಂದರಿಗೆ ಚುಟಿಗೆ ಹಾಕುತಿದ್ದರು. ಚುಟಿಕೆ ಅಂದರೆ ಊದಬತ್ತಿ ಅಥವಾ ಅರಿಶಿಣದ ಕೊಂಬನ್ನು ಕಾಯಿಸಿ ಮಕ್ಕಳಿಗೆ ಸುಡುತ್ತಿದ್ದರು. ಮನೆಯಲ್ಲಿನ ಕುಂಟೆ, ಕೊರಡು, ನೊಗ, ನೇಗಿಲು ಇವೇ ಇತ್ಯಾದಿ ಕೃಷಿ ಸಂಬಂಧಿ ಉಪಕರಣಗಳನ್ನು ತೊಳೆದು ಪೂಜೆ ಮಾಡಲು ಸಿದ್ಧ ಮಾಡುವ ಕ್ರಿಯೆ ಎಂದಿಗೂ ಮರೆಯಲಾಗದು. ದನ-ಕರು, ಎತ್ತುಗಳಿಗೆ ಸ್ನಾನ ಮಾಡಿಸಿ ಕೊಡುಗಳಿಗೆ ಬಣ್ಣ ಹಚ್ಚಿ ಹಬ್ಬ ಸಿದ್ಧ ಮಾಡುತ್ತಿದ್ದರು. ಅಷ್ಟು ಶ್ರದ್ಧೆ ಭಕ್ತಿಗಳು ರೈತಾಪಿ ಜನಗಳಲ್ಲಿ ಮನೆ ಮಾಡಿತ್ತು.
ಹಬ್ಬದ ಅಡುಗೆ ಆಗುವುದು ತಡವಾಗುತ್ತಿದೆ ಅಮ್ಮ, ಪಕ್ಕದ ಬೀದಿ ಸುವರ್ಣಕ್ಕನ ಮಗ ಎಡೆ ತಗೊಂಡು ದೇವಸ್ಥಾನಕ್ಕೆ ಹೋಗ್ತಾ ಇದ್ದಾನೆ. ಬೇಗ ಬೇಗ ಮಾಡಮ್ಮ ಎಂದು ಅವಸರಿಸುವುದರಲ್ಲಿ ನಮ್ಮ ಮನೆಲೇ ಫಸ್ಟ್ ದೇವರಿಗೆ ಎಡೆ ಕೊಡಬೇಕು ಎನ್ನುವುದಿರುತ್ತಿತ್ತು. ಎಡೆಯನ್ನು ದೇವರಿಗೆ ಸಮರ್ಪಿಸುವಂತೆಯೇ ದನ-ಕರುಗಳಿಗೂ ಮಾಡಲಾಗುವುದು. ಚಿಕ್ಕ ವಯಸ್ಸಿನಲ್ಲಿ ಹಸಿವು ತಡೆಲಾದೇ ಕರುವಿಗೆ ಎಡೆ ಮಾಡಿಕೊಂಡು ಬರ್ತೀನಿ ಎಂದು ಎಡೆಯನ್ನು ತೋರಿಸಿ ಮೇಲೆ ಕರುವಿಗೆ ತಿನ್ನಲು ಕೊಡದೇ ಮಕ್ಕಳೇ ತಿನ್ನುವುದು ಅಮ್ಮನಿಗೆ ಗೊತ್ತಿರಲ್ಲಿಲ್ಲ ಅಂತ ಅಲ್ಲ. ಮಕ್ಕಳು ದೇವರ ಸಮಾನವೆಂದು ಸಮ್ಮನಾಗುತ್ತಿದ್ದರು.
ಊಟವಾದ ಮೇಲೆ ಹಬ್ಬಕ್ಕಾಗಿ ವರ್ಷದಿಂದಲೇ ತಯಾರಿ ಮಾಡಿದ ಹೋರಿಗಳಿಗೆ ಶೃಂಗರಿಸಿ ಕೊರಳಿಗೆ ಗೆಜ್ಜೆ, ಕೊಬ್ಬರಿ ಸಾರ, ಕೊಡಿಗೆ ಉಸಿರು ಬರುಡೆ, ದೇಹಕ್ಕೆ ಬಣ್ಣದ ಬಟ್ಟೆಗಳ ಉಡಿಸಿ ನಮ್ಮ ಹೋರಿ ಹಿಡಿದವರಿಗೆ ಬಹುಮಾನ ನೀಡುತ್ತೇವೆಂದು ಘೋಷಿಸುವಾಗ ಜೀವನೋಪಾಯಕ್ಕಾಗಿ ಊರು ಬಿಟ್ಟು ಹೋದವರನ್ನೂ ಒಳಗೊಂಡಂತೆ ಎಲ್ಲರೂ ಜಮಾವಣೆಗೊಳ್ಳುವರು. ಹೀಗೆ ವಾರ, ತಿಂಗಳುಗಟ್ಟಲೆ ಹಬ್ಬವನ್ನು ಆಚರಿಸುವ ಪರಿಯೇ ಅದ್ಬುತವಾಗಿತ್ತು. ರಾತ್ರಿಯಾದರೆ ದೀಪಾವಳಿಯ ಐದು ದಿನವೂ ಮನೆಯ ಮುಂದೆ ದೀಪ ಹಚ್ಚಲಾಗುತ್ತಿತ್ತು. ಯುವಕರು ಪಟಾಕಿಯ ಬರುವ ಮೊದಲು ಪಂಜಿನಾಟವಾಡುತ್ತಿದ್ದರು. ಪಟಾಕಿಯ ಅಬ್ಬರದಲ್ಲಿ ಪಂಜು ಮರೆಯಾಗುತ್ತಾ ಸಾಗಿತು.
ಪ್ರಸ್ತುತ ದೀಪಾವಳಿ ಹಬ್ಬಗಳಿಗೆ ಊರುಗಳಿಗೆ ಹೋಗಿ ಹಬ್ಬ ಮಾಡುವ ಪರಿಪಾಠ ಕ್ರಮೇಣ ಕಡಿಮೆಯಾಗಿದೆ. ವಿಭಕ್ತ ಮನಃಸ್ಥಿತಿಗೆ ಆರ್ಥಿಕ ಶಕ್ತಿ ದೊರೆತು ಹಬ್ಬಕ್ಕೆ ಬೇಕಾದ ವಸ್ತುಗಳು ಕಾಸು ಕೊಟ್ಟರೆ ಸಿಗುವಾಗ ಜೋಡಿಸುವ ಸಂಭ್ರಮ ಉಳಿದಿಲ್ಲ. ಮಕ್ಕಳು-ಮರಿಗಳಿಗೆ ಬೇಕು ಅನಿಸಿದಾಗ ಬಟ್ಟೆ ಬರೆ ಕೊಡಿಸಲಾಗುತ್ತದೆ. ಅಜ್ಜ-ಅಜ್ಜಿ ಜೊತೆಗಿಲ್ಲದ ವಾಸದಿಂದ ಅವರುಗಳ ಪ್ರೀತಿ-ಪ್ರೇಮಗಳ ಸುಳಿವು ಅವುಗಳಿಗೆ ಇರುವುದಿಲ್ಲ. ಅಜ್ಜಿ ಮಾಡಿಸುವ ಎಣ್ಣೆ ಸ್ನಾನದ ಸೊಬಗು 25-30 ಸಾವಿರ ಕೊಟ್ಟು ಸ್ಟಾರ್ ಸ್ಪಾಗಳಲ್ಲಿ ಮಾಡಿಸುವ ಆಯಿಲ್ ಮಸಾಜ್ಗಳಲ್ಲಿ ಸಿಗಲು ಅಸಾಧ್ಯ.
ಹಬ್ಬ ನಾಳೆ ಎಂದರು, ಹಬ್ಬದ ದಿನವೂ ಏನು ಅನಿಸುವುದಿಲ್ಲ ಈ ಯಾಂತ್ರಿಕ ಬದುಕಿನಲ್ಲಿ ಸಿಲುಕಿದ ಮೇಲೆ. ಎಲ್ಲ ದಿನಗಳಾಗೆ ಬರುತ್ತೆ ಹೋಗುತ್ತೆ. ರಜೆ ದಿನಗಳಲ್ಲಿ ಪಡೆಯುವ ರೆಸ್ಟ್ನ್ನು ಹಬ್ಬದ ದಿನ ಪಡೆಯುತ್ತಿದ್ದೇವೆ ಅಷ್ಟೆ ಎನ್ನುವ ಮನಃಸ್ಥಿತಿ ನಿಧಾನವಾಗಿ ಆವರಿಸುತ್ತಿದೆ. ಆರ್ಥಿಕ ಸಬಲತೆ ಅವಶ್ಯವಾಗಿ ಬೇಕು. ಆದರೆ ಹಣವೇ ಮಾನಸಿಕವಾಗಿ ಒಬ್ಬರನ್ನು ಒಬ್ಬರು ಅವಲಂಭಿಸಿ ನೆಮ್ಮದಿ ಬದುಕನ್ನು ಕಿತ್ತುಕೊಳ್ಳುವಂತ್ತಾಗಬಾರದು.
ಹಬ್ಬ-ಹರಿದಿನಗಳು ಭಾರತೀಯ ಸಂಸ್ಕೃತಿಯ ಪ್ರತೀಕ. ನಮ್ಮ ಹಿರಿಯರು ರೂಢಿಸಿಕೊಂಡು ಬಂದಿರುವ ಹಲವು ಆಚರಣೆಗಳಲ್ಲಿ ಸಾಮಾಜಿಕ ಬದುಕಿನ ಸಹಬಾಳ್ವೆಯ ಸಾರವನ್ನು ಹೊಂದಿದೆ. ಆಧುನಿಕ ಬೃಹತ್ ನಗರಗಳ ನಿರ್ಮಾಣಗಳ ಫಲವಾಗಿ ನಗರ ಪ್ರದೇಶದಲ್ಲಿ ವಾಸ ಮಾಡುವವರೇ ಅಧಿಕ. ಆದರೆ ಒಂದೇ ಪ್ರದೇಶದ ಜನಜಂಗುಳಿಯಲ್ಲಿ ವಾಸಿಸುವ ಮನುಷ್ಯನಿಗೆ ಎಲ್ಲವೂ ಅಪರಿಚಿತವೇ. ಟ್ರಾಫಿಕ್ ಸಿಗ್ನಲ್ನಲ್ಲಿ ನೂರಾರು ವಾಹನಗಳನ್ನು ನಿಲ್ಲಿಸಿಕೊಂಡಾಗ ಅನಿಸುತ್ತೆ ಕಾಡಿನಲ್ಲಿ ಬದುಕುತ್ತಿಲ್ಲ. ಇಷ್ಟೆಲ್ಲ ಜನರು ಇದ್ದಾರೆ ಅಕ್ಕ-ಪಕ್ಕ ಇರುವ ಈ ಜನಗಳು ಯಾರು ಯಾರಿಗೂ ಪರಿಚಯವಿಲ್ಲ ಎಂಬುದು ಸಾಮಾಜಿಕ ವ್ಯವಸ್ಥೆಯ ದುರಂತ ಮಾತ್ರವಲ್ಲ ಸಮಷ್ಠಿ ಪ್ರಜ್ಞೆಗೇ ಧಕ್ಕೆ ಎನ್ನುವುದರಲ್ಲಿ ಸಂಶಯವಿಲ್ಲ.
ಇವುಗಳನ್ನು ಮರೆಯದಿರಿ
- ಹಬ್ಬಗಳೆಂದರೆ ರಜೆಯ ಮೋಜು ಮಾಡುವ ದಿನಗಳಲ್ಲ
- ಹಿಂದೂ ಹಬ್ಬಗಳು ಭಾರತೀಯ ಸಂಸ್ಕೃತಿಯ ಪ್ರತೀಕ
- ಕುಟುಂಬಸ್ಥರನ್ನೆಲ್ಲಾ ಒಂದೆಡೆ ಸೇರಿಸುವ ಸಂಭ್ರಮವೇ ಹಬ್ಬ
- ಹಬ್ಬದ ನೆಪದಲ್ಲಿ ಮನೆಯವರೊಂದಿಗೆ ಕಾಲ ಕಳೆಯಿರಿ
- ಸಂಪ್ರದಾಯ, ಆಚರಣೆಗಳ ಮೇಲೆ ನಿಮ್ಮ ಹಣ ಸವಾರಿ ಮಾಡದಿರಲಿ
ಈ ದೀಪಾವಳಿಗೆ ಹೀಗೆ ಮಾಡಿ
- ಪರಿಸರಕ್ಕೆ ಹಾನಿಯಾಗುವ ಪಟಾಕಿಗಳಿಂದ ಸಾಧ್ಯವಾದಷ್ಟು ದೂರವಿರಿ
- ದೀಪಗಳ ಹಬ್ಬ ದೀಪಾವಳಿಯನ್ನು ಹೆಚ್ಚು ದೀಪಗಳಿಂದಲೇ ಸಂಭ್ರಮಿಸಿ
- ಪಟಾಕಿ ಸಿಡಿಸುವ ಸಂದರ್ಭದಲ್ಲಿ ಮಕ್ಕಳನ್ನು ದೂರವಿರಿಸಿ
- ಕಾಟನ್ ಬಟ್ಟೆಯನ್ನು ಧರಿಸಿಯೇ ಸಾಧ್ಯವಾದಷ್ಟು ಪಟಾಕಿ ಸಿಡಿಸಿ
- ಮಕ್ಕಳು ಪಟಾಕಿ ಹಚ್ಚುವ ವೇಳೆ ಕಡ್ಡಾಯವಾಗಿ ದೊಡ್ಡವರು ಜೊತೆಯಲ್ಲಿರಿ
- ಅರ್ಧ ಉರಿದು, ಆರಿ ಹೋದ ಪಟಾಕಿಯನ್ನು ಸಿಡಿಸುವುದು ಬೇಡ
- ಕೈಯಲ್ಲಿ ಪಟಾಕಿ ಸಿಡಿಸುವ ಹುಚ್ಚು ಸಾಹಸಕ್ಕೆ ಕೈ ಹಾಕದಿರಿ
- ಬೆಳಕಿನ ಹಬ್ಬ ನಿಮ್ಮ ಹಾಗೂ ಬೇರೆಯವರ ಬೆಳಕನ್ನು ಆರಿಸದಂತೆ ಎಚ್ಚರ ವಹಿಸಿ
Get In Touch With Us info@kalpa.news Whatsapp: 9481252093
Discussion about this post