ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಗುಟ್ಕಾ ನಿಷೇಧದ ಸುದ್ಧಿ ಹರಿದಾಡುತ್ತಿರುವ ವೇಳೆಯಲ್ಲಿ ಆತಂಕಗೊಂಡಿರುವ ಅಡಿಕೆ ಬೆಳೆಗಾರರ ಹಿತ ಕಾಯುವಂತೆ ಶಾಸಕ ಹಾಲಪ್ಪ ಹಾಗೂ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರಾದ ಆರಗ ಜ್ಞಾನೇಂದ್ರ ಅವರುಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿರುವ ಅವರು, ಗುಟ್ಕಾ, ನಿಷೇದದ ಸುದ್ದಿ ಹರಿದಾಡುತ್ತಿದ್ದು, ಅಡಿಕೆ ಬೆಳಗಾರರು ಆತಂಕಗೊಂಡಿದ್ದಾರೆ ಎಂದರು.

ಮಲೆನಾಡಿನ ಪ್ರತಿಷ್ಠಿತ ಬೆಳೆಗಳಲ್ಲೊಂದಾದ ಅಡಿಕೆಯನ್ನು ಹೆಚ್ಚಾಗಿ ಗುಟ್ಕಾ ಉತ್ಪನ್ನಕ್ಕೆ ಬಳಸುತ್ತಿದ್ದು, ಗುಟ್ಕಾ ನಿಷೇಧದಿಂದ ಅಡಿಕೆ ಬೆಳಗಾರರು ಸಂಕಷ್ಟ ಎದುರಿಸುವಂತಾಗುತ್ತದೆ. ಆದ್ದರಿಂದ ಅಡಿಕೆ ಬೆಳೆಗಾರರ ಹಿತ ಕಾಯುವಂತೆ ಮತ್ತು ಕಸ್ತೂರಿ ರಂಗನ್ ವರದಿಯ ಬಗ್ಗೆ ಚರ್ಚಿಸಿ ಮನವಿ ಮಾಡಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು ನಮ್ಮದು ರೈತ ಪರ ಸರ್ಕಾರ ಯಾವುದೇ ಕಾರಣಕ್ಕೂ ರೈತರಿಗೆ ಹಾಗೂ ಅಡಿಕೆ ಬೆಳೆಗಾರರ ಹಿತಕ್ಕೆ ಧಕ್ಕೆಯಾಗುವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ, ರೈತರು ಆತಂಕಕ್ಕೆ ಒಳಗಾಗುವುದು ಬೇಡ ಎನ್ನುವ ಭರವಸೆ ನೀಡಿದ್ದಾರೆ.
ಹೊನ್ನಾಳಿ ಶಾಸಕರಾದ ರೇಣುಕಾಚಾರ್ಯ, ಹಿರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ, ಮತ್ತು ಅಡಿಕೆ ಬೆಳೆಗಾರರ ಸಂಘ ಸಂಸ್ಥೆಗಳ ನಿಯೋಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















