ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಭಾರೀ ಮಳೆಗೆ ಉಂಟಾಗಿದ್ದ ಪ್ರವಾಹದಿಂದ ನಷ್ಟ ಅನುಭವಿಸಿದ ನೂರಾರು ಕುಟುಂಬಸ್ಥರಿಗೆ ಸಚಿವ ಆರ್. ಅಶೋಕ್ ಪರಿಹಾರ ವಿತರಿಸಿದರು.
ಸಿಲಿಕಾನ್ ಸಿಟಿಯಲ್ಲಿ ಸುರಿದ ಮಳೆಗೆ ಬನಶಂಕರಿ 3 ನೆಯ ಹಂತದಲ್ಲಿರುವ ಗುರುದತ್ತ ಬಡಾವಣೆಯ ರಾಜ ಕಾಲುವೆ ತಡೆ ಗೋಡೆ ಅ.23ರಂದು ಕುಸಿದು ಬಿದ್ದಿತ್ತು.
ಅ.24 ರಂದು ಸಿಲಿಕಾನ್ ಸಿಟಿ ಯಲ್ಲಿ ಸುರಿದ ಭೀಕರ ಮಳೆಯಿಂದ ಹೊಸಕೆರೆಹಳ್ಳಿ , ಟಿ.ಜಿ. ಲೇಔಟ್, ದತ್ತಾತ್ರೇಯ ಲೇಔಟ್ ಮತ್ತು ಗುರುದತ್ತ ಬಡಾವಣೆ ಪ್ರವಾಹ ಪೀಡಿತ ಪ್ರದೇಶವಾಗಿ ಸುಮಾರು ಮುನ್ನೂರಕ್ಕೂ ಹೆಚ್ಚಿನ ಮನೆಗಳಿಗೆ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಇರುವ ಅಂಗಡಿ ಹಾಗೂ ದೇವಾಲಯಗಳಿಗೆ ನೀರು ನುಗ್ಗಿ ಅಪಾರವಾದ ಹಾನಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಭೀಕರ ಮಳೆಯಿಂದ ಉಂಟಾದ ಪ್ರವಾಹದಿಂದ ನಷ್ಟ ಅನುಭವಿಸಿದ್ದ 400 ಮನೆಯ ಫಲಾನುಭವಿಗಳಿಗೆ ತಲಾ 25 ಸಾವಿರ ರೂಪಾಯಿ ಚೆಕ್ ಅನ್ನು ಸಚಿವ ಆರ್. ಅಶೋಕ್ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಶೀಘ್ರವಾಗಿ ರಾಜ ಕಾಲುವೆಯ ತಡೆ ಗೋಡೆ ನಿರ್ಮಾಣದ ಕೆಲಸ ಮಾಡಿ ಮುಗಿಸಲಾಗುವುದು. ರಾಜ ಕಾಲುವೆ ಬಳಿ ಒತ್ತುವರಿಯಾಗಿದ್ದು ಅದನ್ನು ಪರಿಶೀಲಿಸಿದ ನಂತರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವ ಬಗ್ಗೆ ಆದೇಶ ನೀಡಲಾಗಿದೆ ಎಂದರು.
ದತ್ತಾತ್ರೇಯ ನಗರದಲ್ಲಿ ಸಾಂಕೇತಿಕವಾಗಿ 50 ಕುಟುಂಗಳಿಗೆ ಚೆಕ್ ನೀಡಲಾಯಿತು. ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರ, ಗುರುದತ್ತ ಲೇಔಟ್ ಹಾಗೂ ಟಿಜಿ ಲೇಔಟ್ ಮತ್ತು ಕುಮಾರಸ್ವಾಮಿ ಲೇಔಟ್’ನಲ್ಲಿ ಹಾನಿಗೀಡಾಗಿರುವ ಒಟ್ಟು 350 ರಿಂದ 400 ಮನೆಗಳನ್ನು ಗುರುತಿಸಲಾಗಿದೆ.
ಇನ್ನು, ರಾಜ ಕಾಲುವೆ ಮತ್ತು ಬಫರ್ ಜೋನ್ ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ತಾಕೀತು ಮಾಡಿದ್ದಾರೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post