ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ರಾಮನವಮಿಯ ಪ್ರಯುಕ್ತ ಶ್ರೀಗಂಧ, ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ (ರಿ.) ಹಾಗೂ ನಾಟ್ಯಶ್ರೀ ಕಲಾ ತಂಡ (ರಿ.) ಇವರ ಸಂಯುಕ್ತಾಶ್ರಯದಲ್ಲಿ ಸ್ಮರಿಸಯ್ಯಾ ಶ್ರೀ ರಾಮಮಂತ್ರ ಎಂಬ ಶ್ರೀರಾಮನ ಧ್ಯೇಯವಾಕ್ಯದೊಂದಿಗೆ ಶ್ರೀರಾಮಾಯಣ ಕಥಾಮೃತ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಂಧ ಸಂಚಾಲಕ ಬಿ.ಆರ್. ಮಧುಸೂದನ್ ಹೇಳಿದರು.
ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಏ.16 ರಿಂದ 22ರವರೆಗೆ ಶುಭಮಂಗಳ ಸಮುದಾಯಭವನದ ಆವರಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರತಿದಿನ ಬೆಳಗ್ಗೆ 7:30ಕ್ಕೆ ಶ್ರೀ ಮಹಾಗಣಪತಿ ಹೋಮ, ಶ್ರೀಲಕ್ಷ್ಮೀ ನಾರಾಯಣ ಪಾರಾಯಣ, ವಾಲ್ಮೀಕಿ ರಾಮಾಯಣ ಪಾರಾಯಣ, ರಾಮತಾರಕ ಹೋಮ, ಹಾಗೂ ರಾಮಾಯಣದ ಏಳೂ ಕಾಂಡಗಳ ಪಾರಾಯಣಕ್ಕೆ ಮಹಾಸಂಕಲ್ಪ, ಬೆಳಗ್ಗೆ 9:30ಕ್ಕೆ ಪೂರ್ಣಾಹುತಿ ನಡೆಯಲಿದೆ ಎಂದು ತಿಳಿಸಿದರು.
ಮಾಜಿ ಸಭಾಪತಿ ಡಿ. ಎಚ್. ಶಂಕರಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ವೇದಿಕೆಯಲ್ಲಿ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಕೂಡ ಉಪಸ್ಥಿತರಿರಲಿದ್ದಾರೆ. ಉಳಿದಂತೆ ಎಲ್ಲಾ ದಿನದಂದು ವಿವಿಧ ಮಠಾಧೀಶರುಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದರು.
ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ಶ್ರೀರಾಮನ ದಿವ್ಯ ಮಂದಿರಕ್ಕೆ ನಮ್ಮೆಲ್ಲರ ತನುಮನ ಸಮೇತರಾಗಿ ದೇಣಿಗೆಯನ್ನು ನಾವು ಈಗಾಗಲೇ ನೀಡಿರುತ್ತೇವೆ. ಈ ಶ್ರದ್ದಾ ಕಾರ್ಯದ ಜೊತೆ ಭಕ್ತ ಜನರ ಆಸ್ಥೆಯನ್ನು ಒಳಗೊಂಡ ಶ್ರೀರಾಮನಾಮ ಸ್ಮರಣೆ ನಡೆಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಶ್ರೀಗಂಧ ಸಂಸ್ಥೆ ಕೈಗೊಂಡಿದೆ ಎಂದರು.
ಕಾರ್ಯಕ್ರಮದ ಸಂಘಟಕರಾದ ವಿದ್ವಾನ್ ದತ್ತಮೂರ್ತಿ ಭಟ್ ಮಾತನಾಡಿ, ಪ್ರತಿದಿನ ಸಂಜೆ 5ರಿಂದ 6ರವರೆಗೆ ನಗರದ ವಿವಿಧ ಭಜನಾ ತಂಡಗಳಿಂದ ಭಜನೆ, 6ರಿಂದ 7ರವರೆಗೆ ನಾಡಿನ ವಿವಿಧ ಮಠಾಧೀಶರಿಂದ ಆಶೀರ್ವಚನ, ಪ್ರಖ್ಯಾತ ವಾಗ್ಮಿ ವೀಣಾ ಬನ್ನಂಜೆಯವರಿಂದ ಏಳೂ ಕಾಂಡಗಳ ಶ್ರೀರಾಮಾಯಣ ವ್ಯಾಖ್ಯಾನ ಮತ್ತು ಬಡಗು ಹಾಗೂ ತೆಂಕು ತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಶ್ರೀ ರಾಮಾಯಣ ಯಕ್ಷಗಾನ ಪ್ರದರ್ಶನವು ಸುಸಜ್ಜಿತವಾಗಿ ಸಿದ್ಧಗೊಳ್ಳುವ ವೇದಿಕೆಯಲ್ಲಿ ಜರುಗಲಿದೆ ಎಂದರು.
ಈ ಎಲ್ಲಾ ಕಾರ್ಯಕ್ರಮಕ್ಕೆ ಉಚಿತ ಪ್ರವೇಶದ ಜೊತೆಗೆ ಕೋವಿಡ್ನ ಸಾಮಾಜಿಕ ಅಂತರ ಪರಿಪಾಲನೆಯೊಂದಿಗೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಾರ್ವಜನಿಕರೆಲ್ಲರೂ ಆಗಮಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಬೇಕಾಗಿ ಕೋರಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಶ್ರೀಗಂಧದ ಸದಸ್ಯರಾದ ಸಹನಾ ಚೇತನ್, ಚೇತನ್, ಅಶ್ವತ್ಥನಾರಾಯಣ ಶೆಟ್ಟಿ, ಎನ್.ಡಿ.ಸತೀಶ್, ಸ.ನ.ಮೂರ್ತಿ, ಆದರ್ಶ್ ಹಾಗೂ ರಾಜು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















