ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಶಿವಮೊಗ್ಗ ತಾಲ್ಲೂಕು ಮಲವಗೊಪ್ಪ ಗ್ರಾಮದಲ್ಲಿ ಹಾದು ಹೋಗಿರುವ ಕೆರೆ ಏರಿಯ ಅಚ್ಚುಕಟ್ಟು ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಅಧ್ಯಕ್ಷೆ ಪವಿತ್ರ ರಾಮಯ್ಯ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,, ಪ್ರಸ್ತುತ ಕೋವಿಡ್ -19 ಮಹಾಮಾರಿಯನ್ನು ತಹಬದಿಗೆ ತರಲು ರಾಜ್ಯ ಸರ್ಕಾರ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈ ಸಮಯದಲ್ಲಿ ನಾವೆಲ್ಲರೂ ಸರ್ಕಾರದ ಜೊತೆಗೆ ನಿಲ್ಲಬೇಕು ಎಂದರು.

ಗ್ರಾಮಸ್ಥರು ಮಾತನಾಡಿ, ಪ್ರವಾಸದ ಸಂದರ್ಭದಲ್ಲಿ ರಸ್ತೆ ಕಾಮಗಾರಿಗೆ ಅನುದಾನ ಒದಗಿಸುವಂತೆ ಮನವಿ ಮಾಡಿದ್ದೆವು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಸರ್ಕಾರದಿಂದ ಅನುದಾನ ಬಂದ ತಕ್ಷಣವೇ ಹಣ ಒದಗಿಸುವುದಾಗಿ ಭರವಸೆ ನೀಡಿದ್ದ ನೀವು ಈಗ ಕೊಟ್ಟ ಮಾತಿನಂತೆ ನಡೆದುಕೊಂಡು ಮಾದರಿಯಾಗಿದ್ದಿರಿ ಎಂದು ಸಂತೋಷ ವ್ಯಕ್ತ ಪಡಿಸಿದರು.
ನಂತರ ಗ್ರಾಮಸ್ಥರು, ಕಾಮಗಾರಿಗಳ ಪಟ್ಟಿಯನ್ನು ಸಲ್ಲಿಸಿ ಅನುದಾನ ನೀಡುವಂತೆ ಒತ್ತಾಯಿಸಿದಾಗ ಪ್ರಸ್ತುತ ರಾಜ್ಯದಲ್ಲಿ ಕೋವಿಡ್-19 ಸಮಸ್ಯೆಯಿದ್ದು, ಸರ್ಕಾರಕ್ಕೆ ತೊಂದರೆ ಕೊಡುವುದು ಬೇಡ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಹಾಗೂ ಸಂಸದರು ಅನುದಾನ ಒದಗಿಸುತ್ತಾರೆ ಎಂದು ಭರವಸೆ ನೀಡಿದರು.

ಗ್ರಾಮದ ಪಕ್ಕದಲ್ಲೇ ನಾವು ವಾಸವಿದ್ದರು ಭದ್ರಾ ಕಾಡಾ ಪ್ರಾಧಿಕಾರದ ಕಾರ್ಯ ವ್ಯಾಪ್ತಿ ನಮಗೆ ಗೊತ್ತಿರಲಿಲ್ಲ, ನಿದ್ರಾವಸ್ಥೆಯಲ್ಲಿದ್ದ ಇಲಾಖೆಯನ್ನು ರಾಜ್ಯದ ಜನತೆಗೆ ನಿಮ್ಮ ಕಾರ್ಯಚಟುವಟಿಕೆ ಮೂಲಕ ಪ್ರಚುರ ಪಡಿಸಿದ್ದು ನಿಮ್ಮ ಶಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಈ ಹಿಂದೆ ಜಲಾಶಯದಲ್ಲಿ ನೀರು ಇದ್ದರು ರೈತರಿಗೆ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿತ್ತು, ಆದರೆ ನೀವು ಅಧಿಕಾರವಹಿಸಿಕೊಂಡ ನಂತರ ರೈತರಲ್ಲಿ ಆತಂಕ ದೂರವಾಗಿದೆ ಸಮಸ್ತ ರೈತರ ಪರವಾಗಿ ನಿಮಗೆ ನಾವು ಧನ್ಯವಾದ ಅರ್ಪಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ವೆಂಕಟೇಶ್ ನಾಯ್ಕ್, ಕಾರ್ಯಪಾಲಕ ಅಭಿಯಂತರರಾದ ಮೂಡಲಗಿರಿ, ಸಹಾಯಕ ಅಭಿಯಂತರ ರವೀಂದ್ರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















