ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಿಲಿಕಾನ್ ಸಿಟಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದಿಲ್ಲೊಂದು ವಿಶೇಷತೆಯಿಂದ ಗಮನ ಸೆಳೆಯುತ್ತಲೇ ಇರುತ್ತವೆ. ಅಂತಹ ಕಾರ್ಯಕ್ರಮಗಳಲ್ಲಿ ನವರಾತ್ರಿ ಅಂಗವಾಗಿ ನಟನ ತರಂಗಿಣಿ ಸಂಸ್ಥೆ ಆಯೋಜಿಸಿದ್ದ ಕಚೇರಿಗಳು ಕಲಾರಸಿಕರ ಮನಸೂರೆಗೊಂಡವು.
ನಮ್ಮ ಸಂಸ್ಕೃತಿಯ ಬುನಾದಿಯೇ ಲಲಿತ ಕಲೆಗಳು. ಇದರಲ್ಲಿಯೂ ಮುಖ್ಯವಾಗಿ ಸಂಗೀತ, ನೃತ್ಯ ಮುಂತಾದ ಪ್ರದರ್ಶನ ಕಲೆಗಳು. ಇವುಗಳನ್ನು ಪೋಷಿಸಿ ಬಳೆಸುವುದು ನಮ್ಮ ಸಮಾಜದ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅನೇಕ ಸಂಸ್ಥೆಗಳು ಹಲವು ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುವುದು ಸಮಾಜ ದೃಷ್ಟಿಯಿಂದ ಹಿತಕರವಾದ ಬೆಳವಣಿಗೆ.
ಬೆಂಗಳೂರಿನ ನಟನ ತರಂಗಿಣಿ ಸಂಸ್ಥೆ ಅನೇಕ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ, ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ನೀಡಲು ವೇದಿಕೆಯನ್ನು ಕಲ್ಪಿಸತೊಡಗಿದೆ.
ನವರಾತ್ರಿಯ ಒಂಬತ್ತು ದಿನಗಳೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ಅಂಗವಾಗಿ, ಅಂಜನಾಪುರದ ಶ್ರೀಪ್ರಸನ್ನ ವೆಂಕಟೇಶ್ವರ ಸ್ವಾಮಿಯ ದೇವಾಲಯಲ್ಲಿ ಭರತನಾಟ್ಯ ಪ್ರದರ್ಶನ ಜರುಗಿತು.
ಶ್ರೀ ವೆಂಕಟೇಶ್ವರ ಸ್ವಾಮಿಯು ವರಾಹಾವತಾರಿಯಾಗಿ ಕಂಗೊಳಿಸುತ್ತಿರಲು ನಟನ ತರಂಗಿಣಿಯ ವಿದ್ಯಾರ್ಥಿನಿ ಕು.ಜಿ.ವಿ.ಶ್ರೀಲಾಸ್ಯ, ತನ್ನಲಾಸ್ಯ-ತಾಂಡವಯುತ ಭರತನಾಟ್ಯ ಪ್ರದರ್ಶನವನ್ನು ನೀಡಿ ನೆರೆದಿದ್ದ ಜನಮನವನ್ನು ಸೆಳೆದರು.
ವೈ.ಜಿ. ಶ್ರೀಲತಾ ನಿಕ್ಷಿತ್ ಅವರ ಶಿಷ್ಯಳಾದ ಕು.ಶ್ರೀಲಾಸ್ಯ ಭರತನಾಟ್ಯ ವಿದ್ವತ್ಪೂರ್ವವನ್ನು ಮುಗಿಸಿ ಅಂತಿಮ ಹಂತದ ತಯಾರಿಯಲ್ಲಿ ಇರುವರು. ಎರಡನೇ ವರ್ಷದ ನ್ಯೂರೋಸೈನ್ಸ್ ಡಿಗ್ರಿ ವ್ಯಾಸಂಗ ಮಾಡುತ್ತ ನೃತ್ಯ ಕಲಿಕೆಯನ್ನೂ ಸತತವಾಗಿ ಮುಂದುವರಿಸುತ್ತಿದ್ದಾರೆ.
ಯಾವುದೇ ಭರತನಾಟ್ಯ ಪ್ರದರ್ಶನದ ಮೊದಲ ವಿನಿಕೆ ಪುಷ್ಪಗಳನ್ನು ಅರ್ಪಿಸಿ ವೇದಿಕೆಗೆ, ಸಭೆಗೆ ಸಲ್ಲಿಸುವ ನಮನ, ಪುಷ್ಪಾಂಜಲಿ ಹೀಗೆ ನರ್ತನವನ್ನು ಪ್ರಾರಂಭಿಸಿದ ಶ್ರೀಲಾಸ್ಯ, ಊತ್ತುಕ್ಕಾಡು ವೆಂಕಟ ಸುಬ್ಬಯ್ಯ ಅವರ ಶ್ರೀ ವಿಘ್ನರಾಜಂಭಜೇ ಕೃತಿಯ ಮೂಲಕ ತಮ್ಮ ನೃತ್ತದ ಕುಶಲತೆಯನ್ನು ವ್ಯಕ್ತಪಡಿಸಿದರು.
ದೇವಿಯನ್ನು ಕುರಿತ, ವಿದ್ವಾನ್ ಗುರುಮೂರ್ತಿ ಅವರ ಓಂಕಾರ ಬಿಂದು, ದೇವಿಯ ಓಂಕಾರ ರೂಪವನ್ನು ತೋರಿದರೆ, ಶ್ರೀಪುರಂದರದಾಸರ ಹನುಮಂತ ದೇವನಮೋ, ಹನುಮಂತನ ರಾಮಭಕ್ತಿ , ಕಾರ್ಯಪರತೆಯ ಹಾಸ್ಯ ಬೆರೆತ ನಿರೂಪಣೆ ಗಮನ ಸೆಳೆಯಿತು.
ಜಗದೊಡೆಯನಾದ ಶ್ರೀಕೃಷ್ಣನನ್ನು ಬಾಲನೆಂದು ವಾತ್ಸಲ್ಯದಿಂದ ಕೊಂಡಾಡುವ ಯಶೋದೆಯ ನಿರ್ಮಲ ಭಕ್ತಿಯನ್ನು ಸಾರುವ ಪ್ರಸಿದ್ಧ ದೇವರನಾಮ, ಶ್ರೀಪುರಂದರದಾಸರ ಜಗದೋದ್ಧಾರನ, ಈಶ್ವರನ ತಾಂಡವ ಹಾಗೂ ನವರಸಗಳ ಸೊಗಸಾದ ನೃತ್ಯ ಆನಂದ ತಾಂಡವೇಶ್ವರನ (ಶ್ರೀಮತಿ ದ್ವಾರಕಿ ಕೃಷ್ಣಸ್ವಾಮಿ ವಿರಚಿತ). ಶ್ರೀತ್ಯಾಗರಾಜರ ಸೀತಾಕಲ್ಯಾಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಉತ್ತಮ ಸಂಗೀತದ ಮುದ್ರಿಕೆಗಳು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದವು.
ಕು.ಚೈತನ್ಯ ಒಳ್ಳೆಯ ಕಂಠ ಸಿರಿಯಿಂದ ಶ್ರೀ ರಾಗದ ವರ್ಣದಿಂದ ಪ್ರಾರಂಭಿಸಿ, ಅಪರೂಪದ ಛಾಯಾ ತರಂಗಿಣೆ, ಮುಖ್ಯಪ್ರಸ್ತುತಿಯಾಗಿ ಪಂತುವರಾಳಿ ಉತ್ತಮವಾಗಿ ಹಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಭಜನೆ, ನಾಮ ಸಂಕೀರ್ತನ, ಪ್ರಸ್ತುತಿಗಳು ಕಛೇರಿಯನ್ನು ಮೆರಗುಗೊಳಿಸಿದವು. ಡಾ.ಬಾಲಮುರಳೀ ಕೃಷ್ಣ ಅವರ ಕದನ ಕುತೂಹಲ ರಾಗದ ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















