ಅಕ್ಕಮಹಾದೇವಿಯ ವಚನಗಳನ್ನು ಆಗಾಗ ಬಿಡಿಬಿಡಿಯಾಗಿ ನಾನು ನೃತ್ಯ ಕಾರ್ಯಕ್ರಮಗಳಲ್ಲಿ ಮಾಡುತ್ತಿದ್ದದ್ದು ಸಾಕಷ್ಟು ಹಿಂದೆಯೇ. ಕನ್ನಡದಲ್ಲಿ ಮಧುರ ಭಕ್ತಿಯ ಜಾವಳಿಗಳು. ಹರಿದಾಸರ ದೇವರನಾಮಗಳು ಬಹಳಷ್ಟಿದ್ದರೂ, ಶಿವನ ಬಗೆಗೆ ಕನ್ನಡದಲ್ಲಿ ಶೃಂಗಾರ ಪದಗಳನ್ನು ಮಾಡಬೇಕಾದ ಸಂದರ್ಭದಲ್ಲಿ ನನಗೆ ಮೊಟ್ಟಮೊದಲು ನೆನಪಿಗೆ ಬರುತ್ತಿದ್ದದ್ದು ಅಕ್ಕನ ವಚನಗಳೇ. ಸುಮಾರು 14 ವರ್ಷಗಳ ಹಿಂದೆ ಶಿವರಾತ್ರಿ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಗಳೆರಡೂ ಒಂದೇ ದಿನ ಬಂದಾಗ ಅಕ್ಕನ ವಚನಗಳನ್ನೇ ಆಧರಿಸಿ ಪ್ರಕೃತಿ-ಶರಣಸತಿ ಲಿಂಗಪತಿ ಎಂಬ ಭಾವ ಮತ್ತು ಸ್ತ್ರೀ ಮನಸ್ಸು ಇವುಗಳನ್ನು ಕೇಂದ್ರದಲ್ಲಿಟ್ಟುಕೊಂಡು ಎರಡು ಗಂಟೆಗಳ ಪ್ರಾತ್ಯಕ್ಷಿಕೆಯನ್ನು ನೀಡಿದ್ದೆ. ಬೀರೂರಿನ ಅಕ್ಕಮಹಾದೇವಿಯ ದೇವಸ್ಥಾನದಲ್ಲಿಯೂ ಈ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿದ್ದರು.
ಅದೇಕೋ 15ನೆಯ ವರ್ಷವೈಭವಕ್ಕೆ ಏನು ಮಾಡಬೇಕು ಎಂದು ಯೋಚಿಸುವಾಗ ನೆನಪಾದವಳು ‘ಅಕ್ಕ’. ಹಿಂದೆ ನೋಡಿದ್ದ ವಚನಗಳನ್ನೇ ಈಗ ಮತ್ತೆ ನೋಡಿದಾಗ ಅವುಗಳ ಅರ್ಥ ವಿಸ್ತಾರ ಬೆರಗು ಮೂಡಿಸುತ್ತದೆ. ಅಕ್ಕನ ವಚನಗಳನ್ನು ಬಿಡಿ ಬಿಡಿಯಾಗಿ ನೋಡುವುದಕ್ಕೂ, ಅವುಗಳನ್ನು ಒಬ್ಬ ವ್ಯಕ್ತಿಯ ಬದುಕಿನ ಬರೆಹಗಳಂತೆ ನೋಡುವುದಕ್ಕೂ ಅಂತರವಿದೆ. ಅಕ್ಕನ ವಿಷಯದಲ್ಲಿ ಹಾಗೆ ‘ಬದುಕಿನ ಬರೆಹ’ಗಳಂತೆ ನೋಡುವುದೇ ಹೆಚ್ಚು ಅರ್ಥಪೂರ್ಣ ಎಂದು ನನಗನ್ನಿಸುತ್ತದೆ.
ಅಕ್ಕಮಹಾದೇವಿ ಹುಟ್ಟಿದ ಊರು ನಮ್ಮ ಶಿವಮೊಗ್ಗೆಗೆ ಸಮೀಪದಲ್ಲಿರುವ ಉಡುತಡಿ. ಮಕ್ಕಳು ಅಧ್ಯಯನ ಪ್ರವಾಸಕ್ಕಾಗಿ, ಕಲಾವಿದರು-ಕವಯಿತ್ರಿಯರು ಸ್ಫೂರ್ತಿ ಪಡೆಯುವುದಕ್ಕಾಗಿ ಅರ್ಧ ದಿನದಲ್ಲಿ ಆರಾಮವಾಗಿ ಹೋಗಿಬರಬಹುದಾದ ಸ್ಥಳ. ಈಗ ಅಲ್ಲಿ ಅಧ್ಯಯನ ಸಂಸ್ಥೆಯಿದೆ, ಅಕ್ಕನ ಕಂಚಿನ ಪ್ರತಿಮೆ, ಅಕ್ಕಮಹಾದೇವಿಯ ದೇವಾಲಯ, ಸುಂದರ ಉದ್ಯಾನ ಈ ಎಲ್ಲವೂ ಇವೆ. ಕನ್ನಡದ ಪ್ರಥಮ ಕವಯಿತ್ರಿ ಶಿವಮೊಗ್ಗೆಯವಳು ಎಂಬುದು ಶಿವಮೊಗ್ಗೆಯ ಹಿರಿಮೆ!
ಅಕ್ಕನ ಜೀವನ ಘಟ್ಟಗಳು ಸರಳವಾಗಿ ಕೆಲವೇ ವಾಕ್ಯಗಳಲ್ಲಿ ಹೇಳುವಂತಿದ್ದರೂ, ಅದೊಂದು ಕಠಿಣ ಸಾಧನೆಯ ದಾರಿ. ಉಡುತಡಿಯಲ್ಲಿ ನಿರ್ಮಲ-ಸುಮತಿಯರ ಮಗಳಾಗಿ ಜನಿಸುವ ಮಹಾದೇವಿ ಬಾಲ್ಯದಿಂದಲೂ ಶಿವಭಕ್ತೆ. ಆಕೆಗೆ ಗುರುಲಿಂಗದೇವರು ಎಂಬ ಆಚಾರ್ಯರಿಂದ ಲಿಂಗದೀಕ್ಷೆಯಾಗಿರುತ್ತದೆ. ಲಿಂಗವನ್ನೇ ಪತಿಯಾಗಿ ಭಾವಿಸಿ, ಮಾನಸಿಕವಾಗಿ ತನ್ನ ಆರಾಧ್ಯದೈವ ಚೆನ್ನಮಲ್ಲಿಕಾರ್ಜುನನನ್ನೇ ಮದುವೆಯಾಗಿರುತ್ತಾಳೆ. ಮಹಾದೇವಿ ಹೀಗಿರುವಾಗ ಕೌಶಿಕನೆಂಬ ದೊರೆ ಆಕೆಯನ್ನು ನೋಡಿ ಮೋಹಗೊಂಡು ಮದುವೆಯಾಗಬೇಕೆನ್ನುತ್ತಾನೆ. ಮದುವೆಯನ್ನು ನಿರಾಕರಿಸಿದರೆ ತನ್ನ ಕುಟುಂಬಕ್ಕೆ ಒದಗಬಹುದಾದ ಆಪತ್ತನ್ನು ಕಂಡು ಮಹಾದೇವಿ ಶಿವಧ್ಯಾನಕ್ಕೆ ಮುಕ್ತ ಅವಕಾಶವಿರಬೇಕೆನ್ನುವ ಷರತ್ತಿನೊಡನೆ ಅರಮನೆ ಪ್ರವೇಶಿಸುತ್ತಾಳೆ. ಕೌಶಿಕ ಈ ಷರತ್ತನ್ನು ಮುರಿದು, ಬಲವಂತಕ್ಕೆಳಸಿದಾಗ ಮಹಾದೇವಿ ತೋರಿದ ಪ್ರತಿಭಟನೆಯ ರೀತಿ ಇಂದಿಗೂ ಲೋಕವನ್ನು ಬೆಚ್ಚಿ ಬೀಳಿಸುತ್ತಲೇ ಇದೆ!
ಬಟ್ಟೆಯನ್ನೇ ಬಿಸುಟು, ದಿಗಂಬರೆಯಾಗಿ, ನಂತರ ಕೇಶಾಂಬರೆಯಾಗುವ ಮಹಾದೇವಿ ಕಲ್ಯಾಣದಲ್ಲಿ ಅಲ್ಲಮನಿಂದ ತೀಕ್ಷ್ಣ ಪರೀಕ್ಷೆಗೆ ಒಳಗಾಗುತ್ತಾಳೆ. ತನ್ನ ಅನುಭವಗಳನ್ನು ಹಾಡಿಕೊಂಡೇ ತಿರುಗುತ್ತಾ ಆಕೆ ಕೊನೆಯಲ್ಲಿ ತಲುಪುವುದು ತನ್ನ ಆರಾಧ್ಯದೈವ-ಪ್ರಿಯತಮ-ಸಂಗಾತಿ ಚೆನ್ನಮಲ್ಲಿಕಾರ್ಜುನನಿರುವ ಶ್ರೀಶೈಲವನ್ನು.
ಈ ಇಡೀ ಕಥೆಗೆ ಆಧಾರವಾಗಿ ಅಕ್ಕನದೇ ವಚನಗಳಿವೆ. ಆಕೆಯ ಪ್ರತಿಭೆಗೆ ಸಾಕ್ಷಿಯಾಗಿ ಇತರ ಶರಣರು ಬರೆದಿರುವ ವಚನಗಳಿವೆ. ಅಕ್ಕನ ವಚನಗಳನ್ನು ಮಹಿಳಾ ಮನೋವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ, ನೃತ್ಯ-ಸಂಗೀತ ಪ್ರಯೋಗಗಳಿಗೆ ವಿಭಿನ್ನವಾಗಿ ಈ ವಚನಗಳು ಒದಗಿಬರುವ ಸಾಧ್ಯತೆಗಳನ್ನು ನಾವು ಪರಿಶೀಲಿಸಬೇಕಿದೆ. ಏಕೆಂದರೆ ಅಕ್ಕ ಒಬ್ಬ ಮಹಿಳೆ. ಆಕೆಯ ವಚನಗಳಲ್ಲಿ ಶೃಂಗಾರ-ಲೈಂಗಿಕ ಪ್ರತಿಮೆಗಳೊಂದಿಗೇ, ಸಮಾಜ ಹೆಣ್ಣಿಗೆ ಒಡ್ಡುವ ಒತ್ತಾಯ-ಸವಾಲು-ಅಡ್ಡಿ-ಆತಂಕಗಳೂ ಚಿತ್ರಿತವಾಗಿವೆ. ಅಕ್ಕ ಕವಯಿತ್ರಿಯಾಗಿರುವ ಜೊತೆಗೇ ಆಕೆ ಸಂಗೀತ ಜ್ಞಾನವುಳ್ಳವಳೂ ಆಗಿದ್ದಳೆಂಬುದಕ್ಕೆ ಆಕೆಯ ರಚನೆಗಳು ಎನ್ನಲಾದ ಸ್ವರ ವಚನಗಳು-ಕೊರವಂಜಿ ಹಾಡುಗಳು ನಿದರ್ಶನ. ಇದರೊಂದಿಗೇ ಅಭಿನಯಕ್ಕೆ ಒದಗುವ ಮಧುರ ಭಕ್ತಿ-ವಿವಿಧ ನಾಯಕಿಯರು, ನೃತ್ಯ ಕಲಾವಿದರ ಇಷ್ಟ ದೈವ ಶಿವ, ಆತನ ವರ್ಣನೆ ಇವು, ಸಂಗೀತ-ನೃತ್ಯಗಳೆರಡರ ಜೀವಾಳವಾದ ಅಧ್ಯಾತ್ಮ ಇವು ಅಕ್ಕನ ವಚನಗಳಲ್ಲಿವೆ.
‘ಶಿವ’ ಮತ್ತು ‘ಜೀವ’ ಗಳು ಒಂದಾಗುವುದು ಪ್ರತಿಯೊಂದು ನೃತ್ಯ ಸಾಧಕನ ಕನಸು. ನಿಜವಾದ ನೃತ್ಯ ಕಲಾವಿದ ತನ್ನ ಸಾಧನೆಯ ಮುಖ್ಯ ಗುರಿಯಾಗಿಸಿ ಕೊಳ್ಳುವುದು ಕಾರ್ಯಕ್ರಮ-ಪ್ರೇಕ್ಷಕ-ಧನ-ಖ್ಯಾತಿಗಳನ್ನಲ್ಲ! ‘ಶಿವ-ಜೀವ’ ರನ್ನು ಒಂದಾಗಿಸುವ ರಸೋತ್ಪತ್ತಿ- ರಸಾನುಭವ- ಅಧ್ಯಾತ್ಮದ ಅನುಭಾವವನ್ನು! ಆಶ್ಚರ್ಯಕರವಾಗಿ ಶಿವಶರಣರ ‘ಐಕ್ಯಸ್ಥಲ’ ಸಾಧನೆ, ಅಕ್ಕಮಹಾದೇವಿಯ ‘ಶಿವೈಕ್ಯ’ ಇವು, ನರ್ತಕನ ಸಾಧನೆಯ ಹಾದಿಯ ಗುರಿಗಳಂತೆಯೇ ಎನಿಸುತ್ತದೆ. ‘ಕದಳಿ ಎಂಬುದು ತನು-ಕದಳಿ ಎಂಬುದು ಮನ’ ಎಂಬ ಅಕ್ಕನ ವಚನ ವೈಯಕ್ತಿಕವಾಗಿ ಹಾಡಿದ್ದಾದರೂ, ತನು-ಮನಗಳ ವಿಷಯಂಗಳನ್ನು ಗೆದ್ದು, ಹೊರಗಿನ ಎಲ್ಲ ಚಿಂತೆಗಳನ್ನು ಮರೆತು-ಗೆದ್ದು ರಸೈಕ್ಯವನ್ನು ಸಾಧಿಸುವ ಕಲಾವಿದೆಗೂ ಅನ್ವಯಿಸುತ್ತದೆ ಅಲ್ಲವೆ? !
ಅಕ್ಕನ ವಚನಗಳನ್ನು, ತನ್ನ ಬದುಕನ್ನೇ ಬರಹವಾಗಿಸಿದ್ದನ್ನು ಈಗ ನೃತ್ಯದ ಮೂಲಕ ರಂಗಕ್ಕೆ ತರುವ ನನ್ನ ಏಕವ್ಯಕ್ತಿ ನೃತ್ಯ ಪ್ರಸ್ತುತಿ ನೇರ ಹಿನ್ನೆಲೆ ಸಂಗೀತದೊಂದಿಗೆ ಆಗಸ್ಟ್ 25ರ ಭಾನುವಾರದಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 6 ಗಂಟೆಗೆ ಸಾಕಾರಗೊಳ್ಳಲಿದೆ. ಶ್ರೀವಿಜಯದ 15 ನೇ ವರ್ಷ ವೈಭವದ ಎರಡನೇ ದಿನವಾದ ಆಗಸ್ಟ್ 25 ರಂದು ಲೇಖಕಿ-ಸಂಶೋಧಕಿ ಡಾ. ವಿಜಯಾದೇವಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ, ಡಾ.ಕೆ.ಆರ್. ಶ್ರೀಧರ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಕ್ಕನ ಬಗೆಗೆ ಒಂದಷ್ಟು ಚಿಂತನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ಶಿವಮೊಗ್ಗೆಯ ಸಹೃದಯರು ಇರುತ್ತೀರಿ ಅಲ್ಲವೆ?
ಲೇಖನ: ಡಾ॥ ಕೆ.ಎಸ್. ಪವಿತ್ರ
Discussion about this post