ವ್ಯಾಪಕ ಭ್ರಷ್ಟಾಚಾರದಿಂದ ಕಿಚಡಿ ಸರಕಾರಗಳಿಂದ ಬೇಸತ್ತು ರೋಸಿಹೋದ ಭಾರತೀಯರು ಪಕ್ಷಾತೀತವಾಗಿ ರಾಷ್ಟ್ರವಾದಿಯೊಬ್ಬನನ್ನು ಪೂರ್ಣ ಬಹುಮತದಿಂದ ಆರಿಸಿ ದೇಶದ ಭವಿತವ್ಯದ ಬಗ್ಗೆ ನಾನಾ ಬಣ್ಣದ ಕನಸುಗಳನ್ನು ಕಟ್ಟಿಕೊಂಡಿದ್ದರು. ಮೋದಿ ಸರಕಾರವನ್ನು ಸೈದ್ಧಾಂತಿಕ ಆಧಾರದ ಮೇಲೆ ಬೆಂಬಲಿಸಿದ ದೊಡ್ಡದೊಂದು ವರ್ಗವೆಂದರೆ ವೈದ್ಯಸಮೂಹ. ಹೃದಯದ ಸ್ಟೆಂಟಿನ ಬೆಲೆಯನ್ನು ಕಡಿತ ಮಾಡಿದಾಗ, ಅಗ್ಗದ ಜನೌಷಧಿ ಮಳಿಗೆಗಳನ್ನು ತೆರೆದಾಗ ಆಯುಷ್ಮಾನ್ ಭಾರತ ಯೋಜನೆಯನ್ನು ಪ್ರಾರಂಭಿಸಿದಾಗ ಹೃತ್ಪೂರ್ವಕವಾಗಿ ಸ್ವಾಗತಿಸಿದರು ನಾವು.
ವೈಯಕ್ತಿಕ ಲಾಭ ನಷ್ಟದ ಮೌಖಿಕ ಲೆಕ್ಕಾಚಾರವಿಲ್ಲದೇ ರೋಗಿಗಳ ಪರವಾದ ಎಲ್ಲ ನಿರ್ಧಾರಗಳನ್ನು ಬೆಂಬಲಿಸಿದವರು ನಾವು. ಕೆಲ ದಿನಗಳ ಹಿಂದೆ ಲೋಕಸಭೆಯಲ್ಲಿ ಬಹುಮತದ ಆಧಾರದಲ್ಲಿ ಅಂಗೀಕರಿಸಲ್ಪಟ್ಟ NMC ಕಾಯ್ದೆಯು ಅಚ್ಛೇ ದಿನ್ನ ನಿರೀಕ್ಷೆಯಲ್ಲಿದ್ದ ಸಮಸ್ತ ವೈದ್ಯ ಸಮೂಹಕ್ಕೆ ಬರಸಿಡಿಲಿನಂತೆ ಆಘಾತವನ್ನುಂಟು ಮಾಡಿದೆ. ವಿರೋಧಪಕ್ಷಗಳು ಸಹಾ ಇಂತಹ ವಿನಾಶಕಾರಿ ಕಾಯ್ದೆಗೆ ಕೇವಲ ಸಾಂಕೇತಿಕ ವಿರೋಧವನ್ನು ಮಾತ್ರ ವ್ಯಕ್ತಪಡಿಸಿದ್ದು ನಮ್ಮ ಸಾಂವಿಧಾನಿಕ ವ್ಯವಸ್ಥೆಯ ಇಂದಿನ ಶಿಥಿಲತೆಗೆ ಪ್ರಮಾಣವೆನ್ನೋಣವೇ?
ಒಟ್ಟಿನಲ್ಲಿ ಮೋದಿ ಸರಕಾರಕ್ಕೆ ಈ ವಿಚಾರದಲ್ಲಿ ದಾರಿತಪ್ಪಿಸುವ ಯಾವುದೋ ಕಾಣದ ಕೈಗಳ ಚಮಾತ್ಕಾರವನ್ನಂತೂ ಅಲ್ಲಗಳೆಯುವಂತಿಲ್ಲ. ಆದರೂ ಇನ್ನಾದರೂ ಪ್ರಜೆಗಳ ಕೂಗಿಗೆ ಈ ಜನಪ್ರಿಯ ಸರಕಾರ ಕಿವಿಗೊಡುವ ನಿರೀಕ್ಷೆಯಿಂದ ಈ ಲೇಖನ ಬರೆದಿರುವೆನು.
ಈ NMC ಕಾಯ್ದೆಯ ಮೂಲ ಉದ್ದೇಶವೇ ಹಿಂದಿದ್ದ MCI(ಭಾರತೀಯ ವೈದ್ಯಕೀಯ ಮಂಡಳಿ)ಯಲ್ಲಿ ಹಾಸುಹೊಕ್ಕಾದ ವ್ಯಾಪಕ ಭ್ರಷ್ಟಾಚಾರವನ್ನು ಕಳೆಯುವುದು ಹಳೆಯ ಶಿಕ್ಷಣ ಪದ್ಧತಿಯನ್ನು ನವೀಕರಿಸುವುದಾಗಿತ್ತು. ಈ ಸಂಸ್ಥೆಯು ದೇಶದಲ್ಲಿ ವೈದ್ಯಕೀಯ ಶಿಕ್ಷಣ, ಶಿಕ್ಷಣ ಸಂಸ್ಥೆಗಳ ನಿಯಂತ್ರಣ ವೈದ್ಯಕೀಯ ವೃತ್ತಿರಂಗದ ವ್ಯವಸ್ಥೆಯನ್ನು ನಿರ್ವಹಿಸಿಕೊಂಡು ಹೋಗುವ ಗುರುತರ ಜವಾಬ್ದಾರಿಯನ್ನು ಹೊಂದಿತ್ತು. ಇದರಲ್ಲಿ ಅನೇಕ ಲೋಪದೋಷಗಳಿದ್ದವೆಂದರೆ ತಪ್ಪಲ್ಲ. ಆದರೆ ಕೇವಲ ಔಷಧಿಯಿಂದ ಗುಣಪಡಿಸಬಲ್ಲ ಈ ವ್ಯಾಧಿಗೆ ಇಂತಹ ಘೋರ ವಿನಾಶಕ ಶಸ್ತ್ರಚಿಕಿತ್ಸೆಯು ಬೇಕಿತ್ತೇ? ಹಿಂದಿನ ಸ್ವಾಯತ್ತ ಸಂಸ್ಥೆಯಾಗಿದ್ದ MCI(ಇದರಲ್ಲಿ ಶೇ.66 ದೇಶದಾದ್ಯಂತ ವೈದ್ಯ ಸಮೂಹದಿಂದ ಚುನಾಯಿತ ಹಿರಿಯ ಪ್ರತಿನಿಧಿಗಳಿರುತ್ತಿದ್ದರು)ನ್ನು ರದ್ದು ಮಾಡಿ ಹೊಸದಾಗಿ NMC (ರಾಷ್ಟ್ರೀಯ ವೈದ್ಯಕೀಯ ಮಂಡಳಿ)ಯನ್ನು ಹುಟ್ಟು ಹಾಕಲಿದ್ದಾರೆ. ಇದರಲ್ಲಿ ಚುನಾಯಿತ ಪ್ರತಿನಿಧಿಗಳು ಕೇವಲ ಶೇ.20 ಇರಲಿದ್ದು, ಇನ್ನುಳಿದವರು ಕೇಂದ್ರದಿಂದ ನಾಮನಿರ್ದೇಶಿತರಿರುತ್ತಾರೆ. ಇದರಲ್ಲಿ ರಾಜ್ಯಗಳ ಪಾಲುದಾರಿಕೆಗೆ ಅವಕಾಶವೂ ಅತ್ಯಲ್ಪ. ಇದು ಭಾರತದ ಸಂಯುಕ್ತ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ವೆರಡರ ಆಶಯಕ್ಕೂ ಸರಿ ಹೊಂದಲಾರದು. ಇದರ ಮುಖ್ಯಸ್ಥರು ವೈದ್ಯರೇ ಇರಬೇಕೆಂಬ ಕನಿಷ್ಠ ವ್ಯಾವಹಾರಿಕ ನಿಬಂಧನೆಯೂ ಇರುವುದಿಲ್ಲ. ಇದು ಹೇಗಾಯಿತೆಂದರೆ ಕ್ಲಿಷ್ಟವಾದ ಶಸ್ತ್ರಚಿಕಿತ್ಸೆಯ ಜವಾಬ್ದಾರಿಯನ್ನು ನುರಿತ ಎಂಜಿನಿಯರ್ ಒಬ್ಬರ ಕೈಯಲ್ಲಿ ಕೊಟ್ಟಂತಾಯಿತು. ರೋಗಿಯು ತಲೆನೋವೆಂದರೆ, ವೈದ್ಯರು ತಲೆಯನ್ನೇ ತೆಗೆಯಬೇಕೆನ್ನುವುದು ಚಿಕಿತ್ಸೆಯೆನಿಸುವುದೇ? ಮುಂದೇನಾಗುವುದೋ? ದೇವರೇ ಬಲ್ಲ!
ಮುಂದೆ ವಿದ್ಯಾರ್ಥಿಯೊಬ್ಬ ತಾನು ವೈದ್ಯನಾಗಲು ಮೊದಲು NEET ಬರೆದು ಮೆಡಿಕಲ್ ಸೀಟನ್ನು ಮೊದಲು ಪಡೆಯಬೇಕು. 5 ವರ್ಷಗಳ ಕಠಿಣ ತರಬೇತಿಯ ನಂತರ ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು. ಇಷ್ಟಕ್ಕೇ ಮುಗಿಯಲಿಲ್ಲ ಅಗ್ನಿಪರೀಕ್ಷೆ. ಆತ NEXT ಎನ್ನುವ ಮತ್ತೊಂದು ಎಕ್ಸಿಟ್ ಪರೀಕ್ಷೆಯನ್ನು ತೇರ್ಗಡೆಯಾದರೆ ಮಾತ್ರ ವೃತ್ತಿಜೀವನಕ್ಕೆ ಲೈಸೆನ್ಸ್ ಸಿಗಲಿದೆ. ಮುಂದೆ ಸ್ನಾತಕೋತ್ತರ ಪದವಿಯ ಸೀಟಿಗೂ ಇದುವೇ ಮಾನದಂಡ. ಇದು ದೇಶದೆಲ್ಲೆಡೆ ಸಾರ್ವತ್ರಿಕವಾಗಿ ಜಾರಿಯಾಗಲಿದೆ. ಇಲ್ಲಿ ದೊಡ್ಡದೊಂದು ಸಮಸ್ಯೆಯಿದೆ. ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಯು ವೈದ್ಯನೆನಿಸಿಕೊಂಡರೂ ಆತನು NEXT ನಲ್ಲಿ ತೇರ್ಗಡೆಯಾಗದಿದ್ದರೆ ವೃತ್ತಿ ಜೀವನ ನಡೆಸುವಂತಿಲ್ಲ. ಇದೆಂಥ ಅತಂತ್ರ ಸ್ಥಿತಿ? ದೇಶದಲ್ಲಿ ವೈದ್ಯರ ಅಭಾವವಿದೆಯೆನ್ನುವ ಸರಕಾರದ ಈ ನಿರ್ಧಾರಕ್ಕೆ ಏನು ಅರ್ಥ? NMC ಕಾಯ್ದೆಯ ಅವಿವೇಕತನಕ್ಕೆ ಇದೊಂದು ಉದಾಹರಣೆ ಸಾಲದೇ? ಮೇಲಾಗಿ ಸ್ಪೆಷಾಲಿಟಿ ಕೋರ್ಸ್ಗಳನ್ನು ಬಯಸಿ ಬರುವ ವಿದ್ಯಾರ್ಥಿಗಳ ಬುದ್ಧಿಮತ್ತೆಯ ಆಗತ್ಯವೂ ಪದವೀಧರರ ವೃತ್ತಿಪರತೆಯ ಅವಶ್ಯಕತೆಗಳೂ ವಿಭಿನ್ನವಾಗಿರುವಾಗ ಇವರಿಬ್ಬರಿಗೂ ಒಂದೇ ಪರೀಕ್ಷೆಯನ್ನು ನಡೆಸುವುದರ ಮರ್ಮವೇನು?
ವೈದ್ಯರ ಮುಖ್ಯ ವಿರೋಧವಿರುವುದು ಕಾಯ್ದೆಯಲ್ಲಿ ಹೊಸದಾಗಿ ಮಂಡಿಸಿರುವ CHP(ಸಾಮುದಾಯಿಕ ಆರೋಗ್ಯ ಚಿಕಿತ್ಸಕರ)ಗಳ ವಿಚಾರದಲ್ಲಿ. ಸರಕಾರದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ತಜ್ಞವೈದ್ಯರ ತೀವ್ರ ಅಭಾವವಿದ್ದು, ಇದನ್ನು ಸರಿದೂಗಿಸಲು ಶೇ.30ರಷ್ಟು CHP (ಪರ್ಯಾಯ ಅರೆ/ಅವೈದ್ಯರು)ಗಳಿಗೆ ಪೂರ್ಣ ಪ್ರಮಾಣದ ವೈದ್ಯಕೀಯ ಸೇವೆಗೆ ಪರವಾನಿಗೆ ನೀಡುವುದು. CHP ಎಂದರೆ ಯಾರು? ಇದುವರೆಗೂ ವೈದ್ಯಕೀಯ ಪದವಿ/ ತರಬೇತಿ ಪಡೆಯದೇ ಚಿಕಿತ್ಸೆ ನೀಡುವವರನ್ನು QUACK ಎಂದು ಕರೆಯಲಾಗುತ್ತಿತ್ತು. ಲೈಸನ್ಸ್ ಇಲ್ಲದ ಇಂಥವರಿಗೆ ಕಾನೂನಾತ್ಮಕವಾಗಿ ಯಾವ ರಕ್ಷಣೆಯೂ ಇಲ್ಲದೆ ಇರುವ ಕಾರಣ ಶಿಕ್ಷೆಗೆ ಗುರಿಪಡಿಸಬಹುದಿತ್ತು. ಇಂಥವರಿಂದ ಜೀವಕ್ಕೆ ಆರೋಗ್ಯಕ್ಕೆ ಅಪಾಯ ತಂದುಕೊಂಡವರೆಷ್ಟೋ? NMC ಕಾಯ್ದೆಯು ತಲೆಬುಡ ವಿವೇಚನೆಯಿಲ್ಲದೇ ಇಂಥವರಿಗೆಲ್ಲಾ ಕಾನೂನಿನ ರಕ್ಷಣೆಯನ್ನು ನೀಡಿ, ಅಧಿಕೃತವಾಗಿ ಚಿಕಿತ್ಸೆಗೆ ಲೈಸೆನ್ಸ್ ನೀಡುವುದರ ಮೂಲಕ ಅಕ್ರಮವನ್ನು ಸಕ್ರಮವಾಗಿಸಿ ರೋಗಿಗಳ ಆರೋಗ್ಯದೊಂದಿಗೆ ಚೆಲ್ಲಾಟವಾಡಲು ಹೊರಟಿದೆ. ಪೈಲೆಟ್ಟುಗಳ ಅಭಾವವೆಂದು ರಿಕ್ಷಾ ಚಾಲಕರಿಗೆ ವಿಮಾನ ಹಾರಿಸಲು ಪರವಾನಗಿ ಕೊಡುವುದು ಹಾಸ್ಯಾಸ್ಪದವಲ್ಲವೇ? ಇದರಿಂದ ಮುಂದಾಗುವ ಭೀಕರ ಅನಾಹುತಗಳಿಗೆ ಯಾರು ಹೊಣೆ? ಪ್ರಜ್ಞಾವಂತ ನಾಗರಿಕರು ಒಮ್ಮೆ ಗಂಭೀರವಾಗಿ ಈ ಕುರಿತು ವಿಮರ್ಶಿಸಬೇಕಾದ ತುರ್ತು ಅಗತ್ಯವಿದೆ.
ಮಾನವ ಶರೀರದ ಅಂಗರಚನೆ, ಕಾರ್ಯವಿಧಾನ ಮತ್ತು ರೋಗಗಳ ಪ್ರಾಥಮಿಕ ಮಾಹಿತಿಯೂ ಇಲ್ಲದೇ ಇರುವ ಫಾರ್ಮಾಸಿಸ್ಟ್/ದಾದಿ/ ಫಿಜಿಯೋಥೆರಪಿಸ್ಟ್/ ಆಪ್ರೋಮೆಟ್ರಿಸ್ಟ್’ಗಳನ್ನು ಹಾಗೂ ಅಲೋಪತಿ ಚಿಕಿತ್ಸೆಯ ಗಂಧಗಾಳಿ ತಿಳಿಯದಿರುವ ಆಯುರ್ವೇದ/ಯುನಾನಿ/ ಹೋಮಿಯೋಪತಿ ವೈದ್ಯರನ್ನು ಆಧುನಿಕ ಚಿಕಿತ್ಸಾ ಪದ್ಧತಿಯನ್ನು ನಡೆಸಲು ಲೈಸೆನ್ಸ್ ನೀಡುವುದು ಅಪಾಯವಲ್ಲವೇ? ಕುಡಿಯಲು ನೀರು ಸಿಗಲಿಲ್ಲವೆಂದರೆ ಬೀರು ಕುಡಿಯಲು ಬರುವುದೇ? ಹೀಗೆ ಕುಡಿದರೂ ಎಷ್ಟು ದಿನ ತಾನೇ ಬದುಕಲು ಸಾಧ್ಯ? ಯಾವ ನಿರ್ದಿಷ್ಟ ಮಾನದಂಡಗಳಿಲ್ಲದೇ Bridge ಕೋರ್ಸಿನ ಮೂಲಕ ಅಡ್ಡದಾರಿಯಿಂದ ವೈದ್ಯರನ್ನು ಸೃಷ್ಟಿಸುವ ಅಕಾರ್ಯವು ಸಾಧುವೇ? ಪ್ರತಿಭಾವಂತರು 6 ವರ್ಷ ಕಲಿತರೂ ಮುಗಿಯದ ವಿದ್ಯೆಯನ್ನು ಕೇವಲ ಕೆಲವು ತಿಂಗಳಲ್ಲಿ ಕಲಿತು ವೈದ್ಯರಾಗುವುದು ಸಾಧ್ಯವೇ?
ಹಳೆಯ MCI ಕಾನೂನಿನ ಪ್ರಕಾರ ಖಾಸಗಿ ವೈದ್ಯಕೀಯ ಸಂಸ್ಥೆಗಳ ಶೇ.85ರಷ್ಟು ಸೀಟನ್ನು ಅದರ ಶುಲ್ಕವನ್ನು ನಿಗದಿ ಮಾಡುವುದು ಆಯಾ ರಾಜ್ಯ ಸರ್ಕಾರಗಳ ಕೈಯಲ್ಲಿದ್ದುದರಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವೂ ಕೈಗೆಟುಕುವಂತಿತ್ತು. ಆದರೆ ಹೊಸ NMC ಕಾಯ್ದೆಯಲ್ಲಿ ಕೇಂದ್ರಸರ್ಕಾರವು ಕೇವಲ ಶೇ.50ರಷ್ಟು ಸೀಟುಗಳಿಗಷ್ಟೇ ಶುಲ್ಕ ನಿಗದಿಪಡಿಸಬಹುದು. ಇನ್ನುಳಿದ ಶೇ.50ರಷ್ಟು ಸೀಟುಗಳ ಶುಲ್ಕ(ದುಬಾರಿ)ವನ್ನು ಆಯಾ ಸಂಸ್ಥೆಗಳು ತಾವೇ ನಿಗದಿ ಮಾಡಲಿದ್ದು ಲಕ್ಷಾಂತರ ಬಡ ವಿದ್ಯಾರ್ಥಿಗಳು ವೈದ್ಯರಾಗುವ ಕನಸಿಗೆ ಎಳ್ಳುನೀರು ಬಿಡುವಂತಾಗಲಿದೆ. ಇದನ್ನು ಜನಪರವೆನ್ನಬಹುದೇ? ಈಗಾಗಲೇ ಪ್ರಚಲಿತ ಕಳಪೆ ಗುಣಮಟ್ಟದ ವೈದ್ಯಕೀಯ ಶಿಕ್ಷಣದ ಸಮಸ್ಯೆಗೆ ಪರಿಹಾರ ನೀಡುವ ಬದಲು, ಕಾಯ್ದೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಹಿಂದಿದ್ದ ಕಠಿಣ ಮಾನದಂಡಗಳಿಂದ ಭಾರೀ ರಿಯಾಯಿತಿ ದೊರೆಯಲಿದ್ದು, ಭವಿಷ್ಯದಲ್ಲಿ ವೈದ್ಯರ ಗುಣಮಟ್ಟದಲ್ಲಿ ಇನ್ನಷ್ಟು ಕುಸಿತವಾಗುವುದು ನಿಶ್ಚಯ. ಎಲ್ಲೆಂದರಲ್ಲಿ ಅಣಬೆಗಳಂತೆ ಶಿಕ್ಷಣಕ್ಕೆ ಬೇಕಾದ ಕನಿಷ್ಟ ಸೌಲಭ್ಯವೂ ಹೊಂದಿರದ ವೈದ್ಯಕೀಯ ಕಾಲೇಜುಗಳು ತಲೆಯೆತ್ತಿ ವ್ಯವಸ್ಥೆಯು ಹಳ್ಳಹಿಡಿಯಲಿದೆ. ಇದೆಲ್ಲವನ್ನೂ ಪ್ರಾಜ್ಞರಾದ ಓದುಗರು ಊಹಿಸಿ ತರ್ಕಿಸಬೇಕು.
ಪ್ರತಿ ವರ್ಷವೂ ದೇಶದಾದ್ಯಂತ ಸುಮಾರು 500 ಕಾಲೇಜುಗಳಲ್ಲಿ 68,000 ವೈದ್ಯರು ಪದವಿಯನ್ನು ಪಡೆದರೂ ಇವರಿಗೆ ಸ್ನಾತಕೋತ್ತರ ಸೀಟುಗಳು ಲಭ್ಯವಿರುವುದು ಸುಮಾರು 23,000 ಮಾತ್ರ. ಇನ್ನುಳಿದ 45,000 ವೈದ್ಯರು ಉನ್ನತ ಶಿಕ್ಷಣದ ಕನಸಿಗಾಗಿ ಅತ್ತ ವೃತ್ತಿಯೂ ಮಾಡದೆ, ಇತ್ತ ಸ್ನಾತಕೋತ್ತರ ಶಿಕ್ಷಣಕ್ಕೆ ಸೀಟೂ ಸಿಗದೆ ತ್ರಿಶಂಕು ಸ್ಥಿತಿಯಲ್ಲಿ, ಅತ್ತ ದರಿ ಇತ್ತ ಪುಲಿ ಎಂಬಂತೆ ತೊಳಲಾಡುತ್ತಿದ್ದಾರೆ. ವೈದ್ಯಕೀಯ ರಂಗದಲ್ಲಿಯೂ ನಿರುದ್ಯೋಗ ಸಮಸ್ಯೆಯನ್ನೂ ಅಲ್ಲಗಳೆಯುವಂತಿಲ್ಲ. ಸಾಕಷ್ಟು ಸಂಬಳ ಮೂಲ ಸೌಲಭ್ಯಗಳ ಕೊರತೆಯಿಂದ ವೈದ್ಯರಲ್ಲಿ ಹೆಚ್ಚಿನವರು ಹಳ್ಳಿಗಳ ಕಡೆಗೆ ಮುಖ ಮಾಡುವುದಿಲ್ಲ. ಹೀಗಾಗಿ ಪಟ್ಟಣಗಳಲ್ಲಿ ವೈದ್ಯರ ಅತಿವೃಷ್ಟಿಯಾದರೆ, ಹಳ್ಳಿಗಳಲ್ಲಿ ಅನಾವೃಷ್ಟಿಯ ಅಪಸವ್ಯವಿದೆ. ಈ ತೊಡರುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ NMC ಕಾಯ್ದೆಯು ಜಾಣ ಕುರುಡನ್ನು ತಾಳಿದೆ. ಇದನ್ನು ಸರಿಪಡಿಸದೇ ಇದ್ದಲ್ಲಿ, ಎಮ್ಮೆಗೆ ಜ್ವರವೆಂದು ಎತ್ತಿಗೆ ಬರೆ ಎಳೆದಂತಾದೀತಷ್ಟೇ.
ಬದಲಾವಣೆಯು ಎಲ್ಲಾ ರಂಗದಲ್ಲೂ ಸ್ವಾಭಾವಿಕ ಅವಶ್ಯಕವಾಗಿದೆ. ಅದನ್ನು ಯಾರೂ ನಿರಾಕರಿಸುವಂತಿಲ್ಲ. ಅದರಿಂದ ಸಮಾಜಕ್ಕೆ ಒಳ್ಳೆಯ ಆಗುವಂತಿದ್ದರೆ ಲೇಸು. ಅಸತೋಮಾ ಸದ್ಗಮಯವೆನ್ನುವ ಶ್ರುತಿವಾಕ್ಯದ ಆಶಯವೂ ಅದೇ ತಾನೇ? ಆದರೆ ಇಲ್ಲಿ ಮಾತ್ರ ಹುರಿವ ಬಾಂಡಲೆಯಿಂದ, ಉರಿವ ಬೆಂಕಿಗೆ ಜಿಗಿದಂತೆ ಆಯಿತು. ನೂರು ಅಪವಾದಗಳ ನಡುವೆಯೂ ಹೇಗೋ ಕುಂಟುತ್ತಾ ಮುನ್ನಡೆಯುತ್ತಿದ್ದ ವೈದ್ಯಕೀಯ ರಂಗಕ್ಕೆ ಕಾಯಕಲ್ಪ ನೀಡುವ ನೆಪದಲ್ಲಿ ಮರ್ಮಾಂಗಕ್ಕೇ ಹೊಡೆದಂತಿದೆ ಸರ್ಕಾರದ ನಡೆ. ಇದನ್ನು ತುರ್ತಾಗಿ ವಿರೋಧಿಸಬೇಕಾದ ಅಗತ್ಯವಿದೆ. ರಾಜ್ಯಸಭೆಯಲ್ಲೇನಾದರೂ ಇದು ಅನುಮೋದನೆಯಾದರೆ ಮುಂದಿನ ಕರಾಳ ಭವಿಷ್ಯಕ್ಕೆ ನಾವೆಲ್ಲರೂ ಕಾರಣವಾಗುತ್ತೇವೆ. ಮೌನಂ ಸಮ್ಮತಿ ಲಕ್ಷಣಂ ಅಲ್ಲವೇ? ಅಸಹಿಷ್ಣುತೆಯೆಂದು ಅಕಾರಣವಾಗಿ ಸದಾ ಗಂಟಲು ಹರಿಯುವ ಬುದ್ಧಿಜೀವಿಗಳೇ ಇದೋ ನಿಮಗಿದೆ ಸುವರ್ಣ ಅವಕಾಶ. ನಿಮ್ಮ ಸ್ವಂತ ಆರೋಗ್ಯಕ್ಕಾಗಿ ಮತ್ತು ನಿಮ್ಮ ಮಕ್ಕಳ ಭವ್ಯ ಭವಿಷ್ಯಕ್ಕಾಗಿ NMC ಕಾಯ್ದೆಯ ವಿರುದ್ಧ ಧ್ವನಿ ಎತ್ತಿ. ನಾವಂತೂ ನಮ್ಮ ಧರ್ಮವನ್ನು ನಿಭಾಯಿಸಿದ್ದೇವೆ. ಸತ್ಯಮೇವ ಜಯತೇ.
ಬರಹ: ಡಾ॥ ಸಿ.ಜಿ.ರಾಘವೇಂದ್ರ ವೈಲಾಯ
ನವಜಾತ ಶಿಶು ಮತ್ತು ಮಕ್ಕಳ ತಜ್ಞರು,
ಶಿವಮೊಗ್ಗ
Discussion about this post