ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ ನಾಟ್ಯ ನಿಕೇತನದ ಗುರು ವಿದುಷಿ ರೇವತಿ ನರಸಿಂಹನ್ ಅವರ ಶಿಷ್ಯೆ ಅನನ್ಯಾ ಅಂಬರೀಶ್ ಗಿಳಿಯಾರ್ ಭರತನಾಟ್ಯ #Bharatanatya ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ.
ರಾಜಧಾನಿಯ ಜಯನಗರ 8ನೇ ಬಡಾವಣೆಯ ಜೆಎಸ್ಎಸ್ ಸಭಾಂಗಣದಲ್ಲಿ ಜೂ. 18ರ ಬೆಳಗ್ಗೆ 10.30ಕ್ಕೆ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಅನನ್ಯಾ ಅಂಬರೀಶ್ ರಂಗಪ್ರವೇಶ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ನರ್ತಕಿ, ಅಭಿನವ ಡಾನ್ಸ್ ಅಕಾಡೆಮಿ ನಿರ್ದೇಶಕಿ ನಿರುಪಮಾ ರಾಜೇಂದ್ರ, ಹಿರಿಯ ವಿಮರ್ಷಕ ಎಸ್. ನಂಜುಂಡರಾವ್, ಕರ್ನಾಟಕ ಶಾಸ್ತ್ರೀಯ ಸಂಗೀತ #CarnaticClassicalMusic ಗಾಯಕ ಕೆ. ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅನನ್ಯಾ ಅಂಬರೀಶ್ ರಂಗಪ್ರವೇಶದ #RangaPravesha ಪ್ರಸ್ತುತಿಗೆ ವಿದ್ವಾಂಸರಾದ ಡಿ.ಎಸ್. ಶ್ರೀವತ್ಸ (ಗಾಯನ), ಗುರು ರೇವತಿ ನರಸಿಂಹನ್(ನಟುವಾಂಗ), ಹರ್ಷ ಸಾಮಗ (ಮೃದಂಗ), ವಿವೇಕ ಕೃಷ್ಣ (ಕೊಳಲು) ಮತ್ತು ಶಂಕರ್ ರಾಮನ್ (ವೀಣೆ) ಸಹಕಾರವಿದೆ.
ಕಲಾವಿದೆಯ ಪರಿಚಯ
ಬೆಂಗಳೂರಿನ ವೈದ್ಯಕೀಯ ರಂಗದ ಉದ್ಯಮಿ ಅಂಬರೀಶ್ ಗಿಳಿಯಾರ್ ಮತ್ತು ವೀಣಾ ಅಂಬರೀಶ್ ಪುತ್ರಿ ಅನನ್ಯಾ ನೃತ್ಯ ಕ್ಷೇತ್ರಕ್ಕೆ ಅಡಿ ಇಟ್ಟಿದ್ದು 8ನೇ ವಯಸ್ಸಿನಲ್ಲಿ. ಮನೆಯ ಸುಸಂಸ್ಕೃತ, ಸಂಗೀತ, ಸಾಹಿತ್ಯದ ವಾತಾವರಣವೇ ಅನನ್ಯಾಗೆ ಕಲಾಸಕ್ತಿಮೂಡಿಸಿತು. ವೀಣಾ ವಾದಕರಾಗಿರುವ ಅಜ್ಜ ಗಣಪತಿ ಸೋಮಯಾಜಿ ಅವರ ಜೀವನ ಮತ್ತು ಸಾಧನೆಯೇ ಈಕೆಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿತು.
ವಿದುಷಿ ರೇವತಿ ನರಸಿಂಹನ್ ಅವರಲ್ಲಿ ಶಿಷ್ಯತ್ವ ಸ್ವೀಕರಿಸಿದ ಅನನ್ಯಾ, ಬಹುಬೇಗ ನರ್ತನವನ್ನು ತನ್ನದಾಗಿಸಿಕೊಳ್ಳುವತ್ತ ಆಸಕ್ತಿ ತೋರಿದ್ದು ವಿಶೇಷ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದ ಈಕೆ ಈಗ ವಿದ್ವತ್ ಪರೀಕ್ಷೆ ಅಭ್ಯಾಸ ನಿರತೆ. 2019ರಿಂದ ಕೇಂದ್ರ ಸಂಸ್ಕೃತಿ ಸಚಿವಾಲಯದ ಸಿಸಿಆರ್ಟಿ ವಿದ್ಯಾರ್ಥಿವೇತನ #CCRTScholarship ಪಡೆದು ನೃತ್ಯ ಕಲಿಕೆಯಲ್ಲಿ ಸಾಧನೆ ತೋರುತ್ತಿರುವುದು ಬಹು ವಿಶೇಷ.
ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸದಲ್ಲೂ ವಿಶೇಷ ಆಸಕ್ತಿ ತೋರಿದ್ದಾಳೆ ಅನನ್ಯಾ. ಈಗ ಸೀನಿಯರ್ ಹಂತದ ಅಭ್ಯಾಸದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ವಿದುಷಿ ಗಾಯತ್ರಿ ಮಯ್ಯ ಅವರ ಶಿಷ್ಯತ್ವದಲ್ಲಿ ಗಾಯನವನ್ನು ಕರಗತ ಮಾಡಿಕೊಳ್ಳುವತ್ತ ಸಾಗಿರುವುದು ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ.
ವಿವಿಧ ವೇದಿಕೆಯಲ್ಲಿ ಕಲಾ ಪ್ರದರ್ಶನ
ಬಾಲ ಕಲಾವಿದೆಯಾಗಿ `ರಾಮಾನುಜ ವೈಭವ’ ನೃತ್ಯ ನಾಟಕದಲ್ಲಿ ಪುಟ್ಟ ಕೃಷ್ಣನ ಅಭಿನಯದಿಂದ ಪ್ರೇಕ್ಷಕರ ಮನಗೆದ್ದ ಅನನ್ಯಾ ವೇದಿಕೆಯ ಪ್ರಸ್ತುತಿಗಳಿಗೆ ಹೇಳಿ ಮಾಡಿಸಿದ ಪ್ರತಿಭೆ. ನಾಟ್ಯನಿಕೇತನ ಸಂಸ್ಥೆಯ ವಾರ್ಷಿಕ ಮಹೋತ್ಸವಗಳಲ್ಲಿ ಸಹ ಕಲಾವಿದೆಯರೊಂದಿಗೆ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದು ಗಮನಾರ್ಹ ಸಂಗತಿ.
ಗುರು ರೇವತಿ ಅವರ ಮಾರ್ಗದರ್ಶನ ಹಲವು ವಿನೂತನ ಪ್ರಯೋಗಾತ್ಮಕ ನೃತ್ಯಗಳಲ್ಲಿ ಅನನ್ಯಾ ತನ್ನ ನೃತ್ಯ ಕೌಶಲ ಪಡಮೂಡಿಸಿ ಸೈ ಎನಿಸಿಕೊಂಡಿರುವುದು ಬೆಳವಣಿಗೆಯ ಸಂಕೇತವೇ ಆಗಿದೆ. ಶಂಕರ ಟಿವಿ ವಾಹಿನಿ ನೃತ್ಯ ಸ್ಪರ್ಧೆಯಲ್ಲಿ #DanceCompetition ಈಕೆಗೆ ಬಹುಮಾನ ಬಂದಿರುವುದು ಸ್ಪರ್ಧಾತ್ಮಕ ರಂಗಕ್ಕೆ ಅಣಿಗೊಳಿಸಿದಂತಾಗಿದೆ.
ಕುಮಾರನ್ಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಷಯ ಅಧ್ಯಯನ ಮಾಡುವುದರೊಂದಿಗೆ ಸಂಗೀತ #Music ಮತ್ತು ನೃತ್ಯ ಕ್ಷೇತ್ರಗಳಲ್ಲಿ ಸಾಧನೆ ಹೆಜ್ಜೆಗಳನ್ನು ಮೂಡಿಸುತ್ತಿರುವ ಅನನ್ಯಾಗೆ ಗುರುಕೃಪೆಯೊಂದಿಗೆ ಶ್ರದ್ಧೆ ಮತ್ತು ಆಸಕ್ತಿಗಳು ಕೈ ಹಿಡಿದು ಬೆಳೆಸುತ್ತಿವೆ. ಮೂಲ ವಿಜ್ಞಾನ ಮತ್ತು ಕಲೆಯನ್ನು ಜೀವನದ ಸಾಧನೆಗೆ ಒಗ್ಗಿಸಿಕೊಂಡು ಉನ್ನತ ಸ್ಥಾನಕ್ಕೆ ಏರಬೇಕು ಎಂಬುದು ಈಕೆಯ ಅಂತರಂಗದ ಆಶಯ. ಅದಕ್ಕೆ ಹೆತ್ತವರು ಅಹರ್ನಿಷಿ ಪ್ರೋತ್ಸಾಹ ನೀಡುತ್ತಿರುವುದು ಸುಕೃತವೇ ಸರಿ. ಭರವಸೆಯ ಕಲಾವಿದೆಯಾಗಿರುವ ಅನನ್ಯಾಗೆ ರಂಗ ಪ್ರವೇಶವು ಕಲಾಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ರೂಪಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post