ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಭಾರತಮಾತೆಯಲ್ಲಿ ಲೀನವಾದರು. ಅವರ ಪಾರ್ಥೀವ ಶರೀರವನ್ನು ನೋಡಲು ದೇಶದ ಗಣ್ಯಾತಿಗಣ್ಯರೆಲ್ಲ ತೆರಳಿದ್ದರು. ಆದರೆ ಇಲ್ಲಿ, ಲಾಲ್ ಕೃಷ್ಣ ಅಡ್ವಾಣಿಯವರ ಭೇಟಿ ವಿಶೇಷವಾದುದು. ಹೀಗಾಗಿ, ಕೆಲವು ಮಾತುಗಳನ್ನು ಹೇಳಲೇಬೇಕು.
ಈ ವಾಜಪೇಯಿ ಮತ್ತು ಅಡ್ವಾಣಿಯವರ ಬಲಪಂಥೀಯ ಜೋಡಿ ಭಾರತದ ರಾಜಕೀಯದ ದಿಕ್ಕನ್ನೇ ಬದಲಿಸಿತು ಮತ್ತು ಭಾರತವನ್ನು ಬದಲಿಸಿತು ಎಂದರೆ ತಪ್ಪಾಗಲಾರದು. ವಾಜಪೇಯಿಯವರಿಗಿಂತ ಮೂರು ವರ್ಷ ಚಿಕ್ಕವರಿರುವ ಅಡ್ವಾಣಿಯವರು. ಆದರೂ, ವಾಜಪೇಯಿಯವರ ಸುದೀರ್ಘ 65 ವರ್ಷದ ಸ್ನೇಹಿತರು, ಪಕ್ಷದ ಸಮಪಾಲುದಾರರು ಮತ್ತು ನಿರಂತರ 7 ದಶಕಗಳ ಸಹೋದ್ಯೋಗಿಗಳು.
ಇಬ್ಬರ ವ್ಯಕ್ತಿತ್ವಗಳು ಭಿನ್ನ ವಾಜಪೇಯಿ ವಿಶಾಲವಾದಿ ಮತ್ತು ಸಮಾಜವಾದಿ. ಆದರೆ ಅಡ್ವಾಣಿಯವರು ಕಟ್ಟರ್ ಹಿಂದೂವಾದಿ, ವಿಶೇಷ ಎಂದರೆ ಇಬ್ಬರದು ಆದರ್ಶ ಒಂದೇ ಅದು ಸಮರ್ಥ ಹಿಂದುರಾಷ್ಟ್ರ ಮತ್ತು ಬಲಿಷ್ಠ ಭಾರತ. ಇವರ ಅಭಿಪ್ರಾಯ ಭೇದಗಳು ಪಕ್ಷವನ್ನು ಒಡೆಯಲಿಲ್ಲ ಆದರೆ ಮತ್ತಷ್ಟು ಬಲಪಡಿಸಿತು.
ಇಬ್ಬರಿಗೂ ಅವರದೇ ಆದ ಹಿಂಬಾಲಕರು, ಇಬ್ಬರನ್ನು ಹಿಂಬಾಲಿಸುವ ಬೃಹತ್ ಸಮೂಹ, ಇಬ್ಬರು ಪಕ್ಷಕಟ್ಟಲು ಸುತ್ತದ ಊರಿಲ್ಲ, ಕೇರಿಯಿಲ್ಲ. ಇವರಿಬ್ಬರ ಪರಿಶ್ರಮವೇ ಇಂದಿನ ಎನ್ಡಿಎ ಸರ್ಕಾರದ ತಳಹದಿ. ಇವರಿಬ್ಬರ ಸಮಾನ ವೇದಿಕೆಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇಬ್ಬರ ಆಸಕ್ತಿಗಳು ಸಾಹಿತ್ಯ, ಪತ್ರಿಕೆ ಮತ್ತು ಸಿನಿಮಾ ಸಹ.
1951 ರಿಂದ 2014ರ ತನಕ ನಿರಂತರ 63 ವರ್ಷ ಪಕ್ಷ ಮತ್ತು ಸಂಘಟನೆ ಕಟ್ಟಿದ ಮತ್ತು ಬೆಳೆಸಿದ ನಿರ್ಮಾತೃಗಳು ಇವರು. ವಾಜಪೇಯಿಯವರು ಉತ್ತಮ ಸಂಸದೀಯ ಪಟು ಮತ್ತು ದೀನ ದಯಾಳ್ ಉಪಾಧ್ಯಾಯರ ನಂತರ ಪಕ್ಷದ ಜವಾಬ್ಧಾರಿ ಹೊತ್ತರು ಮತ್ತು ಅಡ್ವಾಣಿಯವರು ಆ ಮುಂದಿನ ದಿನಗಳ ಪರಿಶ್ರಮದ ಪಾಲುದಾರರಾದರು ನಂತರ ಅಡ್ವಾಣಿಯವರೇ ಪಕ್ಷವನ್ನು ನಡೆಸಿದರು. ಇಂದಿನ ಪ್ರಧಾನಿಯಾಗಬೇಕಾದವರು ಮತ್ತೊಬ್ಬ ಸಮರ್ಥನಿಗೆ ಜಾಗ ಮಾಡಿ ಹಿಂದೆ ಸರಿದರು.
ಇಂದು ಅಡ್ವಾಣಿಯವರ ಸ್ಥಾನದಲ್ಲಿ ನಿಂತು ಒಂದು ಕ್ಷಣ ಯೋಚಿಸಿದರೆ ಅವರ ಮುಂದೆ ಕಾಣುವುದು ಶೂನ್ಯತಾ ಭಾವ. ತನ್ನ ಸುದೀರ್ಘ ಸ್ನೇಹಿತ, ಪಕ್ಷದ ನೊಗದ ಮತ್ತೊಂದು ಎತ್ತು ಇಂದು ಇಲ್ಲ. ತನ್ನ ಎಲ್ಲಾ ಕಷ್ಟ ಸುಖಗಳಿಗೆ ಭಾಗಿಯಾದ ವ್ಯಕ್ತಿ, ಆದರ್ಶಗಳಿಗಾಗಿ ಸಹಭಾಗಿತ್ವದಲ್ಲಿ ನಿಸ್ವಾರ್ಥತೆಯಿಂದ ದುಡಿದ ಮನಗಳು ಮತ್ತು ದೇಹಗಳು ಇಂದು ಭೌದ್ದಿಕವಾಗಿ ಬೇರೆ ಬೇರೆಯಾದವು.
ವಾಜಪೇಯಿಯವರ ಅನಾರೋಗ್ಯವೇ ಅಡ್ವಾಣಿಯವರನ್ನು ಒಂಟಿಯಾಗಿಸಿತ್ತು. ದಶಕಗಳಿಂದ ಬದಲಾಗುತ್ತಿರುವ ರಾಜಕಾರಣ ಮತ್ತು ದೇಶದ ಆಂತರಿಕ ಮನಸ್ಥಿತಿಗಳು ಅವರನ್ನು ಬಲುವಾಗಿ ಕಾಡಿರಬಹುದು. ಇಂದು ಅವರ ಪಕ್ಷದಲ್ಲೇ ಇವರು ಅಕ್ಷರಸಹ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಗಣ್ಯರಾಗಿದ್ದಾರೆ ಎಂದರೆ ಅದು ಸುಳ್ಳಲ್ಲ.
ಅಡ್ವಾಣಿಯವರ ಕೋಟಿ ಕೋಟಿ ಅಭಿಮಾನಿಗಳಲ್ಲಿ ಅವರನ್ನು ರಾಷ್ಟ್ರಪತಿಯಾಗಿ ನೋಡುವ ಹಂಬಲವಿತ್ತು. ಆದರೆ ಅದು ಆಗಲಿಲ್ಲ. ಪರದೆಯ ಹಿಂದೆ ಸರಿದ ವ್ಯಕ್ತಿ ತನ್ನ ಆಪ್ತಮಿತ್ರರನ್ನು ಕಳೆದುಕೊಂಡು ಸಂಸ್ಥಾಪಕ ಮಂಡಳಿಯಲ್ಲಿ ಒಬ್ಬಂಟಿಯಾಗಿ ನಿಂತಿದ್ದಾರೆ ಭಾರತದ ಈಗಿನ ಭೀಷ್ಮ.
-ಪುನೀತ್ ಜಿ. ಕೂಡ್ಲೂರು, ಮೈಸೂರು
Discussion about this post