ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಡುಕಷ್ಟದಿಂದ ಜೀವನ ಆರಂಭಿಸಿ ಆನಂತರ ಚಿತ್ರರಂಗದಲ್ಲಿ ಏಳುಬೀಳುಗಳನ್ನು ದಾಟಿ ಅಂತಿಮವಾಗಿ ಯಶಸ್ಸಿನ ಉತ್ತುಂಗ ಏರಿದ ನಟ ಜಗ್ಗೇಶ್ Actor Jaggesh ಅವರು ರಾಜಕೀಯದಲ್ಲೂ ಸಹ ತಮ್ಮ ಛಾಪನ್ನು ಮೂಡಿಸಿ, ಪ್ರಧಾನಿ ನರೇಂದ್ರ ಮೋದಿ PM Narendra Modi ಅವರವರೆಗೂ ತಲುಪಿ ಈಗ ರಾಜ್ಯಸಭಾ ಸದಸ್ಯರಾಗಿದ್ದಾರೆ.
ತಮ್ಮ ಆರಂಭದ ದಿನಗಳಿಂದಲೂ ಮಂತ್ರಾಲಯದ ಗುರುರಾಯರನ್ನು ನಂಬಿಕೊಂಡೇ ಬಂದಿರುವ ಜಗ್ಗೇಶ್, ತಮ್ಮ ಜೀವನದ ಪ್ರತಿ ಯಶಸ್ಸಿಗೂ ರಾಯರೇ ಕಾರಣಕರ್ತರು ಎಂದು ಸರಳತೆಯನ್ನು ಮರೆಯುತ್ತಾರೆ. ಇಂತಹ ಜಗ್ಗೇಶ್ ಅವರ ಕಳೆದ ಒಂದೆರಡು ದಿನದ ಹಿಂದೆ ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು, ಈ ವೇಳೆ ರಾಯರ ಶೇಷವಸ್ತ್ರ, ಬೆಳ್ಳಿ ವಿಗ್ರಹ ಹಾಗೂ ರಾಯರ ಕುರಿತಾದ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವೇಳೆ ಜಗ್ಗೇಶ್ ಅವರ ಅನುಭವಕ್ಕೆ ಬಂದ ರಾಯರ ಪವಾಡವೊಂದನ್ನು ಅವರು ಹಂಚಿಕೊಂಡಿದ್ದು, ಅದನ್ನು ಅವರ ವಾಕ್ಯಗಳಲ್ಲೇ ಓದಿ..
ದೆಹಲಿಯಲ್ಲಿ ನಡೆದ ಒಂದು ಸಣ್ಣ ಘಟನೆ!
ಪ್ರಧಾನಿಗಳ ಭೇಟಿಯಾಗಲು ಕರೆ ಬಂತು ಎಂದಳು ಮಡದಿ ಪರಿಮಳ ಆಗ ನಾನು ಪೂಜೆ ಮಾಡುತ್ತಿದ್ದೆ. ಅಲ್ಲಿಂದಲೆ ಆಕೆಗೆ ಹೇಳಿದೆ ಪ್ರಧಾನಿಗಳಿಗೆ ರಾಯರ ಪ್ರತಿಮೆ ನೀಡುವೆ ಎಂದು.
ನಂತರ ಎಷ್ಟು ಹುಡುಕಿದರು ತಕ್ಷಣಕ್ಕೆ ದೊಡ್ಡ ಬೆಳ್ಳಿ ವಿಗ್ರಹ ದೊರೆಯಲಿಲ್ಲ. ಕಾರಣ, ಯಾರಾದರು ವೈಯಕ್ತಿಕ ಬೇಡಿಕೆಗಾಗಿ ಮಾತ್ರ ಮಾಡಿಕೊಡುತ್ತಾರೆ. ನನ್ನ ಬಳಿ ಸಮಯ ಇರಲಿಲ್ಲ. ಕಾರಣ, ವಿಮಾನ ನಿಲ್ದಾಣಕ್ಕೆ ಹೋಗಲು 3 ಗಂಟೆ ಸಮಯ ಮಾತ್ರ ಇತ್ತು. ಆಗ ನನ್ನ ಮಡದಿ ಎಲ್ಲೂ ಸಿಗುತ್ತಿಲ್ಲ. ದೊಡ್ಡ ವಿಗ್ರಹ ಏನು ಮಾಡೋದು ಎಂದಳು. ನಾನು ರಾಯರ ಇಚ್ಚೆ ಎಂದೆ. ಕೇವಲ ಹೊರಡುವ ಕೆಲ ನಿಮಿಷದಲ್ಲಿ ಕಿವಿ ತಜ್ಞ ಡಾ. ಸುನೀಲ್ (ಹಿಂದೆ ನನ್ನ ಹೊಸಕಾರಿಗೆ ರಾಯರ ವಿಗ್ರಹ ನೀಡಿದವ) ಪತ್ತೆ ಹಚ್ಚಿ ಸಿಗುವಂತೆ ಮಾಡಿದರು.
ಪ್ರಧಾನಿಯಗಳ ಕಾರ್ಯಾಲಯಕ್ಕೆ ಹೋಗಲು ಎರಡು ಗಂಟೆ ಸಮಯವಿತ್ತು. ಆಗ ನನ್ನ ಮನಸ್ಸಿಗೆ ತೋಚಿದ್ದು ಈ ವಿಗ್ರಹದ ಜೊತೆಗೆ ರಾಯರ ಚರಿತ್ರೆ ಪುಸ್ತಕ ನೀಡಬೇಕು ಎಂದು. ದೆಹಲಿಯಲ್ಲಿ ಯಾರನ್ನು ಕೇಳಿದರು ಇಲ್ಲಿ ಅದು ಸಿಗೋಲ್ಲ ಎಂದುಬಿಟ್ಟರು. ಅದೇನು ಅನ್ನಿಸಿತೋ ನನಗೆ ರಾಯರೆ ದಯಪಾಲಿಸಿ ಎಂದು ಪ್ರಾರ್ಥಿಸಿ ಸುಮ್ಮನಾದೆ.
ಮಂತ್ರಾಲಯ ಪಿಆರ್’ಒ ನರಸಿಂಹಾಚಾರ್ ಕರೆಮಾಡಿ ಇರುವ ವಿಳಾಸ ತಿಳಿಸಿದರು. ನನ್ನ ದೆಹಲಿ ಪಿಎ ಚಂದ್ರುಗೆ ತಕ್ಷಣ ಒಬ್ಬ ರಾಯರ ಭಕ್ತ ಅರ್ಚಕ ನೆನಪಾಗಿ ಓಡಿದ. ನೋಡಿದರೆ ಆ ಇಬ್ಬರೂ ಒಬ್ಬರೆ. ಪ್ರಧಾನಿಗಳು ಯಾವ ಭಾಷೆ ಬಲ್ಲರೋ ಅದೇ ಭಾಷೆಯ ರಾಯರ ಜೀವನ ಚರಿತ್ರೆಯ ಪುಸ್ತಕ ಸಿಕ್ಕಿತು.
ನಿಮ್ಮ ಮನಸ್ಸಿಗೆ ಏನು ಅನ್ನಿಸುತ್ತದೆ ಈ ಘಟನೆಗಳ ಕೇಳಿ?!
ನನಗೆ ರಾಯರು ಇದ್ದಾರೆ ಇದ್ದಾರೆ ಇದ್ದಾರೆ ತಮ್ಮ ಭಕ್ತರ ಪರವಾಗಿ ಎಂದು ದೃಢ ನಿರ್ಧಾರದಿಂದ ಬದುಕುತ್ತಿರುವೆ. ನಡೆದ ಘಟನೆಯನ್ನು ನನ್ನ ಪ್ರೀತಿ ಪಾತ್ರರಾದ ನಿಮ್ಮ ಜೊತೆ ಹಂಚಿಕೊಳ್ಳುವ ಮನಸಾಯಿತು ಹಂಚಿಕೊಂಡೆ. ನಾಳೆ ನನ್ನ 60ನೇ ಜನ್ಮದಿನ. ಹರಸಿ ಹಾರೈಸಿ
ಧನ್ಯವಾದ..
ರಾಯರ ಕೃಪೆ ನಿಮ್ಮ ಮೇಲು ಇರಲಿ ಎಂದು ಪ್ರಾರ್ಥನೆ.. ಶುಭಮಸ್ತು..
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post