ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಬೇಡಿಕೆ ಈಡೇರಿಸುವವರೆಗೆ ನಾವು ಸದನದಲ್ಲಿ ಧರಣಿ ಮುಂದುವರಿಸುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ನ್ಯಾಯಯುತವಾದ ಬೇಡಿಕೆ ಮಾಡಿದ್ದೇವೆ. ಒಂದು ಸಂತ್ರಸ್ತ ಹೆಣ್ಣುಮಗಳಿಗೆ ರಕ್ಷಣೆ ನೀಡಬೇಕು. ಕೂಡಲೇ ಆಕೆಯನ್ನು ಪತ್ತೆ ಹಚ್ಚಿ ಕರೆತರಬೇಕು. ಆಕೆ ವಿಡಿಯೋದಲ್ಲಿ ರಮೇಶ್ ಜಾರಕಿಹೊಳಿ ನನ್ನನ್ನು ಬಳಸಿಕೊಂಡಿರುವುದಾಗಿ ಆರೋಪಿಸಿದ್ದಾಳೆ. ಸಮ್ಮತಿ ಇಲ್ಲದೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ಹೀಗಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಒತಾಯಿಸಿದ್ದೇನೆ. ಜೊತೆಗೆ ಆರು ಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಬೇಕು. ಎಸ್ಐಟಿ ಮೇಲೆ ನಮಗೆ ನಂಬಿಕೆ ಇಲ್ಲ. ಎಸ್ಐಟಿಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ. ನಮಗೆ ಹೆಣ್ಣುಮಗಳಿಗೆ ರಕ್ಷಣೆ ಕೊಡಲಾಗದಿದ್ದರೆ ನಾವು ಯಾಕೆ ವಿಧಾನಸಭೆಗೆ ಬರಬೇಕು. ಎಲ್ಲಿ ಹೆಣ್ಣುಮಕ್ಕಳನ್ನು ಪೂಜಿಸುತ್ತಾರೋ ಅಲ್ಲಿ ಗೌರವ ಹೆಚ್ಚುತ್ತದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ಎಚ್.ವೈ. ಮೇಟಿ ವಿಚಾರದಲ್ಲಿ ಬೆಣ್ಣೆ, ಜಾರಕಿಹೊಳಿ ವಿಚಾರದಲ್ಲಿ ಸುಣ್ಣ ಎಂಬ ಗೃಹ ಸಚಿವ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೇಟಿ ವಿಚಾರದಲ್ಲಿ ತಾವು ಅವರ ರಾಜೀನಾಮೆ ಪಡೆದು ತನಿಖೆ ಮಾಡಲಾಗಿತ್ತು. ತನಿಖೆ ಬಳಿಕ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಪ್ರಶ್ನೆ ಮಾಡಿದ ಮಾಧ್ಯಮದವರ ಮೇಲೆ ಸಿದ್ದರಾಮಯ್ಯ ಗರಂ ಆದರು.
ನಿರ್ಭಯ ಪ್ರಕರಣದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಸರ್ಕಾರ ನೋಡಬೇಕು. ಅದರನ್ವಯ ಎಫ್ಐಆರ್ ದಾಖಲು ಮಾಡಬೇಕು. ಅವರ ಬೇಡಿಕೆಗೆ ನಾನೂ ಒಪ್ಪಿದ್ದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಐದಾರು ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿದ್ದೆ. ಇವರು ಒಂದಾದರೂ ತನಿಖೆಯನ್ನು ಸಿಬಿಐಗೆ ನೀಡಿದ್ದಾರೆಯೇ. ಸೋಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್ಐಟಿ ಮಾಡಿ ಸರ್ಕಾರಕ್ಕೆ ವರದಿ ಕೊಡುವಂತೆ ಹೇಳಿದ್ದಾರೆ.
ಎಸ್ಐಟಿ ಕೋರ್ಟ್ಗೆ ವರದಿ ನೀಡಬೇಕೇ ಹೊರತು ಸರ್ಕಾರಕ್ಕೆ ಅಲ್ಲ. ಹೀಗಾಗಿ ನಾವು ನಮ್ಮ ಧರಣಿ ಮುಂದುವರೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post