ಕಲ್ಪ ಮೀಡಿಯಾ ಹೌಸ್
ಮೈಸೂರು: ಪ್ಲಾಸ್ಟಿಕ್ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ದಕ್ಷಿಣ ಪಶ್ಚಿಮ ರೈಲ್ವೆಯ ಮೈಸೂರು ವಿಭಾಗದಲ್ಲಿ ಪ್ಲಾಸ್ಟಿಕ್ ರಹಿತ ಅಭಿಯಾನವನ್ನು ಆರಂಭಿಸಿದೆ.
ಮೈಸೂರು ರೈಲ್ವೆ ವಿಭಾಗದ ನಿಲ್ದಾಣಗಳಲ್ಲಿ ಹಾಗೂ ರೈಲುಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಅಭಿಯಾನವನ್ನು ಇಲಾಖೆ ಆರಂಭಿಸಿದೆ. ಅಭಿಯಾನದ ಭಾಗವಾಗಿ, ಪ್ರಮುಖ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಪೋಸ್ಟರ್ ಮತ್ತು ಸ್ಟಿಕ್ಕರ್ಗಳನ್ನು ಅಂಟಿಸಲಾಗಿದೆ. ಪ್ರಯಾಣಿಕರಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸಲು ನಿಲ್ದಾಣಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ.
ಪ್ಲಾಸ್ಟಿಕ್ ಮತ್ತು ಥರ್ಮಕೋಲ್’ನಿಂದ ಮಾಡಲ್ಪಟ್ಟ ಕ್ಯಾರಿ ಬ್ಯಾಗ್, ಬ್ಯಾನರ್, ಶೀಟ್, ಪ್ಲಾಸ್ಟಿಕ್ ಧ್ವಜಗಳು, ಕಪ್’ಗಳು, ಫಲಕಗಳು, ಚಮಚಗಳು ಇತ್ಯಾದಿಗಳನ್ನು ಬಳಸುವುದನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ. ರೈಲುಗಳು ಮತ್ತು ನಿಲ್ದಾಣಗಳಲ್ಲಿ ನಿಷೇಧವನ್ನು ಜಾರಿಗೆ ತರಲು ರೈಲ್ವೆಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಈ ಅಭಿಯಾನ ಆರಂಭವಾಗಿದೆ.
ಅಭಿಯಾನದ ಅವಧಿಯಲ್ಲಿ, ನಿಲ್ದಾಣಗಳ ಆವರಣದಲ್ಲಿ ಮತ್ತು ಚಲಿಸುವ ರೈಲುಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಹೊಂದಿರುವ ಪ್ರಯಾಣಿಕರನ್ನು ಪರೀಕ್ಷಿಸಲಾಗುತ್ತದೆ. ಪ್ಲಾಸ್ಟಿಕ್ ಬಳಕೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಪ್ರಯಾಣಿಕರಿಗೆ ಆರೋಗ್ಯ ತಪಾಸಕರು, ಟಿಕೆಟ್ ಪರಿಶೀಲನಾ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಸಲಹೆ ನೀಡುತ್ತಿದ್ದಾರೆ. ಅಲ್ಲದೇ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳ ಮೇಲೆ ನಿರ್ದಿಷ್ಟ ಗಮನವನ್ನು ಹೊಂದಿರುವ ಪ್ಲಾಸ್ಟಿಕ್ಗಳನ್ನು ಬಳಸದಿರಲು ಸೂಚನೆಗಳನ್ನು ನೀಡಲಾಗುತ್ತಿದೆ.
ಒಂದು ವಾರದ ಅವಧಿಯಲ್ಲಿ ಎಷ್ಟು ತಪಾಸಣೆ?
ಅಭಿಯಾನದ ಹಿನ್ನೆಲೆಯಲ್ಲಿ ಕಳೆದ ವಾರ ಸುಮಾರು 2300 ಪ್ರಯಾಣಿಕರನ್ನು ತಪಾಸಣೆ ನಡೆಸಲಾಗಿದ್ದು, ಸುಮಾರು 400 ಪ್ರಯಾಣಿಕರು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳನ್ನು ಹೊಂದಿರುವುದು ಪತ್ತೆಯಾಗಿದೆ. ಸುಮಾರು 1700 ಪ್ರಯಾಣಿಕರಿಗೆ ನಿಲ್ದಾಣ ಹಾಗೂ ರೈಲಿನ ಒಳಗೆ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಶಿವಮೊಗ್ಗ-ಸಾಗರದಲ್ಲಿ ಬಟ್ಟೆ ಬ್ಯಾಗ್ ವಿತರಣೆ
ಇನ್ನು, ಅಭಿಯಾನದ ಆರಂಭದ ಭಾಗವಾಗಿ ಶಿವಮೊಗ್ಗ ಹಾಗೂ ಸಾಗರ ಜಂಬಗಾರು ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ತಪಾಸಣೆ ನಡೆಸಲಾಯಿತು. ಪ್ಲಾಸ್ಟಿಕ್ ಚೀಲಗಳನ್ನು ಹೊಂದಿದ್ದ ಪ್ರಯಾಣಿಕರಿಗೆ ತಿಳುವಳಿಕೆ ನೀಡಿ ಬಟ್ಟೆ ಬ್ಯಾಗ್’ಗಳನ್ನು ವಿತರಣೆ ಮಾಡಲಾಯಿತು.
ಎರಡು ತಿಂಗಳ ನಂತರ ಬೀಳುತ್ತೆ ದಂಡ
ಇನ್ನು, ಅಭಿಯಾನ ಆರಂಭವಾದ ಎರಡು ತಿಂಗಳ ನಂತರ ಇಲಾಖೆ ಈ ಸಂಬಂಧಿಸಿದ ನಿಯಮಗಳನ್ನು ಕಠಿಣಗೊಳಿಸಲಿದೆ.
ಸರ್ಕಾರದ ಆದೇಶಗಳನ್ನು ಉಲ್ಲಂಘಿಸುವ ಮತ್ತು ನಿಷೇಧಿತ ಪ್ಲಾಸ್ಟಿಕ್ ಮತ್ತು ಥರ್ಮಕೋಲ್ ವಸ್ತುಗಳನ್ನು ನಿಲ್ದಾಣದ ಆವರಣ ಮತ್ತು ರೈಲುಗಳ ಒಳಗೆ ಸಾಗಿಸುವವರಿಗೆ ರೈಲ್ವೆ ದಂಡ ವಿಧಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ರೈಲು ಪ್ರಯಾಣದ ಸಮಯದಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳು ಸೇರಿದಂತೆ ಒಂದೇ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ರೈಲ್ವೆ ನಿಲ್ದಾಣಗಳಿಗೆ ತರಬಾರದು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವ ಮೂಲಕ ಪರಿಸರವನ್ನು ಉಳಿಸಲು ರೈಲ್ವೆಯೊಂದಿಗೆ ಕೈಜೋಡಿಸಿ ಎಂದು ದಕ್ಷಿಣ ಪಶ್ಚಿಮ ರೈಲ್ವೆ ಮೈಸೂರು ವಿಭಾಗದ ಅಧಿಕಾರಿಗಳು ವಿನಂತಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post