ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಡಿಸೆಂಬರ್ 25 ರಿಂದ ಡಿಸೆಂಬರ್ 28 ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ದ್ವಿತೀಯ ಆಯುರ್ವೇದ ಸಮ್ಮೇಳನದ #Second World Ayurveda Conference ಜನಜಾಗೃತಿಗಾಗಿ ಬೆಂಗಳೂರಿನ ಗಿರಿನಗರದಿಂದ – ಬಸವನಗುಡಿ – ಗಾಂಧಿ ಬಝಾರ್ – ಗಿರಿನಗರದವರೆಗೆ ಬೃಹತ್ ಆಯುರ್ವೇದ ಬೈಕ್ ಜಾಥಾ ನಡೆಯಿತು.
ಬೈಕ್ ಜಾಥಾವನ್ನು #Bike Jatha ಉದ್ಘಾಟಿಸಿದ ಮಾತನಾಡಿದ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು, ಆಟ – ಪಾಠ ಹಾಗೂ ಚಿಂತನೆ ಸರಿಯಾದಾಗ ಆರೋಗ್ಯಪೂರ್ಣ ಜೀವನ ನಮ್ಮದಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯರದ್ದು ವಸುಧೈವ ಕುಟುಂಬಕಂ ಎಂಬ ವಿಶ್ವಭ್ರಾತೃತ್ವದ ಚಿಂತನೆಯಾಗಿದೆ. ಕಾಯಿಲೆಗಳು ರಸ್ತೆಯ ಹಂಪ್ ಇದ್ದಂತೆ. ನಾವು ವೇಗವಾದ ಜೀವನಶೈಲಿಯನ್ನು ಅಳವಡಿಸಿಕೊಂಡಾಗ ಕಾಯಿಲೆಗಳು ಬರುತ್ತವೆ ಎಂದು ಅಭಿಪ್ರಾಯಪಟ್ಟರು.
ಬಸವನಗುಡಿಯ ಶಾಸಕ ಎಲ್. ಎ. ರವಿ ಸುಬ್ರಹ್ಮಣ್ಯ, ಖ್ಯಾತ ನಟ ಅಜಯ್ ರಾವ್, ಅತ್ರಿಮೆಡ್ ಫಾರ್ಮಾಸ್ಯುಟಿಕಲ್’ನ CEO ಹೃಷಿಕೇಶ್ ದಾಮ್ಲೇ, ಹಿರಿಯ ಪತ್ರಕರ್ತ ವಿನಾಯಕ ಭಟ್ಟ ಮೂರೂರು ಮುಂತಾದವರು ಉಪಸ್ಥಿತರಿದ್ದು ಬೈಕ್ ಜಾಥಾಕ್ಕೆ ಚಾಲನೆ ನೀಡಿದರು.
ದಕ್ಷಿಣದ ಏಳು ರಾಜ್ಯಗಳ 137 ಆಯುರ್ವೇದ ವಿದ್ಯಾಲಯಗಳನ್ನು ಧನ್ವಂತರಿ ರಥಯಾತ್ರೆಯು ಈಗಾಗಲೇ ಸಂದರ್ಶಿಸಿದ್ದು, ನಾಡಿನಾದ್ಯಂತ ರಥಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಮ್ಮೇಳನಕ್ಕೆ 3-4 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
