ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಮಾತೃ ಭಾಷೆಯ ಜನರಿಗೇ ದಯಮಾಡಿ ಕನ್ನಡ ಮಾತನಾಡಿ ಎಂದು ಗೋಗರೆಯುವ ಸ್ಥಿತಿ ಬಂದಿರುವುದು ದುರಾದೃಷ್ಟಕರ ಸಂಗತಿ ಎಂದು ಕನ್ನಡಪರ ಹೋರಾಟಗಾರ ರಾ.ನಂ. ಚಂದ್ರಶೇಖರ್ ವಿಷಾದ ವ್ಯಕ್ತಪಡಿಸಿದರು.
ಬನಶಂಕರಿ 3 ನೆಯ ಹಂತದ ಗುರುದತ್ತ ಬಡಾವಣೆಯಲ್ಲಿ ಇತ್ತೀಚೆಗೆ ಮಂಥನ್ ತಂಡದಿಂದ ಹಮ್ಮಿಕೊಂಡಿದ್ದ 65 ನೇ ಕನ್ನಡ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
ನಾವು ತುಂಬ ಕಷ್ಟಪಟ್ಟು ಹೋರಾಡಿ ನಾಡು, ಭಾಷೆಯ ಉಳಿವಿಗಾಗಿ ಕಷ್ಟಪಟ್ಟೆವು. ಆ ಹಂತದಲ್ಲಿ ಕನ್ನಡ ಬಾರದವರಿಗೆ ಕನ್ನಡ ಕಲಿಸಿ ಎಂದೆವು, ಅಂದಿನ ಹೋರಾಟದ ಹಾದಿಯಲ್ಲಿ ಅನಕೃ, ಚಿ.ಮೂ, ಮಾ.ರಾಮಮೂರ್ತಿ, ಚಂಪ, ಬಸವರಾಜ ಕಟ್ಟಿಮನಿ, ಪಾಪು ಮುಂತಾದವರು ಭಾಷೆಯ ಉಳಿವಿಗಾಗಿ ವಹಿಸಿದ ಶ್ರಮ ಮನನೀಯ ಎಂದರು.
ಒಂದು ಭಾಷೆ ತನ್ನ ನೆಲದಲ್ಲಿಯೇ ಉಳಿವಿಗಾಗಿ ಹೋರಾಟ ನಡೆಸುವಂತಾಗುವುದು ಶೋಚನೀಯ ಪರಿಸ್ಥಿತಿ ಎಂಬುದಾಗಿ ತಮ್ಮ ಭಾಷೆಗಾಗಿ ಹೋರಾಟದ ಜೀವನವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಗೋಕಾಕ್ ಹೋರಾಟದ ವೇಳೆ ಡಾ.ರಾಜಕುಮಾರ್ ಅವರು ನೀಡಿದ ಯೋಗದಾನವನ್ನು ಮೆಲಕು ಹಾಕಿದರು. ಸಾಹಿತಿಗಳಾದ ಡಾ.ಎಂ.ವಿ. ನಾಗರಾಜರಾವ್ ಹಾಗೂ ಮಂಥನ್ ತಂಡದ ಸದಸ್ಯರು ಭಾಗವಹಿಸಿದ್ದರು. ಎಂ.ಎನ್. ರಾಘವೇಂದ್ರರಾವ್ ಸ್ವಾಗತ ಕೋರಿ, ಕೃಷ್ಣಮೂರ್ತಿ ಜೋಯ್ಸ್ ವಂದಿಸಿದರು.
ರಾ.ನಂ. ಚಂದ್ರಶೇಖರ್ ಬಗ್ಗೆ
ಕನ್ನಡದ ಹಿರಿಯ ಹೋರಾಟಗಾರ, ಸಾಹಿತಿ, ರಾ.ನಂ. ಚಂದ್ರಶೇಖರ ಅವರು ಕಳೆದ ಮೂರ್ನಾಲ್ಕು ದಶಕಗಳಿಂದ ಬರವಣಿಗೆಯ ಮೂಲಕ ಕನ್ನಡ ಭಾಷಾ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ಕರ್ನಾಟಕ ಚೂಡಾಮಣಿ, ಕನ್ನಡರತ್ನ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಕನ್ನಡ ಬಾವುಟದ ರೂವಾರಿ, ಹಿಮಾಲಯದಲ್ಲಿ ಕನ್ನಡ ಧ್ಯಾನ, ಕನ್ನಡದ ವೀರ ಸೇನಾನಿ ಮ. ರಾಮಮೂರ್ತಿ, ವಿಮಾನ ಯಾನ ಮುಂತಾದವು.
ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post