ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರಾಜ್ಯದ ಖ್ಯಾತ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರಿಗೆ ಸಾಹಿತ್ಯ ಸಂಸ್ಕೃತಿ ವೇದಿಕೆ ವತಿಯಿಂದ ಅಧ್ಯಾತ್ಮ ಪ್ರಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನಕಪುರ ರಸ್ತೆ ತಾತಗುಣಿ ಗ್ರಾಮದ ಬಳಿ ಇರುವ ಅಗರದ ಸಾಹಿತ್ಯ ಸಂಸ್ಕೃತಿ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಾಹಿತ್ಯ ರತ್ನ ಆರ್. ಸದಾಶಿವಯ್ಯ ಕಲಾ ಮಂಟಪದಲ್ಲಿ ಏರ್ಪಡಿಸಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಗುಣವಂತ ಮಂಜು, ನಾವು ಕನ್ನಡಿಗರು ಒಂದಾಗಿ ನಿಂತು ಈ ರಾಜ್ಯೋತ್ಸವದ ಸಂದರ್ಭದಲ್ಲಿ ನಮ್ಮ ಅಸ್ತಿತ್ವ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯ ರಕ್ಷಣೆಗೆ ಎದ್ದು ನಿಲ್ಲಲೇಬೇಕಾಗಿದೆ. ರಾಜ್ಯೋತ್ಸವವೆಂದರೆ ನಮಗೆ ಸಂಭ್ರಮ ಮಾತ್ರವಲ್ಲ, ನಮ್ಮನ್ನು ನಾವು ಹುಡುಕಿಕೊಳ್ಳುವ, ನಮ್ಮನ್ನು ನಾವು ಮುನ್ನಡೆಸಿಕೊಳ್ಳುವ ಸಂಕಲ್ಪದ ದಿನ. ಕನ್ನಡ ನಾಡು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ನಾವೀಗ ಮುಖಾಮುಖಿಯಾಗಿ ಹೋರಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಅಗರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಂಗರಾಜುರವರಿಗೆ ಗೌರವ ಸನ್ಮಾನ ಆಯೋಜಿಸಿದ್ದ ಸಮಾರಂಭದ ಅಧ್ಯಕಷತೆಯನ್ನು ಸಾಹಿತ್ಯ ಸಂಸ್ಕೃತಿ ವೇದಿಕೆಯ ಅಧ್ಯಕ್ಷ ಆರ್. ಸದಾಶಿವಯ್ಯ ಜ.ಹಳ್ಳಿ ವಹಿಸಿದ್ದರು.
ಇಂಚರ ಕಲಾವೇದಿಕೆಯ ಅಧ್ಯಕ್ಷ ನಟರಾಜ್ ಬ್ಯಾಲಕೆರೆ, ಸುಧರ್ಮ ಸಾಂಸ್ಕೃತಿಕ ಕಲಾಸಂಘದ ಅಧ್ಯಕ್ಷೆ ಗೌರಮ್ಮ ಹಾಗೂ ಸಿದ್ಧಪಾಜಿ ಜನಪದ ಕಲಾಟ್ರಸ್ಟ್ ಅಧ್ಯಕ್ಷ ಗಂಗಾಧರಸ್ವಾಮಿ ಮತ್ತು ಲಯನ್ ಟಿ. ನಿರಂಜನ್ ಭಾಗವಹಿಸಿದ್ದರು.
ಅಗರ ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮಸ್ಥರು, ಎಲ್ಲಾ ಸ್ತ್ರೀ ಸಮಾಜ ಸಂಘಟನೆಗಳು, ಅಗರ ನಾಗರೀಕರ ಹಿತರಕ್ಷಣಾ ಸಮಿತಿ ಮತ್ತು ಕನ್ನಡಪರ ಸಂಘಟನೆಗಳ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ಮತ್ತು ವೇದಿಕೆಯ ಸದಸ್ಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















