ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಂಗಪ್ರವೇಶ ಅಥವಾ ಅರಂಗೇಟ್ರಮ್ ಒಂದು ಕಲಾವಿದನ ಬೆಳವಣಿಗೆಯ ಮೊದಲ ಹೆಜ್ಜೆ. ವರ್ಷಗಳಿಂದ ಸತತವಾಗಿ ಕಲೆಯನ್ನು ಅಭ್ಯಾಸ ಮಾಡಿ ಗುರುಗಳ ಅನುಮತಿ ಪಡೆದು ಕಲಾವಿದರು ಮೊದಲ ಬಾರಿ ವೇದಿಕೆಯನ್ನು ಏರುವ ಕಾರ್ಯಕ್ರಮವೇ ರಂಗಪ್ರವೇಶ. #Rangapravesh
ಉದಯೋನ್ಮುಖ ಕಲಾವಿದೆ ಕು.ಸ್ತುತಿಶ್ರೀ ತಿರುಮಲೆ ‘ನೃತ್ಯ ಕುಸುಮಾಂಜಲಿ’ ಶೀರ್ಷಿಕೆಯಡಿ 2023ರ ಆ.6ರಂದು ಬೆಂಗಳೂರಿನ ಜಯನಗರ ಬಡಾವಣೆಯ ಜೆ.ಎಸ್.ಎಸ್. ಸಭಾಂಗಣದಲ್ಲಿ ತಮ್ಮ ರಂಗಪ್ರವೇಶ ಪ್ರದರ್ಶನ ನೀಡಿದರು.

ಅದ್ಭುತವಾದ ಈ ರಂಗಪ್ರವೇಶವು ಓರ್ವ ನುರಿತ ಕಲಾವಿದೆ ನೀಡುವ ಕಾರ್ಯಕ್ರಮದಂತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ಉತ್ತಮ ಕಲಾವಿದೆಯಾಗುವ ಭರವಸೆ ಮೂಡಿಸಿದೆ.

ಸ್ತುತಿಶ್ರೀ ತನ್ನ ರಂಗಪ್ರವೇಶದ ಪ್ರಾರಂಭದಲ್ಲಿ ಪುಷ್ಪಾಂಜಲಿ, ಊತ್ತುಕ್ಕಾಡು ವೆಂಕಟಸುಬ್ಬಯ್ಯ ಕವಿಯ ಗಂಭೀರ ನಾಟ ರಾಗದ ಶ್ರೀವಿಘ್ನರಾಜಂಭಜೆಯ ನಂತರ ಮಿಶ್ರ ಅಲರಿಪು ನರ್ತಿಸಿ, ಈ ಬಂಧಗಳಲ್ಲೇ ತಮ್ಮ ಛಾಪನ್ನು ಮೂಡಿಸಿದರು. ತದನಂತರ ಕೆಲವು ಅಪರೂಪದ ರಚನೆಗಳಿಂದ ಪ್ರೇಕ್ಷಕರ ಮನ ಗೆದ್ದರು. ಇಳಂಗೋ ಅಡಿಗ ವಿರಚಿತ ಚಿಲಪ್ಪತಿಕಾರಮ್ ನಿಂದ ಆಯ್ದ ಒಂದು ಭಾಗ ‘ವಡವರೈ ಮತ್ತಾಕ್ಕಿ ವಾಸುಕಿಯೈ ನಾಣಾಕ್ಕಿ’. ಗುರುಗಳಾದ ವಿದುಷಿ ಶ್ರೀಲತಾ ಅವರ ವಿಶೇಷ ನೃತ್ಯ ಸಂಯೋಜನೆಯಲ್ಲಿ ಭಾವಪೂರ್ಣವಾಗಿ ಅಭಿನಯಿಸಿದರು. ಯಶೋದೆಯು ಮಣ್ಣುತಿನ್ನುತ್ತಿದ್ದ ಕೃಷ್ಣನ ಬಾಯಲ್ಲಿ ಮೂರು ಲೋಕಗಳನ್ನೂ ಕಾಣುತ್ತಾಳಷ್ಟೆ. ಹಾಗೆ ಕಾಣುವ ಆ ಲೋಕಗಳಲ್ಲಿ ಪ್ರಳಯವನ್ನೂ ಕೃಷ್ಣನ #Krishna ಲೀಲಾ ವಿಶೇಷಗಳನ್ನೂ ಕಾಣುತ್ತಾಳೆ.
ಅಪರೂಪದ ರಚನೆ
ರಂಗಪ್ರವೇಶದ ಮುಖ್ಯ ಭಾಗವಾಗಿ ಆಯ್ದುಕೊಂಡ ಮತ್ತೊಂದು ಅಪರೂಪದ ರಚನೆ, ಪದ್ಮಭೂಷಣ ಡಾ.ಎಮ್. ಬಾಲಮುರಳೀಕೃಷ್ಣ ಅವರ ‘ಷಣ್ಮುಖಪ್ರಿಯ ರಾಗದ ಓಂಕಾರ ಪ್ರಣವ ನಾದೋದ್ಭವ ಶ್ರುತಿ ಲಯ ಸ್ವರ’ ಈ ಅದ್ಭುತ ರಚನೆಯ ಕ್ಲಿಷ್ಟಕರ ಭಾವನೆಗಳನ್ನು ಗುರು ಶ್ರೀಲತಾ ಇವರು ನೃತ್ಯಕ್ಕೆ ಅಳವಡಿಸಿರುವುದು ಶ್ಲಾಘನೀಯವಾದರೆ, ಆ ಭಾವನೆಗಳನ್ನು ಅಷ್ಟೇ ಸೊಗಸಾಗಿ ನೃತ್ಯದಲ್ಲಿ ಅದ್ಭುತವಾಗಿ ಪ್ರದರ್ಶಿಸಿದ ಕಲಾವಿದೆಯನ್ನೂ ನಿಜಕ್ಕೂ ಮೆಚ್ಚಬೇಕು.

ಹಿಮ್ಮೇಳ ಒದಗಿಸಿದ ಪ್ರಖ್ಯಾತ ಕಲಾವಿದರು
ಪ್ರದರ್ಶನಕ್ಕೆ ಅತ್ಯಂತ ಉತ್ತಮ ಹಿಮ್ಮೇಳ ಒದಗಿಸಿದ ಪ್ರಖ್ಯಾತ ಕಲಾವಿದರು ಸಂಗೀತದಲ್ಲಿ ವಿ.ರೋಹಿತ್ ಭಟ್, ನಟುವಾಂಗದಲ್ಲಿ ವಿದುಷಿ ಶ್ರೀಲತ ನಿಕ್ಷಿತ್, ಮೃದಂಗ ವಿದ್ವಾನ್ ಹರ್ಷ ಸಾಮಗ, ಕೊಳಲು ಶ್ರೀ ಮಹೇಶ್ ಸ್ವಾಮಿ, ವೈಲಿನ್ ನಲ್ಲಿ ಶ್ರೀ ಪ್ರಾದೇಶ್ ಆಚಾರ್, ಹಾಗೂ ರಿದಮ್ ಪ್ಯಾಡ್ ನಲ್ಲಿ ಶ್ರೀ ಕಾರ್ತಿಕ್ ಭಟ್. ಭರತನಾಟ್ಯ ಗುರು ಶ್ರೀಮತಿ ರೂಪಶ್ರೀ ಮದುಸೂದನ್ ಇವರು ಈ ಅದ್ಭುತ ಕಾರ್ಯಕ್ರಮವನ್ನು ಚೊಕ್ಕವಾಗಿ ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post