ಭದ್ರಾವತಿ: ನಗರಸಭೆ ವ್ಯಾಪ್ತಿಯ ಎಲ್ಲಾ 35 ವಾರ್ಡುಗಳಿಗೂ ಶುದ್ದ ಕುಡಿಯುವ ನೀರನ್ನು ಒದಗಿಸಲು ನಗರಸಭೆ ಮುಂದಾಗಬೇಕೆಂದು ಆಗ್ರಹಿಸಿ ಸರ್.ಎಂ.ವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗು ನಗರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ನೇತೃತ್ವದಲ್ಲಿ ಪೌರಾಯುಕ್ತ ಮನೋಹರ್ ರವರಿಗೆ ಶನಿವಾರ ಮನವಿ ಸಲ್ಲಿಸಿದರು.
ನಗರದ ಆನೇಕೊಪ್ಪ ಹಾಗು ಹಳೇನಗರದ ಪಂಪ್ಹೌಸ್ಗಳಲ್ಲಿ ವಿದೇಶಿ ತಂತ್ರಜ್ಞಾನ ಮಾದರಿ ಮೈಕ್ರೋ ಪೈಬರ್ ಪಿಲ್ಟ್ರೇಷನ್ ಘಟಕ ಅಳವಡಿಸುವುದು, ಜನ್ನಾಪುರದ ಸರ್ವೆ ನಂ:70 ರ ಸುಮಾರು 46 ಎಕರೆ ವಿಸ್ತೀರ್ಣವುಳ್ಳ ಕೆರೆಯ ಅಭೀವೃದ್ದಿ ಕಾರ್ಯ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ, ತಾಲೂಕು ಆಡಳಿತ ಹಾಗು ಭದ್ರಾ ಮೀನುಗಾರರ ಸಂಘ ಹಾಗು ಕೆರೆಯ ಸುತ್ತಮುತ್ತಲ ರೈತರನ್ನೊಳಗಂಡಂತೆ ಸಭೆ ಕರೆದು ಅಭಿವೃದ್ದಿ ಪಡಿಸಲು ಮುಂದಾಗಬೇಕು.
ಸೀಗೇಬಾಗಿ ವ್ಯಾಪ್ತಿಯ ಸರಕಾರಿ ಕೆರೆಯನ್ನು(ಕ್ಯಾದಗೆರೆ) ಪ್ರವಾಸಿ ತಾಣವನ್ನಾಗಿಸುವುದು, ಎನ್ಟಿಬಿ ಕಛೇರಿಯಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸುವುದು, ಕಛೇರಿ ದುರಸ್ಥಿ ಮಾಡುವುದು, ಮೆಸ್ಕಾಂ ಕೌಂಟರ್, ನೆಮ್ಮದಿ ಕೇಂದ್ರಕ್ಕೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮೇಲ್ಚಾವಣಿ ನಿರ್ಮಿಸುವುದು, ಸೂಕ್ತ ಸಿಬ್ಬಂದಿ ನೇಮಕ, ಮೇಜರ್ ಹಾಗು ಮೈನರ್ ವಾಟರ್ ಸಪ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ನಗರ ಸಭೆಯಿಂದಲೇ ವೇತನ ಪಾವತಿಸುವುದು, ಆರೋಗ್ಯ ಕೇಂದ್ರದಲ್ಲಿ ಹೈಟೆಕ್ ಲ್ಯಾಬ್ನ್ನಾಗಿ ಪರಿವರ್ತಿಸುವುದು, ನೂತನವಾಗಿ ಬಾಕ್ಸ್ ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸರ್.ಎಂ.ವಿ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳಾದ ಆರ್.ಮುಕುಂದಯ್ಯ, ಗ್ಸೇವಿಯರ್, ಭವಾನಿ ಶಂಕರ್, ದೇವರಾಜ ಅರಸು ಜನಸ್ಪಂದನ ಸೇನೆಯ ಸತೀಶ್, ಎಚ್.ಮಂಜುನಾಥ್, ಕೃಷ್ಣ, ಷಣ್ಯುಗಂ, ಶಿವ, ಶೇಖರಪ್ಪ, ಗುರುಪ್ರಸಾದ್, ಮೊಹಮದ್ ರಫಿ, ಎಸ್.ಶಿವರಾಜ್ ಭದ್ರಾ ಸುವರ್ಣ ಸೇನೆಯ ಮುಖಂಡರಾದ ರಮಾ ವೆಂಕಟೇಶ್, ಲಕ್ಷ್ಮೀ ಸೇರಿದಂತೆ ಅನೇಕರು ಭಾಗವಹಿಸಿ ಪೌರಾಯುಕ್ತ ಮನೋಹರ್ ರವರಿಗೆ ಮನವಿ ಸಲ್ಲಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post