ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕಳೆದ ವಾರ ಶವವಾಗಿ ಕೊಳೆತ ಸ್ಥಿತಿಯಲ್ಲಿ ದೊರೆತಿದ್ದ ಮಹಿಳೆಯೋರ್ವರನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಹಿರಿಯೂರಿನ ನಿವಾಸಿ ರಂಗರಾಜು ಆರೋಪಿಯಾಗಿದ್ದು, ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ.
ತಮ್ಮ ತಾಯಿ ನಾಗಲಕ್ಷ್ಮಿ ಕಾಣಿಯಾಗಿದ್ದಾರೆ ಎಂದು ಅವರ ಪುತ್ರ ಶ್ರೀನಾಥ್ ಅವರು ದೂರು ದಾಖಲಿಸಿದ್ದರು. ದೂರು ನೀಡಿದ ಕೆಲವು ದಿನಗಳ ನಂತರ ಅನುಮಾನಗೊಂಡು ಅವರ ಮನೆಗೆ ಹಾಕಲಾಗಿದ್ದ ಬೀಗ ಒಡೆದು ನೋಡಿದಾಗ ಆಕೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆನಂತರ ಶ್ರೀನಾಥ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಆರಂಭಿಸಲಾಗಿತ್ತು.
ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ಎಚ್.ಟಿ. ಶೇರ್, ಡಿವೈಎಸ್’ಪಿ ಸುಧಾಕರ್ ಎಸ್. ನಾಯಕ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ನಂಜಪ್ಪ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಸಿಬ್ಬಂದಿಗಳಾದ ವೆಂಕಟೇಶ್, ಕುಮಾರ್, ಅನಿಲ್ ಕುಮಾರ್, ವಿಶಾಲಾಕ್ಷಿ, ವಿಜಯಕಲಾ, ನವೀನ್ ಪವಾರ್, ಪ್ರಸನ್ನಸ್ವಾಮಿ, ಅಪೂರ್ವ, ಯದುನಂದನ ಅವರುಗಳ ತಂಡದ ಸಹಕಾರದಲ್ಲಿ ಅತಿ ಶೀಘ್ರದಲ್ಲೇ ಪ್ರಕರಣವನ್ನು ಬೇಧಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಜಿಲ್ಲಾ ರಕ್ಷಣಾಧಿಕಾರಿಗಳು ಇವರನ್ನು ಶ್ಲಾಘಿಸಿದ್ದಾರೆ.
ಹತ್ಯೆಗೆ ಕಾರಣವೇನು?
ಮೃತ ನಾಗಲಕ್ಷ್ಮೀ ಅವರೊಂದಿಗೆ ಆರೋಪಿಯ ಪತ್ನಿ ಅನ್ನಪೂರ್ಣ ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದರು. ನಾಗಲಕ್ಷ್ಮಿ ಅವರೊಂದಿಗೆ ಆರೋಪಿ ಸಲುಗೆಯಿಂದಿದ್ದ ಕಾರಣ ಆತನ ಹೆಂಡತಿಗೆ ಚಾಡಿ ಮಾತುಗಳನ್ನು ಹೇಳುವ ಜೊತೆಯಲ್ಲಿ ಅನ್ನಪೂರ್ಣ ಅವರನ್ನು ಬಿಟ್ಟು ಬಿಡುವಂತೆ ಒತ್ತಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೋಪಗೊಂಡ ಆರೋಪಿ ನಾಗಲಕ್ಷ್ಮಿಗೆ ಬುದ್ದಿ ಕಲಿಸಬೇಕು ಎಂಬ ಕಾರಣದಿಂದ ಆಕೆಯನ್ನು ಕೊಲೆ ಮಾಡಿ, ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಕದ್ದಿದ್ದಾನೆ. ಅನುಮಾನ ಬಾರದಿರಲಿ ಎಂಬ ಕಾರಣದಿಂದ ಮನೆಗೆ ಹೊರಗಿನಿಂದ ಬೀಗ ಹಾಕಿಕೊಂಡು ಹೋಗಿದ್ದಾಗಿ ಆರೋಪಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get In Touch With Us info@kalpa.news Whatsapp: 9481252093
Discussion about this post