ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಾವುದೇ ಒಂದು ಸಂಸ್ಥೆಯು ಸ್ವಾಯತ್ತತೆಯನ್ನು ಪಡೆಯುವುದು ಅದು ಕೇವಲ ಆಡಳಿತಾತ್ಮಕ ಸ್ವಾತಂತ್ರ್ಯವನ್ನು ಪಡೆಯುವುದಲ್ಲ. ಅದು ಗುಣಮಟ್ಟ, ಜವಾಬ್ದಾರಿ, ನಾವಿನ್ಯತೆ ಮತ್ತು ಶೈಕ್ಷಣಿಕ ನಾಯಕತ್ವದ ಹೊಸ ಅಧ್ಯಾಯವಾಗಿದೆ ಎಂದು ಸಾಗರದ ಎಲ್ಬಿ ಮತ್ತು ಎಸ್ಬಿಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ ಎ. ಎಸ್ ಲಕ್ಷ್ಮೀಶ್ ತಿಳಿಸಿದರು.
ಪಿಇಎಸ್ ಐಎಎಮ್ಎಸ್ ಕಾಲೇಜಿನ ಐಕ್ಯುಎಸಿ ಸೆಲ್ನ ವತಿಯಿಂದ ಕಾಲೇಜಿನ ಅಧ್ಯಾಪಕರಿಗಾಗಿ ಆಯೋಜಿಸಲಾಗಿದ್ದ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದ ಮೊದಲ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅವರು ಮಾತನಾಡಿದರು.
ಸ್ವಾಯತ್ತತೆಯನ್ನು ಹೊಂದುವುದರಿಂದ ಸಂಸ್ಥೆಯು ತನ್ನದೇ ಆದ ಪಠ್ಯಕ್ರಮವನ್ನು ರೂಪಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ವಿದ್ಯಾರ್ಥಿಗಳ ಅಗತ್ಯತೆ ಮತ್ತು ಕೈಗಾರಿಕೆಗಳ ನಿರೀಕ್ಷೆಗಳಿಗೆ ಅನುಗುಣವಾಗಿ ಹೊಸ ವಿಷಯಗಳನ್ನು ಸೇರಿಸಿಕೊಳ್ಳಬಹುದು. ಮೌಲ್ಯಮಾಪನ ವ್ಯವಸ್ಥೆಯನ್ನು ಸುಧಾರಿಸಬಹುದು. ಉದ್ಯೋಗ ಕೌಶಲ್ಯ, ಸಂಶೋಧನೆ, ಉದ್ಯಮಶೀಲತೆ ಮತ್ತು ಜೀವನಕೌಶಲ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಬಹುದು. ಆದರೆ ಸ್ವಾತಂತ್ರ್ಯದ ಜೊತೆಗೆ ಹೆಚ್ಚಿನ ಹೊಣೆಗಾರಿಕೆಯೂ ಸಹ ಬರುತ್ತದೆ. ಸ್ವಾಯತ್ತ ಸಂಸ್ಥೆಯಲ್ಲಿ ಪ್ರತಿಯೊಬ್ಬ ಶಿಕ್ಷಕರು ಕೇವಲ ಪಾಠ ಮಾಡುವವರಾಗಿರದೆ ಮಾರ್ಗದರ್ಶಕರಾಗಿ, ಸಂಶೋಧಕರಾಗಿ, ನಾವೀನ್ಯತೆಯ ಸೃಷ್ಟಿಕರ್ತರಾಗುವ ಅಗತ್ಯವಿದೆ ಎಂದು ತಿಳಿಸಿದರು.
Also read: ರಾಷ್ಟ್ರೀಯ ವೈದ್ಯರ ದಿನಾಚರಣೆ | ಮೈತ್ರಿ – ಕುಮದ್ವತಿ ಶಾಲೆ ವತಿಯಿಂದ ಶುಭ ಹಾರೈಕೆ
ಎರಡನೆಯ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಮಾಜಿ ಕುಲಸಚಿವರಾದ ಡಾ. ಎ ಎಮ್ ನರಹರಿಯವರು ಮಾತನಾಡಿ, ಸ್ವಾಯತ್ತತೆ ಪಡೆದ ಸಂಸ್ಥೆಗಳು ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ಸ್ವತಂತ್ರವಾಗಿ ಯೋಜಿಸುವ ಮತ್ತು ಅನುಷ್ಠಾನಗೊಳಿಸುವ ಅಧಿಕಾರ ಹೊಂದಿರುತ್ತದೆ. ಆದರೆ ಪದವಿಯನ್ನು ವಿಶ್ವವಿದ್ಯಾಲಯವೇ ನೀಡುತ್ತದೆ. ಯುಜಿಸಿ, ರಾಜ್ಯ ಸರ್ಕಾರದ ನಿಯಮಗಳು ಅನ್ವಯವಾಗುತ್ತವೆ. ಅಲ್ಲದೆ ನ್ಯಾಕ್ ಮತ್ತು ಇತರ ಗುಣಮಟ್ಟದ ಸಂಸ್ಥೆಗಳ ಮಾನದಂಡಗಳನ್ನು ಪಾಲಿಸಬೇಕಿದೆ. ಹೊಸ ಕೋರ್ಸ್ಗಳನ್ನು ಆರಂಭಿಸಬಹುದು. ಕೈಗಾರಿಕೆಗಳೊಂದಿಗೆ ಪಠ್ಯಕ್ರಮ ರೂಪಿಸಬಹುದು ಎಂದರು
ಸ್ಥಳೀಯ ಅಗತ್ಯಕ್ಕೆ ಅನುಗುಣವಾದ ಪಠ್ಯಕ್ರಮ ರಚನೆ ಹಾಗೂ ಮೌಲ್ಯಮಾಪನ ವ್ಯವಸ್ಥೆ ಸುಧಾರಿಸಲು ಅವಕಾಶವಿದೆ. ಅಕಾಡೆಮಿಕ್ ಕೌನ್ಸಿಲ್, ಬೋರ್ಡ್ ಆಫ್ ಸ್ಟಡೀಸ್, ಫೈನಾನ್ಸ್ ಕಮಿಟಿ, ಎಕ್ಸಾಮಿನೇಷನ್ ಸೆಲ್, ಆಡಳಿತ ಮತ್ತು ಸುಶಾಸನ ಮೊದಲಾದ ಹೊಸ ವಿಭಾಗಗಳನ್ನು ಸ್ಥಾಪಿಸಿ ಅವುಗಳ ಸಮನ್ವಯದ ಮೂಲಕ ಕಾರ್ಯನಿರ್ವಹಿಸುವ ಅಗತ್ಯವಿದೆ. ಸ್ವಾಯತ್ತ ಸಂಸ್ಥೆಯಲ್ಲಿ ಪ್ರಾಂಶುಪಾಲರು ಮತ್ತು ಅಧ್ಯಾಪಕರುಗಳೇ ನಿಜವಾದ ಬದಲಾವಣೆಯ ಶಿಲ್ಪಿಗಳಾಗಿದ್ದು ಅವರ ಪಾತ್ರ ಮಹತ್ವಪೂರ್ಣವಾದುದು ಹಾಗೆಯೇ ಹಲವಾರು ಸವಾಲುಗಳೂ ಸಹ ಇಲ್ಲಿ ಕಾಣುತ್ತೇವೆ ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಸುದರ್ಶನ್ ಜಿ ಎಂ ಅವರು ಅಧ್ಯಕ್ಷತೆಯ ನುಡಿಗಳನ್ನು ಆಡುತ್ತಾ ಸಂಸ್ಥೆಯು ಕಳೆದ 18 ವರ್ಷಗಳಲ್ಲಿ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ವಿಶ್ವವಿದ್ಯಾಲಯದ ಸಂಯೋಜನೆಯಿಂದ ಮುಂದುವರೆದು ಸ್ವಾಯತ್ತ ಮಾನ್ಯತೆಯನ್ನು ಪಡೆಯುವುದು ಸಾಧನೆಯ ಮುನ್ನಡೆಯನ್ನು ಸೂಚಿಸುತ್ತದೆ. ಈ ಹಂತದಲ್ಲಿ ಬರುವ ಎಲ್ಲಾ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಸಾಂಘಿಕ ಪ್ರಯತ್ನದ ಮೂಲಕ ಹೊಸ ಯಶಸ್ಸನ್ನು ಗಳಿಸೋಣ ಎಂದು ನುಡಿದರು.
ಸಮಾರಂಭದಲ್ಲಿ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಚಾಲಕರಾದ ಡಾ. ಅಶ್ವಿನಿ, ಕಂಪ್ಯೂಟರ್ಸೈನ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರೂಪ ಡಿ. ಎಸ್, ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಮೋಹನ್ ಡಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ ಹೆಚ್ ಆರ್, ಅವರು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ನಾಗರಾಜ ಟಿ ಡಿ ಅವರು ಸ್ವಾಗತಿಸಿ, ಐಕ್ಯೂಎಸಿ ಸಂಚಾಲಕರಾದ ಶ್ರೀ ಪ್ರಶಾಂತ್ ಕುಮಾರ್ ಅವರು ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








