ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ಭಾರತದಲ್ಲಿ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನವನ್ನು ವಾಸ್ತವ ಜಗತ್ತಿನೊಂದಿಗೆ ಸಂಯೋಜಿಸುವ ಮಹತ್ವಾಕಾಂಕ್ಷಿ ಹೆಜ್ಜೆಯಾಗಿ, ಮೆಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL) ಹಾಗೂ ಅನಲಾಗ್ (Analog) ಕಂಪನಿಗಳು ಭೌತಿಕ ಬುದ್ಧಿಮತ್ತೆ( Physical Intelligence) ಕಾರ್ಯತಂತ್ರದ ಪಾಲುದಾರಿಕೆಗೆ ಇಂದಿಲ್ಲಿ ಒಡಂಬಡಿಕೆ ಮಾಡಿಕೊಂಡಿದೆ.
ಹೈದರಾಬಾದ್ ನ ಖಾಸಗಿ ಹೋಟೆಲಿನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಈ ಮಹತ್ವದ ಒಪ್ಪಂದಕ್ಕೆ ಎರಡು ಸಂಸ್ಥೆಗಳ ಮುಖ್ಯಸ್ಥರು ಸಹಿ ಹಾಕಿದರು.
ಈ ಒಪ್ಪಂದದ ಮೂಲಕ ಭಾರತದಲ್ಲಿ ‘ಭೌತಿಕ ಬುದ್ಧಿಮತ್ತೆ’(Physical Intelligence)” ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸುವ ಉದ್ದೇಶ ಹೊಂದಿದೆ.
“ಯಂತ್ರಗಳು ಸುತ್ತಮುತ್ತಲಿನ ಪರಿಸರವನ್ನು ಗ್ರಹಿಸಿ, ಅರ್ಥಮಾಡಿಕೊಂಡು, ಅನುಭವದಿಂದ ನಿರಂತರವಾಗಿ ಕಲಿಯುತ್ತಾ ಸ್ವಯಂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವೇ ಫಿಸಿಕಲ್ ಇಂಟೆಲಿಜೆನ್ಸ್. ಇದು ಕೇವಲ ಪೂರ್ವನಿಗದಿತ ಪ್ರೋಗ್ರಾಮಿಂಗ್ಗೆ ಸೀಮಿತವಾಗದೇ, ಪ್ರತಿಯೊಂದು ಅನುಭವದೊಂದಿಗೆ ಮತ್ತಷ್ಟು ಬುದ್ಧಿವಂತಿಕೆಯನ್ನು ಅಳವಡಿಸಿಕೊಳ್ಳುವ ತಂತ್ರಜ್ಞಾನವಾಗಿದೆ.
Physical Intelligence ಯಾವುದಕ್ಕೆ ಉಪಯೋಗ?
ಈ ಪಾಲುದಾರಿಕೆಯಲ್ಲಿ ಎಂಇಐಎಲ್ ತನ್ನ ಬಲಿಷ್ಠ ಮೂಲಸೌಕರ್ಯ ಅನುಭವ ಹಾಗೂ ದೇಶವ್ಯಾಪಿ ಕಾರ್ಯವ್ಯಾಪ್ತಿಯನ್ನು ಒದಗಿಸಿದರೆ, ಅನಲಾಗ್ ತನ್ನ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಮತ್ತು ಫಿಸಿಕಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಒದಗಿಸಲಿದೆ.
Also Read>> ರಾಷ್ಟ್ರೀಯ ವೈದ್ಯರ ದಿನಾಚರಣೆ | ಮೈತ್ರಿ – ಕುಮದ್ವತಿ ಶಾಲೆ ವತಿಯಿಂದ ಶುಭ ಹಾರೈಕೆ
ಎರಡೂ ಸಂಸ್ಥೆಗಳು ಸೇರಿ ಮೂಲಸೌಕರ್ಯ, ಸಾರಿಗೆ, ಕೈಗಾರಿಕಾ ವ್ಯವಸ್ಥೆಗಳು, ಸಾರ್ವಜನಿಕ ಸುರಕ್ಷತೆ, ಸ್ಮಾರ್ಟ್ ನಗರಗಳು ಹಾಗೂ ಬುದ್ಧಿವಂತ ಕಾರ್ಯಾಚರಣೆಗಳ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲಿವೆ.
ಈ ಒಪ್ಪಂದವು ಭಾರತ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ) ನಡುವಿನ ತಂತ್ರಜ್ಞಾನ ಸಹಕಾರಕ್ಕೂ ಹೊಸ ಬಲ ನೀಡುವ ಮಹತ್ವದ ಬೆಳವಣಿಗೆಯಾಗಿದೆ.
ಭಾರತಕ್ಕೆ Physical Intelligence
ಎಂಇಐಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ವಿ. ಕೃಷ್ಣಾರೆಡ್ಡಿ ಮಾತನಾಡಿ, “ಮೂಲಸೌಕರ್ಯ ಅಭಿವೃದ್ಧಿಯೇ ದೇಶದ ಪ್ರಗತಿಯ ಆಧಾರವಾಗಿದೆ. ಮುಂದಿನ ದಿನಗಳಲ್ಲಿ ಮೂಲಸೌಕರ್ಯಗಳು ಬುದ್ಧಿವಂತ, ಪರಸ್ಪರ ಸಂಪರ್ಕಿತ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತಿರಬೇಕು. ಅನಲಾಗ್ ಜೊತೆಗೆ ನಮ್ಮ ಪಾಲುದಾರಿಕೆ ಇದೇ ಗುರಿಯನ್ನು ಸಾಧಿಸಲು ನೆರವಾಗಲಿದೆ. ಭಾರತಕ್ಕೆ ಫಿಸಿಕಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಪರಿಚಯಿಸುವಲ್ಲಿ ನಾವು ಹೆಮ್ಮೆಪಡುತ್ತೇವೆ,” ಎಂದು ಪ್ರತಿಪಾದಿಸಿದರು.
ಅನಲಾಗ್ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲೆಕ್ಸ್ ಕಿಪ್ಮನ್ ಮಾತನಾಡಿ, “ಭಾರತವು ವಿಶ್ವದ ಅತ್ಯಂತ ಮಹತ್ವದ ತಂತ್ರಜ್ಞಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇಲ್ಲಿನ ಎಂಜಿನಿಯರಿಂಗ್ ಪ್ರತಿಭೆ, ಮೂಲಸೌಕರ್ಯ ಅಭಿವೃದ್ಧಿಯ ಮಹತ್ವಾಕಾಂಕ್ಷೆ ಹಾಗೂ ಉದ್ಯಮಶೀಲತೆ ವಿಶ್ವದಲ್ಲೇ ವಿಶಿಷ್ಟವಾಗಿದೆ. ಫಿಸಿಕಲ್ ಇಂಟೆಲಿಜೆನ್ಸ್ ತಂತ್ರಜ್ಞಾನಕ್ಕೆ ಭಾರತ ಅತ್ಯುತ್ತಮ ವೇದಿಕೆ. ಈ ಕನಸನ್ನು ಸಾಕಾರಗೊಳಿಸಲು ಎಂಇಐಎಲ್ ಸೂಕ್ತ ಪಾಲುದಾರ. ನಾವು ಸೇರಿ ಮಿತಿಗಳಿಲ್ಲದ ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಪಾಲುದಾರಿಕೆಯಡಿ ಬುದ್ಧಿವಂತ ಮೂಲಸೌಕರ್ಯ, ಸ್ಮಾರ್ಟ್ ನಗರ ವ್ಯವಸ್ಥೆಗಳು, ಸುಧಾರಿತ ಸಂವೇದಕ (ಸೆನ್ಸರ್) ತಂತ್ರಜ್ಞಾನ, ಕಾರ್ಯಾಚರಣಾ ಬುದ್ಧಿಮತ್ತೆ, ರೋಬೋಟಿಕ್ಸ್, ಸ್ಪೇಷಿಯಲ್ ಕಂಪ್ಯೂಟಿಂಗ್, ಕೈಗಾರಿಕಾ ಪರಿವರ್ತನೆ, ಸಾರ್ವಜನಿಕ ಸುರಕ್ಷತೆ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ವಾಸ್ತವ ಜಗತ್ತಿನ ಅನ್ವಯಿಕೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ.
ಇದರ ಜೊತೆಗೆ ಭಾರತದಲ್ಲಿ ತಂತ್ರಜ್ಞಾನ ಕೌಶಲ್ಯ ವೃದ್ಧಿ, ಪ್ರತಿಭಾ ಅಭಿವೃದ್ಧಿ ಹಾಗೂ ನವೋದ್ಯಮ ಪರಿಸರ (ಇಕೋಸಿಸ್ಟಮ್) ನಿರ್ಮಾಣಕ್ಕೂ ಎರಡೂ ಸಂಸ್ಥೆಗಳು ದೀರ್ಘಾವಧಿ ಹೂಡಿಕೆ ಮಾಡಲು ಮುಂದಡಿ ಇರಿಸಿವೆ.
ಈ ಘೋಷಣೆಯು ಭಾರತವನ್ನು ಜಾಗತಿಕ ಮಟ್ಟದ ಉನ್ನತ ತಂತ್ರಜ್ಞಾನ ಹೂಡಿಕೆ ಕೇಂದ್ರವಾಗಿ ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ಇದೇ ವೇಳೆ, ತೆಲಂಗಾಣ ರೈಸಿಂಗ್ ಗ್ಲೋಬಲ್ ಸಮಿಟ್ನಲ್ಲಿ ಸಹಿ ಮಾಡಲಾದ ಮೂಲಭೂತ ಒಪ್ಪಂದಗಳ ನಂತರ ಭಾರತದಲ್ಲಿ ಅನಲಾಗ್ ತನ್ನ ತಂತ್ರಜ್ಞಾನ ವಿಸ್ತರಣೆಯನ್ನು ಮತ್ತಷ್ಟು ವೇಗಗೊಳಿಸಿರುವುದಕ್ಕೂ ಇದು ವೇದಿಕೆಯಾಗಿದೆ.
ಎಂಇಐಎಲ್ ಕುರಿತು
ಹೈದರಾಬಾದ್ ಕೇಂದ್ರ ಕಚೇರಿಯನ್ನು ಹೊಂದಿರುವ ಮೆಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL) ಕಳೆದ ಮೂರು ದಶಕಗಳಿಂದ ನೀರಾವರಿ, ವಿದ್ಯುತ್, ಸಾರಿಗೆ, ಹೈಡ್ರೋಕಾರ್ಬನ್, ಉತ್ಪಾದನಾ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿರುವ ಭಾರತದ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಯಾಗಿದೆ.
ಅನಲಾಗ್ ಕುರಿತು
ಅಬುಧಾಬಿ ಕೇಂದ್ರ ಕಚೇರಿಯನ್ನು ಹೊಂದಿರುವ ಅನಲಾಗ್ ಸಂಸ್ಥೆ, ಜಿ-42 (G42) ಪ್ರಮುಖ ಹೂಡಿಕೆ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಜನರು, ಸ್ಥಳಗಳು ಮತ್ತು ವಸ್ತುಗಳನ್ನು ಒಂದೇ ಬುದ್ಧಿವಂತ ಜಾಲದಲ್ಲಿ ಸಂಪರ್ಕಿಸುವ ಫಿಸಿಕಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಸರ್ಕಾರಗಳು ಹಾಗೂ ಜಾಗತಿಕ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸ್ಮಾರ್ಟ್ ನಗರಗಳು, ಸ್ವಯಂಚಾಲಿತ ಮೂಲಸೌಕರ್ಯ, ರೋಬೋಟಿಕ್ಸ್ ಮತ್ತು ಇಮರ್ಸಿವ್ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ.
ದೇಶದ ಭವಿಷ್ಯದಲ್ಲಿ ಭೌತಿಕ ಬುದ್ಧಿಮತ್ತೆ ಮಹತ್ವದ ಪಾತ್ರ: ಪಿ.ವಿ.ಕೃಷ್ಣಾರೆಡ್ಡಿ
ಭಾರತವು ಇಂದು ಒಂದು ದೇಶಾವಷ್ಟೇ ಅಲ್ಲ ಅದು ಒಂದು ಖಂಡವಾಗಿದೆ. ಭಾರತದ ತಾಕತ್ತು ಅದರ ಜನಸಂಖ್ಯೆ, ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ “ಭೌತಿಕ ಬುದ್ಧಿಮತ್ತೆ” (Physical Intelligence) ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಮೇಗ ಇಂಜಿನಿಯರಿಂಗ್ Infrastructure ವ್ಯವಸ್ಥಾಪಕ ನಿರ್ದೇಶಕರಾದ ಪಿ.ವಿ.ಕೃಷ್ಣಾರೆಡ್ಡಿ ಪ್ರತಿಪಾದಿಸಿದರು.
‘ಅನಲಾಗ್’ ನೊಂದಿಗಿನ ಒಡಂಬಡಿಕೆ ವೇಳೆ ಮಾತನಾಡಿದ ಅವರು ಎಂಇಐಎಲ್ ಪ್ರಸ್ತುತ ಮೂಲ ಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ದೇಶವು ಸಹ ಮೂಲಸೌಕರ್ಯ ಕ್ಷೇತ್ರದಲ್ಲಿ ಪ್ರಗತಿ ಸಾಗಿಸುತ್ತಿದೆ ಭವಿಷ್ಯದಲ್ಲಿ ಮೂಲ ಸೌಕರ್ಯ ಯೋಜನೆಗಳನ್ನು ಕಬ್ಬಿಣ ಮತ್ತು ಸಿಮೆಂಟ್ ಜೊತೆಗೆ ‘ಬುದ್ಧಿವಂತಿಕೆ’ಯೊಂದಿಗೆ ನಿರ್ಮಾಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬೌತಿಕ ಬುದ್ಧಿಮತ್ತೆ ಮತ್ತು ಕೃತಕ ಬುದ್ಧಿಮತ್ತೆ (AI) ಜೊತೆಗಿನ ಸಮೀಕರಣದ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಕಲಿದೆ ಎಂದರು.
‘ಕೃತಕ ಬುದ್ಧಿ ಮತ್ತೆ’ಯಿ0ದ ಸಂಚಾರದಟ್ಟಣೆ ಸಮಸ್ಯೆಗಳನ್ನು ಪತ್ತೆ ಮಾಡಬಹುದು ಭೌತಿಕ ಬುದ್ಧಿಮತ್ತೆಯಿಂದ (ಫಿಸಿಕಲ್ ಇಂಟಲಿಜೆನ್ಸ್) ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಅಪಘಾತಗಳಂತಹ ಸನ್ನಿವೇಶಗಳನ್ನು ತಡೆಯಬಹುದು.
ಭೌತಿಕ ಬುದ್ಧಿ ಮತ್ತು ವಿದ್ಯುತ್ ನೀರಾವರಿ ಕುಡಿಯುವ ನೀರು ಇವಿ ವಾಹನಗಳು ಸೇರಿದಂತೆ ಎಲ್ಲೆಡೆ ಬಳಕೆ ಮಾಡಬಹುದು ಎಂದರು ಇಂದಿನ ಎಂಇಐಎಲ್ ಮತ್ತು ಅನಲಾಗ್ ನಡು ನಡುವಿನ ಈ ಒಡಂಬಡಿಕೆ ಮುಂದಿನ ದಿನಗಳಲ್ಲಿ ಹಲವು ಕ್ಷೇತ್ರಗಳ ಮೇಲೆ ಪೂರಕ ಪರಿಣಾಮಗಳಿಗೆ ಸಾಕ್ಷಿಯಾಗಲಿದೆ ಎಂಬ ಭರವಸೆ ತಮಗಿದೆ ಎಂದು ಪಿ.ವಿ.ಕೃಷ್ಣಾರೆಡ್ಡಿ ನುಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









