ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೃಹಲಕ್ಷ್ಮೀ ಯೋಜನೆ ಕುರಿತು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿರುವ ಅಕ್ರಮಗಳ ಕುರಿತು ಎಸ್ಐಟಿ ತನಿಖೆ ನಡೆಸುವಂತೆ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತ ಎಂದರೆ: ಕಲೆಕ್ಷನ್, ಕಮಿಷನ್, ಭ್ರಷ್ಟಾಚಾರ (ಬಿಕ್ಕಟ್ಟು), (ಕುಸಿತ) ಎಂದು ಟೀಕಿಸಿದ ಅವರು ಸಿಎಜಿ ವರದಿ ಪ್ರಕಾರ, 19,020 ಫಲಾನುಭವಿಗಳ ಹೆಸರಿನಲ್ಲಿ ಸುಮಾರು 60.70 ಕೋಟಿ ಪಾವತಿಸಲಾಗಿದೆ. ಒಟ್ಟು 3,03,000 ಕಂತುಗಳು ಒಂದೇ ಬ್ಯಾಂಕ್ ಖಾತೆಗೆ ಜಮೆಯಾಗಿವೆ. ಒಂದೇ ತಿಂಗಳಲ್ಲಿ 8,995 ಕಂತುಗಳು ಪುನರಾವರ್ತನೆಯಾಗಿ ಜಮೆಯಾಗಿರುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಸುಮಾರು 1.08 ಲಕ್ಷ ಮತಪಟ್ಟ ವ್ಯಕ್ತಿಗಳ ಖಾತೆಗಳಿಗೆ 5.79 ಲಕ್ಷ ಕಂತುಗಳ ಮೂಲಕ ಸುಮಾರು 116 ಕೋಟಿ ಹಣ ವರ್ಗಾವಣೆಯಾಗಿದೆ. ಸತ್ತವರ ಖಾತೆಗೆ ಹಣ ಹೋಗಿದ್ದರೆ ಅದು ಯಾರಿಗೆ ತಲುಪಿತು. ಆ ಹಣವನ್ನು ಸರ್ಕಾರ ಹೇಗೆ ವಾಪಸ್ ಪಡೆಯಲಿದೆ ಎಂಬ ಪ್ರಶ್ನೆಯನ್ನು ಎತ್ತಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಲೆ ಏರದ ವಸ್ತುವೇ ಇಲ್ಲ ಎಂದು ಆರೋಪಿಸಿದ ಅವರು, ಬೆಳಿಗ್ಗೆ ಕುಡಿಯುವ ಹಾಲಿನಿಂದ ಹಿಡಿದು ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ, ಸಬ್-ರಿಜಿಸ್ಟ್ರಾರ್ ಕಚೇರಿ ಸೇವೆಗಳು, ಟ್ರಾನ್ಸ್ ಫಾರ್ಮರ್ ಅಳವಡಿಕೆ ಸೇರಿದಂತೆ ಎಲ್ಲೆಡೆ ದರ ಹೆಚ್ಚಳವಾಗಿದೆ ಎಂದು ದೂರಿದರು.
ಸರ್ಕಾರದ ಸಾವಿರ ದಿನಗಳ ಆಡಳಿತದಲ್ಲಿ ಸಾವಿರ ಹಗರಣಗಳು ನಡೆದಿವೆ ಎಂದು ಆರೋಪಿಸಿದ ಅವರು, ಭ್ರಷ್ಟಾಚಾರ ಕಾಂಗ್ರೆಸ್ ಆಡಳಿತದ ಗುರುತಾಗಿದೆ ಎಂದು ಟೀಕಿಸಿದರು. ಬಿಜೆಪಿ ಸರ್ಕಾರದ ವಿರುದ್ಧ ಹಿಂದೆ 40% ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್, ಇಂದು ಅಧಿಕಾರಿಗಳೇ 63% ಕಮಿಷನ್ ಬಗ್ಗೆ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು 65% ಎಂದು ಹೇಳಿದರೂ, 63% ಎಂಬ ಅಂಕಿ-ಅಂಶಗಳೇ ಈಗ ಕೇಳಿಬರುತ್ತಿವೆ ಎಂದು ಆರೋಪಿಸಿದರು.
ರಾಜ್ಯದ ಪ್ರತಿಯೊಬ್ಬ ನವಜಾತ ಶಿಶುವಿನ ತಲೆಯ ಮೇಲೂ ಸುಮಾರು ಒಂದೂವರೆ ಲಕ್ಷ ರೂಪಾಯಿ ಸಾಲದ ಹೊರೆ ಹಾಕಲಾಗಿದೆ ಎಂದು ಆರೋಪಿಸಿದ ಅವರು, ಕರ್ನಾಟಕದ ಇತಿಹಾಸದಲ್ಲಿ ಒಟ್ಟು 21 ಮುಖ್ಯಮಂತ್ರಿಗಳ ಪೈಕಿ ಸಿದ್ದರಾಮಯ್ಯ ಅವರ ಅವಧಿಯಲ್ಲೇ ರಾಜ್ಯದ ಒಟ್ಟು ಸಾಲದ ಶೇ.54ರಷ್ಟು ಸಾಲ ಮಾಡಲಾಗಿದೆ ಎಂದು ಆರೋಪಿಸಿದರು.
ಗೃಹಲಕ್ಷ್ಮೀ ಯೋಜನೆ 2023ರ ಆಗಸ್ಟï 16ರಂದು ಆರಂಭವಾಗಿದ್ದು, ಆರಂಭದಲ್ಲಿ ತಾಂತ್ರಿಕ ಸಮಸ್ಯೆಗಳು ಇರಬಹುದು ಎಂದು ಒಪ್ಪಿಕೊಳ್ಳಬಹುದಾದರೂ, ನಂತರ ಬಹುಕೋಟಿ ಅಕ್ರಮಗಳು ನಡೆದಿರುವುದಾಗಿ ಸಿಎಜಿ ವರದಿ ಹೇಳಿದೆ ಎಂದು ಡಾ. ಸರ್ಜಿ ಆರೋಪಿಸಿದರು.
ಯೋಜನೆ ಆರಂಭದಲ್ಲಿ ಆನ್ಲೈನ್ ನೋಂದಣಿಗಾಗಿ ಖಾಸಗಿ ಕಂಪ್ಯೂಟರ್ ಕೇಂದ್ರಗಳಲ್ಲಿ ಮಹಿಳೆಯರು 100 ರಿಂದ 300ರವರೆಗೆ ಹಣ ನೀಡಿ ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಹೇಳಿದರು.
Also read: ಶಿಕ್ಷಕರು ನಾವೀನ್ಯತೆಯ ಸೃಷ್ಟಿಕರ್ತರಾಗುವುದು ಅತ್ಯಗತ್ಯ: ಡಾ ಎ. ಎಸ್. ಲಕ್ಷ್ಮೀಶ್
23,262 ಪಾವತಿಗಳ ಮೂಲಕ 46.52 ಕೋಟಿ ಹಣವನ್ನು ಬ್ಯಾಂಕ್ ಖಾತೆ ವಿವರಗಳೇ ಇಲ್ಲದವರಿಗೆ ಪಾವತಿಸಲಾಗಿದೆ. ಬ್ಯಾಂಕ್ ಖಾತೆಯೇ ಇಲ್ಲದಿದ್ದರೆ ಡಿಬಿಟಿ ಮೂಲಕ ಹಣ ಹೇಗೆ ವರ್ಗಾವಣೆಯಾಯಿತು ಎಂಬುದರ ಬಗ್ಗೆ ಸರ್ಕಾರ ಉತ್ತರಿಸಬೇಕು ಎಂದರು.
ಗೃಹಲಕ್ಷ್ಮೀ ಯೋಜನೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ವಿವರಗಳನ್ನು ಬದಲಾಯಿಸಿರುವ ದಾಖಲೆಗಳು ತನಿಖೆಯಲ್ಲಿವೆ. ಸರ್ಕಾರವೇ ಗ್ಯಾರಂಟಿ ಹಣವನ್ನು ಬ್ಯಾಂಕ್ ಸಾಲಕ್ಕೆ ಹೊಂದಾಣಿಕೆ ಮಾಡಬಾರದು ಎಂದು ಆದೇಶ ಹೊರಡಿಸಿದ್ದರೂ ಇಷ್ಟೊಂದು ಖಾತೆ ಬದಲಾವಣೆ ಏಕೆ ನಡೆದಿದೆ ಎಂದು ಪ್ರಶ್ನಿಸಿದರು.
2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮೀ ಕಂತುಗಳನ್ನು ಸರ್ಕಾರ ಬಿಡುಗಡೆ ಮಾಡಲಿಲ್ಲ. ಸುಮಾರು 5,000 ಕೋಟಿ ಹಣ ತಾಯಂದಿರಿಗೆ ತಲುಪಬೇಕಾಗಿತ್ತು. ಆ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು.
ಕೆಡಿಪಿ ಸಭೆಗಳಲ್ಲಿ ಭಾಗವಹಿಸಿದ ಅನುಭವ ಹಂಚಿಕೊಂಡ ಅವರು, ಐದು ಜಿಲ್ಲೆಗಳಲ್ಲಿಯೂ ಮೂರು ವರ್ಷಗಳಿಂದ ವಸತಿ ಯೋಜನೆಗಳ ಪ್ರಗತಿ ಶೂನ್ಯ ಎಂದು ದಾಖಲೆಗಳೇ ಹೇಳುತ್ತಿವೆ. ಸರ್ಕಾರ ಮನೆ ಕಟ್ಟಿಕೊಡುತ್ತೇವೆ, ಬ್ಯಾಂಕ್ ಸಾಲ ಕೊಡಿಸುತ್ತೇವೆ ಎಂದು ಹೇಳುತ್ತಿದ್ದರೂ ನೆಲಮಟ್ಟದಲ್ಲಿ ಯಾವುದೇ ಸಾಧನೆ ಇಲ್ಲ ಎಂದು ಟೀಕಿಸಿದರು.
ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಟೀಕಿಸಿದ ಅವರು, ಗೃಹಲಕ್ಷ್ಮೀ ಗೃಹಜ್ಯೋತಿ, ಅನ್ನಭಾಗ್ಯ, ವಿದ್ಯಾರ್ಥಿವೇತನ ಸೇರಿದಂತೆ ಪ್ರತಿಯೊಂದು ಯೋಜನೆಗೂ ಪರಿಷ್ಕರಣೆ ಬೇಕು ಎನ್ನುವ ಕಾಂಗ್ರೆಸ್, ಮತದಾರರ ಪಟ್ಟಿಯ ಪರಿಷ್ಕರಣೆಗೆ ಮಾತ್ರ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಹೇಳಿದರು.
ಒಬ್ಬ ವ್ಯಕ್ತಿ ಹಲವು ಕಡೆ ಮತದಾರನಾಗಿರುವುದು, ಹೊರರಾಜ್ಯಗಳಿಂದ ಬಂದು ನಕಲಿ ಮತದಾರರಾಗಿರುವವರನ್ನು ಗುರುತಿಸುವ ಕಾರ್ಯಕ್ಕೂ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಆರೋಪಿಸಿದರು.
ಶಿವಮೊಗ್ಗ ಜಿಲ್ಲೆ ಗ್ಯಾರಂಟಿ ಯೋಜನೆ ಅಧ್ಯಕ್ಷ ಚಂದ್ರಭೂಪಾಲ್ ನೀಡಿರುವ ಮಾಹಿತಿ ಉಲ್ಲೇಖಿಸಿದ ಅವರು, ಜಿಲ್ಲೆಯಲ್ಲಿ ಮತಪಟ್ಟ 9,247 ಮಂದಿಯ ಖಾತೆಗೂ ಗೃಹಲಕ್ಷ್ಮೀ ಹಣ ಜಮೆಯಾಗಿದೆ. 5,618 ಅನರ್ಹ ಆದಾಯ ತೆರಿಗೆ ಹಾಗೂ ಜಿಎಸ್ಟಿ ಪಾವತಿದಾರರು ಯೋಜನೆಗೆ ಸೇರ್ಪಡೆಯಾಗಿದ್ದಾರೆ. 61,380 ಬಿಪಿಎಲ್ ಮಹಿಳೆಯರು ರೇಷನ್ ಕಾರ್ಡ್-ಆಧಾರ್ ಲಿಂಕ್ ಹಾಗೂ ಇ-ಕೆವೈಸಿ ಸಮಸ್ಯೆಯಿಂದ ಒಂದೇ ಕಂತು ಪಡೆಯಲು ಸಾಧ್ಯವಾಗಿಲ್ಲ.
ಡಾ.ಸರ್ಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೂರು ಪ್ರಶ್ನೆಗಳನ್ನು ಮುಂದಿಟ್ಟ ಅವರು, ಸಿಎಜಿ ವರದಿಯಲ್ಲಿ ಉಲ್ಲೇಖಿಸಿರುವ ಹಣ ಯಾರ ಜೇಬಿಗೆ ಹೋಗಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು. 2025ರ ಫೆಬ್ರವರಿ-ಮಾರ್ಚ್ ತಿಂಗಳ ಗಹಲಕ್ಷ್ಮೀಯ 5,000 ಕೋಟಿ ಹಣ ಎಲ್ಲಿದೆ ? ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನು ತಿಳಿಸಬೇಕು. ಸಿಎಜಿ ವರದಿಯಲ್ಲಿ ಉಲ್ಲೇಖಿಸಿರುವ ಸುಮಾರು 225 ಕೋಟಿ ಅಕ್ರಮದ ಕುರಿತು ಎಸ್ಐಟಿ ತನಿಖೆ ನಡೆಸಬೇಕು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯ ಜಗದೀಶ್, ಸುರೇಖಾ ಮುರುಳೀಧರ್, ಮಧುರಾ ಶಿವಾನಂದ್, ರಶ್ಮೀ ಶ್ರೀನಿವಾಸ್, ಎಸ್.ಚಂದ್ರಶೇಖರ್, ಮಂಜುನಾಥ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






