ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಸಚಿನ್ ಪಾರ್ಶ್ವನಾಥ್ |
ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧ. ಮಹಾರಾಷ್ಟ್ರದ ಕಲ್ಯಾಣ್ ನಲ್ಲಿ ಗಣಪತಿರಾವ್ ಅಮೃತೇಶ್ವರ್ ಜೋಶಿ ದಂಪತಿಗಳಿಗೆ ಮುದ್ದಾದ ಹೆಣ್ಣು ಮಗು ಯಮುನಾಳ ಜನನ. ಹೆಣ್ಣು ಅಂದಾಗೆಲ್ಲ ಒಂದು ಹೊರೆ ಎನ್ನುವ ಕಾಲ ಅದು. ಎಷ್ಟು ಬೇಗ ಆಗತ್ತಾದೋ ಅಷ್ಟು ಬೇಗ ಮದುವೆ ಮಾಡಿ ಸಾಗಿ ಹಾಕುವ ಧಾವಂತ. ಅದಕ್ಕೆ ಸರಿಯಾಗಿ ಒಂಬತ್ತು ತುಂಬಿದ್ದೇ ತಡ ಅದಾಗಲೇ ಪತ್ನಿ ಕಳೆದುಕೊಂಡ ಅಂಚೆ ಇಲಾಖೆಯ ತರುಣ ಗೋಪಾಲರಾಯ ಸಿಕ್ಕಿದ್ದ. ಅವನಿಗೋ ಅಜಮಾಸು ಮೂವತ್ತು. ಸದೈವವಶಾತ್ ಗೋಪಾಲನಿಗೆ ಅವಳೆಂದರೆ ಜೀವ. ಅದೇನೋ ಬಿಡಿಸಲಾಗದ ಬಂಧ. ಕಣ್ಣಲ್ಲಿ ಕಣ್ಣಿಟ್ಟು ಕಾದ. ತುಂಬಾ ನೋವು ಬಡಕಲು ಹುಡುಗಿಯ ಎದೆಯಲ್ಲಿ ಆನಂದ ತುಂಬಿದ. ಆ ಯಮುನಾಳ ಆನಂದಿ ಎಂದ. ಅಕ್ಷರ ಕಳಿಸಿದ, ತಿದ್ದಿದ, ಬರೆಸಿದ. ತುಂಬು ಪ್ರೀತಿಯ ಜೋಡಿಗೆ ಹೊಸ ಕಂದನ ಆಗಮನದ ಸಮಯ.
ಹದಿನಾಲ್ಕರ ಹರೆಯದ ಆನಂದಿಯ ಬಾಳಲ್ಲಿ ಪುಟ್ಟ ಗಂಡು ಮಗ ಬಂದ. ಆದರೇನು ಮಾಡುವುದು ಹುಟ್ಟು ಅನಾರೋಗ್ಯ ಪೀಡಿತ ಮಗು ಹುಟ್ಟಿದ ಕೆಲವೇ ದಿನಕ್ಕೆ ಮಣ್ಣಾಗಿ ಹೋಯಿತು; ಅವಳ ಖುಷಿಯು ಕೂಡ. ಕಷ್ಟದ ದಿನಗಳಲ್ಲಿ ಆನಂದಿ ಅಂತರ್ಮುಖಿಯಾದಳು. ಬದುಕಿನ ಅರ್ಥ ಹುಡುಕಿದಳು. ಗಟ್ಟಿ ಮನಸು ಮಾಡಿ ವೈದ್ಯೆಯಾಗುವ ಕನಸು ಕಂಡಳು. ಆ ಸಮಯವೋ ಸರಿಯಾದ ಒಂದು ಕಾಲೇಜು ಇರಲಿಲ್ಲ. ಛಲ ಬಿಡಲಿಲ್ಲ. ಇಂಗ್ಲಿಷ್ ಕಲಿತಳು. ಅಲ್ಲೆಲ್ಲೋ ಅಮೇರಿಕೆಯ ಅಂಗಳದಲ್ಲಿ ಒಂದು ಭರವಸೆಯ ರೇಖೆ ಕಂಡಿತು.
ಹೌದು ಕಾಲೇಜು ಇದೆ ಅಂತ ಗೊತ್ತಾಗಿದ್ದೇ ತಡ ಗೋಪಾಲರಾಯ ಒಂದು ಪತ್ರ ಬರೆದೇಬಿಟ್ಟರು. ತನ್ನೆಲ್ಲ ನೋವು, ಕನಸುಗಳ ಬರೆದು ಕಳಿಸಿದ ಮೇಲೆ ಉತ್ತರವೂ ಬಂತು. ತುಂಬಾ ಸರಳವಾಗಿತ್ತು ನೀವಿಬ್ಬರೂ ಕ್ರಿಶ್ಚಿಯನ್ ಧರ್ಮಕ್ಕೆ ಸೇರುವುದಾದರೆ ನಿಮ್ಮ ಜವಾಬ್ದಾರಿ ನಮ್ಮದೇ ಅಂತ! ಹೇಗೆ ಒಪ್ಪೀತು ಆ ಜೀವ? ಕನಸಿಗಾಗಿ ಬದುಕು ಮಾರುವುದೇ? ಛೇ, ಎಂತ ದುಷ್ಟ ಸಮಾಜ ಎನ್ನುವಾಗಲೇ ಅದು ಹೇಗೋ ಈ ಪತ್ರ ವ್ಯವಹಾರ ತಿಳಿದ ಅಮೇರಿಕನ್ ಮಹಿಳೆಯೊಬ್ಬರು ಆನಂದಿ ಇನ್ನು ನನ್ನ ಮನೆಮಗಳು ಕಳಿಸಿಕೊಡಿ, ಅವಳ ಜವಾಬ್ದಾರಿ ನನ್ನದೇ ಎಂದು ಒಂದು ಪತ್ರ ಬರೆದಿದ್ದರು. ಕನಸಿಗೆ ಒಂದು ಕಾಣದ ಆಸರೆ ದೊರಕಿತ್ತು. ಸ್ವರ್ಗಕ್ಕೆ ಮೂರೇ ಗೇಣು. ಆನಂದಿಗೆ ರೆಕ್ಕೆ ಬಂದಿರಲಿಕ್ಕೂ ಸಾಕು. ಉಹುಂ ಹಾಗೇ ಬಹಳ ದಿನ ಉಳಿಯಲಿಲ್ಲ. ಎಂದೂ ಕಾಣದ ಊರಿಗೆ, ಯಾರು ಗೊತ್ತಿರದ ಪರದೇಶಿಗಳ ನಾಡಿಗೆ ತಮ್ಮ ಮನೆಮಗಳು ಹೊರಟದ್ದು ಯಾಕೋ ಕೆಲವರಿಗೆ ಸರಿ ಕಾಣಲಿಲ್ಲ. ಆದರೆ ಅದೆಲ್ಲಿತ್ತೋ ಧೈರ್ಯ? ಅವರೆಲ್ಲರ ಎದುರು ನಿಂತ ಆನಂದಿ ಎಲ್ಲರಿಗೂ ಉತ್ತರ ನೀಡಿದಳು. ರಾಶಿ ಕನಸುಗಳ ಕಟ್ಟಿಕೊಂಡು ಪಶ್ಚಿಮದ ನಾಡಿನ ಅಮ್ಮನ ಮನೆಗೆ ಹೊರಟಿದ್ದಳು.
ಅದೇ ಚಂದದ ಪತ್ರ ಬರೆದ ಅಮೇರಿಕೆಯ ತಾಯಿ ತಿಯೊಡಿಸಿಯ ಆನಂದಿಯ ಅಪ್ಪಿದಳು. ಒಲುಮೆಯಿಂದ ಸಾಕಿ ಸಲಹಿದಳು. 1886 ಆನಂದಿಯ ವರ್ಷ. ಹೌದು, ಆ ವರ್ಷ ಅವಳು ಕನಸನ್ನು ಸಾಧಿಸಿದ್ದಳು. ಪೆನ್ಸಿಲ್ವೆನಿಯಾ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದಳು. ಅವಳು ಭಾರತಕ್ಕೆ ಮರಳಿದ್ದು ಬರಿ ವೈದ್ಯೆಯಾಗಿಯಲ್ಲ. ಅವಳಂತಹ ಸಾವಿರಾರು ಮಹಿಳೆಯರಿಗೆ ಒಂದು ಧ್ಯೇಯವಾಗಿ. ಅಮೇರಿಕಾಗೆ ಕಾಲಿಟ್ಟ ಏಷ್ಯಾದ ಮೊದಲ ಮಹಿಳೆ, ಮೊದಲ ಹಿಂದೂ ಮಹಿಳೆ, ಅಷ್ಟೇ ಏಕೆ? ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆದ ಮೊಟ್ಟಮೊದಲ ಮಹಿಳಾ ವೈದ್ಯೆ ಎಂದೆಲ್ಲಾ ಕರೆಸಿಕೊಂಡ ಆನಂದಿ ವೈದ್ಯೆಯಾಗಿ ಭಾರತಕ್ಕೆ ಬಂದಳು. ಎಲ್ಲೆಲ್ಲೂ ಅಭಿನಂದನೆಯ ಮಹಾಪೂರ.
ಕೊಲ್ಲಾಪುರ ಸಂಸ್ಥಾನದ ರಾಜಾಶ್ರಯದಲ್ಲಿ ವೈದ್ಯೆಯಾಗಿ, ಮುಖ್ಯಸ್ಥೆಯಾಗಿ ಉನ್ನತ ಸೇವೆ ನೀಡುತ್ತಿರುವಾಗಲೇ ಕಾಲ ಮತ್ತೆ ಟೊಂಕ ಕಟ್ಟಿಕೊಂಡು ಎದುರು ಬಂದು ನಿಂತಿತ್ತು. ಕಷ್ಟಗಳ ಬಾನಿಗೆ ಏರಿ, ಸಮಾಜದ ತೊಡರುಗಳ ಜೀಕಿ, ಸಪ್ತ ಸಾಗರದ ಆಚೆಯಿಂದ ಯಶಸ್ಸು ದುಡಿದು ತನ್ನೊಳಗೆ ಬೆಳೆದಿದ್ದ ಕ್ಷಯ ರೋಗಕ್ಕೆ ಇನ್ನಿಲ್ಲದಂತೆ ದಣಿದಳು. ಯಾರಿಗೆ ಭವ್ಯ ಭಾರತದ ಶಿಲ್ಪಿ ಬಾಲಗಂಗಾಧರನಾಥ ತಿಲಕರು ಉಧೋ ಎಂದಿದ್ದರೋ, ಆ ತಾಯಿ ಔಷಧವಿಲ್ಲದೆ ಕ್ಷಯ ರೋಗಕ್ಕೆ ಶರಣಾದಳು. ಕಾಯಿಲೆಗಳು ಜಿದ್ದು ಕಟ್ಟಿಕೊಂಡು ನಿಂತಿದ್ದವೋ ಏನೋ? ಅಂದು ಫೆಬ್ರವರಿ 26, 1887 ಭಾರತದಲ್ಲಿ ನೂರ್ಕಾಲ ಜೀವಂತವಾಗಿ ಬೆಳಗಬೇಕಿದ್ದ ದೀವಿಗೆ ನಂದಿಹೋಗಿತ್ತು.
ಒಂಬತ್ತರ ಹರೆಯಕ್ಕೆ ಮದುವೆ, ಹದಿನಾಲ್ಕಕ್ಕೆ ಮಗು, ಇಪ್ಪತ್ತೆರಡರ ಹರೆಯಕ್ಕೆ ಎಂದೂ ಮರೆಯಲಾಗದಷ್ಟು ಯಶಸ್ಸಿನ ಕಥೆಯ, ನೆನಪುಗಳ ಗಂಟು ನೀಡಿ ಆನಂದಿ ಹೊರಟು ಹೋದಳು. ಪ್ರೀತಿಯ ಧಾರೆ ಎರೆವ ಗಂಡ, ಅವನ ಗಟ್ಟಿ ನೌಕರಿ, ಒಳ್ಳೆಯ ಮನೆ ಎಲ್ಲವನ್ನೂ ತೊರೆದು ಕನಸ ಭೇಟಿಯಾಗಿ, ಭಾರತವನ್ನು ಆರೈಸಲು ಬಂದ ಮಗಳು ಒಡಲಲಿ ಸಾವು ಕಟ್ಟಿಕೊಂಡು ಬಂದಳು. ಬದುಕಿದ್ದು ಕಾಲು ಶತಮಾನವೂ ಅಲ್ಲ. ಆದರೆ ಒಂದೂವರೆ ಶತಮಾನ ಕಳೆದರೂ ಆಕೆ ಚಿರಂಜೀವಿ. ಇಂದು ಮಾರ್ಚ್ 31, ಅವರ ಜನುಮದಿನ. ಅವರನ್ನು ನೆನೆಯುವುದು ಒಂದಿಷ್ಟು ಪುಣ್ಯ ಸಂಪಾದಿಸುವುದೇ ಸರಿ. ಈ ಲೇಖನ ಕ್ಷಣ ಹಣಗಳ ಲೆಕ್ಕ ಹಾಕದೇ ಅನೇಕರನ್ನು ಉಪಚರಿಸುವ ದೈವಸದೃಶ ಸುವೈದ್ಯರಿಗೆ ಅರ್ಪಣೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post