ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ ಸರ್ಕಾರವು ಯುಪಿಐ ವಹಿವಾಟುಗಳ ಮೇಲೆ ಪ್ರಸ್ತಾವಿತ ಶುಲ್ಕ ಅಥವಾ ತೆರಿಗೆ ವಿಧಿಸಲು ಮುಂದಾಗಿರುವುದನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಅದರ ವಿವಿಧ ಘಟಕಗಳ ನೇತೃತ್ವದಲ್ಲಿ ನಗರದ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಮಹಿಳಾ ಘಟಕ, ಯುವ ಕಾಂಗ್ರೆಸ್ ಹಾಗೂ ಪಕ್ಷದ ವಿವಿಧ ಪೋಷಕ ಘಟಕಗಳ ನೂರಾರು ಕಾರ್ಯಕರ್ತರು ಮಹಾವೀರ ವೃತ್ತದಲ್ಲಿ ಜಮಾಯಿಸಿದರು. ಪರಸ್ಪರ ಕೈಜೋಡಿಸಿ ಮಾನವ ಸರಪಳಿ ನಿರ್ಮಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಡಿಜಿಟಲ್ ಪಾವತಿಯನ್ನು ಕಡ್ಡಾಯಗೊಳಿಸಿ, ಈಗ ಅದರ ಮೇಲೆಯೇ ಕಮಿಷನ್ ದಂಧೆಗೆ ಇಳಿದಿರುವುದು ಸಾರ್ವಜನಿಕರಿಗೆ ಮಾಡುವ ದ್ರೋಹ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡರುಗಳಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ.ಯೋಗೀಶ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಬಂಢಿ, ಇಸ್ಮಾಯಿಲ್ ಖಾನ್, ಶ್ರೀನಿವಾಸ್ ಕರಿಯಣ್ಣ ಮುಂತಾದವರು ಕೇಂದ್ರ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.
“2,000 ರೂ.ಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಶೇಕಡಾ 0.4 ರಷ್ಟು ಶುಲ್ಕ ವಿಧಿಸಲು ಹೊರಟಿರುವುದು ಸಂಪೂರ್ಣವಾಗಿ ಬಡವರ ಮತ್ತು ಮಧ್ಯಮ ವರ್ಗದವರ ವಿರೋಧಿ ನಿರ್ಧಾರವಾಗಿದೆ. ದೇಶದ ಜನಸಾಮಾನ್ಯರು, ಸಣ್ಣ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಇಂದು ನಗದು ರಹಿತ ವ್ಯವಹಾರಕ್ಕಾಗಿ ಯುಪಿಐ ವ್ಯವಸ್ಥೆಯನ್ನು ಸಂಪೂರ್ಣವಾಗಿ ನೆಚ್ಚಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶುಲ್ಕ ವಿಧಿಸುವುದು ಸಾರ್ವಜನಿಕರ ಜೇಬಿಗೆ ಪರೋಕ್ಷವಾಗಿ ಕತ್ತರಿ ಹಾಕುವ ಲೂಟಿಯ ತಂತ್ರವಾಗಿದೆ ಎಂದು ಆರೋಪಿಸಿದರು.
Also read>> Tumkur Traffic Relief : New Limited Height Subway Opens At Old Bheemasandra Gate
ಕೇಂದ್ರ ಸರ್ಕಾರವು ‘ಡಿಜಿಟಲ್ ಇಂಡಿಯಾ’ ಹೆಸರಿನಲ್ಲಿ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭ ಮಾಡಿಕೊಡಲು ಸಾರ್ವಜನಿಕರ ಮೇಲೆ ಹೊಸ ಹೊಸ ತೆರಿಗೆ ಭಾರವನ್ನು ಹೇರುತ್ತಿದೆ. ಮೋದಿಯವರು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕೆಂದು ಹೇಳಿ ಈಗ ಅದರ ಮೇಲೆಯೇ ನಿರ್ಬಂಧತೆ ಶುಲ್ಕ ಏರಿಸುವ ಮೂಲಕ ಬಡವರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರವು ತಕ್ಷಣವೇ ಈ ಪ್ರಸ್ತಾವಿತ ಯುಪಿಐ ಶುಲ್ಕದ ನಿರ್ಧಾರವನ್ನು ಕೈಬಿಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಹಾಗೂ ರಾಜ್ಯಾದ್ಯಂತ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಕಾಂಗ್ರೆಸ್ ನಾಯಕರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ನ ಉಪಾಧ್ಯಕ್ಷರುಗಳಾದ ಎಸ್.ಟಿ.ಚಂದ್ರಶೇಖರ್, ಪಿ.ಎಸ್.ಗಿರೀಶ್ ರಾವ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ರಮೇಶ್ ಶಂಕರಘಟ್ಟ, ವಕ್ತಾರ ಜಿ.ಡಿ.ಮಂಜುನಾಥ್, ಹಾಪ್ಕಾಮ್ಸ್ ಅಧ್ಯಕ್ಷ ವಿಜಯ್ಕುಮಾರ್(ದನಿ), ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಉತ್ತಮ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕಲೀಂ ಪಾಷ, ಶಿವಕುಮಾರ್, ಆರ್.ರಾಜಶೇಖರ್, ಪ್ರಮುಖರಾದ ಧೀರಾಜ್ ಹೊನ್ನವಿಲೆ, ಶ್ರೀನಿವಾಸ್ ಕರಿಯಣ್ಣ ಎಸ್.ಟಿ.ಹಾಲಪ್ಪ, ರಂಗನಾಥ್, ದೇವೇಂದ್ರಪ್ಪ, ಶಿವಣ್ಣ, ನಾಗರಾಜ್ ಕಂಕಾರಿ, ಪುಷ್ಪ ಶಿವಕುಮಾರ್, ಚಂದ್ರಭೂಪಾಲ್, ಹೆಚ್.ಎಂ.ಮಧು, ಮಧುಸೂಧನ್, ದಿನೇಶ್ ಪಟೇಲ್, ಸಯ್ಯದ್ ವಾಹಿದ್ ಅಡ್ಡು, ನೇತ್ರಾವತಿ ಗೌಡ, ಸ್ಟೆಲಾ ಮಾರ್ಟಿನ್, ಅರ್ಚನಾ ನಿರಂಜನ್, ಸುವರ್ಣ ನಾಗರಾಜ್, ಚಿನ್ನಪ್ಪ, ವಿಜಯಲಕ್ಷ್ಮಿ ಪಾಟೀಲ್, ನೇತಾಜಿ, ವಿಜಯ್ ಕುಮಾರ್, ಕವಿತಾ, ಡಿ.ಸಿ.ನಿರಂಜನ್, ಶ್ರೀನಿವಾಸ್ ಕರಿಯಣ್ಣ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








